Showing posts with label ಕಥೆ. Show all posts
Showing posts with label ಕಥೆ. Show all posts

Sunday, February 13, 2022

ಕಪ್ಪು ಕಾರು, ಕೆಂಪು ಸೀರೆ...!!

ಕೆಲವು ದಿನಗಳ ಹಿಂದೆ, ಅಂದರೆ ನೈಟ್ ಕರ್ಫ್ಯೂ ಇದ್ದ ಸಂದರ್ಭದಲ್ಲಿ ಒಂದು ರಾತ್ರಿ ಆಫೀಸ್ ನಿಂದ ಹೊರಡುವುದು ತಡವಾಗಿತ್ತು. ಬೆಳಿಗ್ಗೆ ಕಾಣುವ ಬೆಂಗಳೂರೇ ಇದಲ್ಲ ಎನಿಸುವಷ್ಟು ಮೌನ ಕತ್ತಲಲ್ಲಿ ಬೆರೆತುಹೋಗಿತ್ತು. ಯಾವುದೇ ಅಂಗಡಿಯ ಬಾಗಿಲು ತೆರೆದಿರಲಿಲ್ಲ. ದೂರದಲ್ಲೆಲ್ಲೋ ನಾಯಿ ಊಳಿಡುವ ಸದ್ದು, ಯಾವುದೋ ವಾಹನದ ಸದ್ದು ಬಿಟ್ಟರೆ ಇನ್ಯಾವುದೇ ಗದ್ದಲವಿರಲಿಲ್ಲ. ಅದರಲ್ಲೂ ಸದಾ ವರ್ಣಮಯವಾಗಿ ಗಿಜಿಗುಟ್ಟುವ ತರಹೇವಾರಿ ಅಂಗಡಿಗಳಿಂದ ಝಗಮಗಿಸುವ ಜಯನಗರ ದೀಪವಾರಿಸಿ ನಿಶಬ್ದವಾಗಿ ಮಲಗಿರುವುದೇ ಪರಮಾಶ್ಚರ್ಯ!
ಕವನಾ ಮತ್ತು ಮಹೇಶ ಎಂಬ ಇಬ್ಬರು ಸಹೋದ್ಯೋಗಿಗಳೊಡನೆ ನಾನು ರಸ್ತೆಯ ಬದಿಯಲ್ಲಿ ಸಾಗುತ್ತಿರುವಾಗ ಬೀದಿ ದೀಪದ ಅಡಿಯಲ್ಲಿ ನಮ್ಮ ನೆರಳೇ ನಮಗೆ ಹೆದರಿಸುತ್ತಿತ್ತು!! ನಾವು ಮೂವರೂ ಅಂದಿನ ಘಟನೆಗಳನ್ನು ಮೆಲುಕು ಹಾಕುತ್ತಾ ನಡೆಯುತ್ತಿರಬೇಕಾದರೆ, ಶರವೇಗದಲ್ಲಿ ಒಂದು ಕಪ್ಪು ಕಾರು ನಮ್ಮನ್ನು ದಾಟಿ ಹೋಯಿತು. ಕಾರಿನ ಮುಂದಿನ ಲೈಟ್ ಹಾಕಿರಲಿಲ್ಲ. ಕಪ್ಪು ಕಾರು ಬೀದಿ ದೀಪದಲ್ಲಿ ಮಾತ್ರವೇ ಕಾಣಿಸಿತ್ತು. ನಾವು ಮೂವರೂ ಬೆಚ್ಚಿ, ಕಾರು ಹೋದ ದಿಕ್ಕನ್ನೇ ದಿಟ್ಟಿಸುತ್ತಾ ಕಂಬದಂತೆ ನಿಂತಿದ್ದೆವು.
 ಅಪ್ರಯತ್ನವಾಗಿ ಮಹೇಶಣ್ಣ "ಕಾಂತಿಬಾಯಿ ಕಾರು" ಎಂದ. ನಾನು ಮತ್ತು ಕವನಾ ಹೆದರಿ ಎರಡು ಹೆಜ್ಜೆ ಹಿಂದೆ ಸರಿದೆವು. "ಸುಂಸುಮ್ನೆ ಹೇಳ್ಬೇಡ, ನಿಜವಾಗ್ಲೂ ಅದು ಕಾಂತಿಬಾಯಿ ಕಾರು ಹೌದ? ನಿಂಗೆ ಹೇಗೆ ಗೊತ್ತು? ಕಾರಲ್ಲಿ ಅವ್ಳು ಇದ್ಲಾ ? ಆದ್ರೂ ಅವ್ಳು ಯಾಕೆ ಇಲ್ಲಿ, ಹೀಗೆಲ್ಲ ಓಡಾಡ್ತಾಳೆ? ..." ಎಂದೆಲ್ಲ ಪ್ರಶ್ನೆಯೂ ಅಲ್ಲದ ಉತ್ತರವೂ ಇಲ್ಲದ ಮಾತುಗಳನ್ನಾಡಿದೆವು ನಾವಿಬ್ಬರೂ!! ಅದಕ್ಕವನು ಏನೂ ಹೇಳಲಿಲ್ಲ. ಹೇಳುವ ಸಂದರ್ಭ ಕೂಡಾ ಅದಾಗಿರಲಿಲ್ಲ. ಮೂವರ ತಲೆಯಲ್ಲೂ ನೂರಾರು ಪ್ರಶ್ನೆಗಳು ಆ ಕಾರಿನಷ್ಟೇ ವೇಗವಾಗಿ ಚಲಿಸುತ್ತಿದ್ದವು.
ನಿಧಾನವಾಗಿ ಮಹೇಶಣ್ಣನೇ ಮೌನ ಮುರಿದು, "ಕಾರು ಎಲ್ಲಿ ಹೋಗಿರಬಹುದು? ಎಲ್ಲರೂ ಹೇಳೋ ಪ್ರಕಾರ ಅವಳ ಮನೆ ಇರೋದು ಜಯನಗರದಲ್ಲೇ! ಒಂದಿಡೀ ಏರಿಯಾವನ್ನೇ ಖರೀದಿಸಿದ್ದಾಳಂತೆ. ಯಾವಾಗ ಯಾವ ಮನೇಲಿ ಇರ್ತಾಳೆ ಅಂತ ಯಾರಿಗೂ ಗೊತ್ತಾಗಲ್ವಂತೆ.." "ಇದೆಲ್ಲ ನಮಗೂ ಗೊತ್ತು. ಈ ಅಂತೆ ಕಂತೆಗಳು ನಮ್ಮ ಕಿವಿಗೂ ಬಿದ್ದಿವೆ. ಅದ್ರಲ್ಲಿ ಯಾವ್ದು ನಿಜ ಯಾವ್ದು ಸುಳ್ಳು ಅಂತ ಗೊತ್ತಿಲ್ಲ..ಈಗ ಅಕಸ್ಮಾತ್ ನಾವು ಅವಳ ಕಾರನ್ನು ಕಂಡ ಹಾಗೆ ಅವಳೂ ನಮ್ಮನ್ನ ನೋಡಿದ್ರೆ ಸುಮ್ನೆ ಬಿಡ್ತಾಳ .. ಮನೇಲಿ ಹುಡ್ಕಿದ್ರು ನಾವು ಏನಾದ್ವಿ ಅಂತ ಯಾರಿಗೂ ಸುಳಿವು ಕೂಡ ಸಿಗಲ್ವೇನೋ.. ದೇವ್ರೇ .." ಎಂದು ಬಡಬಡಿಸುತ್ತಿದ್ದಳು ಕವನಾ.
"ಮಾರಾಯ್ತಿ, ಇದ್ದಿದ್ದನ್ನ ಇದ್ದಂಗೆ ನೋಡು ಸಾಕು,
 ಮತ್ತೆ ಹೆದ್ರಿಸಬೇಡ.
ಮಹೇಶಣ್ಣ, ನೀನು ಹೇಳಿದ ಹಂಗೆ ಅವಳ ಮನೆ ಜಯನಗರ ಅಂತಾನೆ ಇಟ್ಕೋಳೋಣ. ಅಂದ್ರೆ ಅವ್ಳು ಎಲ್ಲೋ ಆಚೆ ಹೋಗಿ ಮನೆಗೆ ಬರ್ತಿರಬೇಕು. ಇಲ್ಲ ಅಂದ್ರೆ ಕರ್ಫ್ಯೂ ಶುರು ಆದ್ಮೇಲೆ ಎಲ್ಲೋ ಹೊರಟಿರಬೇಕು .." ಎಂದೆ ನಾನು.
"ನಿಜ. ನಂಗೂ ಅದೇ ಅನ್ನಿಸ್ತಾ ಇದೆ. ಆ ಕಾರು ಅವಳದ್ದೇ ಅನ್ನೋದು ಪಕ್ಕಾ. ಆದ್ರೆ ಅದರಲ್ಲಿ ಅವಳು ಇದ್ಲಾ ಇಲ್ವಾ ಅನ್ನೋದೇ ಅನುಮಾನ. ಇದ್ರೆ ಮಾತ್ರ..." "ಇದ್ರೆ ಮಾತ್ರ ಏನು ಮಹೇಶಣ್ಣ? ನೋಡು ನಮ್ಮ ಕೈಲಿ ಏನೂ ಮಾಡೋಕಾಗಲ್ಲ" ಮತ್ತೆ ಮೌನದಲ್ಲೇ ಹೆಜ್ಜೆ ಹಾಕಿದೆವು.
------
ಕಾಂತಿಬಾಯಿ ಇಡೀ ಕರ್ನಾಟಕವನ್ನೇ ಅಲುಗಾಡಿಸಿದವಳು! ಅವಳ ಮಾತಿಲ್ಲದೆ ಬೆಂಗಳೂರಿನಲ್ಲಂತೂ ಯಾವ ಕೆಲಸವೂ ಆಗುತ್ತಿರಲಿಲ್ಲ. ರಾಜಕೀಯ, ದೊಂಬಿ, ಜಾತ್ರೆ, ಕಟ್ಟಡ ಕಾಮಗಾರಿಗಳು, ಕೊಲೆ, ಸುಲಿಗೆ, ಹೆಂಡದಂಗಡಿ ಎಲ್ಲವಕ್ಕೂ ಕಾಂತಿಬಾಯಿಯ ಕೃಪಾಶೀರ್ವಾದ ಅತ್ಯವಶ್ಯಕ! ಅವಳ ಮೇಲೆ ಅದೆಷ್ಟು ಕೇಸುಗಳಿದ್ದವೋ ಬಲ್ಲವರಾರು! ಅಂತಹ ಕಾಂತಿಬಾಯಿ ಯಾರು, ಹಿನ್ನೆಲೆ ಏನು, ಹೇಗೆ ಬೆಳೆದಳು, ಇಷ್ಟೆಲ್ಲಾ ಮಾಡುವಾಗಲೂ ರಾಜಾರೋಷವಾಗಿ ಓಡಾಡುತ್ತಿದ್ದವಳು ಇದ್ದಕ್ಕಿದ್ದಂತೆ ಒಂದೂವರೆ ವರ್ಷದಿಂದ ಯಾಕೆ ಭೂಗತಳಾಗಿದ್ದಾಳೆ ಎಂಬುದಕ್ಕೆಲ್ಲ ಸ್ವತಃ ಅವಳೇ ಉತ್ತರಿಸಬೇಕು!
 ಆಕೆಗೆ ಸುಮಾರು ಐವತ್ತು ವರ್ಷವಾಗಿರಬಹುದು. ಜೊತೆಗೊಬ್ಬಳು ವಯಸ್ಸಾದ ಹೆಂಗಸಿರುತ್ತಾಳಂತೆ ಮನೆಯಲ್ಲಿ, ಕಾಂತಿಬಾಯಿಯ ತಾಯಿ ಎಂಬ ಸುದ್ದಿ! ಕಾರಿನ ಡ್ರೈವರ್ ಕೂಡ ಅವರ ಮನೆಯಲ್ಲೇ ಇರುತ್ತಾನಂತೆ. ಅವನನ್ನು ಡ್ರೈವರ್ ಥರ ಕಾಂತಿಬಾಯಿ ಎಂದೂ ಕಂಡಿಲ್ಲವಂತೆ. ಆತ ಅವಳ ಪ್ರಿಯಕರನಂತೆ ಎಂಬೆಲ್ಲ ಸುದ್ದಿಗಳು. ಹೌದು ಅಥವಾ ಇಲ್ಲ ಎನ್ನಲು ಕಾಂತಿಬಾಯಿ ಏನೂ ಕೇಳಿಸಿಕೊಳ್ಳುವುದಿಲ್ಲವಲ್ಲ. ಹಾಗಾಗಿ ಅಂತೆ ಕಂತೆಗಳ ರೆಂಬೆ ಕೊಂಬೆಗಳು ಬೆಳೆದು ಅವಳ ಕಥೆ ಹೆಮ್ಮರವಾಗಿತ್ತು!

 ಕೆಲವು ತಿಂಗಳುಗಳ ಹಿಂದಷ್ಟೇ ಪೊಲೀಸರಿಗೆ ದೊರಕಿದ ಮಾಹಿತಿಯ ಮೇರೆಗೆ ಜಯನಗರದ ಅವಳ ಮನೆಗೆ ರಾತ್ರೋ ರಾತ್ರಿ ನುಗ್ಗಿದ್ದರು. ಆದರೆ ಅಲ್ಲಿ ಯಾರೂ ಇರಲಿಲ್ಲ. ಆದರೆ ಮಾಹಿತಿಯೊಂದು ಲಭ್ಯವಾಗಿತ್ತು. ಅದೊಂದೇ ಬಡಾವಣೆಯಲ್ಲಿ ಎಂಟು ಮನೆಗಳು ಅವಳ ಹೆಸರಿನಲ್ಲಿದ್ದವಂತೆ! ಇಡೀ ಬೆಂಗಳೂರಿನಲ್ಲಿ ಎಷ್ಟಿರಬೇಡ? ಯಾವಾಗ ಯಾವ ಮನೆಯಲ್ಲಿರುತ್ತಾಳೋ ಹೇಗೆ ಕಂಡು ಹಿಡಿಯುವುದು? ಇತ್ತೀಚೆಗೆ ಅವಳನ್ನು ಕಂಡವರಿಲ್ಲ.
ಮೊದಲು ಕಂಡವರ ಪ್ರಕಾರ ಕಾಂತಿಬಾಯಿ ಎತ್ತರದ ಆಳು. ಸಾಮಾನ್ಯ ಮೈಕಟ್ಟು. ಕಪ್ಪಗಿದ್ದಾಳೆ, ಯಾವಾಗಲೂ ಕೆಂಪು ಸೀರೆ ಉಡುತ್ತಾಳೆ. ಕಾಲಿಗೆ ಧರಿಸಿದ ಬೂಟುಗಳು ಕಾಣುವಷ್ಟು ಗಿಡ್ಡದಾಗಿ ಸೀರೆ ಇರುತ್ತದೆ. ಕಾಲರಿನ ರವಿಕೆ ಧರಿಸುತ್ತಾಳೆ. ಕತ್ತಿನಲ್ಲಿ ಒಂದು ಹಾರವಿರುತ್ತದೆ. ಉದ್ದ ಕೂದಲನ್ನು ಮಡಚಿ ಮುಡಿ ಹಾಕಿರುತ್ತಾಳೆ. ಗಡಸು ಧ್ವನಿಯಲ್ಲಿ ಮಾತನಾಡುತ್ತಾಳೆ ಹಾಗೂ ಕಣ್ಣಲ್ಲಿ ಕಣ್ಣಿಟ್ಟು ಭೀತಿ ಹುಟ್ಟಿಸುತ್ತಾಳೆ. ಮುಖದ ಮೇಲೆ ಹಳೆಯ ಮೊಡವೆಯ ಕಲೆಗಳಿವೆ. ಬಲಗೈ ಮೇಲೆ ಗಾಯದ ಗುರುತಿದೆ. ಆರು ಕಾರುಗಳಿವೆ. ಎಲ್ಲವೂ ಒಂದೇ ರೀತಿಯ, ಕಪ್ಪು ಬಣ್ಣದ ಕಾರುಗಳು. ಇಷ್ಟು ಮಾತ್ರವೇ ಅವಳ ಬಗ್ಗೆ ಎಲ್ಲರಿಗೂ ತಿಳಿದಿದ್ದ ವಿಷಯಗಳು. ಯಾವುದೇ ಪತ್ರಿಕೆಯಲ್ಲಾಗಲೀ, ಸುದ್ದಿ ವಾಹಿನಿಯಲ್ಲಾಗಲೀ ಅವಳ ಚಿತ್ರವೂ ಬಂದಿರಲಿಲ್ಲ. ಪೊಲೀಸರ ಬಳಿ ಇತ್ತೋ ಇಲ್ಲವೋ ಅದೂ ತಿಳಿದಿರಲಿಲ್ಲ.

 ------
 ಇಂತಹ ಕಾಂತಿಬಾಯಿಯ ಕಾರು ನಮ್ಮೆದುರು ಹೋಗುವುದು ಎಂದರೇನು, ನಾವದನ್ನು ನಂಬುವುದು ಎಂದರೇನು, ಅದರ ಬಗ್ಗೆ ಮಾತನಾಡುವುದು ಎಂದರೇನು..? ಈಗ ಯಾರೂ ಇಲ್ಲ. ಆದರೆ ನಾಳೆ ಬೆಳಿಗ್ಗೆ ಎಲ್ಲರೆದುರು ನಾವು ಕಾಂತಿಬಾಯಿಯ ಕಾರನ್ನು ಕಂಡಿದ್ದೆವು ಎಂದರೆ ಎಲ್ಲರೂ ನಮ್ಮನ್ನು ನೋಡಿ ನಗುವುದಿಲ್ಲವೇ .. ಹುಚ್ಚು , ಭ್ರಮೆ, ಕಲ್ಪನೆ ಎಂದು ಆಡಿಕೊಳ್ಳುವುದಿಲ್ಲವೇ?! ನಾವು ಹೋಗುತ್ತಿದ್ದ ರಸ್ತೆಯ ತಿರುವಿನಲ್ಲಿ ಒಂದು ಕಾರು ನಿಂತಿತ್ತು. ಹಿಂದಿನಿಂದ ಕೆಂಪು ಬೆಳಕು ಕಾಣುತ್ತಿತ್ತು. ನಾವು ಮುಂದೆ ಹೆಜ್ಜೆ ಇಟ್ಟಂತೆಲ್ಲ ಕಾರಿನ ಬಣ್ಣ ಕಪ್ಪು ಎಂಬ ಅರಿವು ನಮಗಾಗಿತ್ತು. ಅಂದರೆ ಕಾರು ಇಲ್ಲೇ ನಿಂತಿದೆ. ನಮಗಾಗಿಯೇ ನಿಂತಿರಬಹುದೇ? ಇವರ ಕೈಲಿ ನಾವು ಸಿಲುಕಿಕೊಂಡರೆ ಏನು ಮಾಡಬೇಕು? ಎಂದೆಲ್ಲಾ ಯೋಚಿಸುತ್ತ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡೆವು. ಆದರೆ ಕಾರಿನಲ್ಲಿ ಯಾರೂ ಇರಲಿಲ್ಲ ಎನಿಸುತ್ತದೆ. ನಿಧಾನವಾಗಿ ಮಹೇಶಣ್ಣ ಪಿಸುಗುಟ್ಟಿದ " ಇದು ಕ್ಯಾಪಿಟಲ್ ಆಸ್ಪತ್ರೆಯ ಹಿಂಭಾಗ. ಅಂದರೆ ಕಾಂತಿಬಾಯಿಗೋ ಅವರ ಕಡೆಯವರ್ಯಾರಿಗೋ ಅರೋಗ್ಯ ಸರಿ ಇಲ್ಲ. ಹಾಗಾಗಿ ಆಸ್ಪತ್ರೆಗೆ ಬಂದಿದ್ದಾರೆ. ಸ್ವಲ್ಪ ಮರೆಯಲ್ಲಿ ನಿಂತು ಕಾಯೋಣ, ಯಾರಾದರೂ ಕಾಣಬಹುದು..."
"ಅಣ್ಣ, ಇಲ್ಲದ ಉಸಾಬರಿ ನಮಗ್ಯಾಗೆ.. ಯಾರೂ ಇಲ್ಲ ಎಂದಾದರೆ ಓಡಿ ಪರಾರಿಯಾಗೋಣ, ಅದು ಬಿಟ್ಟು ನಿಲ್ಲೋದು, ನೋಡೋದು ಎಲ್ಲ ನಮಗೆ ಬೇಡ. ನಾವೇನು ಸಿ ಐ ಡಿ ಗಳಲ್ಲ" ಎಂದೆ.
 "ಹಾಗಲ್ವೆ .. ಇಡೀ ಬೆಂಗಳೂರು ಪೊಲೀಸರು ಹಗಲು ರಾತ್ರಿ ಊಟ ನಿದ್ದೆ ಬಿಟ್ಟು ಕಷ್ಟ ಪಟ್ಟು ಹುಡ್ಕ್ತಾ ಇರೋ ಲೇಡಿ ಡಾನ್ ಇಷ್ಟು ಸುಲಭವಾಗಿ ಸಿಕ್ಕಿ ಬಿಳ್ತಾಳೆ ಅಂತ ಅಂದ್ರೆ ಈ ಅವಕಾಶನ ಯಾಕೆ ಬಿಡ್ಬೇಕು"
"ನೋಡು ಮಹೇಶಣ್ಣ, ಒಂದೇ ರಾತ್ರಿಗೆ ಹೀರೋ ಆಗ್ಬೇಕು ಅನ್ನೋ ಹುಚ್ಚು ಅಸೆ ಇದ್ರೆ ಬಿಟ್ಟಬಿಡು. ಇರೋದು ಒಂದೇ ಜೀವ, ಅದನ್ನ ಉಳಿಸಿಕೊಳ್ಳೋದ್ರ ಬಗ್ಗೆ ಯೋಚ್ನೆ ಮಾಡು" ಎಂದಳು ಕವನಾ.
"ಕವನಾ, ಹೀರೋ ಆಗೋ ಆಸೆ ನಂಗಿಲ್ಲ. ನೀನೇ ಯೋಚ್ನೆ ಮಾಡು.. ಇವ್ಳು ಒಬ್ಬಳು ಸಿಕ್ಕಾಕೊಂಡ್ರೆ ಎಂಥೆಂಥವರು ಇವಳ ಬುಟ್ಟೀಲಿ ಇರೋವ್ರು ಸಿಗ್ತಾರೇನೋ.."
"ಅದೆಲ್ಲ ನಮಗ್ಯಾಕೆ ಅಣ್ಣ, ಯಾರೇ ಸಿಕ್ಕಾಕೊಂಡ್ರು ಎಲ್ಲೂ ಏನೂ ಬದಲಾಗಲ್ಲ. ಇಷ್ಟಕ್ಕೂ ಕಾಂತಿಬಾಯಿನೂ ಕಾರಲ್ಲಿದಾಳೆ ಅಂತ ನಮಗೇನು ಗೊತ್ತಿಲ್ವಲ್ಲ" ಎಂದೆ.
"ನಿಜ, ನಮಗೆ ಗೊತ್ತಿಲ್ಲ. ಆದರೆ ಪೊಲೀಸರಿಗೆ ತಿಳಿಸಿದ್ರೆ ಅವ್ರು ಪತ್ತೆ ಮಾಡ್ತಾರಲ್ಲ. ಈಗ್ಲೇ ತಿಳಿಸ್ತೀನಿ ಇರು" ಎನ್ನುತ್ತಾ ತನ್ನ ಮೊಬೈಲ್ ನಿಂದ ಕರೆ ಮಾಡಿಯೇಬಿಟ್ಟ. ಒಂದು ಸೆಕೆಂಡ್ ತಡವಾದರೂ ನಾವು ಅವನನ್ನು ತಡೆಯುತ್ತೇವೆ ಎಂಬ ಕಾರಣಕ್ಕೆ ತಕ್ಷಣವೇ ಫೋನಾಯಿಸಿದ್ದ.
"ಹೆಲೋ ಸರ್, ನಾನು ಮಹೇಶ್ ಅಂತ ಮಾತಾಡ್ತಿರೋದು, ಜಯನಗರದ ಕ್ಯಾಪಿಟಲ್ ಹಾಸ್ಪಿಟಲ್ ನ ಹಿಂಭಾಗದ ರಸ್ತೆಯಲ್ಲಿ ಕಾಂತಿಬಾಯಿಯ ಕಾರು ನಿಂತಿದೆ. ಕಾರಿನಲ್ಲಿ ಯಾರೂ ಇದ್ದಂತೆ ಕಾಣುತ್ತಿಲ್ಲ. ಆಸ್ಪತ್ರೆಯ ಹಿಂದಿನ ಬಾಗಿಲು ತೆರೆದಿದೆ" ಎಂದ ಮಹೇಶಣ್ಣ. ಅತ್ತ ಕಡೆಯಿಂದ ಕಾರಿನ ನಂಬರ್ ಕೇಳಿರಬೇಕು. "ಕಾರಿನ ನಂಬರ್ ಕಾಣಿಸುತ್ತಿಲ್ಲ ಸರ್. ನಾನು ಅಷ್ಟು ಹತ್ತಿರದಲ್ಲಿಲ್ಲ." ಮತ್ತೇನೋ ಹೇಳಿದರಿರಬೇಕು. ಸರಿ ಸರಿ ಎನ್ನುತ್ತಾ ತಲೆಯಾಡಿಸಿದ. "ನಾವು ಕಾರನ್ನು ನೋಡುತ್ತಾ ನಿಲ್ಲಬೇಕು. ಅದು ಹೊರಟ ಕೂಡಲೇ, ಎತ್ತ ಹೊರಟಿತು ಎಂದು ನೋಡಿಕೊಳ್ಳಬೇಕು. ನಂಬರ್ ಕಂಡರೆ ನೋಟ್ ಮಾಡಿಕೊಳ್ಳಬೇಕು" ಎಂದು ಆಜ್ಞಾಧಾರಕ ದನಿಯಲ್ಲಿ ಹೇಳಿದ. ಭಯವಿದ್ದರೂ, ಒಪ್ಪಿಗೆ ಇರದಿದ್ದರೂ ನಾವಿಬ್ಬರೂ ಹೂಂ ಎಂದೆವು. ರಸ್ತೆಯ ತಿರುವಾಗಿದ್ದರಿಂದ ನಾವು ಅವರಿಗೆ ಕಾಣಿಸುತ್ತಿಲಿಲ್ಲ ಎಂಬ ನಂಬಿಕೆಯಲ್ಲಿ ಬದಿಯಲ್ಲಿ ನಿಂತಿದ್ದೆವು.
 --------
ನಾವು ಕಾಯುತ್ತಾ ನಿಂತಿರುವಾಗಲೇ ಆಸ್ಪತ್ರೆಯ ಹಿಂಬಾಗಿಲಿನಿಂದ ಒಂದು ಆಕೃತಿ ಆಚೆ ಬಂತು. ಅದರ ನಡಿಗೆಯ ಮೇಲೆ, ವೇಷದ ಆಧಾರದ ಮೇಲೆ ಆ ಆಕೃತಿ ಒಬ್ಬ ಗಂಡಸು ಎಂಬ ಅರಿವಾಯಿತು. ಆತ ಕಾರಿನ ಬಾಗಿಲನ್ನು ಹಾಕಿದ ಸದ್ದು ಧಢಾರ್ ಎಂದು ನಮ್ಮ ಕಿವಿಯವರೆಗೂ ಅಪ್ಪಳಿಸಿತು. ಮತ್ತೆ ಯಾರೂ ಕಂಡಿರದಿದ್ದರಿಂದ, ಒಂದೇ ಬಾರಿ ಬಾಗಿಲ ಸಪ್ಪಳವಾದ್ದರಿಂದ ಆತ ಒಬ್ಬನೇ ಇದ್ದಾನೆ. ಕಾಂತಿಬಾಯಿ ಜೊತೆಯಲ್ಲಿಲ್ಲ ಎಂದು ನಿರ್ಧರಿಸಿದೆವು. ನಿಧಾನಕ್ಕೆ ಕಾರನ್ನು ತಿರುಗಿಸಿ, ಮತ್ತದೇ ಸುಂಟರಗಾಳಿಯ ವೇಗದಲ್ಲಿ ಎದುರಿನ ರಸ್ತೆಗೆ ಓಡಿಸಿದ. ಮಹೇಶಣ್ಣ ಪೊಲೀಸರಿಗೆ ಮತ್ತೆ ಕರೆ ಮಾಡಿ ವರದಿ ಒಪ್ಪಿಸಿದ.
ಎರಡೇ ನಿಮಿಷದಲ್ಲಿ ನಮ್ಮೆದುರು ಪೊಲೀಸರ ಜೀಪು ಬಂದು ನಿಂತಿತು. ಆ ರಾತ್ರಿಯಲ್ಲೂ ಕೂಲಿಂಗ್ ಗ್ಲಾಸ್ ಹಾಕಿದ್ದ ಪೊಲೀಸ್ ಒಬ್ಬ "ಬನ್ನಿ ಜೀಪ್ನಲ್ಲಿ ಕೂತ್ಕೊಳ್ಳಿ " ಎಂದ. ಆತ ಇನ್ಸ್ಪೆಕ್ಟರ್ ಇರಬಹುದೆಂದು ನನ್ನ ಊಹೆ!! "ನಾವು ಹೇಳೊದನೆಲ್ಲ ಹೇಳಿದ್ದೇವೆ . ನಾವ್ಯಾಕೆ ಬರಬೇಕು ಸರ್" ಎಂದ ಮಹೇಶಣ್ಣ.
 "ನೀವು ಮಾತ್ರವೇ ಕಾರನ್ನು ಕಂಡಿದ್ದು. ಹಾಗಾಗಿ ನೀವೆಲ್ಲ ಬರಲೇಬೇಕು" ಎಂದ ಆತ. ಅನಿವಾರ್ಯವಾಗಿ ಜೀಪನ್ನು ಹತ್ತಿ ಕುಳಿತು, ಮಹೇಶಣ್ಣನ್ನು ಗುರಾಯಿಸಿದೆವು. ಆತ ನೋಟ ಬದಲಿಸುತ್ತಾ, ಆಚೆ ನೋಡಿದ.
 ನಿಧಾನವಾಗಿ ಆಚೆ ಈಚೆ ನೋಡುತ್ತಾ ಸಾಗುತ್ತಿದ್ದ ನಮಗೆ ಯಾವ ಕಾರೂ ಕಾಣಿಸಲಿಲ್ಲ. "ದೇವ್ರೇ ಪೊಲೀಸರ ಟೈಮ್ ಹಾಳು ಮಾಡಿದ್ದಕ್ಕೆ ಬೈಸ್ಕೊಂಡ್ರು ಪರ್ವಾಗಿಲ್ಲ, ಆ ಕಾರು ಮಾತ್ರ ಸಿಗದೇ ಇರ್ಲಪ್ಪ " ಎಂದು ಬೇಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಸ್ವಲ್ಪ ದೂರದಲ್ಲಿ ಔಷಧಿಯ ಅಂಗಡಿಯೊಂದು ತೆರೆದಿರುವುದು ಕಾಣಿಸಿತು. ಅದರ ಎದುರಿನಲ್ಲೇ ಕಾರೊಂದು ನಿಂತಿತ್ತು. ಮಹೇಶಣ್ಣ ಸ್ವಲ್ಪವೇ ಮುಂದೆ ಬಾಗಿ "ಸರ್ ಇದೇ ಕಾರು" ಎಂದ. ಔಷಧಿಯ ಅಂಗಡಿಯಿಂದ ಬಂದವ, ಕಾರಿನ ಹಿಂಬದಿಯ ಕಿಟಕಿಯಲ್ಲಿ ಒಂದು ಪೊಟ್ಟಣವನ್ನು ಕೊಟ್ಟ. ಯಾರೋ ಅದನ್ನು ತೆಗೆದುಕೊಂಡಂತೆ ನನಗೆ ಭಾಸವಾಯಿತು. ಆಶ್ಚರ್ಯದಿಂದ ನೋಡುತ್ತಿರುವಂತೆಯೇ, "ಏನ್ರಿ ಮಹೇಶ್, ಅವ ಒಬ್ನೇ ಇದಾನೆ ಅಂದಿದ್ರಿ, ಈಗ ನೋಡಿದ್ರೆ ಹಿಂದಿನ ಸೀಟ್ ಅಲ್ಲಿ ಯಾರೋ ಇದಾರಲ್ರಿ.." ಎಂದರು ಪೊಲೀಸ್ ಆಫೀಸರ್.
"ನಾವು ನೋಡಿದಾಗ ಯಾರೂ ಕಂಡಿರಲಿಲ್ಲ ಸರ್" ಎಂದ.
"ಬಹುಶಃ ಆ ವ್ಯಕ್ತಿ ಕಾರಿಂದ ಇಳಿಯಲೇ ಇಲ್ಲ ಅನ್ನಿಸತ್ತೆ" ಎಂದೆ ನಾನು. ಆ ವ್ಯಕ್ತಿ ಮುಂದೆ ಕುಳಿತು ಕಾರನ್ನೋಡಿಸಿಕೊಂಡು ಹೊರಟ. ನಾವೂ ಅವರ ಹಿಂದೆಯೇ ಜೀಪಿನ ಲೈಟ್ ಆರಿಸಿಕೊಂಡು ಹೊರಟೆವು. ಮುಖ್ಯ ರಸ್ತೆಯನ್ನು ದಾಟಿ, ಒಂದು ಗಲ್ಲಿಯನ್ನು ಸುತ್ತುಹಾಕಿ ಮತ್ತೊಂದು ರಸ್ತೆಯಲ್ಲಿ ಹೊರಟ.
"ಇದು ನಮ್ಮ ಆಫೀಸ್ನ ಹಿಂದಿನ ರೋಡ್ ಅಲ್ವಾ?" ಎಂದಳು ಕವನಾ.
"ಹೌದು . ಅವ ಬಂದ ದಾರಿಯಲ್ಲೇ ವಾಪಾಸ್ ಹೋಗ್ತಾ ಇಲ್ಲ, ಸುತ್ತುಹಾಕಿ ಹೋಗ್ತಿದಾನೆ." ಎಂದ ಮಹೇಶಣ್ಣ. ಕಾರಿನ ವೇಗ ಕಡಿಮೆಯಾಗಿತ್ತು. ನಿಧಾನವಾಗಿ ಆ ರಸ್ತೆಯ ಬಲ ಮಗ್ಗುಲಿಗೆ ಹೊರಳಿ ತೆರೆದ ದೊಡ್ಡ ಗೇಟಿನ ಒಳಗೆ ಕಾರು ಹೋಯಿತು. ಅಂದರೆ ಇಲ್ಲಿ ಕಾಂತಿಬಾಯಿ ಇದ್ದಾಳೆ!! ನಮಗೆ ಇಷ್ಟು ಹತ್ತಿರದಲ್ಲಿ ಇದ್ದಾಳೆ ಎಂಬುದು ನಮಗೆಲ್ಲರಿಗೂ ಊಹೆಗೂ ನಿಲುಕದ್ದು.
ಸ್ವತಃ ಇನ್ಸ್ಪೆಕ್ಟರ್ ಮುಂದೇನು ಮಾಡಬೇಕು ಎಂದು ಯೋಚಿಸುತ್ತಿದ್ದರು. ಒಳಗೆ ಎಷ್ಟು ಜನರಿದ್ದಾರೆ, ಅವರ ಬಳಿ ಏನೇನು ಆಯುಧಗಳಿವೆ ಎಂಬ ಯಾವ ಕಲ್ಪನೆಯೂ ನಮ್ಮಲ್ಲಿರಲಿಲ್ಲ. ಇದ್ಯಾವುದಕ್ಕೂ ಸಂಬಂಧವಿರದ ನಾವು ಮೂವರೂ ಸುಳಿಯಲ್ಲಿ ಸಿಲುಕಿದ್ದೆವು. ಅಷ್ಟರಲ್ಲಿ ಪೊಲೀಸರು ತಿಳಿಸಿದ್ದರು ಎನಿಸುತ್ತದೆ, ಮತ್ತೆ ನಾಲ್ವರು ಬಂದು ಅವರಿಗೆ ಸೆಲ್ಯೂಟ್ ಮಾಡಿ ನಿಂತರು. ನಾವೇನು ಮಾಡಬೇಕು ಎಂದು ಯೋಚಿಸುತ್ತಿರುವಾಗಲೇ, "ಗಿರಿ, ನೀವು ಈ ಮೂರು ಜನರನ್ನೂ ಕರ್ಕೊಂಡು ಮರೆಲಿರಿ. ಆದರೆ ಕಾಂಪೌಂಡ್ ಒಳಗೆ ಇರಿ. ಯಾವಾಗ ಸಹಾಯಕ್ಕೆ ಕರೆದ್ರೂ ಬರಬೇಕು"
 "ಎಸ್ ಸರ್" ಎಂದಾತ ಗಿರಿ ಎಂದು ಗೊತ್ತಾಯ್ತು. "ಮಿಸ್ಟರ್ ಮಹೇಶ್, ಮತ್ತೆ ನೀವಿಬ್ರು.. ತುಂಬಾ ಒಳ್ಳೆ ಕೆಲಸ ಮಾಡಿದಿರಾ. ಆದ್ರೆ ನಾವು ಇಲ್ಲಿ ಮಾತಾಡ್ತಾ ಟೈಮ್ ವೇಸ್ಟ್ ಮಾಡೋ ಹಾಗಿಲ್ಲ. ಅವರಿಗೆ ಸುಳಿವು ಕೊಡೊ ಹಾಗಿಲ್ಲ. ನೀವು ಗಿರಿ ಜೊತೆಯಲ್ಲಿರಿ" ಎನ್ನುತ್ತಾ ಮುನ್ನಡೆದರು. ನಾವು ಮೂವರೂ ಗಿರಿ ಎನ್ನುವಾತನ ಹಿಂದೆ ಕಳ್ಳ ಹೆಜ್ಜೆ ಇಡುತ್ತ ನಡೆದೆವು. ನನಗೋ ಕೈ ಕಾಲೆಲ್ಲಾ ಥರ ಥರ ನಡುಗುತ್ತಿತ್ತು.
"ನಮಗೆ ಸಂಬಂಧವೇ ಇಲ್ದೆ ಇರೋ ವಿಷಯಕ್ಕೆ ನಾವು ತಲೆ ಹಾಕಿದೀವಿ. ತಲೆ ಉರಳೋದು ಗ್ಯಾರಂಟಿ. ಸಿನಿಮಾದಲ್ಲೆಲ್ಲ ಇರೋ ಹಾಗೆ ದೊಡ್ಡ ದೊಡ್ಡ ನಾಯಿ ಈ ಮನೇಲಿದ್ದು, ಅದು ನಮ್ಮನ್ನ ನೋಡಿ ಕೂಗಿದ್ರೆ ಏನು ಮಾಡಬೇಕು ? ಸಿಸಿಟಿವಿ ಇದ್ಯೋ ಏನೋ.. ಯಾರಾದ್ರೂ ಅದನ್ನ ನೋಡಿ ನಮ್ಮ ಮೇಲೆ ಅಟ್ಯಾಕ್ ಮಾಡಿದ್ರೆ ... ಮುಂದೇನು ?" ಭಯಕ್ಕೆ ಕುಸಿದು ಬೀಳುತ್ತೀನೇನೋ ಎನಿಸಿತ್ತು.
 ಮನೆಯಲ್ಲ ಅದು ಅರಮನೆ. ಎದುರು ದೊಡ್ಡ ಹಸಿರು ಕೋಟೆ. ಎಂದರೆ ಯಾವುದೊ ಬಳ್ಳಿಯನ್ನು ಮೊದಲ ಮಹಡಿಯಷ್ಟು ಎತ್ತರಕ್ಕೆ ಬೆಳೆಸಿದ್ದರು. ನಮಗೂ ಆ ಮನೆಗೂ ನಡುವೆ ಅದೊಂದು ಪರದೆಯಾಗಿತ್ತು. ಅತ್ತ ಯಾರಿದ್ದಾರೆ ಎಂಬುದೂ ನಮಗೆ ಕಾಣುತ್ತಿರಲಿಲ್ಲ. ಆದರೆ ನಾವು ಅವರಿಗೆ ಕಾಣುವ ಸಂಭವ ಜಾಸ್ತಿ ಇತ್ತು. ಹಾಗಾಗಿ ಆದಷ್ಟು ನಿಧಾನವಾಗಿ ಗಿಡಗಳ ಮರೆಯಲ್ಲಿ ಬಗ್ಗಿ ನಡೆಯುತ್ತಿದ್ದೆವು.
ಕಾರಿನಿಂದ ಇಳಿದು ಬಂದವ ನಿಧಾನವಾಗಿ ಹಿಂಬದಿಯ ಬಾಗಿಲನ್ನು ತೆರೆದು ನಿಂತ. ಮೊದಲಬಾರಿಗೆ ಕಾಂತಿಬಾಯಿಯನ್ನು ಕಾಣಬಹುದೆಂದು ನಾವೆಲ್ಲ ಇಣುಕಿ ನೋಡುತ್ತಿದೆವು. ಉಳಿದ ಪೊಲೀಸರು ಎಲ್ಲಿ ಅಡಗಿದ್ದಾರೆ ಎಂಬ ಕೊಂಚ ವಿಷಯವೂ ನಮಗೆ ತಿಳಿದಿರಲಿಲ್ಲ. ನಿಧಾನವಾಗಿ ಕಾರಿನಿಂದ ಒಂದು ವ್ಯಕ್ತಿ ಇಳಿಯಿತು. ಸೀರೆ ಉಟ್ಟಿದೆ !! ಅಂದರೆ ಹೆಂಗಸು !! ಓಹ್... ಕಾಂತಿಬಾಯಿ!! ಪ್ರಪಂಚದಿಂದ ತಲೆಮರೆಸಿಕೊಂಡ ಕಾಂತಿಬಾಯಿ ನಮ್ಮ ಕಣ್ಣೆದುರಲ್ಲಿ...
ಶುದ್ಧ ಸುಳ್ಳು ! ಕಾಂತಿಬಾಯಿಗೆ ಬೆನ್ನು ಗೂನಾಗಿಲ್ಲ. ಈ ಹೆಂಗಸು ಬಾಗಿದ ಬೆನ್ನಿನವಳು. ಯಾರಿರಬಹುದು ? ಎಲ್ಲರೂ ಹೇಳುವಂತೆ ಕಾಂತಿ ಬಾಯಿಯ ತಾಯಿಯೇ ?? ನಮ್ಮಲ್ಲಿ ಯಾರೂ ಬಲ್ಲವರಿಲ್ಲ. ಸುಮ್ಮನೆ ನೋಡುತ್ತಿದ್ದೇವಷ್ಟೆ. ಆ ಹೆಂಗಸು ನಿಧಾನವಾಗಿ ನಡೆಯುತ್ತಾ ಹಸಿರು ಪರದೆಯ ಬಲದಿಂದ ನಡೆದು, ಮನೆಯತ್ತ ಸಾಗಿದಳು. ಡ್ರೈವರ್ ಅವಳ ಹಿಂದೆಯೇ ನಡೆದ.
 "ಅಲ್ಲಿ ನೋಡು" ಎಂದು ಪಿಸುಗುಟ್ಟಿದಳು ಕವನಾ. ಪೊಲೀಸಪ್ಪ ಶ್ ಎಂದು ಸನ್ನೆ ಮಾಡಿ ಅವಳನ್ನು ಸುಮ್ಮನಾಗಿಸಿದ. ಅವಳು ಹೇಳಿದತ್ತ ನೋಡಿದರೆ ಮೇಲಿನಿಂದ ಒಬ್ಬೊಬ್ಬರೇ ಪೊಲೀಸರು ಮೊದಲ ಮಹಡಿಗೆ ಇಳಿಯುತ್ತಿದ್ದಾರೆ . ಅವರೆಲ್ಲ ಅಲ್ಲಿ ಹೇಗೆ ಬಂದರು ಎಂದು ಯೋಚಿಸಿದರೂ, ಪೊಲೀಸರಲ್ಲವಾ ಎಲ್ಲಿಂದಲಾದರೂ ಬರುತ್ತಾರೆ ಎಂದು ಸುಮ್ಮನೆ ನೋಡುತ್ತಾ ಕುಳಿತೆವು. ಅವರೆಲ್ಲ ಒಳಹೊಕ್ಕಿದ ಐದೇ ನಿಮಿಷಕ್ಕೆ "ಹಲ್ಕಟ್..." ಎಂದು ಹೆಂಗಸೊಬ್ಬಳು ಚೀರಿದಳು. ಮತ್ತೊಬ್ಬ "ಯಾವನೋ ಅವ್ನು" ಎಂದು ಕೂಗಿದ. ಎದುರಿನ ಬಾಗಿಲು ತೆರೆದ ಸದ್ದಾಯಿತು. "ಗಿರಿ ಅಂಡ್ ಟೀಮ್ ಕಮ್ ಇನ್ " ಎಂದು ಒಬ್ಬ ಕೂಗಿದ. ಬನ್ನಿ ಬನ್ನಿ ಎನ್ನುತ್ತಾ ಗಿರಿ ಮುನ್ನಡೆದ.
"ನಾವ್ಯಾವಾಗ ಇವರ ಟೀಮ್ ಆದ್ವಿ" ಎಂದಳು ಕವನಾ. ಸುಮ್ನಿರೇ ಎಂದು ಅವಳನ್ನು ಬೆದರಿಸಿ ಗಿರಿಯ ಹಿಂದೆಯೇ ನಡೆದ ಮಹೇಶಣ್ಣ. ನಾವೂ ಅವರನ್ನು ಹಿಂಬಾಲಿಸಿದೆವು. ಒಳಗೆ ಹೋಗುತ್ತಿರುವಂತೆಯೇ ಕಣ್ಣು ಕೋರೈಸುವ ಬೆಳಕು. ಕತ್ತಲಿಗೆ ಹೊಂದಿಕೊಂಡಿದ್ದ ಕಣ್ಣುಗಳು ಬೆಚ್ಚಿ ಬಿದ್ದಂತೆ ಅರೆ ಕ್ಷಣ ರೆಪ್ಪೆಯೊಳಗೆ ಅಡಗಿಕೊಂಡವು. ಮುಂದಿದ್ದ ಪೊಲೀಸ್ ಹೇಗೆ ಹೋಗುತ್ತಿದ್ದನೋ, ನಾವು ನಾಲ್ವರೂ ಅವನನ್ನು ಹಿಂಬಾಲಿಸುತ್ತಿದ್ದೆವು. ಡೈನಿಂಗ್ ಟೇಬಲ್ ನ ತುದಿಯಲ್ಲಿ ಇನ್ಸ್ಪೆಕ್ಟರ್ ನಿಂತಿದ್ದರು. ಅವರ ಕಣ್ಣ ನೋಟ, ಗನ್ ಪಾಯಿಂಟ್ ಎರಡೂ ಡೈನಿಂಗ್ ಟೇಬಲ್ ಬಳಿ ನೆಲದ ಮೇಲಿತ್ತು. ಇನ್ನೊಂದು ಬದಿಯಲ್ಲಿ ಉಳಿದೆಲ್ಲ ಪೊಲೀಸರು ನಿಂತಿದ್ದರು. ಮುದಿ ಹೆಂಗಸನ್ನು ಒಬ್ಬ ಪೊಲೀಸ್ ಹಿಡಿದು ನಿಂತಿದ್ದ. ನಾವು ನಿಧಾನವಾಗಿ ಏನೋ ನಡೆಯಬಾರದ್ದು ನಡೆದಿದೆ ಎಂದುಕೊಳ್ಳುತ್ತ ಹೋದೆವು. ಆದರೆ ಪೊಲೀಸರು ಬಯಸಿದ ಬೇಟೆ ಎದುರಲ್ಲಿಯೇ ಇತ್ತು. ನಿಧಾನವಾಗಿ ಡೈನಿಂಗ್ ಟೇಬಲ್ ನ ಬದಿಯಲ್ಲಿ ಹೋದಂತೆ, ಕಂಡಿತು.. ಡ್ರೈವರ್ ಅಲ್ಲಿಯೇ ಎಚ್ಚರ ತಪ್ಪಿ ಬಿದ್ದಿದ್ದ. ಅವನ ಧಡೂತಿ ದೇಹ ಬಲ ಪಾರ್ಶ್ವದಲ್ಲಿ ಮಗುಚಿ ಬಿದ್ದಿತ್ತು. ಕಿವಿಯಿಂದ ರಕ್ತ ಸೋರುತ್ತಿತ್ತು. ಹೊಕ್ಕುಳ ಕೆಳಗೆ ಧರಿಸಿದ ಜೀನ್ಸ್ ಪ್ಯಾಂಟ್, ಮೇಲೆ ಸರಿದ ಕಪ್ಪು ಟಿ ಶರ್ಟ್ ನಡುವೆ ಹೊಟ್ಟೆ ಆಚೆ ಬಂದಿತ್ತು. ಅವನ ಪಕ್ಕದಲ್ಲಿಯೇ ಕುಳಿತಿದ್ದಳು ಅವಳು. ಅಸಹಾಯಕಳಾಗಿ, ಅವನನ್ನೇ ದಿಟ್ಟಿಸುತ್ತಾ. ಕೆಂಪು ಕಣ್ಣ ತುಂಬಾ ನೀರನ್ನು ತುಂಬಿಕೊಂಡು. ಅದೇ ಕೆಂಪು ಸೀರೆ, ಕತ್ತಿನಲ್ಲಿ ಹಾರ, ಕೈಲಿ ಗಾಯದ ಗುರುತು, ಮುಖದಲ್ಲಿ ಮೊಡವೆಯ ಕಲೆಗಳು, ಎದ್ದು ಕಾಣುವಂತಿಟ್ಟ ಕೆಂಪು ಕುಂಕುಮ... ಆದರೆ ಮೂಡಿ ಕಟ್ಟಲು ಮೊದಲ ಕೇಶರಾಶಿಯಿಲ್ಲ. ಬಾಯ್ ಕಟ್ ಕೂದಲು, ಎಡದಿಂದ ಬಲಕ್ಕೆ ತಿರುಗಿಸಿದ ಕ್ರಾಪ್ ಅಷ್ಟೇ!! ವಯಸ್ಸಿನಿಂದಲೊ, ಇನ್ಯಾವ ಕಾರಣಕ್ಕೋ ದೇಹ ಬಾಡಿತ್ತು. ಕುಸಿದು ಕುಳಿತ ಭಂಗಿಯಿಂದ ಮತ್ತೂ ವಯಸ್ಸಾದವಳಂತೆ ಕಾಣುತ್ತಿದ್ದಳು.
ನಾವೆಲ್ಲ ಇಡೀ ಬೆಂಗಳೂರನ್ನೇ ಆಳಿದ 'ಕಾಂತಿಬಾಯಿ' ಇವಳೇನಾ ಎಂಬಂತೆ ನಿಂತಿದ್ದೆವು. ಅದುವರೆಗೂ ಅವಳನ್ನು ನೋಡಬೇಕೆಂಬ ಕುತೂಹಲ ಆ ಕ್ಷಣಕ್ಕೆ ಅಂತ್ಯಗೊಂಡಿತ್ತು.
ಇವರನ್ನು ಬಿಟ್ಟು ಆ ಮನೆಯಲ್ಲಿ ಇನ್ನಾರೂ ಇದ್ದಂತೆ ಕಾಣಲಿಲ್ಲ. ಆ ನಿಶಬ್ದದ ನಡುವೆ ಆಕೆ ಕಣ್ಣೊರೆಸಿಕೊಳ್ಳುತ್ತ ಎದ್ದು ಇನ್ಸ್ಪೆಕ್ಟರ್ ನನ್ನು ದಾಟಿ ಅಡುಗೆ ಮನೆಯತ್ತ ನಡೆದಳು. ಒಂದು ಲೋಟ ನೀರು ಕುಡಿದು, ನಿಧಾನವಾಗಿ ನಡೆಯುತ್ತಾ ಮೆಟ್ಟಿಲ ಬಳಿ ಹೋದಳು.
" ಕಾಂತಿಬಾಯಿ ನಿಲ್ಲು.. ನೀ ಏನೂ ಮಾಡೋಕಾಗಲ್ಲ. ನಿಲ್ಲು ಕಾಂತಿಬಾಯಿ" ಎಂದು ಇನ್ಸ್ಪೆಕ್ಟರ್ ಕಿರುಚಿದ. "ಇಷ್ಟು ಹೇಳ್ತ ಇದ್ರೂ ಮೇಲೆ ಹೋಗ್ತಿಯ ನಿಲ್ಲು ಕಾಂತಿಬಾಯಿ " ಎನ್ನುತ್ತಾ ಮೆಟ್ಟಿಲ ಬಳಿ ಇನ್ಸ್ಪೆಕ್ಟರ್ ಹೋಗಿ ನಿಂತ.
 "ಈ ಕಾಂತಿಬಾಯಿನ ಇದುವರೆಗೂ ಹೆಸರು ಹಿಡಿದು ಯಾರೂ ಕರ್ದಿಲ್ಲ ನೆನಪು ಇಟ್ಕೋ" ಹಿಂದೆ ತಿರುಗಿಯೂ ನೋಡದೆ ಆಕೆ ಮೆಟ್ಟಿಲು ಹತ್ತುತ್ತಿದ್ದಳು. ಇದ್ದಕ್ಕಿದ್ದಂತೆ ಸ್ಫೋಟಕ ಸದ್ದಿಗೆ ನಾವೆಲ್ಲ ಬೆಚ್ಚಿದೆವು. ಇಸ್ಪೇಕ್ಟರ್ ಗನ್ ಇಂದ ಬುಲೆಟ್ ಆಚೆ ಬಂದು ಕಾಂತಿ ಬಾಯಿಯ ಎಡ ಕಾಲಿನ ಮೀನಖಂಡಕ್ಕೆ ಹೊಕ್ಕಿತು. "ಅವ್ವ.. " ಎಂದು ಚೀರಿ ಗೋಡೆ ಹಿಡಿದುಕೊಂಡಳು. ಮುದಿ ಹೆಂಗಸು ಜೋರಾಗಿ ಅಳುತ್ತಿದ್ದಳು. ಆ ಶಬ್ದಕ್ಕೆ ಬೆಚ್ಚಿದ ಮಗುವೊಂದು ಅಳುತ್ತಿರುವ ಸದ್ದು ಮೇಲಿನಿಂದ ಕೇಳಿಸಿತು. ಈ ಮನೆಯಲ್ಲೊಂದು ಮಗುವಿದೆ ಎಂಬ ಅರಿವು ಯಾರಿಗೂ ಇರಲಿಲ್ಲ. ಇನ್ಸ್ಪೆಕ್ಟರ್ ಕೂಡ ಸ್ತಬ್ಧವಾಗಿ ನಿಂತಿದ್ದರು. ಅಷ್ಟರಲ್ಲಿ ಕಾಂತಿಬಾಯಿ ಆ ಕೋಣೆಯ ಒಳಹೊಕ್ಕಳು. ಎರಡೇ ಕ್ಷಣಕ್ಕೆ ಮಗುವಿನ ಅಳು ನಿಂತಿತ್ತು. ಮೇಲೆ ನಿಂತಿದ್ದ ಒಬ್ಬ ಪೊಲೀಸನಿಗೆ ಇನ್ಸ್ಪೆಕ್ಟರ್ ಸಂಜ್ಞೆ ಮಡಿದ. ಆತ ಬಾಗಿಲ ಬಳಿ ನಿಂತು ಶೂಟ್ ಮಡಿದ ಸದ್ದಿಗೆ ಮತ್ತೊಮ್ಮೆ ಅವ್ವಾ ಎಂದಿದ್ದು ಕೇಳಿಸಿತು. ಎಲ್ಲರೂ ಮೇಲೆ ಓಡಿದೆವು. ಕೋಣೆಯ ಬಾಗಿಲಲ್ಲಿ ನಿಂತು ನೋಡಿದ ದೃಶ್ಯ ಭಯಾನಕವಾಗಿತ್ತು. ತೊಟ್ಟಿಲ ಪಕ್ಕ ನೆಲಕ್ಕೆ ಗೋಡೆಗೊರಗಿ ಕುಳಿತು, ಬಲಗಾಲನ್ನು ಮಡಚಿ, ಎಡಗೈಯಲ್ಲಿ ಮಗುವನ್ನು ತಬ್ಬಿ, ಮೊಲೆಯುಣಿಸುತ್ತಿದ್ದಳು ಕಾಂತಿಬಾಯಿ. ಮಗುವಿನ ಬಾಯಿಯಲ್ಲಿ ಬಿಳಿ ನೊರೆ ಹಾಲು, ಅದರ ಕಾಲು ಕೆಂಪು. ಕಾಂತಿಬಾಯಿಯ ಸೊಂಟಕ್ಕೆ ಗುಂಡಿನ ಏಟು ಬಿದ್ದು ರಕ್ತ ಧಾರಾಕಾರವಾಗಿ ಸುರಿಯುತ್ತಿತ್ತು. ಮಗು ಅವಳ ಕತ್ತಿನ ಹಾರವನ್ನು ಹಿಡಿದು, ಸೊಂಟಕ್ಕೆ ಒದೆಯುತ್ತಾ ಹಾಲು ಕುಡಿಯುವುದಲ್ಲಿ ತಲ್ಲೀನವಾಗಿತ್ತು. ಕಾಂತಿಬಾಯಿ ನೇರ ದೃಷ್ಟಿಯಲ್ಲಿ ಬಾಗಿಲತ್ತ ನೋಡುತ್ತಿದ್ದಳು. ನಾವೆಲ್ಲಿ ಅವಳ ದೃಷ್ಟಿಯಿಂದ ಸುಟ್ಟು ಭಸ್ಮವಾಗುತ್ತೀವೋ ಎಂದು ನಡುಗುತ್ತ ಬೆವರಿ ನಿಂತಿದ್ದೆವು. ಇಂದಿಗೂ ಆ ಚಿತ್ರ ನನ್ನನ್ನು ಕಾಡುತ್ತದೆ. ಕೆಂಪು ಸೀರೆಯಲ್ಲಿ, ಕೆಂಪು ರಕ್ತದ ಮಡುವಿನಲ್ಲಿ ಕಾಂತಿಬಾಯಿ, ನೋವಿನಲ್ಲೂ ಬಿಗಿದಪ್ಪಿದ ಮಗು. ಆ ಮಗುವಿನ ಆಟ, ಕಾಂತಿಬಾಯಿಯ ನೋಟ !!

ಆದರೂ ನನ್ನ ಬಗ್ಗೆ ನನಗೆ ಹೆಮ್ಮೆಯಿದೆ. ಕಾಂತಿಬಾಯಿಯನ್ನು ಪೊಲೀಸರ ಕೈಗೊಪ್ಪಿಸಿದ್ದಕ್ಕಲ್ಲ; ಯಾವ ಕನಸೂ ನೆನಪಿರದ ನನಗೆ, ನಡುರಾತ್ರಿ ಕಂಡ ಕನಸೊಂದು, ನೆನಪಿದ್ದೂ, ಮೂರು ದಿನಗಳವರೆಗೆ ಚಿತ್ರ ಸಮೇತ ಕಾಡಿದ್ದು ಇದೆ ಮೊದಲು. ಅದನ್ನು ನೆನಪಿಟ್ಟು ಮರುಸೃಷ್ಟಿಸಿದ್ದಕ್ಕೆ ಹೆಮ್ಮೆ! ಆ ಕಾಂತಿಬಾಯಿ ಹಾಗೂ ಅವಳ ಮಗುವನ್ನು ಸಧ್ಯದಲ್ಲಿ ನಾನು ಮರೆಯಲಾರೆ... -ಪಲ್ಲವಿ

Sunday, November 28, 2021

ಮನಸ್ಥಿತಿ...

ಕರ್ನಾಳ ಮಾಸ್ತರು ಸುಮಾರು ಮೂವತ್ತರ ಆಸು
ಪಾಸಿನವರು. ಕಿರಾಣಿ ವ್ಯಾಪಾರ ಅವರ ಕೆಲಸವಾದರೂ, ಮಾಸ್ತರರು ಎಂದೇಕೆ ಕರೆಯುವರೆಂದು ಯಾರಿಗೂ ತಿಳಿದಿಲ್ಲ. ಅವರ ಕುಟುಂಬದಲ್ಲಿ ಮೊದಲು ಯಾರೋ ಮಾಸ್ತರರಾಗಿದ್ದಿರಬಹುದು. ಅಲ್ಲಲ್ಲಿ ಇಣುಕುವ ಹತ್ತಾರು ನೆರೆತ ಕೂದಲು, ಕುರುಚಲು ಗಡ್ಡ, ಸಣ್ಣ ಹೊಟ್ಟೆ, ಉದ್ದ ತೋಳಿನ ಅಂಗಿ, ಬಿಳಿಯ ಲುಂಗಿ - ಎಂದಿಗೂ ಅವರನ್ನು ಹೀಗೆಯೇ ಕಾಣಬಹುದು. ಅವರೇನೋ ಹುಟ್ಟಿ ಬೆಳೆದುದು ಸಿದ್ದಾಪುರವೇ ಆದರೂ ಮೂಲತಃ ಅಲ್ಲಿಯವರಲ್ಲ. ಅವರ ತಂದೆ ಶೇಟಿ ಮಾಸ್ತರು ಚಿಕ್ಕಮಗಳೂರಿನ ಸಮೀಪದ ಯಾವುದೋ ಹಳ್ಳಿಯವರು. ತಮ್ಮ ಹಿರಿಯ ಮಗಳ ಖಾಯಿಲೆಗೆ ನಾಟಿ ಔಷಧಿ ಸಿಗುವುದೆಂಬ ಕಾರಣಕ್ಕೆ ಬಂದವರು, ನೆಲೆ ನಿಂತರು. ಮಗಳು ಹತ್ತೊಂಭತ್ತರ ಸುಮಾರಿಗೆ ಉಸಿರಾಟದ ತೊಂದರೆಯಿಂದ ಬಳಲಿ ಅಸುನೀಗಿದ್ದಳು. ಶೇಟಿ ಮಾಸ್ತರರು ಮತ್ತವರ ಮಡದಿ ತೀವ್ರ ಖಿನ್ನತೆಗೆ ಒಳಗಾದರೂ ಮಗ ಸಹದೇವ ಕರ್ನಾಳನ ಬೆಳವಣಿಗೆಯಲ್ಲಿ ದಿನ ದೂಡುತ್ತಿದ್ದರು. ಡಿಗ್ರಿ ಮುಗಿಯುತ್ತಿದ್ದಂತೆ ಕರ್ನಾಳ ಅಪ್ಪನ ದಿನಸಿ ಅಂಗಡಿಯ ಜವಾಬ್ದಾರಿ ವಹಿಸಿಕೊಂಡು ಅವರಿಗೆ ನಿವೃತ್ತಿ ನೀಡಿದರು.
ಪೇಟೆಯ ಮಧ್ಯದಲ್ಲೇ ಅವರ ಅಂಗಡಿ. ಎಡಕ್ಕೊಂಡು ಹಣ್ಣಿನ ಅಂಗಡಿ, ಬಲದಲ್ಲಿ ಒಂದು ಹೊಲಿಗೆ ಅಂಗಡಿ, ಮತ್ತದರ ಪಕ್ಕ ಒಂದು ಪುಟ್ಟ ಸ್ಟೇಷನರಿ ಅಂಗಡಿ. ಈ ನಾಲ್ಕು ಅಂಗಡಿಗಳ ಒಂದು ಸಾಲಿನ ನಂತರ ಕೆಲವು ಮನೆಗಳು. ಕರ್ನಾಳರ ಅಂಗಡಿಯ ಎದುರು ಒಂದು ದೊಡ್ಡ ಹುಣಿಸೆ ಮರ, ಪೇಟೆಯ ನಡುರಸ್ತೆ. ಎದುರಿಗೆ ಒಂದು ಪುಟ್ಟ ಟೀ ಸ್ಟಾಲ್.
ಪ್ರತಿ ಬುಧವಾರ ನಡೆಯುವ ಸಂತೆಯಲ್ಲಿ ಇವರ ಅಂಗಡಿಗಳ ಎದುರೇ ತರಕಾರಿ ಅಂಗಡಿಗಳು ಇರುತ್ತಿದ್ದವು. ರಸ್ತೆಯಲ್ಲಿ ವಾಹನಗಳು ಓಡಾಡಲು ಸಾಧ್ಯವಿರುತ್ತಿರಲಿಲ್ಲ. ವಾರಕ್ಕೊಮ್ಮೆ ನಡೆಯುವ ಸಂತೆಯಾದ್ದರಿಂದ ಜನನಿಬಿಡವಾಗಿರುತ್ತಿತ್ತು. ಅಂದು ಮಾತ್ರ ಕರ್ನಾಳರ ಟೀ ಅಂಗಡಿಯಲ್ಲಿನ ಜನಜಂಗುಳಿಯನ್ನು ನೋಡಲಸಾಧ್ಯ! ಎರಡು ಜನ ಕೆಲಸಕ್ಕಿದ್ದರೂ ಸಾಲದೇ ಅಂದು ಶೇಟಿ ಮಾಸ್ತರರೂ, ಸ್ವಾತಿಯೂ ಸಹಾಯಕ್ಕೆ ಹಾಜರಾಗುತ್ತಿದ್ದರು. ಇಷ್ಟಾದರೂ ಕೈ ತುರಿಸಿಕೊಳ್ಳಲೂ ಪುರಸೊತ್ತಿಲ್ಲದೆ ಕೆಲಸ ನಡೆಯುತ್ತಿತ್ತು. ಒಂದು ಬುಧವಾರ ಹಕ್ಕಲಕಣ್ಣಿಯ ಗೋವಿಂದ ಎಂಬ ಹಳೆಯ ಸ್ನೇಹಿತ ಕರ್ನಾಳ ಮಾಸ್ತರ ಭೇಟಿಯಾದ. ಉಭಯ ಕುಶಲೋಪರಿಗಳನ್ನು ಮಾತನಾಡುತ್ತ, ಕರ್ನಾಳ ಮಾಸ್ತರರು ತಮ್ಮ ಮನೆಯ ಪರಿಸ್ಥಿತಿಯನ್ನು ವಿವರಿಸಿದರು.

ಸ್ವಾತಿ ಕರ್ನಾಳರ ಮನೆ ಸೇರಿ ಐದು ವರ್ಷಗಳಾಗಿವೆ. ಮದುವೆಯಾದಾಗ ಅವಳ ವಯಸ್ಸು ಹದಿನೆಂಟು! ಸಣ್ಣಗೆ ಬೆಳ್ಳಗೆ ಇದ್ದ ಹುಡುಗಿ ಸೀರೆ ಸುತ್ತಿದ ಗೊಂಬೆಯಂತೆ ಕಾಣುತ್ತಿದ್ದಳು ಮದುವೆ ಮನೆಯಲ್ಲಿ. ಮೊದಲೆಲ್ಲ ಎಲ್ಲರೂ ಅತ್ತೆ ಮನೆಯಲ್ಲಿ ನೀ ಬೇಗ ಏಳಬೇಕು, ಬಹಳ ಕೆಲಸ ಇರುತ್ತವೆ, ಅವರು ಹೇಳಿದಂತೆ ನೀ ಕೇಳಬೇಕು, ದಿನವೂ ಅಡಿಗೆ ಮಾಡಬೇಕು, ಎಲ್ಲರ ಬೇಕು ಬೇಡಗಳನ್ನು ನೋಡಿಕೊಳ್ಳಬೇಕು ಎಂದೆಲ್ಲ ಹೇಳಿದಾಗ ದಿಗಿಲುಗೊಂಡಿದ್ದಳು. ಈ ಬೇಕುಗಳ ಪಟ್ಟಿಯನ್ನು ನೋಡಿ ಹೌಹಾರಿದ್ದಳು. ಹಾಗಾದರೆ ಇದು ಮದುವೆಯೇ ಅಲ್ಲ. ಮದುವೆಯಾದ ಮೇಲೆ ಹೀಗೆಲ್ಲ ಇರುತ್ತದೆಯಾದರೆ ಇಂತಹ ಮದುವೆ ಬೇಡವೇ ಬೇಡ ಎಂದು ನಿರ್ಧರಿಸಿದ್ದಳು. ಆ ನಿರ್ಧಾರಗಳನ್ನೆಲ್ಲ ಗಾಳಿಗೆ ತೂರಿ ಸಹದೇವನ ಸತಿಯಾಗಿ ಸ್ವಾತಿ ಕರ್ನಾಳರ ಕುಟುಂಬದ ಭಾಗವಾದಳು.
ಅವಳೆಣಿಸಿದಂತೆ ಯಾವುದೂ ಇರಲಿಲ್ಲ. ಮಗಳ ಕಳೆದುಕೊಂಡವರ ಮಡಿಲಿಗೆ ಮಗಳಾದಳವಳು. ಮನೆಯ ಮುದ್ದಿನ ಮಗಳಾಗಿ, ಸಹದೇವನ ಪ್ರೀತಿಯ ಪತ್ನಿಯಾಗಿ ಖುಷಿಯಲ್ಲಿರಬೇಕಾದರೆ ಬಂದ ಅತಿಥಿಗಳೆಲ್ಲ, "ಮದ್ವೆ ಆಗಿ ಎರಡು ವರ್ಷಾತು. ಆಡ್ಸಕೆ ಒಂದ್ ಕೂಸು ಬ್ಯಾಡ್ವೇನಾ.."
" ಅಪ್ಪ ಅಮ್ಮನ್ನ ಬ್ಯಾಗ ಅಜ್ಜ ಅಜ್ಜಿ ಮಾಡ್ರಿ.. "
"ವಯಸ್ಸು ನಿಲ್ಲದಿಲ್ಲ. ಮುದಿ ಆದ್ಮೇಲೆ ಮಕ್ಕಳಾಗದಿಲ್ಲ, ಯೋಚ್ನೆ ಮಾಡಿ.." ಎಂದೆಲ್ಲ ಹೇಳಲು ಪ್ರಾರಂಭಿಸಿದರು.
ಇಪ್ಪತ್ತರ ಹರೆಯದಲ್ಲೇ ಸ್ವಾತಿ ಗರ್ಭಿಣಿಯಾದಳು. ನೂರಾರು ಕನಸುಗಳು ಗಂಡ ಹೆಂಡತಿಯರಿಗೆ, ಹೆಣ್ಣುಮಗುವಾಗಲಿ, ಅವಳನ್ನು ಬಹಳ ಮುದ್ದಾಗಿ ಸಾಕೋಣ ಎಂದೆಲ್ಲ ಹಗಲು ರಾತ್ರಿ ಎನ್ನದೆ ಮಾತನಾಡತೊಡಗಿದರು. ಶೇಟಿ ಮಾಸ್ತರೂ ಅವರ ಪತ್ನಿಯೂ ಸೊಸೆಯನ್ನು ಆದಷ್ಟು ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು.
ಇವರ ಪ್ರೀತಿಯನ್ನು ಕಂಡು ಆ ಮಗುವಿಗೂ ಬೇಗ ಮಡಿಲು ಸೇರಬೇಕು ಎನಿಸಿತೋ ಏನೋ, ಮೂರೇ ತಿಂಗಳಿಗೇ ಜಾರಿ ಅದರಮ್ಮನ ಕೈ ಸೇರಿತ್ತು. ಅಘಾತದಿಂದ ಸ್ವಾತಿ ಎರಡು ದಿನ ಮಾತನ್ನೇ ನಿಲ್ಲಿಸಿದ್ದಳು. ಯಾರೇಷ್ಟೇ ಮಾತನಾಡಿಸಿದರೂ ಕಣ್ಣೀರು ಮಾತ್ರವೇ ಉತ್ತರವಾಗಿತ್ತು.ತನ್ನ ನೋವನ್ನು ನುಂಗಿ, ಸಹದೇವ ಹೆಂಡತಿಯ ಸಮಾಧಾನಕ್ಕೆ ನಿಂತಿದ್ದ.
ತಿಂಗಳುಗಳು ಕಳೆದು ವರುಷ ಉರುಳಿದರೂ ಸ್ವಾತಿ ಮೊದಲಿಗಿಂತ ಮೌನವಾಗಿರುತ್ತಿದ್ದಳು. ಮಗು ಎಂದರೆ ಹೆದರಿ ಮೂಲೆ ಸೇರುತ್ತಿದ್ದಳು. ಯಾರೇಷ್ಟೇ ಧೈರ್ಯ ಹೇಳಿದರೂ ಮತ್ತೆ ಮಗುವಿಗೆ ಮನಸೊಪ್ಪುತ್ತಿರಲಿಲ್ಲ.
ಮತ್ತೊಂದು ವರ್ಷದ ನಂತರ ಸ್ವಾತಿ ಮತ್ತೊಮ್ಮೆ ಬಸುರಿಯಾದಳು. ಮತ್ತದೇ ಖುಷಿ ನಗುವಿದ್ದರೂ ಎಲ್ಲರಲ್ಲೂ ಅವ್ಯಕ್ತ ಅಳುಕು ಮನೆಮಾಡಿತ್ತು. ಕೆಲವು ಹರಕೆಗಳಾದವು, ಹಲವು ಚಿಕಿತ್ಸೆಗಳಾದವು. ಮೊದಲಿಗಿಂತ ಹೆಚ್ಚಿನ ಪ್ರೀತಿಯಲ್ಲಿ ಸ್ವಾತಿ ಮುಳುಗಿದ್ದಳು.
ಅಂತೂ ಎಲ್ಲರ ಆಶಯದಂತೆ ಯಾವ ತೊಂದರೆಯೂ ಇಲ್ಲದೆ ಮಗು ಹುಟ್ಟಿತು. ಸ್ವಲ್ಪ ತಡವಾಗಿಯಾದರೂ, ಸಹದೇವನ ಕನಸಿನಂತೆ ಹೆಣ್ಣುಮಗುವೇ. ಬಲು ಮುದ್ದಾಗಿ ಗುಂಡಗೆ ಬೆಣ್ಣೆ ಮುಡ್ಡೆಯಂತಿದ್ದ ಆ ಮಗುವನ್ನು ಮನೆಗೆ ಬಂದವರೆಲ್ಲ ಮುದ್ದಾಡುತ್ತಿದ್ದರು. 'ಭೂಮಿ' ಎಂದು ಹೆಸರಿಟ್ಟ ಸಹದೇವ, ಅವನ ಭೂಮಿಯೇ ಅವಳು ಎಂದು! ಅಂಗಡಿಗಿಂತ ಹೆಚ್ಚು ಸಮಯ ಮನೆಯಲ್ಲೇ ಕಳೆಯತೊಡಗಿದ್ದ. ಅಂಗಡಿಗೆ ಹೋದರೂ ದಿನಕ್ಕೆ ಇಪ್ಪತ್ತು ಸಲ ಫೋನ್ ಮಾಡಿ ಮಗಳ ಬಗ್ಗೆ ವಿಚಾರಿಸುತ್ತಿದ್ದ.
ಸಮಸ್ಯೆ ಶುರುವಾಗಿದ್ದು ಮಗುವಿಗೆ ಎರಡು ತಿಂಗಳಿದ್ದಾಗ..
ಈಗ ತಾನೇ ಮಲಗಿದೆ ಎಂದರೆ ಕಿಟಾರನೆ ಕಿರುಚುತ್ತಿತ್ತು. ಉಸಿರು ಕಟ್ಟುವಂತೆ ಮುಖವ ಕೆಂಪಗೆ ಮಾಡಿಕೊಂಡು ಅಳುತ್ತಿತ್ತು. ನೋಡಿದವರ ಕಣ್ಣಲ್ಲೂ ನೀರು ತುಂಬುವಷ್ಟು ಜೋರಾಗಿರುತ್ತಿತ್ತು ಅದರ ಅಳು.
ಮೊದಲೆಲ್ಲ ಶಿಶುವ ಅಳು ಎಂದು ಅಷ್ಟು ಗಮನ ಕೊಡದಿದ್ದರೂ ಕೊನೆಕೊನೆಗೆ ತಾರಕಕ್ಕೇರುತ್ತಿದ್ದ ಅದರ ಅಳು ಭಯ ಹುಟ್ಟಿಸುತ್ತಿತ್ತು. ಮಗುವನ್ನೆತ್ತಿ ನೋಡಿದರೆ ಕೆಂಪಾಗಿ ಸೊಳ್ಳೆ ಕಚ್ಚಿದಂತೆ ಸಣ್ಣ ಗುಳ್ಳೆಯೋ, ಚುಚ್ಚಿದಂತೆ ಗಾಯವೋ ಕಾಣಿಸುತ್ತಿತ್ತು. ಹಾಸಿಗೆ ಬದಲಾಯಿಸಿದರೂ, ಬಟ್ಟೆ ಬದಲಾಯಿಸಿದರೂ, ಸಮಸ್ಯೆ ಬಗೆಹರಿಯಲಿಲ್ಲ. ಕೆಲವೊಮ್ಮೆ ಹಾಸಿಗೆಯಡಿಯಲ್ಲಿ ಸಣ್ಣ ಬಳೆಯ ಚೂರುಗಳು ಸಿಗುತ್ತಿದ್ದವು.
ಬಾಲಗೃಹ ಎಂದು ತಾಯತ ಕಟ್ಟಿದರೂ, ಹೋಮ ಮಾಡಿಸಿದರೂ ಮಗುವಿನ ಅಳು ನಿಲ್ಲುತ್ತಿಲ್ಲ. ಜ್ಯೋತಿಷಿ ಕಡಿಮೆಯಾಗುತ್ತದೆ ಎಂದರೂ ಹೇಗೆ ಯಾವಾಗ ಎಂದೇನೂ ಹೇಳಲಿಲ್ಲ.ಡಾಕ್ಟರ್ ಬಳಿ ಹೋದರೆ ಗಾಯಕ್ಕೆ ಔಷಧಿ ಕೊಟ್ಟರೇ ವಿನಃ ಸಮಸ್ಯೆಯ ಮೂಲ ಹುಡುಕಲಿಲ್ಲ. "ಮಕ್ಳು ಹಿಂಗೇ ಅಡ್ತವೆ. ಹೆದ್ರಕೋಬಾರ್ದು" ಎಂದರು.
ಈಗ ಮಗುವಿಗೆ ನಾಲ್ಕು ತಿಂಗಳು. ಇಷ್ಟು ದಿನಗಳಲ್ಲಿ ಒಂದು ದಿನವೂ ಈ ಸಮಸ್ಯೆ ಇಲ್ಲದಿಲ್ಲ. ಹಾಗಾಗಿಯೇ ದಿನದಿನಕ್ಕೂ ಮಗಳ ಪರಿಸ್ಥಿತಿ ನೋಡಿ ಸಹದೇವ ಕೊರಗಿದ್ದ. ಈ ಮಗುವೂ ಉಳಿಯದಿದ್ದರೆ ಎಂಬ ಭಯ ಅವನಲ್ಲಿ ಕಾಡುತ್ತಿತ್ತು. ಹಾಗಾಗಿ ಮೌನಕ್ಕೆ ಶರಣಾಗಿದ್ದ.
ಇವೆಲ್ಲವನ್ನೂ ಕರ್ನಾಳ ಮಾಸ್ತರಿಂದ ಕೇಳಿದ ಗೋವಿಂದ ಎರಡು ನಿಮಿಷ ಸುಮ್ಮನೆ ಕುಳಿತ. ನಂತರ "ನೀವೇನು ಬ್ಯಾಸರ ಮಾಡ್ಕಳದಿಲ್ಲ ಅಂದ್ರೆ ನಾ ಏನೋ ಹೇಳ್ತೆ ಕೇಳ್ತ್ರ.."
"ಹೇಳಿ ಗೋವಿಂದಣ್ಣ.. ಎಲ್ಲ ಮಾಡಿದ್ದಾಯ್ತು. ನೀವೂ ಹೇಳಿ ಕೇಳಾಣ."
"ಶಿಮೊಗ್ಗ ಹತ್ರೆ ಒಂದು ಡಾಕ್ಟ್ರು ಅವ್ರೆ. ಅವ್ರ್ನ ಒಂದ್ಸಲ ಭೇಟಿ ಮಾಡ್ರಿ. ಮಗಾ ಮಾತ್ರ ಅಲ್ಲಾ.ನೀವು ಸ್ವಾತಮ್ಮನೂ ಹೋಗ್ಬೇಕಾಯ್ತದೆ.ನೀವು ಹೂ ಅಂದ್ರೆ ನಾ ಎಲ್ಲ ವ್ಯವಸ್ಥೆ ಮಾಡ್ತೆ"
"ಸರಿ ಗೋವಿಂದಣ್ಣ.."
ಎರಡು ದಿನಗಳ ನಂತರ ಕರ್ನಾಳರು ಹೆಂಡತಿ ಮಗುವನ್ನು ಕರೆದುಕೊಂಡು ಶಿವಮೊಗ್ಗಕ್ಕೆ ಬಂದಿಳಿದರು.
                                  ***
ಹಕ್ಕಲಕಣ್ಣಿಯ ಗೋವಿಂದ ಹೇಳಿದಂತೆ ಶಿವಮೊಗ್ಗದಲ್ಲಿ ದಂಪತಿಗಳು ಮಕ್ಕಳ ತಜ್ಞರನ್ನು ಭೇಟಿಯಾದರು. ಮಗುವಿನ ಸಮಸ್ಯೆ ಏನೆಂದು ತಿಳಿಯದಿದ್ದರೂ ಔಷಧಿ ಮಾತ್ರವೇ ಸಿಕ್ಕಿತು. ಅನ್ಯಮನಸ್ಕನಾಗಿದ್ದ ಕರ್ನಾಳರ ಬಳಿ ವೈದ್ಯರು ಮಾತನಾಡಿದರು.
"ನಿಮ್ಮ ಸಮಸ್ಯೆಯ ಮೂಲ ಮಗುವಿನಲ್ಲಿ ಇಲ್ಲವೇ ಇಲ್ಲ. ಒಮ್ಮೆ ನಾ ಹೇಳುವ ಡಾಕ್ಟರನ್ನ ಭೇಟಿಯಾಗಿ" ಎಂದು ವಿಳಾಸ ಕೊಟ್ಟರು.
ಹೇಗೂ ಬಂದಿದ್ದೇವೆ, ಅವರನ್ನೂ ಭೇಟಿಯಾಗಿಯೇ ಹೋಗೋಣ ಎಂದು ನಿರ್ಧರಿಸಿ ಹೋದಾಗ ಭೇಟಿಯಾಗಿದ್ದು ಮನೋವೈದ್ಯರು.
ಮೊದಲು ಕರ್ನಾಳರು ಅವರನ್ನು ಭೇಟಿಯಾಗಿ ಮಗುವಿನ ನಿರಂತರ ಅಳುವನ್ನೂ ಅದರ ಹಿಂದಿನ ತನ್ನ ಅನುಮಾನಗಳನ್ನೂ ಬಹಿರಂಗಪಡಿಸಿದರು.
ನಂತರ ಸ್ವಾತಿಯ ಬಳಿ ಆಪ್ತ ಸಮಾಲೋಚನೆ ನಡೆಸಿದಾಗ ವಿಷಯ ಖಚಿತವಾಗಿತ್ತು.
ಆ ನಂತರ ಗಂಡ - ಹೆಂಡತಿ ಇಬ್ಬರನ್ನೂ ಕೂರಿಸಿಕೊಂಡು ಡಾಕ್ಟರ್ ಮಾತನಾಡಿದರು.
"ನೋಡಿ ನೀವು ಮಗುವಿಗೆ ಏನೂ ಔಷಧಿ ಮಾಡುವ ಅವಶ್ಯಕತೆ ಇಲ್ಲ. ಸಮಸ್ಯೆಯ ಮೂಲವೇ ಸಿಕ್ಕಿದೆ. ನೀವು ಮಾಡಬೇಕಿರುವುದಿಷ್ಟೇ. ಸ್ವಾತಿಯವರನ್ನು ಮೊದಲು ಹೇಗೆ ಎಲ್ಲರೂ ಪ್ರೀತಿಸುತ್ತಿದ್ದಿರೋ, ಹಾಗೆಯೇ ಪ್ರೀತಿಸಿ."
"ನಾವೆಲ್ಲರೂ ಅವಳನ್ನ ಭಾಳ ಪ್ರೀತಿಸ್ತೇವೆ ಸಾರ್.."
"ಹಾಗಲ್ಲ.. ಸಂಪೂರ್ಣವಾಗಿ ನನ್ನ ಮಾತನ್ನು ಕೇಳಿ.."
ಸ್ವಾತಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ನಡೆದಿದ್ದನ್ನೆಲ್ಲ ಡಾಕ್ಟರ್ ವಿವರಿಸುತ್ತಿದ್ದರು.
ಸ್ವಾತಿ ಅಪೂರ್ವ ಪ್ರೀತಿಯಲ್ಲಿ ಬೆಳೆದವಳು.ಗಂಡನ ಮನೆಯಲ್ಲೂ ಅದೇ ಪ್ರೀತಿಯನ್ನು ಪಡೆದಳು. ಮೊದಲ ಮಗುವಿನ ಗರ್ಭಪಾತದ ಸಮಯದಲ್ಲಿ ಅವಳು ದೈಹಿಕವಾಗಿಯೂ ಮಾನಸಿಕವಾಗಿಯೂ ದುರ್ಬಲಳಾಗಿದ್ದಳು. ಈ ಮಗು ಹುಟ್ಟುವ ಸಂದರ್ಭದಲ್ಲಿಯೂ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದಳು. ಎಲ್ಲರ ಪ್ರೀತಿ ಅವಳ ನೋವನ್ನು ಮರೆಸಿತ್ತು.
ಮಗು ಹುಟ್ಟಿದ ಕೆಲವು ದಿನ ಎಲ್ಲವೂ ಸರಿಯಾಗಿಯೇ ಇದ್ದವು. ಆದರೆ ಸ್ವಾತಿ ಮಂಕಾಗಿರುತ್ತಿದ್ದಳು. ಊಟ ನಿದ್ದೆ ಎಲ್ಲವೂ ಕಡಿಮೆಯಾಗಿತ್ತು. ನಿಧಾನವಾಗಿ ಸರಿ ಹೋಗುತ್ತದೆ ಎಂದುಕೊಂಡಾಗ ಮಗುವ ಅಳು ಜೋರಾಗಿತ್ತು.
ಸ್ವಾತಿಯ ಪ್ರಕಾರ ಮಗು ಹುಟ್ಟಿದಮೇಲೆ ತನ್ನನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆ. ಮಗುವನ್ನು ಎಲ್ಲರೂ ಬಹಳ ಪ್ರೀತಿಸುತ್ತಾರೆ. ಅವಳು ಬರುವ ಮೊದಲು ತಾನು ಮಾತ್ರವೇ ಈ ಮನೆಯ ಮಗಳಾಗಿದ್ದೆ. ಈಗ ತನಗೊಂದು ಪ್ರತಿಸ್ಪರ್ಧಿ! ಈ ಎಲ್ಲ ಯೋಚನೆಗಳಿಂದ ಮಗುವಿನ ಮೇಲೆ ಕುಪಿತಾಳಗಿ ಮಲಗಿದ್ದಾಗ ಚಿವುಟುತ್ತಿದ್ದಳು. ಅತ್ತರೆ ಜೋರಾಗಿಯೇ ಏಟು ಹಾಕುತ್ತಿದ್ದಳು. ಮಗುವಿನ ಹಾಸಿಗೆಯಡಿ ಒಡೆದ ಬಳೆ ಚೂರುಗಳನ್ನಿಡುತ್ತಿದ್ದಳು. ಮಗುವು ಮಲಗಿದಾಗಲೇ ಗಾಯಗೊಂಡು ಅಳುತ್ತಿತ್ತು. ಈ ಎಲ್ಲ ಕಾರಣಗಳು ತಾಯಿಯ ಮೇಲೆ ಪ್ರಭಾವ ಬೀರಲು ಮೂಲ ಕಾರಣ ಮಗು ಹುಟ್ಟಿದ ನಂತರ ಮನೆಯಲ್ಲಾದ ಬದಲಾವಣೆ! ಎಲ್ಲರ ಲಕ್ಷ್ಯವೂ ಒಮ್ಮೆಲೇ ಮಗುವಿನೆಡೆ ಕೇಂದ್ರೀಕೃತವಾಯ್ತು. ಸ್ವಾತಿ ತನ್ನನ್ನು ಎಲ್ಲರೂ ನಿರ್ಲಕ್ಷಿಸುತ್ತಾರೆ, ಇದಕ್ಕೆ ಕಾರಣ ಮಗುವೇ ಎಂದುಕೊಂಡು ಇಷ್ಟೆಲ್ಲಾ ಮಾಡಿದ್ದಳು. ಮೊದಲಿನಂತೆ ಸ್ವಾತಿಯನ್ನೂ ನೋಡಿಕೊಳ್ಳಿ ಎಲ್ಲವೂ ಸರಿಹೋಗುತ್ತದೆ ಎಂದರು ವೈದ್ಯರು.
ಈಗ ಎರಡು ತಿಂಗಳಿಂದ ಮಗುವ ಅಳು ಕಡಿಮೆಯಾಗಿದೆ. ಯಾವುದೇ ತಾಯತ ಬೇಕಿಲ್ಲ, ಜ್ಯೋತಿಷಿ ಬೇಕಿಲ್ಲ, ಔಷಧಿಯ ಅವಶ್ಯಕತೆಯೂ ಇಲ್ಲ.

                            ***
-ಪಲ್ಲವಿ

Saturday, October 30, 2021

ಒಂದು ನಾಟಕದ ಸುತ್ತ...

ಅದು ಕಮಲಾಪುರದ ಪ್ರತಿಷ್ಠಿತ ಕಾಲೇಜು. ಪ್ರತಿವರ್ಷವೂ ಪಠ್ಯ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು, ಜನಪ್ರಿಯವಾಗಿತ್ತು. ಎಲ್ಲ ವಿದ್ಯಾರ್ಥಿಗಳೂ ತಮ್ಮ ಪದವಿಯ ವಿದ್ಯಾಭ್ಯಾಸ ‘ಜ್ಞಾನಕಲಶ’ ಕಾಲೇಜಿನಲ್ಲೇ ಎಂದು ಬಯಸುವ, ಇತರೆಎಲ್ಲ ಕಾಲೇಜುಗಳಿಗಿಂತ ಭಿನ್ನ ಧ್ಯೇಯೋದ್ದೇಶಗಳ ದೇಗುಲವದು. ಎಲ್ಲ ಕಾಲೇಜುಗಳೂ ಪರೀಕ್ಷೆ, ಇಂಟರ್ ವ್ಯೂ ಎಂದು ಒಂದೇ ವೃತ್ತದಲ್ಲಿ ಗಿರಕಿ ಹೊಡೆಯುತ್ತಾ, ಪಾಲಕರನ್ನು ಸುಲಿಯುತ್ತಾ, ವರ್ಷಕ್ಕೆ ಸಾವಿರಗಟ್ಟಲೇ ಪದವೀಧರರನ್ನು ಯಂತ್ರದಂತೆ ಉತ್ಪಾದಿಸುತ್ತಿದ್ದರೆ, ಜ್ಞಾನಕಲಶ ಕಾಲೇಜಿನಲ್ಲಿ ಅಂಕಕ್ಕಿಂತ ಜ್ಞಾನಕ್ಕೆ ಮೌಲ್ಯ ನೀಡಲಾಗಿತ್ತು. ಜೊತೆಗೆ ವಿದ್ಯಾರ್ಥಿಗಳು ತಮ್ಮಿಷ್ಟದ ಹವ್ಯಾಸಗಳಲ್ಲಿ ಪಾಲ್ಗೊಳ್ಳಲು ಹೇರಳವಾದ ಅವಕಾಶ ನೀಡಿ, ಸಮಾಜಕ್ಕೆ ಮಾದರಿಯಾಗಿತ್ತು. ಹಾಗಾಗಿ ಪಠ್ಯದ ಅವಧಿ ಮುಗಿದ ನಂತರ ವಿದ್ಯಾರ್ಥಿಗಳು ನೃತ್ಯ, ಹಾಡು, ನಾಟಕ, ಕ್ರೀಡೆ ಎಂದು ಸದಾಕಾಲ ಕಾರ್ಯೋನ್ಮುಖರಾಗಿರುತ್ತಿದ್ದರು.
ವಿಶೇಷವೆಂದರೆ ಪ್ರತಿವರ್ಷವೂ ಒಂದು ನಾಟಕವನ್ನು ತಾಲೀಮು ಮಾಡಿ ಸ್ಪರ್ಧೆಗಳಲ್ಲಿ ಭಾಗವಹಿಸುವುದಲ್ಲದೇ, ಸುತ್ತಮುತ್ತಲಿನ ಶಾಲೆಗಳಲ್ಲಿ ನಾಟಕವಾಡಿ ಮಕ್ಕಳಲ್ಲಿ ಬಾಲ್ಯದಿಂದಲೇ ಅಭಿರುಚಿ ಮೂಡಿಸುತ್ತಿದ್ದರು. ಹಾಗೆಯೇ ಹತ್ತಿರದ ಹಳ್ಳಿಗಳಲ್ಲಿ ಮಧ್ಯರಾತ್ರಿ  ನಾಟಕ ಮಾಡಿ ಊರ ಜನರನ್ನು ರಂಜಿಸುತ್ತಿದ್ದರು. ಇವೆಲ್ಲದಕ್ಕೂ ಮೂಲ ಕಾರಣ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜಯರಾಮ ಸರ್ ಎಂದರೆ ತಪ್ಪಾಗಲಾರದು. ನಾಟಕದ ಆಯ್ಕೆಯಂದ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ನಿರ್ದೇಶಸಿ, ಹಳ್ಳಿ ಹಳ್ಳಿಗಳಲ್ಲಿ ಸಂಘಟಿಸುವ ಕಾರ್ಯವೂ ಅವರದ್ದೇ!
ಸದಾ ಹೊಸತನಕ್ಕಾಗಿ ತುಡಿಯುವ,ಮಕ್ಕಳೊಂದಿಗೆ ಮಗುವಾಗಿ ಬೆರೆಯುವ ಮನಸ್ಸಿನ ಮೂಲಕ ಎಲ್ಲಾ ವಿದ್ಯಾರ್ಥಿಗಳ ಮೆಚ್ಚಿನ ಅಧ್ಯಾಪಕರಾಗಿದ್ದರು ಜಯರಾಂ ಸರ್! ಕೇವಲ ಪಾಠ, ಪರೀಕ್ಷೆ ಎನ್ನದೇ ಮಕ್ಕಳ ವಯಕ್ತಿಕ ಸಮಸ್ಯೆಗಳಿಗೆ ಕಿವಿಯಾಗಿ, ಕೆಲವೊಮ್ಮೆ ದನಿಯಾಗಿ, ಯುವ ಮನಸ್ಸುಗಳಿಗೆ ಆಪ್ತವಾಗಿದ್ದರು.
ಕಾಲೇಜಿನಲ್ಲಿ ಈ ವರ್ಷದ ನಾಟಕವನ್ನು ಕೈಗೆತ್ತಿಕೊಳ್ಳುವ ಎಲ್ಲಾ ಸಿಧ್ಧತೆಗಳೂ ಭರದಿಂದ ಸಾಗಿತ್ತು. ಈಗಾಗಲೇ ರಾಜ್ಯಮಟ್ಟದ ಸ್ಪರ್ಧೆಯ ವೇಳಾಪಟ್ಟಿ ಸಿಧ್ಧವಾಗಿ, ಕೈ ಸೇರಿದ ಕಾರಣ ಸಮಯ ವ್ಯರ್ಥಮಾಡುವಂತಿರಲಿಲ್ಲ. ಆಸಕ್ತಿಯಿದ್ದ ಮಕ್ಕಳೆಲ್ಲರೂ ಸಭಾಂಗಣದಲ್ಲಿ ಹಾಜರಿದ್ದರು. ಈ ಮೊದಲು ಪಾಲ್ಗೊಂಡ ವಿದ್ಯಾರ್ಥಿಗಳೆಲ್ಲ ಒಂದೆಡೆಯಾದರೆ, ಹೊಸಬರು ಇನ್ನೊಂದೆಡೆ ಕುಳಿತಿದ್ದರು.
ಜಯರಾಂ ಸರ್ ಎಲ್ಲರನ್ನುದ್ದೇಶಿಸಿ ಮಾತನ್ನಾರಂಭಿಸಿದರು, “ನೋಡಿ ಮಕ್ಕಳೇ, ಸ್ಪರ್ಧೆ ಎಂಬುದು ಜೀವನದಲ್ಲಿ ಇದ್ದೇ ಇದೆ. ಅದರಿಂದ ಏನಾದರೂ ಪಾಠ ಕಲಿಯಬೇಕಷ್ಟೇ! ಅದುಬಿಟ್ಟು ಬಹುಮಾನ ನಮಗೇ ಬರಬೇಕೆಂಬ ಸ್ವಾರ್ಥವಾಗಲೀ, ಬಂದೇ ಬರುತ್ತದೆ ಎಂಬ ಅತಿಯಾದ ವಿಶ್ವಾಸವಾಗಲೀ ಇರಕೂಡದು.
ಈ ನಾಟಕ ಅನ್ನೋದು ಕೇವಲ ಬಣ್ಣ ಬಳಿದುಕೊಂಡು, ವೇದಿಕೆಯ ಮೇಲೆ ಹೋಗಿ ನಾಲ್ಕು ಮಾತನಾಡಿ ಬರುವುದಲ್ಲ. ಇದು ಒಂದು ‘ಟೀಮ್ ವರ್ಕ್’. ಒಗ್ಗಟ್ಟೇ ನಾಟಕದ ಮೂಲಮಂತ್ರ. ಅದರಿಂದ ಮನಸ್ಸಿಗೆ ಖುಷಿ ಸಿಗಬೇಕು. ಪಾತ್ರಕ್ಕೆ ನ್ಯಾಯ ಒದಗಿಸಿದ ತೃಪ್ತಿ ಇರಬೇಕು. ಜನರಿಗೆ ನಾಟಕದ ಸಂದೇಶ ತಲುಪಬೇಕು. ಮೊಟ್ಟಮೊದಲು ಬದಲಾವಣೆಯ ತಂಗಾಳಿ ನಮ್ಮಲ್ಲಿ ಅಂದರೆ ನಟರಲ್ಲಿ ಬೀಸಬೇಕು. ಅರ್ಥವಾಯ್ತಾ?” 
ಏನು ಅರ್ಥವಾಯ್ತೋ ಏನೋ, ಎಲ್ಲರೂ ತಲೆಯಾಡಿಸಿದರು! ಇವೆಲ್ಲದರ ಮಧ್ಯ ಜಯರಾಂ ಸರ್ ಗಮನಿಸಿದ ಅಂಶವೆಂದರೆ, ನಾಲ್ಕೈದು ಮಕ್ಕಳು ಆಸಕ್ತಿಯೇ ಇಲ್ಲದಂತೆ ನೀರಸವಾಗಿ ಕುಳಿತಿದ್ದರು. ಅವರರೆಲ್ಲರೂ ಹಿಂದಿನ ನಾಟಕದಲ್ಲಿ ಅಭಿನಯಿಸಿದವರೇ..!
ಏನಾಗಿದೆ ಇವರಿಗೆಲ್ಲ ಎಂದು ಯೋಚಿಸುತ್ತಲೇ ನಾಟಕದ ಒಂದೊಂದು ಪ್ರತಿಯನ್ನು ವಿದ್ಯಾರ್ಥಿಗಳಿಗೆ ಹಂಚಿ,ಒಮ್ಮೆ ಓದಿ ಎಂದರು.
“ಗಿರಿ, ಪ್ರಭವ, ಆದರ್ಶ, ಸುಮಂತ, ಸೌರಭಾ ಎಲ್ಲರೂ ನನ್ನ ಜೊತೆ ಬನ್ನಿ” ಎಣದು ಹೊರನಡೆದರು. ಮನಸ್ಸಿರದಿದ್ದರೂ ಐವರೂ ಅವರ ಹಿಂದೆ ಹೆಜ್ಜೆ ಹಾಕಿದರು.
“ವಾರದ ಹಿಂದೆ ಹೊಸ ನಾಟಕ ಯಾವಾಗ ಸಾರ್ ಎಂದು ಪೀಡಿಸುತ್ತಿದ್ದವರಿಗೆ ಎನಾಯ್ತು? ಯಾಕೆ ಇಷ್ಟು ಗಂಭೀರವಾಗಿದ್ದೀರಾ?” ಎಂದೆಲ್ಲಾ ಎಷ್ಟೇ ವಿಧವಾಗಿ ಪ್ರಶ್ನಿಸಿದರೂ, ಯಾರೊಬ್ಬರೂ ಉತ್ತರಿಸಲಿಲ್ಲ.
ಊರಿಗೆ ಹೊಸದಾಗಿ ರಸ್ತೆ ಮಾಡಲು ಬರುತ್ತಿದ್ದಾರೆ, ಆದರೆ ಈ ಹುಡುಗರೆಲ್ಲ ಸೇರಿ ಅದನ್ನು ವಿರೋಧಿಸುತ್ತಿದ್ದಾರೆ. ಹಿರಿಯರೆಲ್ಲ ಒಂದಾಗಿ ಊರಿಗೊಂದು ರಸ್ತೆ ಬೇಕು ಎಂದರೆ, ಹುಡುಗರೆಲ್ಲ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾರೆ. ಹಾಗಾಗಿ ಊರಲ್ಲಿ ಎರಡು ಪಂಗಡಗಳಾಗಿವೆ ಎಂದು ಸೌರಭಾ ತಿಳಿಸಿದಳು.
ಎಲ್ಲ ಊರವರೂ ರಸ್ತೆ ಬೇಕೆಂದು ಸರಕಾರಕ್ಕೆ ಅರ್ಜಿ ಬರೆದರೂ, ಕೆಲಸವಾಗದೇ ಒದ್ದಾಡುತ್ತಿರುವಾಗ ಈ ಮಕ್ಕಳೇಕೆ ವಿರೋಧಿಸುತ್ತಿದ್ದಾರೆ, ರಸ್ತೆಯಾದರೆ ಊರೊಳಗೆ ಬಸ್ ಬರುತ್ತದೆ, ಎಲ್ಲಾ ವಾಹನಗಳೂ ಬರಲು ಅನುಕೂಲವಾಗುತ್ತದೆ, ಎಲ್ಲವೂ ಗೊತ್ತಿದ್ದೂ ಯಾಕೀ ವಿರೋಧ ಎಂದು ಪ್ರಶ್ನಿಸಿದರು.
“ರಸ್ತೆ ಬೇಕೆಂಬ ಆಶಯ ನಮ್ಮಲ್ಲಿಯೂ ಇದೆ, ಆದರೆ ಆ ಕಾರಣಕ್ಕೆ ಊರ ಮುಂಭಾಗದ ಆಲದಮರವನ್ನು ಕಳೆದುಕೊಳ್ಳಲು ಸಿಧ್ದರಿಲ್ಲ. ಆ ಭಾಗದಲ್ಲಿ ಉಳಿದ ಮರ-ಗಿಡಗಳನ್ನೂ ಕಡಿಯುತ್ತಾರೆ. ನಾವು ಅದನ್ನು ವಿರೋಧಿಸಿಲ್ಲ. ಆದರೆ ಈ ಆಲದಮರ ಬಹಳ ಹಳೆಯದು. ನಮ್ಮ ತಾತಂದಿರು ಕೂಡಾ ಈ ಮರದ ಕೆಳಗೆ ಆಡಿದ್ದೆವು ಎನ್ನುತ್ತಾರೆ! ಊರ ಹಿರಿಯರು ಈ ಮರ ಉಳಿಸಲು ಪ್ರಯತ್ನಿಸಬಹುದು ಎಂದುಕೊಂಡರೆ, ಅವರಿಗೆಲ್ಲ ರಸ್ತೆಯೇ ಮುಖ್ಯವಾಯ್ತು. ನಾವು ಆಲದಮರಕ್ಕಾಗಿ ರಸ್ತೆಯನ್ನು ವಿರೋಧಿಸಿದ ಕಾರಣ ಕೆಟ್ಟವರಾಗಿದ್ದೀವಿ.
ರಸ್ತೆ ಕಾರ್ಮಿಕರು ತಮ್ಮ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ ಹೋಗಿದ್ದಾರೆ. ಊರ ಹುಡುಗರೆಲ್ಲ ತಮ್ಮ ಬಳಿ ಬಂದು ಕ್ಷಮೆ ಕೇಳಿದರೆ ಮಾತ್ರ ಕೆಲಸ ಮುಂದುವರೆಸ್ತೀವಿ ಎಂದು ತಿಳಿಸಿದ್ದಾರೆ. ನಮ್ಮಿಂದಲೇ ಕೆಲಸ ನಿಂತಿದ್ದು ಎಂದು ಮನೆಯಲ್ಲಿ ದಿನವೂ ಬೈತಾರೆ. ನಮ್ಮನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಲೇ ಇಲ್ಲ. ನಾವ್ಯಾಕೆ ಕ್ಷಮೆ ಕೇಳಬೇಕು?..”
ಒಬ್ಬ ಧ್ವನಿ ಎತ್ತಿದ ತಕ್ಷಣ, ಎಲ್ಲರೂ ಒಟ್ಟಾಗಿ ಮಾತನಾಡುತ್ತಿದ್ದಾರಲ್ಲ ಎಂದು ಒಮ್ಮೆ ನಕ್ಕು ಜಯರಾಂ ಸರ್ ಹೇಳಿದರು – “ ನೋಡಿ, ನಿಮ್ಮ ಊರವರು ಹೇಳ್ತಿರೋದರಲ್ಲಿ ತಪ್ಪಿಲ್ಲ. ನೀವು ಮಾಡ್ತಿರೋದು ತಪ್ಪು ಎಂದೂ ನಾ ಹೇಳ್ತಿಲ್ಲ. ನಿಮ್ಮೂರಿಗೆ ರಸ್ತೆ ಬೇಕೇಬೇಕು. ಅದಕ್ಕಾಗಿ ಆ ಆಲದಮರ ಕಡಿಯಬೇಕು. ಮರವನ್ನು ಉಳಿಸುವ ನಿಮ್ಮ ಉದ್ದೇಶವೂ ಒಳ್ಳೆಯದೇ! ನಿಮ್ಮ ಮಧ್ಯ ಆ ಕೆಲಸದವರೇನು ತಪ್ಪು ಮಡಿದ್ದರೆಂದು ಜಗಳ ಮಾಡಿದ್ರಿ? ಅವರ ಮೇಲಿನ ಅಧಿಕಾರಿಗಳು ಏನು ಆದೇಶ ನೀಡಿದ್ರೋ, ಅವರು ಅದನ್ನು ಪಾಲಿಸ್ತಾರೆ. ನೀವು ಅವರ ಪರಿಸ್ಥಿತಿಯನ್ನೂ ಸ್ವಲ್ಪ ಅರ್ಥ ಮಾಡ್ಕೊಳ್ಳಿ..”
ಕ್ಷಮೆ ಕೇಳಲು ಯಾರೂ ಸಿಧ್ಧರಿಲ್ಲ ಎಂಬುದನ್ನು ಮಕ್ಕಳ ಮಾತಿನ ವೈಖರಿಯಿಂದಲೇ ಅರಿತ ಸರ್ ಮುಂದುವರೆಸಿದರು – “ಏನಾದ್ರೂ ಮಾಡ್ಕೊಳ್ಳಿ, ನಿಮಗೆ ಎಷ್ಟು ಹೇಳಿದರೂ ಅಷ್ಟೇ! ಎಲ್ಲರೂ ಬುಧ್ಧಿವಂತರೇ ಅಲ್ವಾ? ಇದಕ್ಕೊಂದು ಪರಿಹಾರ ನೀವೇ ಕಂಡುಹಿಡ್ಕೊಳ್ಳಿ. ನನಗನಿಸಿದ್ದನ್ನು ನಾನು ಹೇಳಿದ್ದೇನೆ. ಮುಂದಿನದು ನಿಮ್ಮ ಯೋಚನೆ..” ಎನ್ನುತ್ತಾ ಹೊರಟರು. “ಎಲ್ಲರೂ ಮನೆಗೆ ಹೋಗಿ ಈ ಸ್ಕ್ರಿಪ್ಟ್ ಓದಿ, ನಮ್ಮ ಬಳಿ ಜಾಸ್ತಿ ಸಮಯವಿಲ್ಲ” ಎಂದು ನೆನಪಿಸಿ, ಜಯರಾಂ ಸರ್ ಸಭಾಂಗಣದೊಳಗೆ ಹೋದರು.
“ನಮ್ಮ ಸಮಸ್ಯೆ ನಮಗಾದ್ರೆ ಈ ಸರ್ ಗೆ ನಾಟಕದ್ದೇ ಚಿಂತೆ!” ಎನ್ನುತ್ತಾ ಹುಡುಗರು ಬಸ್ ನಿಲ್ದಾಣದತ್ತ ನಡೆದರು.
-----
ಎಲ್ಲರೂ ಸಂಜೆ ಆಲದಮರದ ಕೆಳಗೆ ಕುಳಿತು ಮುಂದೇನು ಮಾಡುವುದೆಂದು ಯೋಚಿಸುತ್ತಿದ್ದರು. ಅಷ್ಟರಲ್ಲಿ ಪ್ರಭವ ನಾಟಕದ ಪ್ರತಿಯನ್ನು ತೆರೆದು ಓದತೊಡಗಿದ. ಆಲದಮರದ ಸಮಸ್ಯೆ ಏನೆಂದರೂ ಬಗೆಹರಿಯುತ್ತಿಲ್ಲ, ಎಷ್ಟೇ ಯೋಚಿಸಿದರೂ ಸಮಯ ವ್ಯರ್ಥವೇ! ಸರ್ ಹೇಗೂ ಎಲ್ಲರಿಗೂ ನಾಟಕವನ್ನು ಓದಲು ಹೇಳಿದ್ದಾರಲ್ಲ, ಅದನ್ನಾದರೂ ಮಾಡೋಣ ಎಂದು ಎಲ್ಲರೂ ಕುಳಿತು ಓದಲು ಪ್ರಾರಂಭಿಸಿದರು.
ಅರ್ಧಗಂಟೆ ಕಳೆಯುವಷ್ಟರಲ್ಲಿ ಸೌರಭಳ ತಂದೆ “ಏನ್ರೋ, ಕಾಲೇಜಿಂದ ಬಂದವರೇ ಮರದ ಬುಡದಲ್ಲಿ ಕುಳಿತುಬುಟ್ಟೀರಿ..ಮನೆಗಾದ್ರೂ ಹೋಗ್ಬಂದ್ರಾ?ಕತ್ತಲಾಗ್ತಾ ಬಂತು, ಮರದ ಬುಡದಾಗೇ ಮಲಗೋ ಪಿಲಾನ್ ಐತಾ?”
“ಹಾಗೇನಿಲ್ಲಪ್ಪಾ, ಬರ್ತೀವಿ ಈಗ್ಲೇ..”
“ಶಂಕ್ರುಮಾಮಾ, ನಾಳೆ ಕಾಲೇಜಿಗೆ ಹೋಗ್ತಾ, ಆ ರಸ್ತೆ ಕೆಲಸದವರ ಹತ್ರ ಕ್ಷಮೆ ಕೇಳ್ಬೇಕು ಅಂತಾ ಇದೀವಿ..”
“ಏನಂದೇ?..ಇನ್ನೊಂದ್ಸಲ ಯೋಳು ಗಿರಿ..”
“ಹೌದು ಮಾಮಾ, ನಮ್ಮಿಂದ ತಪ್ಪಾಗಿದೆ.ಹಾಗಾಗಿ ಕ್ಷಮೆ ಕೇಳ್ಬೇಕು ಅಂತ ಸರ್ ಕೂಡಾ ಹೇಳವ್ರೇ..”
“ಏನಾರಾ ಆಗ್ಲಿ, ಒಳ್ಳೆ ಬುಧ್ಧಿ ಬಂತಲ್ಲಾ, ನಿಮಗೆಲ್ಲಾ ಹಿಡಿದಿರೋ ಆ ಮರದ ಭೂತ ಬುಡ್ತಲ್ಲಾ..ನಡೀರಿ,ನಡೀರಿ ಮನೆಗೆ..”
ಎಲ್ಲರೂ ನಗುತ್ತಾ ಅವನ ಹಿಂದೆ ನಡೆದರು.
----
ಮಾರನೇದಿನ ಕಾಲೇಜಿನ ಸಭಾಂಗಣದಲ್ಲಿ ಗದ್ದಲವನ್ನು ಕೇಳಿ ಜಯರಾಂ ಸರ್ ಒಮ್ಮೆ ಚಕಿತರಾದರು. ವಿಷಯವೇನೆಂದರೆ ಗಿರಿ ಹಾಗೂ ಅವನ ಗೆಳೆಯರು ಸೇರಿ ರಸ್ತೆ ಕೆಲಸದವರ ಬಳಿ ಹೋಗಿ ಕ್ಷಮೆ ಕೋರಿದ್ದರು. ಮೊದಲು ರೇಗಿದರೂ, ನಂತರದಲ್ಲಿ ಆ ಕಾರ್ಮಿಕರೆಲ್ಲ ಅವರನ್ನು ಕ್ಷಮಿಸಿ ಶನಿವಾರದಿಂದ ಕೆಲಸಕ್ಕೆ ಬರುವುದಾಗಿ ತಿಳಿಸಿದ್ದರು. ಇದ್ದ ಸಮಸ್ಯೆ ಕಳೆಯಿತಲ್ಲಾ ಎಂದು ಸೂರುಕಿತ್ತುಹೋಗುವ ರೀತಿಯಲ್ಲಿ ಎಲ್ಲರೂ ಖುಷಿಯಿಂದ ಅರಚುತ್ತಿದ್ದರು.
ಇವರ ಮಾತನ್ನು ಕೇಳಿ ಜಯರಾಂ ಸರ್ ಒಮ್ಮೆ ನಿಟ್ಟುಸಿರಿಟ್ಟು, ಜಿಲ್ಲಾಮಟ್ಟದ ನಾಟಕ ಸ್ಪರ್ಧೆ ಇರುವುದು ಕೂಡಾ ಶನಿವಾರವೇ ಎಂದು ತಿಳಿಸಿದರು.
ಅದರ ನಂತರ ಮಕ್ಕಳಿಗಾಗಲೀ, ಜಯರಾಂ ಸರ್ ಗಾಗಲೀ ಬಿಡುವೇ ಇರಲಿಲ್ಲ. ಕೇವಲ ಒಂದುವಾರದಲ್ಲಿ ಇಡೀ ನಾಟಕವನ್ನು ತಯಾರು ಮಾಡಬೇಕಿತ್ತು. ಅದೇನು ಸುಲಭದ ಮಾತಲ್ಲ! ಪಾತ್ರಹಂಚಿಕೆ, ರಂಗ ವಿನ್ಯಾಸ, ಪರಿಕರಗಳು, ಸಂಗೀತ ಎಲ್ಲವನ್ನೂ ನಿಭಾಯಿಸಬೇಕು.
ಮಕ್ಕಳೆಲ್ಲ ಬೆಳಗಿನ ಮೊದಲ ಬಸ್ಸಿಗೆ ಬಂದರೆ, ತಿರುಗಿ ಮನೆಗೆ ಹೋಗುವುದು ರಾತ್ರಿ ಎಂಟರ ಕೊನೆಯ ಬಸ್ಸಿಗೆ. ಹಾಗೆಂದು ಸಭಾಂಗಣವ ಬಿಟ್ಟು ಆಚೆ ಹೋಗುತ್ತಿರಲಿಲ್ಲ.
ಪರೀಕ್ಷೆಗೂ ಓದಿದ್ದನ್ನು  ಕಂಡಿರದ ಪಾಲಕರು, ಈಗ ಸರಿರಾತ್ರಿಯವರೆಗೆ ಎಲ್ಲ ಮಕ್ಕಳೂ ಕುಳಿತು ಮಾತು ಉರುಹೊಡೆಯುವುದನ್ನು ಕಂಡಿದ್ದರು! “ನಾಟಕದಲ್ಲಿರುವ ಆಸಕ್ತಿಯ ಕಾಲುಭಾಗ ಓದೋದ್ರಲ್ಲಿ ಇದ್ದಿದ್ರೆ ನೀವೆಲ್ಲಾ ರಾಜ್ಯಕ್ಕೇ ರ್ಯಾಂಕ್ ಬರ್ತಿದ್ರಿ” ಎಂದು ಮನೆಯಲ್ಲಿ ಛೇಡಿಸಿದಾಗ, “ಈಗಲೂ ನಾವೇನೂ ಕಡಿಮೆಯಿಲ್ಲ. ರ್ಯಾಂಕ್ ತರ್ತೀವಿ; ಪರೀಕ್ಷೆಯಲ್ಲಲ್ಲ, ನಾಟಕದಲ್ಲಿ..” ಎನ್ನುತ್ತಾ ಓಡುತ್ತಿದ್ದರು.
----
ಶನಿವಾರ ಬೆಳಿಗ್ಗೆ ಕಾಲೇಜಿಗೆ ಹೊರಟವರಿಗೆ ರಸ್ತೆ ಕಾರ್ಮಿಕರು ಎದುರಾದರು. ಇಂದು ಮರಕಡಿಯುತ್ತೇವೆಂದೂ, ಮತ್ತೆ ಗಲಾಟೆ ಮಾಡಬಾರದೆಂದೂ, ತಮ್ಮ ಕೆಲಸ ಮುಗಿಯುವವರೆಗೆ ನಿಲ್ಲಬೇಕೆಂದೂ ಹೇಳಿದರು.
“ಬಸ್ಸಿನ ಸಮಯವಾಗಿದೆ. ಇಂದು ನಾಟಕದ ಸ್ಪರ್ಧೆಯಿದೆ. ಅದು ನಮ್ಮ ಕಾಲೇಜಿನಲ್ಲೂ ಅಲ್ಲ. ಬಹಳ ದೂರ ಹೋಗಬೇಕು. ನಿಲ್ಲುವಷ್ಟು ಸಮಯವಿಲ್ಲ. ನಿಮ್ಮ ಕೆಲಸ ನೀವು ಮಾಡಿ, ನಾವು ಹೊರಡುತ್ತೇವೆ” ಎಂದು ನಯವಾಗಿ ತಿಳಿಸಿದರು.
ಜಿಲ್ಲೆಯ ನಾನಾ ಕಡೆಯ ಇಪ್ಪತ್ತು ಕಾಲೇಜುಗಳಿಂದ ನಾಟಕದ ತಂಡಗಳು ಬಂದಿದ್ದವು. ಬಟ್ಟೆ-ಬಣ್ಣ ಎಂದು ಸಿಧ್ಧತೆಯಲ್ಲಿದ್ದ ಕಾಲೇಜು ಮಕ್ಕಳ ಗಲಿಬಿಲಿಗೆ ಕಾಲೇಜಿನ ಪ್ರಾಂಗಣಕ್ಕೆ ಯಾವೊಂದು ಹಕ್ಕಿಯೂ ಸುಳಿಯಲಿಲ್ಲ!
‘ಜ್ಞಾನಕಲಶ’ ಕಾಲೇಜಿನ ವಿದ್ಯಾರ್ಥಿಗಳು ನಾಟಕವನ್ನು ಪ್ರಾರಂಭಿಸಿದರು.
ನಾಟಕದ ಹೆಸರು – ‘ಬೇವಿನಮರದಮ್ಮ’.
ಊರಿನ ದೊಡ್ಡ ಬೇವಿನಮರವನ್ನು ಕಡಿಯಲು ಊರ ಹಿರಿಯರು ಯೋಚಿಸುತ್ತಾರೆ. ಇದನ್ನರಿತ ಊರ ಮಕ್ಕಳು ತಮ್ಮಲ್ಲೇ ಒಂದು ಯೋಜನೆ ರೂಪಿಸುತ್ತಾರೆ. ರಾತ್ರೋರಾತ್ರಿ ಒಂದು ದೊಡ್ಡ ಕಲ್ಲನ್ನು ತಂದು ಬೇವಿನಮರದ ಬುಡದಲ್ಲಿಟ್ಟು, ಅರಿಶಿನ-ಕುಂಕುಮ ಹಚ್ಚುತ್ತಾರೆ. ಬೆಳಿಗ್ಗೆ ಊರವರು ನೋಡಿ, ದಿಗ್ಭ್ರಾಂತರಾಗುತ್ತಾರೆ.
ಸುತ್ತಲಿನ ಹಳ್ಳಿಗಳಿಗೆ ವಾಯುವೇಗದಲ್ಲಿ ಸುದ್ದಿ ತಲುಪುತ್ತದೆ - ಬೇವಿನಮರದಲ್ಲಿ ದೇವರು ಪ್ರತ್ಯಕ್ಷ ಎಂದು!
ಊರ ಮುಖಂಡರೆಲ್ಲ ಒಂದೆಡೆ ಸೇರುತ್ತಾರೆ. ಇದ್ದಕ್ಕಿದ್ದಂತೆ ಒಬ್ಬ ಅರ್ಚಕನ ಮೈ ಮೇಲೆ ದೇವರು ಬಂದು, ಆತ ಕೆದರಿದ ಕೂದಲಿನ ತಲೆ ಆಡಿಸುತ್ತಾ, ಹಿಂದೆ-ಮುಂದೆ ಓಲಾಡುತ್ತಾ, ಅಂಗೈಲಿ ಕರ್ಪೂರದಾರತಿ ಎತ್ತುವಾಗ ಊರ ಜನರಷ್ಟೇ ಏಕೆ, ನೋಡುವ ಪ್ರೇಕ್ಷಕನೂ ಭಯಭೀತನಾಗುತ್ತಾನೆ!
“ನಾನು ನಿಮ್ಮಮ್ಮ; ಬೇವಿನಮರದಮ್ಮ! ನನ್ನನ್ನೇ ಕಡಿಯಲು ಪ್ರಯತ್ನಿಸ್ತೀರಾ? ಹಾಗಾಗಿಯೇ ನಾನು ಪ್ರತ್ಯಕ್ಷಳಾಗಿದ್ದು..” ಎಂದು ಉಗ್ರರೂಪದಲ್ಲಿ, ತಾರಕದಲ್ಲಿ ಅರ್ಚಕ ಅರಚುತ್ತಾನೆ! ಊರ ಹೆಂಗಸರೆಲ್ಲ ಬೇವಿನಮರದಮ್ಮ ಮೈಮೇಲೆ ಬಂದ ಅರ್ಚಕನಿಗೆ ಆರತಿ ಎತ್ತುತ್ತಾರೆ, ಅವನೆದುರು ಕಾಯಿ ಒಡೆಯುತ್ತಾರೆ.
ಕಡಿಯುವುದು ಹಾಗಿರಲಿ; ಊರವರೆಲ್ಲ ಆ ಬೇವಿನಮರಕ್ಕೆ ಒಂದು ದೇಗುಲ ನಿರ್ಮಿಸಲು ನಿರ್ಧರಿಸುತ್ತಾರೆ.
ಇದನ್ನೆಲ್ಲ ಮಕ್ಕಳು ಮರೆಯಿಂದಲೇ ನೋಡುತ್ತಾರೆ. ಎಲ್ಲೋ ಮೂಲೆಯಲ್ಲಿದ್ದ ಕಲ್ಲಿಗೆ ದೇಗುಲವೇ ನಿರ್ಮಾಣವಾಗುತ್ತದೆ ಎಂದು ನಗುತ್ತಾರೆ! ಏನಾದರಾಗಲಿ, ಬೇವಿನಮರ ಉಳಿಯಿತಲ್ಲಾ ಎಂದು ಖುಷಿಯಿಂದ ‘ಬೇವಿನಮರದಮ್ಮ’ನ ಪೂಜೆಯಲ್ಲಿ ತಾವೂ ಪಾಲ್ಗೊಳ್ಳುತ್ತಾರೆ.
ಗಂಭೀರ ವಿಷಯವೊಂದನ್ನು ತಿಳಿ ಹಾಸ್ಯದ ಮೂಲಕ ವಿಡಂಬನಾತ್ಮಕವಾಗಿ ಪ್ರಸ್ತುತಪಡಿಸಿದ್ದಕ್ಕೆ ತೀರ್ಪುಗಾರರೆಲ್ಲ ಮನಸೋತಿದ್ದರು. ಪ್ರಥಮ ಸ್ಥಾನ ಗಳಿಸುವ ಮೂಲಕ ‘ಬೇವಿನಮರದಮ್ಮ’ ನಾಟಕ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು. ಅರ್ಚಕನ ಪಾತ್ರ ನಿಭಾಯಿಸಿದ ಆದರ್ಶನಿಗೆ ಅತ್ಯುತ್ತಮ ಅಭಿನಯ ಎಂಬು ಪ್ರಶಸ್ತಿಯೂ ದೊರೆಯಿತು.
ಎಲ್ಲ ಸಾಮಗ್ರಿಗಳನ್ನೂ ಗಾಡಿಗೇರಿಸಿಕೊಂಡು ಹೊರಡುವಷ್ಟರಲ್ಲಿ, ಸಂಜೆಯ ಸೂರ್ಯನೂ ಮರಗಳ ಮರೆಯಲ್ಲಿ ಕರಗುತ್ತಿದ್ದ. ಹೊರಗಿನ ತಂಗಾಳಿ ಗಾಡಿಯೊಳಗಿನವರ ಗೆಲುವಿನ ಖುಷಿಯನ್ನು ಇಮ್ಮಡಿಗೊಳಿಸಿತ್ತು. ಹಾರಾಟ, ಚೀರಾಟ ಎಲ್ಲವೂ ಜೋರಾಗಿಯೇ ಇತ್ತು! ಅತ್ತ ಗಿರಿ ಮತ್ತವನ ಗೆಳೆಯರಿಗೆ ಊರಿಗೆ ಹೋಗಬೇಕಿದ್ದ ಕೊನೆಯ ಬಸ್ ಕೂಡಾ ತಪ್ಪಿಹೋಯ್ತು. ಕಾಲೇಜಿನ ವಾಹನದಲ್ಲೇ ಅವರನ್ನು ಊರಿಗೆ ತಲುಪಿಸುವುದಾಗಿ ತಿಳಿಸಿದರು ಜಯರಾಂ ಸರ್!
ಗುಂಪಿನಲ್ಲಿ ಗೆಳೆಯರೇ ಆಗಿದ್ದ ಸರ್ ಮಾತಿಗಾರಂಭಿಸಿದರು-
“ಅಂತೂ ಈ ಬಾರಿಯೂ ಗೆದ್ದೇ ಬಿಟ್ರಲ್ಲೋ..”
“ಎಲ್ಲಾ ನಿಮ್ಮಿಂದಾನೇ ಸಾರ್..”
“ಸಾರ್, ಮೊದ್ಲು ಬದಲಾವಣೆ ನಮ್ಮಲ್ಲಿ ಆಗ್ಬೇಕು ಅಂತಾ ಅವತ್ತೇ ಹೇಳಿದ್ರಲ್ಲಾ..ನಾವು ಅದನ್ನಾ ಪಾಲಿಸಿದ್ವಿ..ಹಾಗಾಗಿಯೇ ಗೆಲುವು ನಮ್ಮದಾಯ್ತು.”
“ಏನೋ ಅದು ಆದರ್ಶ, ನಾನೇನು ಹೇಳಿದ್ದೆ? ಏನು ಪಾಲಿಸಿದ್ರಿ? ಒಂದೂ ಅರ್ಥ ಆಗ್ತಿಲ್ಲ ನಂಗೆ..”
ಎಲ್ಲ ಮಕ್ಕಳೂ ಜೋರಾಗಿ ನಗಲಾರಂಭಿಸಿದರು.
“ಅಂದರೆ ಎಲ್ಲರೂ ಸೇರಿ ಏನೋ ಮಾಡಿದ್ದೀರಿ..ಏನಾಯ್ತು ಅಂತಾ ಹೇಳ್ರೋ..ನಿಮ್ಜೊತೆ ನಾನೂ ನಗ್ತೀನಿ..”
“ಯಾಕೆ ಅಷ್ಟು ಗಡಿಬಿಡಿ ಮಾಡ್ತೀರಾ ಸಾರ್? ಹೇಗೂ ನಮ್ಮೂರಿಗೆ ಬರ್ತಿದೀರಲ್ಲಾ, ನೀವೇ ನೋಡಬಹುದು..” ಎಂದ ಗಿರಿ!
ಎಲ್ಲರೂ ಸೇರಿ ಏನೋ ಚೇಷ್ಟೆ ಮಾಡಿದ್ದಾರೆ. ಏನಿರಬಹುದು ಎಂದು ಯೋಚಿಸುತ್ತಾ ಕುಳಿತರು ಜಯರಾಂ!
----
ಊರಿನ ಬಳಿ ಬರುತ್ತಿದ್ದಂತೆಯೇ, “ಅಯ್ಯೋ ಇದೇನ್ರೋ..ಇಷ್ಟೊಂದು ಜನ ಸೇರಿದಾರೆ ಇಲ್ಲಿ?” ಎಂದು ಚಕಿತರಾದರು ಜಯರಾಂ ಸರ್!
“ಸಾರ್,ನಾವೂ ನಿಮ್ಮ ಜೊತೇನೇ ಇದೀವಿ. ನಮ್ಗೂ ಏನೂ ಗೊತ್ತಾಗ್ತಿಲ್ಲ. ಬನ್ನಿ ನೋಡೋಣ” ಎನ್ನುತ್ತಾ ಎಲ್ಲರೂ ಗಾಡಿಯಿಂದ ಕೆಳಗಿಳಿದರು.
ಜನರ ನಡುವೆ ದಾರಿ ಮಾಡಿಕೊಂಡು, ಎಲ್ಲರೂ ಮಧ್ಯ ಬಂದರೆ ಜಯರಾಂ ಸರ್ ಸ್ತಂಭೀಭೂತರಾದರು. ಊರವರೆಲ್ಲ ಮಡಿಯುಟ್ಟು ಓಡಾಡುತ್ತಿದ್ದಾರೆ, ಮಹಿಳೆಯರೆಲ್ಲ ರೇಷ್ಮೆ ಸೀರೆಯುಟ್ಟು ಕೈಲಿ ಹೂವು, ಅರಿಶಿನ-ಕುಂಕುಮದ ಬಟ್ಟಲುಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ. ರಸ್ತೆ ಕೆಲಸದವರೆಲ್ಲ ಒಂದು ಮೂಲೆಯಲ್ಲಿ ಕೈ ಮುಗಿದು ನಿಂತಿದ್ದಾರೆ. ಒಂದಷ್ಟು ಜನ ಕುಳಿತು ಭಜನೆ ಹಾಡುತ್ತಿದ್ದರೆ ಮತ್ತೊಂದಷ್ಟು ಜನ ಮರದ ಸುತ್ತ ಸುತ್ತುತ್ತಿದ್ದಾರೆ. ನಾಲ್ಕೂ ದಿಕ್ಕುಗಳಿಂದ ಜನರೆಲ್ಲ ಅಲೆ ಅಲೆಯಾಗಿ ಬರುತ್ತಲೇ ಇದ್ದಾರೆ! 
ಅಷ್ಟರಲ್ಲಿ ಯಾರೋ ಗಮನಿಸಿ ಈ ಮಕ್ಕಳ ಗುಂಪಿನತ್ತ ಬಂದು ಮಾತನಾಡಿಸಿದರು. ಗಿರಿ ತಮ್ಮ ನಾಟಕ ಮೊದಲ ಸ್ಥಾನ ಗಳಿಸಿರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುರಿತು ತಿಳಿಸಿದ.
“ಇದೆಲ್ಲ ಹನುಮಪ್ಪಂದೇ ಆಸೀರಾದ!” ಎಂದ ಗಿರಿಯ ತಂದೆ.
“ಇಲ್ಲಿ ನೋಡಿ” ಎಂದು ಆಲದಮರದತ್ತ ಕೈ ಮಾಡಿ ತೋರಿಸಿದ. ಆಗಸದೆತ್ತರದ ಆಲದಮರದ ಬುಡದಲ್ಲಿ ಮಣ್ಣಾದ ಒಂದು ಮೊಳದೆತ್ತರದ ಹನುಮನ ಮೂರ್ತಿ!
ಬೆಳಿಗ್ಗೆ ಕೆಲಸದವರು ಮರದ ಬುಡಕ್ಕೆ ಕೊಡಲಿ ಹಾಕಿದಾಗ, ಏನೋ ಎಡವಿತು. ಆ ಜಾಗದಲ್ಲಿ ಸ್ವಲ್ಪ ಆಳವಾಗಿ ನೋಡಿದಾಗ ಕಂಡಿದ್ದು ಹನುಮ!
“ನೋಡ್ರಲಾ..ಹನುಮಪ್ಪ ನಮ್ಗೆಲ್ಲ ಆಸೀರ್ವಾದ ಮಾಡಕೆ ಬಂದವ್ನೆ..ಇವತ್ತು ಸನಿವಾರ, ಅಂದ್ರೆ ನಮ್ಮ ದ್ಯಾವ್ರದ್ದೇ ದಿವ್ಸ ನೋಡಿ. ದ್ಯಾವ್ರ ಮರ ಇದು. ನೀವೆಲ್ಲ ಈ ಮರ ಕಡಿಬಾರ್ದು ಅಂತಾ ಹಠ ಮಾಡಿದ್ರಲ್ಲ, ಹನುಮಪ್ಪ ಅವ್ನ ಮನೆ ಉಳ್ಸಿದ್ದಕ್ಕೆ ನಿಮಗೆಲ್ಲ ಆಸೀರ್ವಾದ ಮಾಡವ್ನೆ. ಅದ್ಕೆಯಾ ನಿಮ್ಗೆಲ್ಲ ಪ್ರೈಜ್ ಬಂದಿದ್ದು..” ಎಂದು ಒಂದೇ ಉಸಿರಿಗೆ ಹೇಳಿ ಮುಗಿಸಿದ ಸೌರಭಳ ತಂದೆ.
“ಹೂಂ..ಅಷ್ಟೇ ಅಲ್ಲ, ಈಗ ನಿಮ್ಮ ಮರಾನೂ ಉಳೀತು, ಅದ್ರ ಪಕ್ಕದಲ್ಲಿ ಊರಿಗೆ ರಸ್ತೆನೂ ಆಯ್ತು!” ಎಂದ ಮತ್ತೊಬ್ಬ.
ಎಲ್ಲರೂ ಉದ್ಭವಮೂರ್ತಿ ಹನುಮನ ಗುಣಗಾನ ಮಾಡುತ್ತಿದ್ದಾಗ, ಊರ ಹಿರಿಯರು ಬಂದು ಮಕ್ಕಳಿಗೆಲ್ಲ ಮನೆಗೆ ಹೋಗಿ ಶುಭ್ರವಾಗಿ ಬರಲು ತಿಳಿಸಿದರು.
ಎಲ್ಲರೂ ಆ ಜನಜಾತ್ರೆಯಿಂದ ಹೊರಬರುವಷ್ಟರಲ್ಲಿ ನುಜ್ಜುಗುಜ್ಜಾಗಿದ್ದರು! ಅಷ್ಟರಲ್ಲಿ ಜಯರಾಂ ಸರ್ ಗೆ ಎಲ್ಲವೂ ಅರ್ಥವಾಗಿತ್ತು.
“ಏನ್ರಪ್ಪಾ, ಹನುಮನಿಗೆ ದೊಡ್ಡ ಗುಡಿಯೇ ಆಗೋ ಥರ ಇದೆ ನಿಮ್ಮ ಊರಿನಲ್ಲಿ..”
“ಹೂ ಸಾರ್, ದುರ್ಗಪ್ಪನ ಅಂಗಡಿಲಿ ಧೂಳು ತಿಂತಾ ಇದ್ದ ಹನುಮನಿಗೆ ಗುಡೀಲಿ ಬೆಚ್ಚಗೆ ಇರೋ ಯೋಗ ಬಂದಿದೆ ನೋಡಿ..” ಎಂದಳು ಸೌರಭ.
“ನೋಡಿದ್ರಾ ಸಾರ್, ನೀವೇ ಹೇಳಿದಂತೆ ನಮ್ಮಲ್ಲಿಯ ಬದಲಾವಣೆನಾ? ಈ ಉಪಾಯ ಹೊಳೆಯಲು ಮೂಲ ಕಾರಣವೇ ನೀವು! ಒಂದು ನಾಟಕದಿಂದ ಒಂದು ಮರದ ಜೀವ, ಅದರಲ್ಲಿಯ ಅದೆಷ್ಟೋ ಜೀವಿಗಳ ಜೀವನ ಎಲ್ಲವೂ ಉಳೀತು” ಎಂದ ಪ್ರಭವ.
“ನಮ್ಮೆಲ್ಲರ ಈ ತಿಂಗಳ ಪಾಕೆಟ್ ಮನಿ ದುರ್ಗಪ್ಪನ ಪಾಕೆಟ್ ಸೇರಿತು. ಪರ್ವಾಗಿಲ್ಲ ಸಾರ್, ಹನುಮನಿಗೆ ಕಾಣ್ಕೆ ಹಾಕಿದಂಗೆ ಆಯ್ತು” ಎಂದ ಆದರ್ಶ.
“ಅಂತೂ ಆಲದಮರ ಉಳಿಸ್ಕೊಂಡ್ರಿ...” 
“ ಎಲ್ಲಾ ನಮ್ಮ ‘ಬೇವಿನಮರದಮ್ಮ’ನ ಆಶೀರ್ವಾದ ಸಾರ್..”
ಎಲ್ಲರೂ ನಗುತ್ತಾ ಮನೆಯ ಹಾದಿ ಹಿಡಿದರು.
----
ಒಂದು ತಿಂಗಳಲ್ಲಿ ಆಲದಮರದ ಪಕ್ಕದಿಂದ ಊರಿನತ್ತ ಕಪ್ಪಾಗಿ ಫಳಫಳನೆ ಹೊಳೆಯುತ್ತಿದ್ದ ರಸ್ತೆಯಾಗಿತ್ತು. ಊರಿನಲ್ಲಿ ಹನುಮನಿಗೆ ಒಂದು ಗುಡಿಯಾಗಿತ್ತು. ಅಲ್ಲೊಬ್ಬ ಪೂಜಾರಿ! ಪ್ರತಿ ಶನಿವಾರ ಪ್ರಸಾದ ಸ್ವೀಕರಿಸಲು ಜನವೋ ಜನ! 
ಮರದ ಮೇಲೆ ಗುಬ್ಬಿ, ಪಾರಿವಾಳ ಗಿಳಿಗಳು ತಮ್ಮ ಪರಿವಾರದೊಂದಿಗೆ ಸದಾ ಚಿಲಿಪಿಲಿ ಎನ್ನುತ್ತಾ ನಲಿಯುತ್ತಿದ್ದವು.
ಇತ್ತ ರಾಜ್ಯಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ‘ಬೇವಿನಮರದಮ್ಮ’ ಜಯಭೇರಿ ಬಾರಿಸಿದಳು.
____

Monday, August 10, 2020

ಮತ್ತೆ ಕಾಡಿದ ಮಳೆಯ ನೆನಪು - 5

ಹಾಗೇ ಶಿಲೆಯಂತೆ ಸ್ತಬ್ಧವಾದಳು ಸುಲೋಚನೆ. "ನಯ್ನಾ ಅಲ್ನೋಡು.. ದೋಣಿ ಬಂತು.. "
"ಒಂದಲ್ಲ ಅಕ್ಕಾ.. ಎರಡಿದೆ. ನೋಡಲ್ಲಿ.."
ಹೌದು ! ಅವಳು ಗಮನಿಸಿರಲೇ ಇಲ್ಲ. ಎರಡು ದೋಣಿಗಳು ಇವರು ನಿಂತಲ್ಲಿಯೇ ಬಂದವು.ಇಬ್ಬರೂ ಇಳಿದು ತಮ್ಮ ದೋಣಿಗಳನ್ನು ಹತ್ತಿರದ ಮರಗಳಿಗೆ ಕಟ್ಟಿನಿಲ್ಲಿಸಿದರು. ಇಷ್ಟು ಬೇಗ ಇವರು ಬರುತ್ತಾರೆಂದು ಅರಿವಿರದೇ, ಯಶೋದಮ್ಮ ಬುತ್ತಿ ಬಿಚ್ಚಿದ್ದಳು.ಗಂಡನತ್ತ ಪ್ರಶ್ನಾರ್ಥಕವಾಗಿ ನೋಡಿದಳು. 
"ಅಲ್ರಪ್ಪಾ.. ಈಗ್ಲೇ ಹೊರಟುಬಿಡ್ತೀರಾ ಹೇಗೆ?.. ಬಸ್ಸು ಸ್ವಲ್ಪ ತಡ ಆಯ್ತು.. ಹಾಗಾಗಿ ಇಲ್ಲಿ ಬರೋತನ್ಕಾ ಇಷ್ಟೊತ್ತು.."
"ಯೇ.. ಏನೂ ತೊಂದ್ರೆ ಇಲ್ಲ ಒಡೆರೇ.. ನೀವು ಊಟ ಮಾಡ್ಕಳಿ.." ಎಂದ ಒಬ್ಬ. 
"ಅಲ್ಲಾ, ಇನ್ನೂ ಸ್ವಲ್ಪ ಜನ ಇದಾರೆ ಆ ಕಡೆ... ನಮ್ಮಿಂದ ತಡ ಆಗತ್ತೆನೋ.."
ಅಷ್ಟರಲ್ಲಿ ಇನ್ನೊಬ್ಬ ಬಂದು, "ಹಂಗೇನಿಲ್ಲ ಸಾರ್, ನೀವು ಅರಾಮ್ ಉಂಡ್ಕಳ್ರಿ.. ಇವ ನಿಮ್ಮನ್ನ ಕರ್ಕಂಡ್ ಬತ್ತಾನೆ. ನಾ ಉಳ್ದೋರನ್ನ ಕರ್ಕೊಂಡು ಬತ್ತೀನಿ..ಒಂದು ಹತ್ತ್ ಮಿನಿಟು ನಾವಿಲ್ಲೇ ಮರದ್ ಕೆಳೆಗೆ ಕುಂತಿರ್ತೀವಿ. ನಿಮ್ಮ ಊಟ ಆದ್ಮ್ಯಾಕೆ ಕರೀರಿ, ಬತ್ತೀವಿ.. " ಎಂದ. 
"ಆಯ್ತಪ್ಪ ಹಾಗಿದ್ರೆ, ನಾವು ಬೇಗ ಊಟ ಮುಗಿಸ್ತೀವಿ.."
ಎನ್ನುತ್ತಾ ದೇವಪ್ಪ ತಮ್ಮ ಮನೆಯವರೊಡನೆ ಊಟಕ್ಕೆ ಕುಳಿತ. ಅವರಿಬ್ಬರೂ ಮರದಡಿಯಲ್ಲಿ ಹರಟುತ್ತ ಕುಳಿತರು. ಇನ್ನೊಂದೆಡೆ ನಾಲ್ಕು ಪ್ರಯಾಣಿಕರು ತಮ್ಮ ಬುತ್ತಿಯನ್ನು ಬಿಚ್ಚಿದರು. 
"ಸುಲೋಚನಾ, ರೊಟ್ಟಿ ಮೇಲೆ ಚಟ್ನಿ ಹಾಕು.." ಮೂರು ಬಾರಿ ಹೇಳಿರಬೇಕು ಯಶೋದಮ್ಮ, ಪಾಪ ಅವರಿಗೇನು ಗೊತ್ತು, ಮಗಳ ದೇಹ ಇಲ್ಲಿದೆ ಮನಸ್ಸು ಮರದ ಸುತ್ತ ಸುತ್ತುತ್ತಿದೆ ಎಂದು !!
ನಯನಾ ಎರಡು ಬಾರಿ ಎಚ್ಚರಿಸಿದಳು, "ಅಕ್ಕಾ, ಊಟ ಮಾಡ್ತಿದಿವಿ ನಾವು.."  ಉಹ್ಞೂ !ಏನೂ ಪ್ರಯೋಜನವಿಲ್ಲ. 
ಕೊನೆಗೆ ದೇವಪ್ಪನ ಧ್ವನಿಯೇ ಬೇಕಾಯ್ತು, "ಲೇಯ್ ಸುಲೋಚ್ನ, ಎಷ್ಟು ಹೊತ್ತು ಒಂದೇ ರೊಟ್ಟಿ ಎಳೀತಾ ಇರ್ತೀಯಾ? ಮೊಸರನ್ನ ತಿಂತೀಯೋ ಇಲ್ವೋ? ಆಮೇಲೆ ದೋಣಿಯವರು ಬಿಟ್ಟು ಹೋಗ್ತಾರೆ ನೋಡು.."
ಗಬಗಬನೆ ತಿಂದಳು ಹುಡುಗಿ, ಎಲ್ಲಾದರೂ ತನ್ನ ಬಿಟ್ಟು ಹೊರಟರೆ ಎಂದು !
ಕೊನೆಗೆ ಡಬ್ಬಿ ತೊಳೆದು ಬರುತ್ತೇವೆಂದು ನದಿಯತ್ತ ಹೊರಟರು. 
"ಅಕ್ಕಾ, ಏನು ಕತೆ? ನಾನು ನೋಡ್ದೆ.." ರಾಗ ಎಳೆದಳು ನಯನೆ. 
"ಏನೇ ನಿಂದು.. ಸುಮ್ನೆ ಬಾರೆ.."
"ಹುಷಾರಕ್ಕ.. ಅಪ್ಪ ನೋಡಿದ್ರೆ ಕಷ್ಟ.."
"ನಿಂದೊಳ್ಳೆ ರಾಗ ಆಯ್ತಲ್ಲೇ.. ಏನೂ ಇಲ್ಲ ಅಂತಿದೀನಿ ನಾನು.."
"ನಾನು ಶಿವೂ ಅಲ್ಲಾ, ನಂಗೂ ಎಲ್ಲ ಅರ್ಥ ಆಗತ್ತಕ್ಕೋ.. " ಎನ್ನುತ್ತಾ ಕಣ್ಣು ಮಿಟುಕಿಸಿದಳು. 
ಸುಲೋಚನಾ ಏನೂ ಮಾತಾಡದೆ ಡಬ್ಬ ತೊಳೆಯತೊಡಗಿದಳು. 
ಅಷ್ಟರಲ್ಲಿ ಕುಯ್ ಕುಯ್ ಎನ್ನುತ್ತಾ ನಾಯಿ ಮರಿಯೊಂದು ಅವಳ ಕಾಲನ್ನು ನೆಕ್ಕುತ್ತ, ಲಂಗವನ್ನು ಎಳೆಯೊಡಗಿತು. 
"ಇದೆಲ್ಲಿಂದ ಬಂತೆ.. ಪಾಪ,  ಹಸಿವಾಗಿರ್ಬೇಕು. ನಮ್ಮ ಡಬ್ಬೀನೂ ಖಾಲಿ ಆಯ್ತಲ್ಲೇ.."
"ಸುಮ್ನಿರಕ್ಕ, ಬೀದಿನಾಯಿಗೆಲ್ಲ ಅನ್ನ ಹಾಕ್ಕೊಂಡು... ಮಾಡೋಕೆ ಬೇರೆ ಕೆಲ್ಸ ಇಲ್ವಾ ನಿಂಗೆ?  ನೋಡು ಸಾಯೋಕೆ ಬಿದ್ದಿದೆ ಅದು.."
"ನಾವಿಲ್ಲೆ ಬಿಟ್ರೆ ಸತ್ತೇ ಹೋಗತ್ತೆ ಕಣೇ.."
"ಸಾಯ್ಲಿ ಬಿಡೇ.."
"ನಮ್ ಜೊತೇನೆ ಕರ್ಕೊಂಡು ಹೋಗೋಣ್ವಾ? "
"ಸುಮ್ನಿರಕ್ಕ.. ಮಾತೆತ್ತಿದ್ರೆ ಅಪ್ಪ ಬಿಟ್ಟುಹೋಗ್ತೀನಿ ಅಂತಾರೆ. ಇದು ಬೇರೆ ಬೇಕಾ.."
ಇವರ ವಾದ ನಡೆಯುತ್ತಿದ್ದಂತೆಯೇ ಎಲ್ಲರೂ ಅಲ್ಲೇ ಬಂದರು. ನಾವೇ ಸಾಕೋಣ ಎಂದು ಹಠ ಹಿಡಿದಳು ಸುಲೋಚನಾ. 
"ನೋಡು, ಇಲ್ಲಿಂದ ತಗೊಂಡು ಹೋಗ್ತಾ ನದೀಲಿ ಬಿದ್ದೋದ್ರೆ ಅಲ್ಲೇ ಸಾಯತ್ತೆ ಅದು. ಇನ್ನು ಅದನ್ನ ದಾಟಿ ನಮ್ಮ ಜೊತೇಲಿ ಬಂದ್ರೂ, ಜಾತ್ರೆ ಜನರ ಮಧ್ಯ ಎಲ್ಲಿ ಬಿಡ್ತಿ ಅದನ್ನ? ಹರಕೆ ತೀರಿಸಬೇಕೋ, ನಾಯಿಮರಿ ನೋಡ್ಕೊಳ್ಳಬೇಕೋ? ಅದನ್ನ ತಗೊಂಡ್ ಹೋದ್ರೆ ಆಗಿಲ್ಲ. ಮೂರುಹೊತ್ತೂ ಹೊಟ್ಟೆಗ್ ಹಾಕಬೇಕು. ಅಲ್ಲಿ ಯಾರು ಹಾಕ್ತಾರೆ? ಬೇಡವೆ ಬೇಡ.. ಇಲ್ಲೇ ಬಿಟ್ಬಿಡು.."
ಕಡ್ಡಿ ತುಂಡು ಮಾಡಿದಂತೆ ಹೇಳಿದ ದೇವಪ್ಪ. ಅಷ್ಟರಲ್ಲಾಗಲೇ ಅವಳ ಕಣ್ಣಲ್ಲಿ ನೀರು ತುಂಬಿತ್ತು. ಈ ಮಧ್ಯ ಅವನು ಯಾವಾಗ ಪ್ರವೇಶಿಸಿದನೋ ಅರಿವಾಗಲೇ ಇಲ್ಲ. 
"ಒಡೆರೆ, ನಿಮ್ಗೆ ಏನೂ ತೊಂದ್ರೆ ಆಗಕಿಲ್ಲ ಅಂದ್ರೆ, ನಾ ತಗತ್ತೀನಿ ಇದ್ನ.. ನಾನೇ ಸಾಕ್ತಿನಿ..." ಎಂದ. 
ನಸುನಕ್ಕಳು ಸುಲೋಚನೆ ತಲೆ ಎತ್ತದೆಯೇ ! ಎಲ್ಲ ಒಪ್ಪಿದ ನಂತರ ಅವನು ಆ ನಾಯಿಮರಿ ಎತ್ತಿಕೊಂಡು ಮರದ ಕೆಳಗೆ ನಡೆದ. ದೇವಪ್ಪ ಯಶೋದಮ್ಮ ಬುತ್ತಿ ಚೀಲ ತುಂಬಲು ಹೋದಳು. 
"ಏನಕ್ಕ, ಏನು ನಡೀತಾ ಇದೆ ಇಲ್ಲಿ.. " ಎನ್ನುತ್ತಾ ತಿವಿದ ನಯನಾಳನ್ನು ದೂಡುತ್ತಾ, "ಏನೂ ಇಲ್ಲ ಹೋಗೆ.." ಎಂದು ಲಂಗ ಹಿಡಿದು ಓಡಿದಳು..... 

ಇತ್ತ ಮರದ ಕೆಳಗೂ ಮಾತುಕತೆ ಜೋರಾಗಿಯೇ ಸಾಗಿತ್ತು.
"ಏನಪ್ಪಾ ದೋಸ್ತಾ ಭಾಳ ಪಿರೂತಿ ಬಂದಂಗ್ ಐತೆ.."
"ಹಾಂಗೇನಿಲ್ಲ ಕಲಾ.. ಪಾಪ ಮರಿ.." ಎನ್ನುತ್ತಾ ಮರಿಯ ತಲೆ ನೇವರಿಸಿದ. 
"ಹೌದೌದು.. ಪಾಪ ಮರಿ.."
"ಒಂದೋ ಹಸ್ವಾಗಿ ಸಾಯ್ತದೆ, ಇಲ್ಲ ಮುಳುಗಿ ಸಾಯ್ತದೆ.. ನಂದೊಂದು ತುತ್ತು ಕೊಟ್ರೆ ಜೀವ ಇರಗಂಟ ಬದಿಕತ್ತದೇ.."
"ಓಹೋ ನೀ ನಾಯಿಮರಿಗೆ ಪಾಪ ಯೋಳಿದ್ದೋ.. ನಾ ಏನೋ ಲಂಗದಾವಣಿ ಮರಿ ಬಗ್ಗೆ ಅಂದ್ಕಂಡೆ.."
"ಯೇ.. ಥುತ್... ನಿಂದ್ ಬರೀ ಇದೆ ಆಯ್ತು ಕಲಾ.."
" ಮತ್ತೇನ್ಲಾ.. ದಿನ ಏಟ್ ಕರ, ಮರಿ ಎಲ್ಲ ಕಾಣ್ತಾವೆ ತಟದಾಗೆ.. ಎಲ್ಲ ತಂದು ತುತ್ತು ಕೊಟ್ಟಿಯೇನ್ಲ.. ದೊಡ್ಡ ಬಂದ್ಬುಟ ಇವತ್ತು.."
"ಯೇನೇನೋ ಯೋಳ್ಬ್ಯಾಡಾ.. ಸುಮ್ಕಿರ್ಲಾ.."
"ದಿಟವೆಯ ನಾ ಯೋಳಿದ್ದು.."
"ಹೌದಪ್ಪಾ.. ಆ ವುಡ್ಗಿ ಪಾಪ ಅಳು ಮಕ ಮಾಡ್ಕಂಡಿತ್ತು.."
"ಆಂ.. ಅಲ್ಲೆಯ ಆಗಿದ್ದು ಯಡವಟ್ಟು.."
"ಏನ್ ಯಡವಟ್ಟು..? ಏನಾತ್ಲ.."
"ನಂಗೇನ್ ಆಗ್ನಿಲ್ಲ.. ನಿಂಗೆಯ.. ಲೋವ್ ಆಗೈತೆ.."
"ಎಂತದು... ಲೋವಾ.."
"ಹುಂ ಕಲಾ.. ಅದಿಲ್ದೆ ವೋಗಿರೆ ನೀ ಯಾಕ್ಲಾ ಅಲ್ಲೋಗಿ ಈ ನಾಯಿಮರಿ ತಕ ಬತ್ತಿದ್ದೆ? "
"ಯೇ ಸುಮ್ಕಿರ್ಲಾ.. ಅವ್ರು ನಮ್ಮ ದೋಣಿ ಹತ್ತದೆ ವೊದ್ರೆ ಕಷ್ಟ.."
"ಇಲ್ಲಿ ಎಲ್ಡೆ ದೋಣಿ ಇರಾದು.. ನಾ ಹತ್ತಿಸ್ಕಳಕಿಲ್ಲ.. ನಿನ್ ವುಡ್ಗಿನ ನೀನೇ ತಾಕಬಾ..." 
"ಏನೇನೋ ಯೋಳ್ಬ್ಯಾಡ ಸೀನ.. ಬಾ ವೋಗುಮ.."
"ಏನಿಲ್ಲಾ.. ಇದು ಲೋವ್ವೆಯ.. ನಂಗೇಟ್ ಕಿತಾ  ಆಗೈತೆ.. ನಿಂಗೆ ಮೊದಲ್ನೇ ಕಿತಾ.. ಅದ್ಕೆ ಗೊತ್ತಾಯ್ತ ಇಲ್ಲ.. ನೀ ಏನ್ ಟೇನ್ಸನ್ ತಕಬ್ಯಾಡ.. ನಾ ಎಲ್ಲ ನೋಡ್ಕತಿನಿ.."
"ನೀ ಏನ್ಲ ನೋಡ್ಕಳದು.."
"ದೋಣಿಯ ದಿಡಾ ಹಚ್ಚದು... ನಾ ನಿಂಗೆ ಎಲ್ಲ ಯೋಳಿಕೊಡ್ತಿನ್ಲಾ.."
"ಅದೇನ್ ಯೋಳ್ತಿಯೋ.. ಅದೇನ್ ಮಾಡ್ತೀಯೋ.. ನಡಿ ನಡಿ.." ಎನ್ನುತ್ತಾ, ನಾಯಿಮರಿಯನ್ನು ಕೈಲಿ ಹಿಡಿದುಕೊಂಡ. 
ಅಷ್ಟರಲ್ಲಿ ದೇವಪ್ಪ ಕೂಗಿದ..."ನಮ್ಮ ಊಟ ಆಯ್ತು.. ಹೊರಡೋಣ್ವ.. ತಡ ಇದ್ಯಾ?.. "
"ನೋಡು, ನಿಮ್ಮ ಮಾವ ಕರೀತವ್ನೆ..." ಎನ್ನುತ್ತಾ, ಚಿವುಟಿದ. 
ಇಬ್ಬರೂ ನಗುತ್ತಾ ದೋಣಿಯೆಡೆಗೆ ಬಂದರು. 

Friday, July 31, 2020

ಮತ್ತೆ ಕಾಡಿದ ಮಳೆಯ ನೆನಪು - 4


ಸುಲೋಚನೆಯ ಮನಸ್ಸು ಆಲೋಚನೆಯಲ್ಲಿ ಮುಳುಗಿತ್ತು. 
ನೀಲಕೂಟ ಬಿಟ್ಟು ಬೇರೆ ಯಾವುದಾದರು ಊರನ್ನು ನೋಡಿದ್ದರೆ ಅದು ತನ್ನ ಅಜ್ಜಿಮನೆ ಮಾತ್ರ..! ವರುಷಕ್ಕೊಮ್ಮೆ ದೀಪಾವಳಿಗೆ ಮಾವ ಕರೆದಾಗ ಎಲ್ಲರೂ ಹೋಗುವುದು, ಬೀರನ ಗಾಡಿಯಲ್ಲಿಯೇ. ಒಂದು ದಿನ ಉಳಿದು, ಅಪ್ಪ ಮತ್ತು ಬೀರ ಹಿಂದಿರುಗುತ್ತಾರೆ. ನಾವೆಲ್ಲ ನಾಲ್ಕಾರು ದಿನ ಉಳಿದು ಕೇರಿಯ ಮಕ್ಕಳೊಡನೆ ಆಡಿ, ಕುಣಿದು, ಹೊಳೆ-ಬೆಟ್ಟ ಎಂದು ಸುತ್ತುತ್ತೇವೆ. ಕೊನೆಗೆ ಮಾವ ಎತ್ತಿನಗಾಡಿಯಲ್ಲಿ ನಮ್ಮನ್ನು ಊರಿಗೆ ಕಳುಹಿಸುತ್ತಾರೆ. ಮತ್ತೆ ಹೋಗೋದು ಮರುವರ್ಷವೇ !!
ಆದರೆ ಹಿಂದಿನ ದೀಪಾವಳಿಗೆ ಹೋಗಿಯೇ ಇಲ್ಲ, ಶಿವು ಚಿಕ್ಕವನು ಎಂದು. ಈ ಬಾರಿಯೂ ಏನು ಕತೆಯೋ..!!
"ಯೇ ಬೀರಾ, ಗುಂಡಿ ಹಾರಿಸ್ಬೇಡ.. ಶಿವೂ ಮೊದಲ್ನೇ ಸಲ ಗಾಡಿ ಹತ್ತಿರೋದು.. ವಾಂತಿ ಆದ್ರೆ ಕಷ್ಟ..!!"
ಯೋಚನೆಯಿಂದ ವಾಸ್ತವಕ್ಕೆ ಮರಳಿದಳು ಸುಲೋಚನಾ. ಅವಳ ಮಡಿಲ ಮೇಲಿದ್ದ ಶಿವೂ ತನ್ನ ಮುಂದಿರುವ ಚೀಲಗಳನ್ನೆಲ್ಲ ಎಳೆದಾಡಲು ಪ್ರಯತ್ನಿಸುತ್ತಿದ್ದ. 
"ಸುಮ್ನೆ ಕೂತ್ಕೋ ಶಿವೂ.." ಮೆಲ್ಲನೆ ಗದರಿದಳು. 
ಒಮ್ಮೆ ಅವಳ ಮುಖ ನೋಡಿ, ಮತ್ತೆ ತನ್ನ ಕೆಲಸದಲ್ಲಿ ಮಗ್ನನಾದ.  
ಊರ ದಾಟಿ ಬಹಳ ಸಮಯವಾಗಿತ್ತು. ಇಷ್ಟರಲ್ಲಿಯೇ ನಯನಾ ನಾಲ್ಕು ಬಾರಿ ಕೇಳಿದ್ದಳು.. "ಪಟ್ನ ಇನ್ನೂ ಎಷ್ಟು ದೂರ?.. "
ಅಂತೂ ಬೀರ ಪಟ್ಟಣಕ್ಕೆ ಬರುತ್ತಿದ್ದಂತೆ "ಅಲ್ನೋಡು.. ಸೈಕಲ್ಲು... ಅಲ್ನೋಡು ದೊಡ್ಡ ಗಾಡಿ.." ಎನ್ನಲು ಪ್ರಾರಂಭಿಸಿದ್ದಳು. ನೀಲಕೂಟದಷ್ಟೇ ದೊಡ್ಡ ಊರಾದರೂ, ಬಸ್ಸು ಬರುತ್ತದೆ ಎಂಬ ಕಾರಣಕ್ಕೆ ಹತ್ತು ಅಂಗಡಿಗಳು ಜಾಸ್ತಿ ಇದ್ದವು. ಆ ಕಾರಣಕ್ಕಾಗಿ ಅದೊಂದು ಪಟ್ಟಣ ಎನಿಸಿಕೊಳ್ಳುತಿತ್ತು!
ಬೀರ ಗಾಡಿಯನ್ನು ಸೇಠು ಅಂಗಡಿಯ ಎದುರು ನಿಲ್ಲಿಸಿದ್ದೇ ದೊಡ್ಡ ತಪ್ಪಾಯ್ತು...!
"ಅಪ್ಪಾ, ಅಲ್ಲಿ ಶುಂಠಿ ಪೆಪ್ಪರ್ಮೆಂಟು, ಜೀರ್ಗೆ ಪೆಪ್ಪರ್ಮೆಂಟು ಎಲ್ಲ ಇದೆ. ನಡಿ, ಹೋಗೋಣ.. ನಂಗೆ ಕೊಡ್ಸು.." ಎಂದು ಒಂದೇ ಸಮನೆ ರಾಗ ಎಳೆದಳು. 
"ನಿನಗೆ ಮೊದ್ಲೇ ಹೇಳಿಲ್ವ.. ಏನೂ ಕೇಳ್ಬಾರ್ದು ಅಂತಾ.. ಹೀಗೇ ಹಠ ಮಾಡ್ತಿದ್ರೆ ನಾವಷ್ಟೇ ಹೋಗ್ತಿವಿ ನೋಡು, ನೀನು ಬೀರನ ಜೊತೆಗೆ ವಾಪಾಸ್ ಹೋಗ್ಬಿಡು.."
"ಅಪ್ಪಾ, ನೀ ಹೇಳಿದ್ದು ಜಾತ್ರೇಲಿ ಏನೂ ಕೇಳ್ಬೇಡ ಅಂತಾ.. ಇಲ್ಲಲ್ಲ.. ನಂಗೆ ಪೆಪ್ಪರ್ಮೆಂಟು ಬೇಕೇ ಬೇಕು.."
"ಲೋ ಬೀರ.. ನಿಂಗೆ ನಿಲ್ಸೋಕೆ ಬೇರೆ ಜಾಗಾನೇ ಸಿಕ್ಕಿಲ್ವೇನೋ.. ನೋಡಿಲ್ಲಿ ಹೆಂಗೆ ಹಠ ಮಾಡ್ತಾಳೆ ಅಂತ.."
"ಏನಪ್ಪೋರೆ.. ದಿನಾ ಕೇಳ್ತಯ್ತಾ.. ಒಂದಪ ಕೊಡ್ಸುಬುಡಿ.. ನಮ್ಮನೆ ಹುಡ್ರಿಗೂ ತಗ ಬತ್ತೀನಿ.." ಎನ್ನುತ್ತಾ ನಡೆದ. 
"ನೋಡಪ್ಪ.. ಬೀರನೂ ಅವ್ನ ಮಕ್ಳಿಗೆ ಕೊಡಿಸ್ತಾನೆ.."
"ಅವ್ನು ಈ ಬಾರ್ಕೋಲಲ್ಲಿ ಅವ್ನ ಮಕ್ಳು ಹಠ ಮಾಡ್ದಾಗೆಲ್ಲ ಹೊಡೀತಾನೆ...ನಿನಗೆ ಹೊಡ್ದಿದೀನಾ ನಾನು? "
"ಅಪ್ಪ ನಾ ಒಂದು ಹೇಳಿದ್ರೆ, ನೀ ಮತ್ತೊಂದು ಹೇಳ್ತೀಯಾ.."
"ಅಲ್ವೇ.. ಸಣ್ಣಕ್ಕಿ ತರೋಕೆ ಬಂದಾಗೆಲ್ಲ ತಂದು ಕೊಟ್ಟಿಲ್ವಾ.. ಈಗೇನು ಬೀದಿ ಬದಿ ರಂಪಾಟ ನಿಂದು.. ಸುಲೋಚ್ನ, ಶಿವು ಇಬ್ರೂ ಸುಮ್ನೆ ಇಲ್ವಾ.."
"ಅವ್ರಿಗೆಲ್ಲ ಕೊಡಿಸ್ಬೇಡ.. ನಂಗೆ ಮಾತ್ರ ಕೊಡ್ಸು.."
"ಎಷ್ಟು ಅಂತ ಹೇಳ್ತೀರಾ.. ನಾಲ್ಕು ಪೆಪ್ಪರ್ಮೆಂಟು ತರ್ಬಾರ್ದಾ.." ಮಧ್ಯ ಯಶೋದಮ್ಮ ಹೇಳಿದಳು. 
"ನೀನು ಅವರ ಪರವಾಗಿ ಇರ್ತೀಯಾ ಅಂತಾನೆ ಹಂಗೆ ಆಡೋದು ಅವ್ರು.. ದಾರೀಲಿ ಕೇಳಿದ್ದೆಲ್ಲ ಕೊಡ್ಸೋಕೆ ಆಗತ್ತಾ..ತರ್ತೀನಿ ಇರು ಮಾರಾಯ್ತಿ.."
ಗೊಣಗುತ್ತ ಹೋಗಿ ಒಂದಷ್ಟು ಪೆಪ್ಪರ್ಮೆಂಟ್ ತಂದ ದೇವಪ್ಪ. "ನೋಡು, ದಾರಿ ಮಧ್ಯ ಇನ್ನೆಲ್ಲೂ, ಏನೂ ಸಿಗಲ್ಲ. ಈಗ್ಲೇ ತಿಂದು ಖಾಲಿ ಮಾಡ್ಕೊಂಡು ಮತ್ತೆ ರಾಗ ಎಳ್ದ್ರೆ ನೋಡು..."
"ಹೂ.. ಸರಿ ಸರಿ.." ಎನ್ನುತ್ತಾ ಬಾಯಿಗಿಟ್ಟಳು. 
"ನಮ್ಮ ಅಂಗಡಿಲಿ ಯಾಕೆ ಏನೂ ಇಡಲ್ಲ ಅಂತ ಕೇಳ್ತಿದ್ಯಲ್ಲ.. ಇದಕ್ಕೆ.. ಏನಾದ್ರು ಪೆಪ್ಪರ್ಮೆಂಟ್ ಎಲ್ಲ ತಂದ್ರೆ, ಇವಳೇ ತಿಂದು ಖಾಲಿ ಮಾಡ್ತಾಳೆ ನೋಡು.."
"ನೋಡಿದ್ಯಾ ಅಕ್ಕಾ, ಅಪ್ಪಂಗೆ ನನ್ನ ಕಂಡ್ರೆ ಭಯ..!" ಪಿಸುಗುಟ್ಟಿದಳು ನಯನಾ. 
ಅರ್ಧಗಂಟೆಯೊಳಗೆ ಬಸ್ಸು ಬಂತು. ಮುದುಕಿಯೊಬ್ಬಳು ಕೋಲೂರುತ್ತಾ ಬಂದಂತೆ, ಹೆಜ್ಜೆಯ ಮೇಲೊಂದು ಹೆಜ್ಜೆಯಿಡುತ್ತ ಬರುತ್ತಿತ್ತು. ಡ್ರೈವರಪ್ಪ ಇಪ್ಪತ್ತು ಮಾರು ಹಿಂದೆಯೇ ಬ್ರೇಕ್ ಹಾಕಿದ ಕಾರಣ ಕೀಮ್ ಎಂದು ಕೀರಲು ಧ್ವನಿಯಲ್ಲಿ ಕೂಗುತ್ತಾ, ಇವರಿಗಿಂತ ಐದು ಮಾರು ಮುಂದೆ ಹೋಗಿ ನಿಂತಿತ್ತು..!!
ಬೀರ ಧಡಧಡನೆ ಎಲ್ಲ ಚೀಲಗಳನ್ನು ಹತ್ತಿಸಿದ. ಮಡಿ ಬಟ್ಟೆ, ತೆಂಗಿನ ಕಾಯಿ,  ದೀಪದ ಎಣ್ಣೆ ಎಲ್ಲ ತುಂಬಿದ್ದ ಹರಕೆಯ ಚೀಲ ಮಾತ್ರ ಯಶೋದಮ್ಮನ ಕೈಲಿತ್ತು. ಎಲ್ಲರೂ ಹತ್ತಿ ಕುಳಿತರು. ಅಕ್ಕ ತಂಗಿಯರು ಕಿಟಕಿಯ ಜಾಗ ನನಗೆ - ನನಗೆ ಎಂದು ಮೊದಲು ವಾದ ಮಾಡಿಕೊಂಡರೂ ನಂತರ ಅದು ಯಶೋದಮ್ಮನ ಪಾಲಾಯ್ತು..!
ನಿಧಾನವಾಗಿ ಬಸ್ಸು ಬುಸ್ ಎನ್ನುತ್ತಾ ಮುಂದೆ ಸಾಗಿತು. ಹೆಚ್ಚು ಕಡಿಮೆ ಎರಡು ತಾಸಿನ ಪ್ರಯಾಣ ! ರಸ್ತೆಯೋ.. ಆಹಾ.. ಶಿವನೇ ಮೆಚ್ಚಬೇಕು. ಶಿವಪುರಕ್ಕೆ ಹೋಗುತ್ತದೋ, ಸೀದಾ ಕೈಲಾಸಕ್ಕೆ ಕರೆದೊಯ್ಯುವ ಹಾದಿಯೋ..!!
ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಊರು ದಾಟಿ, ಕಾಡು ಪ್ರಾರಂಭವಾಗಿತ್ತು. ದಟ್ಟ ಕಾಡು..ಸೂರ್ಯ ಕಷ್ಟಪಟ್ಟು ನೆಲವ ನೋಡಬೇಕಷ್ಟೆ !
ಆ ದಟ್ಟಾರಣ್ಯದಲ್ಲಿ ಒಬ್ಬನೇ ಮನುಷ್ಯ ಸಂಚರಿಸುವುದು ಅತೀ ವಿರಳ. ಒಂದೋ ಎತ್ತಿನಗಾಡಿ ಹೋಗಬೇಕು, ಇಲ್ಲವೇ ಬಸ್ಸು! ಅಲ್ಲೊಂದು ಮಣ್ಣ ರಸ್ತೆ ಬಿಟ್ಟು ಇನ್ನೆಲ್ಲಿಯೂ ಹಾದಿ ಕಾಣುವುದೇ ಇಲ್ಲ. ಪಟ್ಟಣದಿಂದ ಶಿವಪುರಕ್ಕೆ ಹೋಗಲು ಇದೊಂದೇ ಮಾರ್ಗ. ಮಧ್ಯೆ ಮತ್ಯಾವುದೇ ಊರಿಲ್ಲ. ಮಳೆಗಾಲದಲ್ಲಂತೂ ಶಿವಪುರ ಬೇರೆಲ್ಲ ಊರುಗಳೊಡನೆ ತನ್ನ ಸಂಪರ್ಕ ಕಡಿದುಕೊಳ್ಳುತ್ತದೆ. ಕೇವಲ ಇದೊಂದೇ ಊರಿಗಾಗಿ ಬಸ್ಸು ಯಾಕೆ ಬರಬೇಕು?  ಅದರಲ್ಲೂ ಮಳೆಗಾಲದಲ್ಲಿ ಶ್ವೇತನದಿ ದಾಟುವ ಹುಂಬ ಧೈರ್ಯವನ್ನು ಪರವೂರಿನ ಯಾವೊಬ್ಬನೂ ಮಾಡುವುದಿಲ್ಲ. 
ಇನ್ನೂ ಮಧ್ಯಾಹ್ನವಾಗದಿದ್ದರೂ, ದಟ್ಟಕತ್ತಲು ಆವರಿಸಿತ್ತು. ದೇವಪ್ಪ, ಯಶೋದಮ್ಮ, ನಯನಾ ಎಲ್ಲರೂ ನಿದ್ದೆ ಮಾಡುತ್ತಿದ್ದರು. 
ಅವರನ್ನೆಲ್ಲ ನೋಡಿ ಸುಲೋಚನೆ ಮುಗುಳ್ನಕ್ಕಳು. 
"ಎಲ್ಲರಿಗೂ ಒಳ್ಳೆ ತೊಟ್ಲಲ್ಲಿ ಮಲಗ್ಸಿ ತೂಗ್ತಾ ಇರೋ ಹಂಗೆ ಅನ್ನಿಸ್ತಾ ಇದ್ಯೇನೋ.. ಎಲ್ಲರೂ ಮಲಗಿಬಿಟ್ರು.. ಈ ನಯ್ನಾ ದೊಡ್ಡದಾಗಿ ಹೇಳ್ತಿದ್ಲು.. ಮೊದಲ್ನೇ ಸಲ ಬಸ್ಸಿಗೆ ಹೋಗೋದು ಮಜವಾಗಿರತ್ತೆ ಅಂತ.. ಈಗ ನೋಡಿದ್ರೆ ಬಾಯಿ ಕಳ್ಕೊಂಡು ಜೊಲ್ಲು ಹರಿಸ್ತಾ ಮಲ್ಗಿದಾಳೆ.. ಅಮ್ಮ ಹೇಳೋದು ಸುಳ್ಳಲ್ಲ.. ಕುಂಭಕರ್ಣನ ತಂಗಿನೇ ಇವ್ಳು...!"
ಅವಳ ಯೋಚನೆಯಿಂದ ಹೊರತರಲು ಬಸ್ಸು ಎಡಕ್ಕೆ ವಾಲಿತು. "ಈ ಡೈವರಪ್ಪ ಏನು ಬಸ್ಸು ಬಿಡ್ತಾನಪ್ಪ.. ಸೊಂಟ ಎಲ್ಲ ನೋವು ಬಂತು..." ಎಂದು ಗೊಣಗುತ್ತ ಹೊರಗೆ ನೋಡಿದಳು. 
ದೈತ್ಯಾಕಾರದ ಮರಗಳನ್ನೆಲ್ಲ ಹಿಂದೆ ಹಾಕಿ, ಬಸ್ಸು ಕಾಡಿನ ಮೌನವನ್ನು ಸೀಳುತ್ತ ಮುಂದೆ ಸಾಗುತ್ತಿತ್ತು. ಕೆಲವು ಮರಗಳು ಬಸ್ಸಿನ ಒಳಗೆ ಇಣುಕಿ ಎಷ್ಟು ಜನರಿದ್ದಾರೆ ಎಂದು ತಪಾಸಣೆ ಮಾಡುತ್ತಿದ್ದವು! 
ಹಿಂದೆ ಸರಿಯುವ ಮರಗಳನ್ನು ನೋಡುತ್ತಾ ಕುಳಿತಳು ಸುಲೋಚನಾ.. 
"ಅಬ್ಬಾ.. ಎಂಥ ಮರಗಳು ಇಲ್ಲಿ.. ನಮ್ಮ ಊರಲ್ಲಿರೋ ಮರಗಳಿಗಿಂತ ಭಾಳ ದೊಡ್ಡದಾಗಿವೆ.ಒಂದೊಂದು ಎಲೆಯೂ ಅಪ್ಪನ ಎರಡೂ ಅಂಗೈ ಸೇರಿಸಿದಷ್ಟು ದೊಡ್ಡ ! ಎರಡು ಜನ ಸೇರಿ ಒಂದು ಮರ ತಬ್ಬಿದರೂ, ಕೈ ಜೋಡಿಸೋಕೆ ಅಗಲ್ವೇನೋ..ರಾತ್ರಿ ಎಲ್ಲ ನೋಡಿದ್ರೆ ರಾಕ್ಷಸ ಅಂತ ಹೆದ್ರೋದೇ ಮತ್ತೆ..."
ಬೆಳಿಗ್ಗೆ ಬೇಗ ಎದ್ದ ಕಾರಣವೋ ಏನೋ, ಅವಳೂ ತೂಕಡಿಸತೊಡಗಿದಳು. 
ಎಷ್ಟೋ ಹೊತ್ತಿನ ನಂತರ ಡ್ರೈವರಪ್ಪ ಬ್ರೇಕ್ ಹಾಕಿದ ಸದ್ದಿಗೆ ಎಲ್ಲರಿಗೂ ಎಚ್ಚರವಾಯಿತು. 
"ಇಳೀರಿ, ಇಳೀರಿ.. ಇದೇ ಕೊನೆ ಸ್ಟಾಪ್... ಮುಂದೆ ಹೋಗಲ್ಲ.. ಬೇಗ ಬೇಗ ಇಳೀರಿ.." ತಾರಕದಲ್ಲಿ ಕೂಗುತ್ತಿದ್ದ. 
ಬಸ್ಸಿನಲ್ಲಿದ್ದ ಎಂಟ್ಹತ್ತು ಮಂದಿ ಗಡಿಬಿಡಿಯಿಂದ ಇಳಿದರು. 
"ಅಪ್ಪಾ, ಬಸ್ಸು ಕಾಡು ದಾಟಿದಮೇಲೆ, ನದಿ ದಾಟಬೇಕು ಅಂದ್ಯಲ್ಲ.. ಇಲ್ಲಿ ನೋಡಿದ್ರೆ ಏನೂ ಇಲ್ಲ.."
"ನದಿ ದಾಟಬೇಕು ನಯ್ನಾ.. ಇಲ್ಲಿಂದ ಎರ್ಡು ಮೈಲಿ ನಡೀಬೇಕು.. ನೋಡು, ಕಾಲ್ದಾರಿ ಕಾಣ್ತಾ ಇದ್ಯಾ, ಹೀಗೇ ಹೋಗ್ಬೇಕು.."
"ಅಪ್ಪಾ... ಹಸಿವಾಯ್ತು..."
"ಇಲ್ಲೆಲ್ಲೂ ಊಟ ಮಾಡೋ ಹಾಗಿಲ್ಲ. ನದಿಬುಡದಲ್ಲಿ ಮಾಡೋಣ.. ಬೇಗ ಬೇಗ ಹೆಜ್ಜೆ ಹಾಕಿ.." ಎಂದ ದೇವಪ್ಪ. 
"ಇದೇನಪ್ಪಾ.. ಬರೀ ಬೇವಿನಮರವೇ ಇದೆ ಇಲ್ಲಿ..."
"ಅದ್ಕೆ ಇದನ್ನ ಬೇವಿನ ಕಾಡು ಅಂತಾರೆ."
"ನಮ್ಮನೆ ಏನಾದ್ರು ಇಲ್ಲೇ ಇದ್ದಿದ್ರೆ..  ಬೇವಿನಸೊಪ್ಪು ತಂದು ಅಮ್ಮ ಪಾಯ್ಸಕ್ಕೂ ಒಗ್ಗರಣೆ ಹಾಕ್ತಿದ್ಲು..!!"
ಎಲ್ಲರೂ ನಗುತ್ತಾ ಮುಂದೆ ಸಾಗಿದರು. 
"ಎಂಥಾ ಬೇವಿನ ಕಾಡಿದು..ವಯಸ್ಸಾದ ದಪ್ಪನೆ ಬೇವಿನಮರ.. ಅದ್ರ ಎಲೆ ಅಂತೂ ಎಷ್ಟು ಹಸಿರು.. ಇನ್ನು ಆ ಮರದ ಮಕ್ಕಳೆಲ್ಲ ಆಳೆತ್ತರಕ್ಕೆ ಹದವಾದ ಮರವಾಗಿವೆ, ಅವರ ಮಕ್ಳು ಇನ್ನೂ ಬೆಳಿತಾ ಇವೆ.  ಫಳ ಫಳನೆ ಹೊಳೆಯೋ ಚಿಗುರು ಎಲೆ ಅವ್ರದ್ದು... ನೆಲದ ಮೇಲೆ ಇನ್ನೂ ಒಂದೇ ಅಡಿ ಮೇಲೆದ್ದಿರೋ ಪುಟ್ಟ ಪುಟ್ಟ ಗಿಡಗಳು.. ಹೆಜ್ಜೆ ಹೆಜ್ಜೆಗೂ ಕಾಲಿಗೆ ಸಿಗ್ತವೆ.. ಬೇವಿನೆಲೆಯ ಘಮ ಬಿಟ್ರೆ.. ಇನ್ನೇನೂ ಇಲ್ಲ.." ಸುಲೋಚನೆ ಎಂದಿನಂತೆ ತನ್ನೊಳಗೆ ಮಾತನಾಡಿಕೊಳ್ಳುತ್ತಿದ್ದಳು. ಹೊಸದನ್ನು ನೋಡಿದ ತಕ್ಷಣ ತನ್ನನ್ನೇ ತಾನು ಮರೆತು, ಹೊಸದೇ ಆದ ಮಾತಿಗಿಳಿಯುತ್ತದೆ ಅವಳ ಮನಸ್ಸು!!
"ಇಲ್ಲಿ ಮಣ್ಣು ಎಷ್ಟು ಮೆತ್ತಗೆ ಇದೆ ನೋಡ್ರಿ.. ಈಗ ತಾನೇ ಮಳೆ ಬಂದು ಹೋಗಿರೋ ಥರಾ ಹಸಿಯಾಗಿದೆ..."
"ನದಿ ಹತ್ರಾನೇ ಇದ್ಯಲ್ಲೇ.. ಅದ್ಕೆ ಹಾಗೇ.."
"ಅಪ್ಪಾ ನದಿ ಎಷ್ಟು ದೊಡ್ಡ ಇರತ್ತೆ?  ಅಜ್ಜಿ ಮನೆ ಹೊಳೇಲೇ ನಾನು ಮುಳುಗಿ ಹೋಗ್ತೀನಿ.. ಇದು ಅದಕ್ಕಿಂತ ದೊಡ್ಡ ಇರತ್ತಾ? "
"ಅಲ್ಲೇ ಹೋಗ್ತಿದೀವಲ್ಲೇ..ನೀನೆ ನೋಡಬಹುದು..."
ಮಾತನಾಡುತ್ತ ದಾರಿ ಸಾಗಿದ್ದೇ ತಿಳಿಯಲಿಲ್ಲ. ಎಲ್ಲರೂ ನದಿಬುಡಕ್ಕೆ  ಬಂದಿದ್ದರು. 
ಹೊಟ್ಟೆ ಕಾದ ಕಾವಲಿಯಂತೆ ಚುರುಗುಡುತ್ತಿತ್ತು..!
"ಎಲ್ಲ ಕೈ ತೊಳ್ಕೊಂಡು ಬನ್ನಿ.. ನಾನು ಬುತ್ತಿ ಚೀಲ ಬಿಚ್ಚತೀನಿ" ಎಂದು ಯಶೋದಮ್ಮ ಹೇಳಿದಾಗ, ಅಕ್ಕ ತಂಗಿ ನದಿಯತ್ತ ಓಡಿದರು. 
"ಹುಷಾರು ಕಣ್ರೆ.. ಮುಂದೆ ಹೋಗ್ಬೇಡಿ.." ಹಿಂದಿನಿಂದ ದೇವಪ್ಪನ ಧ್ವನಿ ಬಂದಿತ್ತು. 
ಕೈ ತೊಳೆಯುವಾಗ ನದಿಯಲ್ಲಿ ಸಣ್ಣ ಅಲೆ ಕಂಡು, ತಲೆ ಎತ್ತಿದಳು ಸುಲೋಚನಾ. ದೋಣಿಯೊಂದು ಇವರಿದ್ದ ಕಡೆಗೇ ಬರುತ್ತಿತ್ತು. 
ಆಗ ಕಂಡವನು ಅವನು, ಎದೆಯೊಳಗೆ ಅಲೆ ಸೃಷ್ಟಿಸುವವನು...... 







Sunday, July 26, 2020

ಮತ್ತೆ ಕಾಡಿದ ಮಳೆಯ ನೆನಪು - 3

ದೇವಪ್ಪ ಸಿಡಿಮಿಡಿಗೊಂಡಿದ್ದ. ರಾತ್ರಿ ಎಲ್ಲರೂ ಊಟಕ್ಕೆ ಕುಳಿತಾಗ ತುತ್ತನ್ನು ಬಾಯಿಗಿಡುವ ಬದಲು ಹೆಂಡತಿಯನ್ನು ತರಾಟೆಗೆ ತೆಗೆದುಕೊಂಡಿದ್ದ. 
"ನಿಂಗೇನು ಸ್ವಲ್ಪಾನೂ ಬುದ್ಧಿ ಇಲ್ವಾ.. ಹರಕೆ ಹೊತ್ತಿರೋಳು ನೀನು. ಈಗ ನೋಡಿದ್ರೆ ಇಡೀ ಸಂಸಾರನೇ ಕರ್ಕೊಂಡು ಹೋಗ್ಬೇಕು ಅಂತಿಯಲ್ಲ. ಅದೇನು ನಮ್ಮೂರ ದೇವಸ್ಥಾನ ಅಂದ್ಕೊಂಡ್ಯಾ? ಇಲ್ಲಿಂದ ಪಟ್ಣಕ್ಕೆ ಹೋಗೋಕೆ ಎಷ್ಟು ಹೊತ್ತು ಬೇಕು.. ಅದೂ ಎತ್ತಿನಗಾಡಿಯವ್ನು ಕಡಿಮೆ ತಗೊಳ್ತಾನಾ? ಅಲ್ಲಿ ಬಸ್ಸು ಇದ್ರೆ ಪುಣ್ಯ. ಇಲ್ಲಾ ಅಂದ್ರೆ ಮತ್ತೆ ಬಂಡಿಯವ್ನಿಗೆ ಹೇಳ್ಬೇಕು.. ನಲವತ್ತು ಮೈಲಿ ಅಂದ್ರೆ ಅವ್ನೂ ಒಪ್ತಾನೋ ಇಲ್ವೋ.. ಅಲ್ಲಿಂದ ಎರಡು ಮೈಲಿ ನಡೀಬೇಕು, ನದಿ ದಾಟಬೇಕು.ದೋಣಿಯವ್ನೇನು ನಿಮ್ಮ ಮಾವಾನಾ? ಈ ಹಬ್ಬದಲ್ಲಿ ಅವ್ರು ಹೇಳಿದ್ದೇ ಕಾಸು.. ನಾವೇ ನಾಲ್ಕು ಜನ, ಬಟ್ಟೆ, ಹರಕೆ ಸಾಮಾನು ಅಂದ್ರೆ ನಮ್ಗೆ ಒಂದು ದೋಣಿ ಬೇಕು.. 
ಅಲ್ಲಿ ಮತ್ತೆ ಮೂರು ದಿನ ಉಳಿಬೇಕು ಅಂತೀಯಾ. ದೊಡ್ಡ ಜಾತ್ರೆ ಆಗತ್ತೆ ಅಲ್ಲಿ. ಹರಕೆ ತೀರಿಸ್ಬೇಕಾ? ಅಥವಾ ಮಕ್ಕಳು ಎಲ್ಲಿ ಅಂತಾ ನೋಡ್ತಾ ಇರ್ಬೇಕಾ? 
ಇದೆಲ್ಲ ಆಗಲ್ಲ.. "
ಇಷ್ಟೆಲ್ಲಾ ಹೇಳುವ ಹೊತ್ತಿಗೆ ಅಕ್ಕ ತಂಗಿಯರಿಬ್ಬರು ಕಣ್ಣಲ್ಲಿ ನೀರು ತುಂಬಿಕೊಂಡು ಅಮ್ಮನತ್ತ ನೋಡುತ್ತಿದ್ದರು. 
ಮಕ್ಕಳ ಮನಸ್ಸನ್ನು ಚೆನ್ನಾಗಿಯೇ ಅರಿತಿದ್ದಳು ಯಶೋದೆ. 
"ಹಾಗಲ್ಲ ರೀ, ಅವ್ರಾದ್ರೂ ಪಾಪ.. ಅಜ್ಜಿ ಮನೆಗೆ ಬಿಟ್ಟು ಇನ್ನೆಲ್ಲಿ ಹೋಗಿದಾರೆ? ಮೊದಲ್ನೇ ಸಲ ಆಸೆ ಪಟ್ಟು ಕೇಳ್ತಿದಾರೆ. ಬಸ್ಸು, ದೋಣಿ, ಜಾತ್ರೆ ಅದನ್ನೆಲ್ಲ ನೋಡ್ಬೇಕು ಅಂತಾ ಅವ್ರಿಗೂ ಆಸೆ ಇರಲ್ವಾ.. " ಮೃದುವಾಗಿ ಹೇಳಿದಳು. 
"ಇಷ್ಟು ಹೇಳಿದ್ರೂ ಅರ್ಥ ಆಗ್ತಿಲ್ವಾ ನಿಂಗೆ? ಅಲ್ಲಿ ಮೂರು ದಿನ ಉಳಿಬೇಕು. ವ್ಯವಸ್ಥೆ ಏನಿದ್ಯೋ ಏನೋ.."
"ನೋಡಿ ಎಷ್ಟು ಸಮಸ್ಯೆ ಇದೇ ಅಂತಾ. ನೀವೂ ಸ್ವಲ್ಪ ಯೋಚ್ನೆ ಮಾಡ್ರಿ.. ಬಟ್ಟೆ, ಹರಕೆ ಸಾಮಾನು ಎಲ್ಲಾ ಹಿಡ್ಕೊಂಡು, ಶಿವೂನೂ ಎತ್ಕೊಂಡು ಓಡಾಡೋಕೆ ನನ್ನಿಂದ ಆಗಲ್ಲ. ಎಷ್ಟು ತುಂಟ ಅವ್ನು. ಈಗಂತೂ ಕೈಗೆ ಸಿಗಲ್ಲ, ಓಡ್ತಾನೆ. ಪೂಜೆ ಮಾಡ್ಸೋವಾಗ ಅವನನ್ನ ನೋಡ್ಕೊಳೋಕೆ ಆಗತ್ತಾ?  ಅವನು ಜಾತ್ರೆ ಮಧ್ಯ  ಓಡ್ತಿದ್ರೆ ಹಿಡ್ಕೊಳೋಕೆ ನಮ್ಮಿಬ್ಬರಿಂದಾನೂ ಸಾಧ್ಯ ಇಲ್ಲ. ಅದೇ ಸುಲೋಚ್ನಾ ಇದ್ರೆ ಏನೂ ತೊಂದ್ರೇನೇ ಆಗಲ್ಲ. ಅವಳ ಜೊತೆಗೆ ಆರಾಮಾಗಿ ಇರ್ತಾನೆ. ನಯ್ನಾ ಚಿಕ್ಕ ಪುಟ್ಟ ಸಹಾಯ ಮಾಡ್ತಾಳೆ."
ಗಂಡನ ಕೋಪವನ್ನು ತನ್ನ ತರ್ಕಕ್ಕೆ ಬಳಸಿಕೊಂಡಳು!!
ಈಗ ಹೇಗೆ ತಾನೇ ಬೇಡವೆನ್ನಲು ಸಾಧ್ಯ !
ಮನಸ್ಸಿಲ್ಲದಿದ್ದರೂ ದೇವಪ್ಪ ಸುಲೋಚನೆಯತ್ತ ನೋಡಿ, "ಹೂ.. ಆಯ್ತಲ್ಲ.. ನಿಮ್ಮ ಬಟ್ಟೆಗಳನ್ನೂ ತುಂಬಿಕೊಳ್ಳಿ. ಮೊದ್ಲೇ ಹೇಳ್ತಿದೀನಿ. ನಾವು ಜಾತ್ರೆ ಸುತ್ತೋಕೆ ಹೋಗ್ತಿಲ್ಲ. ಹರಕೆ ತೀರ್ಸೋದು ಮಾತ್ರ. ಅಲ್ಲಿ ಅದು ಕೊಡ್ಸು, ಇದು ಕೊಡ್ಸು ಅಂತಾ ಹೇಳೋಹಾಗಿಲ್ಲ" ಎಂದ. 
ಇಷ್ಟೇ ಸಾಕಿತ್ತು ಅವರಿಬ್ಬರಿಗೆ. ಖುಷಿಯಿಂದ ಕುಣಿಯುತ್ತ ಒಳಗೋಡಿದರು. ಅಮ್ಮ ಬೆಳಿಗ್ಗೆ ನಾಲ್ಕಕ್ಕೆಲ್ಲ ಏಳಲು ಹೇಳಿದರೂ ರಾತ್ರಿಯಿಡೀ ಮಲಗಲೇ ಇಲ್ಲ. ಯಾವ ಲಂಗ ಹಾಕಿಕೊಳ್ಳಬೇಕು, ಎಷ್ಟು ಬಳೆಗಳನ್ನು ತೆಗೆದುಕೊಳ್ಳಬೇಕು, ದಾವಣಿಗೆ ಹೊಂದುವಂಥ ರಿಬ್ಬನ್ ಇಟ್ಕೊಳ್ಳಬೇಕು. ಮೂರು ದಿನ ಹೊಸದೊಂದು ಊರಲ್ಲಿ ಉಳಿಯಬೇಕು, ಜಾತ್ರೆ ಸುತ್ತಬೇಕು ಎಂದರೆ ಹೆಣ್ಣುಮಕ್ಕಳ ಸಮಸ್ಯೆ ಒಂದೇ.. ಎರಡೇ..!!
ಇಬ್ಬರೂ ಸೇರಿ ಒಂದು ಚೀಲಕ್ಕೆ ತಮ್ಮ ಬಟ್ಟೆಗಳನ್ನು ತುಂಬಿಕೊಂಡರು. ಆ ಊರು ಹಾಗಿರಬಹುದು, ಹೀಗಿರಬಹುದು ಎಂಬ ಮಾತುಕತೆ ನಡೆಯುತ್ತಿರುವಾಗಲೇ, ಇವರ ಮಾತನ್ನು ಕದ್ದು ಕೇಳುವಂತೆ, ಕಿಟಕಿಯೊಳಗೆ ಸೂರ್ಯ ಇಣುಕಿದ್ದ..!
ಯಶೋದಮ್ಮ ಗಡಿಬಿಡಿಯಲ್ಲಿ ಓಡಾಡುತ್ತಿದ್ದಳು. ನಯನಾ ಹರಕೆಗೆ ಬೇಕಾದಂತಹ ಸಾಮಗ್ರಿಗಳನ್ನೆಲ್ಲ ಜೋಡಿಸಿ, ಚೀಲಕ್ಕೆ ತುಂಬಿದಳು. ಸುಲೋಚನೆ ಬುತ್ತಿ ತುಂಬುತ್ತಿದ್ದಳು. 
ಮಧ್ಯೆ ತಿನ್ನಲು ಏನೂ ಸಿಗುವುದಿಲ್ಲ. ಪಟ್ಟಣದಲ್ಲಿ ಬಸ್ಸು ಸಿಕ್ಕಿದರೆ, ನದಿ ತೀರದಲ್ಲಿ ಮಧ್ಯಾಹ್ನ ಊಟ ಮಾಡಬಹುದು. ಎತ್ತಿನಗಾಡಿಯಾದರೆ ಕಾಡ ಮಧ್ಯದಲ್ಲಿ ಊಟ ಮಾಡಬೇಕು. ಸರಿಯಾಗಿ ಬುತ್ತಿ ಕಟ್ಟಿಕೊಳ್ಳಿ ಎಂದು ದೇವಪ್ಪ ಮೊದಲೇ ಹೇಳಿದ್ದ. 
ಶಿವೂನ ಎಬ್ಬಿಸಿ ಸ್ನಾನ ಮಾಡಿಸಿ ಹೊಸ ಬಟ್ಟೆ ಹಾಕಿದ್ದಳು ಯಶೋದಮ್ಮ. 
"ಸುಲೋಚ್ನಾ.. ಕೆಲ್ಸ ಎಲ್ಲಾ ಮುಗ್ದ್ರೆ ಸ್ನಾನಕ್ಕೆ ಹೋಗು.. ನೀರು ಬಿಸಿ ಇದೆ.." ಎಂದು ಅಮ್ಮ ಕೂಗಿದರೆ, ಅದೇ ರಾಗದಲ್ಲಿ ಮಗನೂ "ತುಲೋನಾ.. ತಾನ ಮಾದು.. ನೀಲು ಬಿಚಿ...." ಎಂದು ಮುದ್ದಾಗಿ ತೊದಲಿದ. 
ನಗುತ್ತಾ ಹೋದಳು ಸುಲೋಚನೆ. 
ದೇವಪ್ಪ ಮಾಧವನಿಗೆ ಅಂಗಡಿಯೆಡೆಗೂ ನೋಡಿಕೊಳ್ಳಲು ತಿಳಿಸುತ್ತಿದ್ದ. 
"ಲೇ, ಇವಳೇ.. ಎಷ್ಟು ಹೊತ್ತು ಮಾಡ್ತೀರೇ.. ಅದ್ಕೆ ಹೇಳ್ದೆ, ಈ ಅಕ್ಕ ತಂಗಿರಂತೂ ಕನ್ನಡಿ ಬಿಡೋ ಹಾಗೇ ಕಾಣ್ತಿಲ್ಲ. ನಿಮ್ಮನ್ನ ನೋಡೋಕೆ ಯಾರೂ ಬರಲ್ಲ ಅಲ್ಲಿ.. ಸಾಕು ಬನ್ನಿರೇ.. ಪಟ್ಟಣದಲ್ಲಿ ಬಸ್ಸು ತಪ್ಪಿಹೋದ್ರೆ ಮಾತ್ರ, ಶಿವಪುರಕ್ಕೆ ಹೋಗೋದು ಮಧ್ಯ ರಾತ್ರಿ ಆಗತ್ತೆ.. ಇವಳೇ.. ಕೇಳಿಸ್ತೋ ಇಲ್ವೋ.. ನನ್ನ ಪಂಚೆನೂ ಹಾಕಿದೀಯ ಚೀಲಕ್ಕೆ? "
"ನಿಮ್ಮಪ್ಪ ಆರು ತಿಂಗಳಿಗೇ ಹುಟ್ಟಿರಬೇಕು.. ಬಂದ್ವಿ ಅಂತಾ ಹೇಳು ಹೋಗು. ಅವ್ರ ಚೀಲಕ್ಕೇ ಬಟ್ಟೆ ತುಂಬುತ್ತ ಇರೋದು. ಒಂದು ಕೆಲಸ ಮಾಡ್ಕೊಳಲ್ಲ. ಅಂಗಳಕ್ಕೆ ಹೋಗಿ ನಿಂತು, ಇಡೀ ಊರಿಗೇ ಕೇಳೋ ಥರ ಕೂಗೋದು ನೋಡು.."
ಹೊರಡುವಾಗಲೂ ಇಬ್ಬರ ವಾದವನ್ನು ನೋಡುತ್ತಾ ಓಡಿದಳು ನಯನಾ. 
"ಅಂತೂ ಎಲ್ರೂ ಬಂದ್ರಾ.. ಇವತ್ತೇ ಹೊರಡ್ತೀವೋ ಇಲ್ವೋ ಅಂತಾ ಅನುಮಾನ ಆಗ್ಬಿಟ್ಟಿತ್ತು ನಂಗೆ. ಬನ್ನಿ ಬನ್ನಿ.. ಹೊತ್ತಾಯ್ತು...ಬೀರ ಆಗ್ಲೇ ಬಂದು ನಿಂತಿದಾನೆ. ನಿಮ್ಮಿಂದ್ಲೇ ತಡ ಆಗಿದ್ದು. ಹತ್ತಿ, ಹತ್ತಿ.. ಗಾಡಿ ಹತ್ತಿ.. "
ಬೀರ ತನ್ನ ದೈತ್ಯಾಕಾರದ ಎತ್ತುಗಳನ್ನು ಗಾಡಿಗೆ ಕಟ್ಟಿಕೊಂಡು ಬಂದು ನಿಂತಿದ್ದ. 
ಮೊದಲು ನಯನಾ ಹತ್ತಿಕುಳಿತಳು. ಮಾಧವ ಕೆಳಗಿನಿಂದ ಚೀಲಗಳನ್ನೆಲ್ಲ ಅವಳ ಕೈಗೆ ಕೊಟ್ಟ. 
"ಏನಪ್ಪೋರೆ, ಇನ್ನೊಂದು ಗಾಡಿ ಬೇಕಾಯ್ತದಾ? ಮೂರ್ದಿನಕ್ಕೆ ಊರ್ಬಿಟೊಗಹಂಗೆ ಚೀಲ ತಗಂಡಿರಿ..."
ಬೀರ ರಾಗ ಎಳೆದ. ದೇವಪ್ಪ ಯಶೋದಮ್ಮಳೆಡೆಗೆ ಕೋಪದಿಂದ ನೋಡಿದ. 
"ಸುಮ್ನಿರು ಬೀರಾ.. ಹರಕೆ ತೀರ್ಸಕೆ ಹೋಗದು..ಕಾಯಿ ಎಲ್ಲಾ ಇದೆ. ಜೊತೆಗೆ ಮಕ್ಳ ಬಟ್ಟೆ, ಬುತ್ತಿ.. ಎಲ್ಲಾ ಸೇರಿ ಇಷ್ಟಾಯ್ತು. ಏನು ನಿನ್ನ ಕಾಲ್ಮೇಲೆ ಇಟ್ವಾ? ಸುಮ್ನೆ ಇರೋಕಾಗೋದೇ ಇಲ್ಲ ಆಲ್ವಾ ನಿಂಗೆ? "
ಗಂಡನ ಮೇಲಿನ ಕೋಪಕ್ಕೆ ಬೀರ ಬಲಿಯಾದ..!
ಸುಲೋಚನಾ ಹತ್ತಿ ಕುಳಿತು, ಶಿವೂನ ಎತ್ತಿಕೊಂಡಳು. ಅವಳ ಹಿಂದೆ ಯಶೋದಮ್ಮ, ಕೊನೆಯಲ್ಲಿ ದೇವಪ್ಪ ಕಾಲು ಇಳಿಬಿಟ್ಟು ಕುಳಿತ. 
"ಅಣ್ಣಾ ನೀ ಇಲ್ಲಿದೇನು ಚಿಂತೆ ಮಾಡ್ಬೇಡ. ನಾ ಎಲ್ಲನೂ ನೋಡ್ಕೊಳ್ತೀನಿ. ಆರಾಮಾಗಿ ಹೋಗ್ಬನ್ನಿ." ಎನ್ನುವಷ್ಟರಲ್ಲಿ.. 
"ಮಾಧ್ವಾ.. ಎರ್ಡು ದಿನಕ್ಕೆ ಆಗೋ ಅಷ್ಟು ರೊಟ್ಟಿ ಮಾಡಿಟ್ಟಿದೀನಿ. ಆಚೆ ಮನೆ ಸರೋಜಕ್ಕ ನಿಂಗೆ ಅಡ್ಗೆ ಮಾಡ್ಕೊಡ್ತೀನಿ ಅಂದಿದಾಳೆ. ಮನೆ ಕಡೆ ಹುಷಾರು. ಮಧ್ಯರಾತ್ರಿವರೆಗೂ ಗದ್ದೆಲೇ ಇರ್ಬೇಡ. ಬೇಗ ಮನೆಗೆ ಬಂದ್ಬಿಡು.. ಗದ್ದೆಗೆ ಹೋಗುವಾಗ ಚಿಲ್ಕ ಹಾಕ್ಕೊಂಡು ಹೋಗು.."
"ಆಯ್ತು ಅತ್ಗೆ..."
"ನೀ ಸುಮ್ನಿರೇ.. ಮೂರ್ದಿನ ಗದ್ದೆಗೆ ಹೋಗ್ದೆ ಇದ್ರೆ ಅಲ್ಲೇನು ಕೊಳ್ತು ಹೋಗಲ್ಲ. ಅಂಗಡಿಗೆ ಹೋಗು ಮಾಧ್ವಾ.."
"ಹೂ.. ಆಯ್ತಣ್ಣ.."
"ಏನಪ್ಪೋರೆ... ಹೊರಡಲಾ.." 
"ಮುಹೂರ್ತ ಕೇಳ್ಬೇಕೆನೋ ಬೀರ, ಹೊರಡು ಹೊರಡು.."
ಮಾಧವ ಮುಂದೆ ಬಂದ. 
"ನಯನಾ, ಜಾತ್ರೇಲಿ ಹಠ ಮಾಡ್ಬೇಡ. ಅಮ್ಮನ ಜೊತೇನೆ ಇರು. ಸುಲೋಚ್ನಾ.. ಶಿವು ಜೋಪಾನ..."
"ಹೂ ಚಿಕ್ಕಪ್ಪ..."
"ಬೀರ ನಿಧಾನವಾಗಿ ಹೋಗು, ಬಸ್ಸಿಗೆ ಚೀಲನೆಲ್ಲ ಹತ್ತಿಸಿಕೊಡು..ಬಸ್ಸು ತಪ್ಪಿ ಹೋದ್ರೆ, ಅವರನ್ನೆಲ್ಲ ಬೇವಿನಕಾಡು ದಾಟಿಸಿ ಬಿಟ್ಟು ಬರೋದು ನಿನ್ನ ಜವಾಬ್ದಾರಿ.."
"ಏನಪ್ಪೋರೆ.. ನೀವಿದನ್ನ ನಂಗೆ ಹೇಳ್ಬೇಕಾ?  ಬಿಟ್ಟು ಬತ್ತಿನ್ರಾ.."
"ಹೊಯ್.. ಹೊಯ್.." ಗಾಡಿ ನಿಧಾನವಾಗಿ ಸಾಗಿತು.. 
ಕಾಣುವವರೆಗೂ ಮಾಧವ ನಿಂತು ನೋಡುತ್ತಿದ್ದ. 
ಇದೇ ಕೊನೆಯಬಾರಿಗೆ ಎಂಬಂತೆ ಸುಲೋಚನಾ ಮಾಧವನತ್ತ ಕೈ ಬೀಸಿದಳು.... 
ಗಾಡಿ ಕೊನೆಯ ಮನೆಯ ತಿರುವಿನಲ್ಲಿ ಮುಂದೆ ಸಾಗಿತು... 



Tuesday, July 14, 2020

ಮತ್ತೆ ಕಾಡಿದ ಮಳೆಯ ನೆನಪು -2

ನೀಲಕೂಟದ ಯಶೋದಮ್ಮ - ದೇವಪ್ಪನ ಮೊದಲ ಪುತ್ರಿ 'ಸುಲೋಚನಾ'. ಅವಳಿಗಿಂತ ನಾಲ್ಕು ವರ್ಷ ಕಿರಿಯವಳು ನಯನಾ. ಎರಡನೇ ತರಗತಿಗೇ ಅಕ್ಕ ತಂಗಿಯರು ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಹಾಡಿದ್ದರು!     ಈ ನಾಲ್ವರ ಜೊತೆಗೆ ದೇವಪ್ಪನ ತಮ್ಮ ಮಾಧವನೂ ಇದ್ದ. ಅಣ್ಣನ ಮಾತನ್ನು ಮೀರದ, ಅತ್ತಿಗೆಯನ್ನು ಬಹಳ ಗೌರವಿಸುವ ಮಾಧವನಿಗೆ, ಊಟ ತಿಂಡಿ ಎಲ್ಲದಕ್ಕೂ ಮಕ್ಕಳಿರಬೇಕಿತ್ತು. "ಸುಲೋಚ್ನಾ..ನ್ಯಾನಾ.." ಎನ್ನುತ್ತಲೇ ಇರುತ್ತಿದ್ದ. ಚಿಕ್ಕಪ್ಪನೆಂದರೆ ಮಕ್ಕಳಿಗೂ  ಬಲು ಪ್ರೀತಿ. ಅಪ್ಪನ ಗಂಟು ಮುಖವನ್ನು ಕಂಡು ಭಯಕ್ಕೋ, ತಮ್ಮನ್ನು ಚಿಕ್ಕಪ್ಪ ಅಕ್ಕರೆಯಿಂದ ಕಾಣುತ್ತಾನೆ ಎಂಬ ಕಾರಣಕ್ಕೋ ಮಾಧವನ ಬೆನ್ನಿಗೆ ಅಂಟಿಕೊಂಡೇ ಇರುತ್ತಿದ್ದರು.
 "ನೀನು ಹಿಂಗೇ ಮುದ್ದು ಮಾಡು ಅವ್ರಿಗೆ.. ಏನು ಹೇಳಿದ್ರೂ ಕೇಳ್ತಿಯಲ್ಲ.. ಮಧು ಸ್ವಲ್ಪ ಕೆಲ್ಸ-ಗಿಲ್ಸ ಕಲಿಲಿ ಅವ್ರು..ದಿನಾ ಗದ್ದೆಗೆ ಕರ್ಕೊಂಡು ಹೋಗ್ಬೇಡ. ಇಡೀ ದಿನ ಆಟ, ಊಟ ಅಂತಾನೆ ಕಳೀತಾರೆ..."
"ಅಣ್ಣಾ..ಮುಂದೆ ಮದ್ವೆ ಆಗಿ ಹೋದ್ಮೇಲೆ ಹೀಗೆ ಇರೋಕೆ ಆಗತ್ತಾ..ಪಾಪ ಖುಷಿಯಾಗಿರ್ಲಿ ಬಿಡು.."
ಏನೂ ಮಾತಾಡದೆ ಒಳಗೆ  ಹೋಗುತ್ತಿದ್ದ ದೇವಪ್ಪ. ದಿನವೂ ಇದೇ ಕಥೆ ! ಚಿಕ್ಕಪ್ಪ ತನ್ನ ಪರವಾಗಿದ್ದಾನೆ ಎಂದಾಗ ಇವರಿಬ್ಬರ ಹಾರಾಟ ಇನ್ನೂ ಜಾಸ್ತಿಯಾಗುತ್ತಿತ್ತು...!!

ನೀಲಕೂಟ ಅತ್ತ ಗ್ರಾಮವೂ ಅಲ್ಲದ, ಇತ್ತ ಪಟ್ಟಣವೂ ಅಲ್ಲದ ಸುಮಾರು ಎಪ್ಪತ್ತು ಮನೆಗಳು ಇರಬಹುದಾದ ಊರು. ಭತ್ತ ಮುಖ್ಯ ಬೇಸಾಯ. ಅಂದರೆ ಮಳೆಯ ಬೆಳೆ..! ಇಡೀ ಊರಲ್ಲಿ ಐದಾರು ಮನೆಗಳಲ್ಲಿ ಮಾತ್ರ ನಾಲ್ಕು ಎಕರೆಗೂ ಜಾಸ್ತಿ ಗದ್ದೆ ಇತ್ತು. ಅಣ್ಣ ತಮ್ಮಂದಿರ ಜಮೀನು ಇನ್ನೂ ಭಾಗವಾಗದ ಕಾರಣ ದೇವಪ್ಪನ ಮನೆಯೂ ಆ ಐದಾರು ಮನೆಗಳ ಸಾಲಿನಲ್ಲಿ ಸೇರಿತ್ತು!
ಮಾಧವ ಗದ್ದೆಯ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದ. ದೇವಪ್ಪನಿಗೆ ಅತ್ತ ಸುಳಿಯುವ ಅವಶ್ಯಕತೆಯೇ ಇರುತ್ತಿರಲಿಲ್ಲ. 
ಊರ ನಡುವೆ ನಾಲ್ಕಾರು ಅಂಗಡಿಗಳಿದ್ದವು. ಅವುಗಳ ಮಧ್ಯೆ ದೇವಪ್ಪನದೂ ಒಂದು ಕಿರಾಣಿ ಅಂಗಡಿ ಇತ್ತು. ಊರಲ್ಲಿ ಸಣ್ಣಕ್ಕಿಯ ದಲ್ಲಾಳಿ ಅವನೊಬ್ಬನೇ ಆದ ಕಾರಣ 'ಸಣ್ಣಕ್ಕಿ ಪಟೇಲ್ರು..' ಎಂದೇ ಎಲ್ಲರೂ ಕರೆಯುತ್ತಿದ್ದರು. 
"ಪಟೇಲ್ರೆ..ಒಂದು ಗಂಡು ಬೇಕ್ರಲಾ.. ಎಷ್ಟೆಲ್ಲಾ ಮಾಡಿಟ್ಟಿರಿ.. ನಿಮ್ಮ ನಂತ್ರ ಇದ್ಕೆಲ್ಲ ದಿಕ್ಕು ಅಂತಾ ಬೇಡ್ವೆನ್ರ? " ಎಂಬ ಮಾತನ್ನು ಕೇಳುವವರೆಗೆ ಮನೆಯಲ್ಲಿ ಕೊರತೆ ಎಂದು ಏನೂ ಇರಲಿಲ್ಲ... !
ರಾತ್ರಿ ಕೋಣೆಯಲ್ಲಿ ಅಪ್ಪನ ತಾರಕದ ಸ್ವರ, ಅಮ್ಮನ ಬಿಕ್ಕಳಿಕೆ ಎರಡೂ ಕೇಳಿತ್ತು. 
"ಕೆಲಸದವರ ಮಾತನ್ನೂ ಕೇಳುವಂತಾಯಿತಲ್ಲ" ಎಂದು ಗೊಣಗಿಕೊಂಡ ದೇವಪ್ಪ..! ಅಂಗಡಿಗೆ ಬಂದವರೆಲ್ಲ ನಾರು, ಬೇರು, ಸೊಪ್ಪು, ಕಷಾಯ, ಪಾನಕ ಹೇಳುವ ವೈದ್ಯರಾದರು. ಎಲ್ಲದರ ಪ್ರಯೋಗವೂ ನಡೆದಿತ್ತು. 
  ಇಷ್ಟೆಲ್ಲಾ ನಡೆಯುವಾಗ ಸುಲೋಚನೆಗೆ ಹದಿನಾರು ತುಂಬಿತ್ತು..! ಪಾಪ,  ಸಮಯವೆಲ್ಲಿ ಅವಳಿಗೆ? ತಿಂಗಳಲ್ಲಿ ಮೂರು ದಿನ ಹೊರಗೆ ಕೂರಬೇಕು, ಉಳಿದ ದಿನ ಅಡುಗೆ,  ಮನೆಯ ಕೆಲಸ, ಕೊಟ್ಟಿಗೆಯ ಕೆಲಸ, ಯಾರೋ ಹೇಳಿದ ಔಷಧಿಯನ್ನು ಅಮ್ಮನಿಗೆ ಮಾಡಿಕೊಡುವುದರಲ್ಲಿಯೇ ಸಮಯ ಹೋಗುತ್ತಿತ್ತು. ನಯನಳೂ ಮೊದಲಿನಂತೆ ಅಕ್ಕನೊಡನೆ ಜಗಳವಾಡುವುದನ್ನು ಬಿಟ್ಟು, ಅವಳ ಕೆಲಸಗಳಿಗೆ ನೆರವಾಗುತ್ತಿದ್ದಳು. 
ಚಿಕ್ಕಪ್ಪನೊಡನೆ ಗದ್ದೆಗೆ ಹೋಗುವುದು ಹಾಗಿರಲಿ, ಮನೆಯಿಂದಾಚೆ ಕಾಲಿಡುತ್ತಿರಲಿಲ್ಲ. ಅಮ್ಮನೊಡನೆ ವಾರಕ್ಕೊಮ್ಮೆ ದೇವಸ್ಥಾನಕ್ಕೆ ಮಾತ್ರ ತಪ್ಪದೇ ಹೋಗುತ್ತಿದ್ದರು. 
ಹೀಗೆ ಒಮ್ಮೆ ಹೋದಾಗ ಯಾರೋ ಹೇಳಿದರು - " ಶಿವಪುರದ ಶಿವ ಭಾಳ ಶಕ್ತಿದೇವ್ರು.. ಏನಾದ್ರು ಹೇಳ್ಕೊಂಡ್ರೆ ಖಂಡಿತಾ ಈಡೇರುತ್ತೆ.ಒಂದು ಹರಕೆ ಹೇಳ್ಕೊಬಿಡಿ..." ಅಲ್ಲೇ ಹರಕೆ ಹೇಳಿಕೊಂಡಳು ಯಶೋದಮ್ಮ. 
ಔಷಧಿ ಎಲ್ಲಾ ಆಯ್ತು.. ಇನ್ನು ಹರಕೆ ಶುರುವಾಯ್ತು.. ಎಂದು ಅಕ್ಕ ತಂಗಿ ಮುಖ ನೋಡಿಕೊಂಡರು..!
ಕಾಕತಾಳಿಯವೋ ಎಂಬಂತೆ ಮರುವರ್ಷ ಯಶೋದಮ್ಮ ಗರ್ಭಿಣಿ ! ಅಮ್ಮ ಒಂದೇ ಒಂದು ಕೆಲಸವನ್ನೂ ಮಾಡಲು ಬಿಡಲಿಲ್ಲ ಯಶೋದಮ್ಮ. ಅವಳಿಗೆ ಮಾಡಲು ಸಾಧ್ಯವಾಗುತ್ತಲೂ ಇರಲಿಲ್ಲ ! 
ಜೋರು ಮಳೆಗಾಲದ ಒಂದು ಸಂಜೆ ಯಶೋದಮ್ಮನಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತು. ಆಗಿನ್ನೂ ಎಂಟು ತಿಂಗಳ ಬಸುರಿ ಅವಳು. ಅಪ್ಪ ಅಂಗಡಿಯಲ್ಲಿದ್ದಾನೆ, ಚಿಕ್ಕಪ್ಪ ಗದ್ದೆಯಿಂದ ಇನ್ನೂ ಬಂದಿಲ್ಲ. ಅಮ್ಮ ನೆಲದ ಮೇಲೆ ಒದ್ದಾಡುತ್ತಿದ್ದಾಳೆ. ಅವಳನ್ನು ನೋಡಿ ನಯನಾ ಬಿಕ್ಕುತ್ತಿದ್ದಾಳೆ. 
ಸುಲೋಚನೆ ಒಂದು ನಿಮಿಷ ಏನೂ ತೋಚದಂತೆ ನಿಂತುಬಿಟ್ಟಳು. ಊರ ಕೊನೆ ಮನೆಯ ಸೂಲಗಿತ್ತಿ ಶಾಂತಾಳನ್ನು ಕರೆತರಲು ನಯನಾಳನ್ನು ಓಡಿಸಿದಳು. 

ಧೋ ಎಂದು ಸುರಿಯುವ ಮಳೆ. ಏನೂ ಮಾಡುವಂತೆ ಇರಲಿಲ್ಲ. ಹೋಗಿ ಅಮ್ಮನ ಕೈ ಹಿಡಿದು ಕಣ್ಮುಚ್ಚಿ ಕುಳಿತಳಷ್ಟೇ..! ಧಾರಾಕಾರವಾಗಿ ನೀರು ಕೆನ್ನೆಯ ಮೇಲೆ ಇಳಿಯುತ್ತಿತ್ತು. 
ನಯನಾ ಶಾಂತಾಳನ್ನು ಕರೆದುಕೊಂಡು ಬಂದಳು. 
"ಪಟೇಲಮ್ಮ.. ಏನೂ ಆಗಲ್ಲ.. ನಾ ಬಂದೀನಿ.." ಎನ್ನುತ್ತಾ ಒಳಹೊಕ್ಕಳು. ನಯನಾ ಮತ್ತೆ ಓಡಿದಳು, ಅಪ್ಪ ಚಿಕ್ಕಪ್ಪರನ್ನು ಕರೆತರಲು..
ಸುಲೋಚನೆಗೆ ಅಮ್ಮನ ಕೈಹಿಡಿದು ಅವಳ ಜೊತೆಯಲ್ಲೇ ಇರುವ ಆಸೆ. ಆದರೆ 'ಅದು ತಗೊಂಡ್ಬಾ, ಇದು ತಗೊಂಡ್ಬಾ..' ಎಂದು ಓಡಿಸುತ್ತಿದ್ದಳು ಶಾಂತ.  ದೇವಪ್ಪ, ಮಾಧವ, ನಯನಾ ಬರುವ ಹೊತ್ತಿಗೆ ಅಕ್ಕ ಪಕ್ಕದ ಮನೆಯವರೆಲ್ಲ ಸೇರಿದ್ದರು. ಅರ್ಧ ಗಂಟೆಯ ನಂತರ ಶಾಂತ ಕೈಯಲ್ಲಿ ಮಗುವನ್ನು ಎತ್ತಿಕೊಂಡು ಹೊರಬಂದಳು. 
ದೇವಪ್ಪನ ಕೈಗೆ ಕೊಡುತ್ತ, "ಗಂಡು ಮಗು" ಎಂದಳು. ಅವನ ಖುಷಿಗೆ ಪಾರವೇ ಇರಲಿಲ್ಲ. "ಗಂಡು ಬೇಕು ಸರಿ.. ಆದ್ರೆ ಈ ವಯಸ್ನಾಗೇ ಯಸೊದಮ್ಮಂಗೆ ಬ್ಯಾಡಾಗಿತ್ತು. ಉಳಿತದ್ಯೋ ಇಲ್ಲೋ ಅಂದ್ಕಂಡೆ.." ಶಾಂತ ಹೇಳುತ್ತಿದ್ದ ಮಾತನ್ನು ಕೇಳುವ ಸ್ಥಿತಿಯಲ್ಲಿ ದೇವಪ್ಪನಿರಲಿಲ್ಲ.
ಮೊದಲ ಬಾರಿಗೆ ಸುಲೋಚನೆಯ ಕಣ್ಣಲ್ಲಿ ಅವಳಪ್ಪನೆಡೆಗೆ ತಾತ್ಸಾರದ ನೋಟವನ್ನು ಗಮನಿಸಿದ ಮಾಧವ !
ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಳು ಯಶೋದಮ್ಮ. ಬಾಳಂತಿಯ ಸಂಪೂರ್ಣ ಆರೈಕೆಯನ್ನು ಅವಳ ಮಗಳು ಮಾಡಿದಳು ! ಮಗುವಿನ ಉಚ್ಚೆ ಬಟ್ಟೆ ತೊಳೆಯುವುದರಿಂದ, ಬಾಳಂತಿಗೆ ಸ್ನಾನ ಮಾಡಿಸುವವರೆಗೆ ಪ್ರತಿ ಕೆಲಸವೂ ಸುಲೋಚನೆಯದೇ. " ನೀ ಯಾವ ಜನ್ಮದಾಗೆ ನನ್ನವ್ವ  ಆಗಿದ್ಯೇ? " ಎನ್ನುತ್ತಿದ್ದಳು ತಾಯಿ. ಪೂರ್ತಿ ಬೆಳವಣಿಗೆಯಾಗದೆ ಎಂಟೇ ತಿಂಗಳಿಗೆ ಹುಟ್ಟಿದ್ದ ಪುಟ್ಟ ಕಂದನನ್ನು ಸುಲೋಚನೆ ಅದೆಷ್ಟು ಜೋಪಾನ ಮಾಡಿದಳೆಂದರೇ ಮೂರೇ ತಿಂಗಳಲ್ಲಿ ಸುಧಾರಿಸಿದ್ದ. 
ಮಗುವಿಗೆ ಏನು ಹೆಸರಿಡುವುದು ಎಂದು ಎಲ್ಲರೂ ಚರ್ಚಿಸುವಾಗ, "ಶಿವನ ಪ್ರಸಾದ ಇವ್ನು.." ಎಂದಳು ಯಶೋದಮ್ಮ. ಶಿವಪ್ರಸಾದ ಎಂದೇ ಹೆಸರಿಟ್ಟರು. 
ಒಂದು ರೂಪಾಯಿ ದಾನ ಮಾಡು ಎಂದರೂ ಅದರಿಂದೇನು ಪ್ರಯೋಜನ ಎನ್ನುವ ದೇವಪ್ಪ ಮಗ ಹುಟ್ಟಿದ ಖುಷಿಗೆ ಊರಿಡೀ ಸಿಹಿ ಹಂಚಿದ್ದ. 
ಬದುಕಲ್ಲಿ ಮಗನ ಆಗಮನದಿಂದ ದೇವಪ್ಪ ಬಹಳ ಬದಲಾಗಿದ್ದ. ಅಂಗಡಿಯಿಂದ ಬೇಗ ಮನೆಗೆ ಬಂದು ಮೂರು ಮಕ್ಕಳ ಜೊತೆ ಸಮಯ ಕಳೆಯುತ್ತಿದ. 
ಒಮ್ಮೆ ಇದ್ದಕ್ಕಿದ್ದಂತೆ ಮಗನ ಅರೋಗ್ಯ ಹದಗೆಟ್ಟಿದ್ದನ್ನು ಕಂಡು ಯಶೋದಮ್ಮ ಬಹಳ ಕೊರಗಿದಳು. ಊರಲ್ಲಿರುವ ಎಲ್ಲಾ ನಾಟಿವೈದ್ಯರಿಗೆ ಮಗುವನ್ನು ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ. 
ಯಶೋದಮ್ಮ ಮಗು ಉಳಿಯುತ್ತದೆ ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದಳು. 
ಒಮ್ಮೊಮ್ಮೆ ಏನೇನೋ ಬಡಬಡಿಸುತ್ತಿದ್ದಳು. ಹೆಂಡತಿ ಎಲ್ಲಿ ಹುಚ್ಚಿಯಾಗಿಬಿಡುತ್ತಾಳೋ ಎಂಬ ಭಯ ದೇವಪ್ಪನಿಗೆ..!
"ಶಿವ ಸೂಚ್ನೆ ಕೊಡ್ತಿದಾನೆ. ನಾವಿನ್ನೂ ಹರಕೆ ತೀರಿಸಿಲ್ಲ. ಶಿವಪುರಕ್ಕೆ ಹೋಗ್ಬೇಕು .." ನಿಂತಲ್ಲಿ ಕುಂತಲ್ಲಿ,  ಇದೇ ಜಪ. 
ಕೊನೆಗೊಂದು ದಿನ ದೇವಪ್ಪ, "ಆಯ್ತು ಮಾರಾಯ್ತಿ.. ಹೋಗೋಣ..ಅದೇನು ಹರಕೆ ಕಟ್ಕೊಂಡಿದೀಯೋ  ಹೋಗಿ ತೀರಿಸಿ ಬರೋಣ" ಎಂದಿದ್ದ. 
ಅಪ್ಪನ ಮಾತನ್ನು ಕೇಳಿಸಿಕೊಂಡ ಸುಲೋಚನೆ ಆಗಲೇ ಶಿವಪುರಕ್ಕೆ ತಾನೂ ಹೋಗುವ ಬಗ್ಗೆ ಕನಸು ಕಂಡಳು.  
ಅರವತ್ತು ಮೈಲಿ ದೂರ ಪ್ರಯಾಣಿಸುವ ಆಸೆಯೋ, ದೋಣಿಯ ಪ್ರಯಾಣದ ಕುತೂಹಲವೊ, ಮುಂದಿನ ಘಟನೆಗಳ ಸೂಚನೆಯೋ... 
ಅಂದು ರಾತ್ರಿ ಎಷ್ಟೇ ಪ್ರಯತ್ನಿಸಿದರೂ ನಿದ್ರಾದೇವಿಯ ಕೃಪಾಕಟಾಕ್ಷವೇ ದೊರೆಯಲಿಲ್ಲ ಅವಳಿಗೆ..!!

Sunday, July 12, 2020

ಮತ್ತೆ ಕಾಡಿದ ಮಳೆಯ ನೆನಪು - 1



(ಮಳೆ ಮತ್ತು ಮನಸ್ಸಿಗೆ ಅವಿನಾಭಾವ ಸಂಬಂಧ. ಕೆಲವರಿಗೆ ಖುಷಿ, ಕೆಲವರಿಗೆ ನೋವು ಹತಾಶೆ, ಖಿನ್ನತೆಯ ಬಿಂಬವದು. ಅಂಥ ಒಂದು ವಿಭಿನ್ನ ಮನಸ್ಥಿತಿಯ ಕಥೆಯೊಂದಿಗೆ.. ಒಂದಿಡೀ ಊರಿನ ಕಥೆಯೂ ಸುತ್ತುವುದು ಇಲ್ಲಿ.  ಇದು 'ಮತ್ತೆ ಕಾಡಿದ ಮಳೆಯ ನೆನಪು..')
ಸುಲೋಚನಾ ಕುಳಿತಿದ್ದಳು ಜೋರು ಮಳೆಯನ್ನೇ ದಿಟ್ಟಿಸುತ್ತಾ. ಐವತ್ತರ ಆಸುಪಾಸಿನಲ್ಲಿದ್ದರೂ ಅರವತ್ತು ದಾಟಿದಂತೆ ಸುಕ್ಕುಗಟ್ಟಿತ್ತು ಮುಖ..!
"ನನ್ನೊಳಗನ್ನು ಅಣಕಿಸುವಂತಿದೆ ಈ ಮಳೆ.. ಒಂದು ನಿಮಿಷವಾದರೂ ಸುಮ್ಮನಾಗಬಾರದೇ.." ತನ್ನಲ್ಲೇ ಗೊಣಗಿಕೊಂಡಳು. 
ಅಷ್ಟರಲ್ಲಿ ಓಡುತ್ತಾ, ಏದುಸಿರು ಬಿಡುತ್ತಾ ಬಂದಳು ಕುಸುಮಾ. 
"ಅತ್ತೆ, ದೇವಸ್ಥಾನಕ್ಕೆ ಹೋಗ್ತೀನಿ ಅಂತಾ ಒಂದು ಮಾತು ಹೇಳಿ ಬರಬಾರ್ದಾ?  ಮನೆಯೆಲ್ಲ ಹುಡುಕಿದೆ. ಹಿತ್ತಲಲ್ಲಿ ಬಟ್ಟೇನೋ, ಪಾತ್ರೆನೋ ತೊಳೀತಾ ಇರ್ಬೋದು ಅಂತಾ ಅಲ್ಲೂ ನೋಡ್ದೆ. ಎಲ್ಲೆಲ್ಲಿ ಅಂತಾ ಹುಡ್ಕೋದು ನಿನ್ನಾ..."
ಒಂದೇ ಉಸಿರಲ್ಲಿ ಹೇಳಿ ಮುಗಿಸಿ, ಹುಸಿ ಮುನಿಸಿನಿಂದ ಮುಖ ಗಂಟಿಕ್ಕಿ, ಕಂಬಕ್ಕೊರಗಿ ನಿಂತಳು. 
"ಮನೇಲಿ ಇಲ್ಲಾ ಅಂದ್ಮೇಲೆ ಇಲ್ಲೇ ಇರ್ತೀನಿ ಅಂತಾ ನಿಂಗೂ ಗೊತ್ತು. ಸೀದಾ ಇಲ್ಲೇ ಬರ್ಬೇಕಿತ್ತು."
"ಹೊ, ಬಂದ್ಬಿಡ್ತೀನಿ. ನಿಂಗೊಂದು ಹಗಲು ರಾತ್ರಿ ಯಾವದೂ ಇಲ್ಲಾ, ಮನ್ಸಿಗೆ ಕಂಡಾಗೆಲ್ಲ ದೇವಸ್ಥಾನಕ್ಕೆ ಬಂದ್ಬಿಡ್ತೀಯಾ ಅಂತಾ, ನಾನೂ ಹಾಗೇ ಅಂದ್ಕೊಂಡಿದೀಯ? " ಎನ್ನುತ್ತಾ ಕೈ ಬೆರಳ ತುದಿಯಲ್ಲಿ ಲಂಗವನ್ನು ಹಿಡಿದು, ಮೆಟ್ಟಿಲು ಇಳಿಯುತ್ತಿದ್ದಳು. 
"ಅಲ್ವೇ, ಹೊಸ ಲಂಗ, ಹೊಸ ಗೆಜ್ಜೆ ಎಲ್ಲ ಹಾಕ್ಕೊಂಡು ಈಗೆಲ್ಲಿ ಹೊರಟಿದಿಯೇ? "
"ನಿಂಗೆ ತೋರ್ಸೋಣ ಅಂತಾ ಬಂದೆ. ನೀನು ಇಲ್ಲಿದೀಯ..ಈಗ ಊರಿಗೆಲ್ಲ ತೋರಿಸ್ಕೊಂಡು ಬಂದಂಗೆ ಆಯ್ತು."  ಲಂಗ ಮೇಲೆತ್ತಿಕೊಂಡು, ಕಾಲನ್ನು ಕಲ್ಯಾಣಿಯ ನೀರಲ್ಲಿ ಇಳಿಬಿಟ್ಟಳು. 
ಅವಳ ಕೋಪ ಇನ್ನೂ ತಣಿದಿಲ್ಲ ಎಂದು ಅರಿವಾಗಿ ಸುಲೋಚನಾ ಮುಗುಳ್ನಕ್ಕಳು. 
"ನಾನೆಲ್ಲೋ ನಿನ್ನ ನೋಡೋಕೆ ಗಂಡು ಬಂದಿತ್ತು ಅಂದ್ಕೊಂಡೆ ಕುಸುಮಬಾಲೆ..." 
ಕುಸುಮಳ ಕೋಪ ಪೂರ್ತಿ ಇಳಿದು, ಅತ್ತೆಯತ್ತ ತಿರುಗಿ ನಕ್ಕಳು. ಇಡೀ ಊರಲ್ಲಿ 'ಕುಸುಮಬಾಲೆ' ಎಂದು ಕರೆಯುವುದು ಅತ್ತೆ ಮಾತ್ರ..! ಅವಳು ಕರೆದಾಗಲೆಲ್ಲ ಇವಳ ಕೋಪ ಮಾಯವಾಗುತ್ತಿತ್ತು. 
'ಹುಚ್ಚು ಹುಡುಗಿ, ಎಷ್ಟು ಬೇಗ ಕೋಪ ಬರುತ್ತದೊ, ಅಷ್ಟೇ ಬೇಗ ಇಳಿಯುತ್ತದೆ' ಮನದಲ್ಲೇ ಹೇಳಿಕೊಂಡಳು. 
ಸುಲೋಚನಳಿಗೆ ಕುಸುಮಾ ಸಂಬಂಧವೇನಲ್ಲ. ಹಾಗೆ ನೋಡಿದರೆ ಅವಳಿಗೆ ಆ ಊರಿನಲ್ಲಿ ಸಂಬಂಧಿಕರೇ ಇರಲಿಲ್ಲ. 
ಆದರೂ ಅಲ್ಲಿ ಅನ್ಯೋನ್ಯತೆಗೇನು ಕೊರತೆಯಿರಲಿಲ್ಲ. ಪಕ್ಕದ ಮನೆ, ಹಿಂದಿನ ಮನೆ, ಮೇಲಿನ ಮನೆ.. ಎಲ್ಲರ ಮನೆಯ ಮಕ್ಕಳೂ ಸುಲೋಚನೆಗೆ ಅತ್ತೆ ಎಂದೇ ಕರೆಯುತ್ತಾರೆ. ಹಬ್ಬ-ಹರಿದಿನಗಳಿಗೆಲ್ಲ ಊರವರೆಲ್ಲ ಕರೆಯುತ್ತಾರೆ. ಎಲ್ಲರಿಗೂ ಅವಳ ಕೈರುಚಿ ಬಹಳ ಪ್ರಿಯ. 
ಚಕ್ಕುಲಿ, ಕೋಡುಬಳೆ, ಚುರುಮುರಿ,ಲಡ್ಡು, ಪಾಯಸ.. ಏನು ಮಾಡಿದರೂ ಎಲ್ಲ ಮಕ್ಕಳನ್ನು ಕರೆದುಕೊಡುತ್ತಾಳೆ. 
"ಏನು ಸುಲೋಚನಕ್ಕಾ, ನಮ್ಗೆಲ್ಲಾ ಇಲ್ವಾ? ಮಕ್ಳು ಮಾತ್ರ ಕಾಣ್ತಾರ ನಿಂಗೆ?" 
ಮಕ್ಕಳ ಅಪ್ಪ-ಅಮ್ಮಂದಿರು ಪ್ರೀತಿಯಿಂದ ದೂರುತ್ತಾರೆ. 
ಅವರೆಲ್ಲರಲ್ಲಿ ಕುಸುಮಾ ಎಂದರೆ ಅಚ್ಚುಮೆಚ್ಚು ಸುಲೋಚನಳಿಗೆ. ಪಕ್ಕದ ಮನೆಯವಳಾದರೂ, ಬುದ್ಧಿ ಬಂದಾಗಿನಿಂದ ಇಲ್ಲಿಯವರೆಗೂ ಖುಷಿಯಾಗಲಿ, ಬೇಸರವಾಗಲಿ, ಕೋಪಬರಲಿ, ಸೀದಾ ಸುಲೋಚನಳ ಮನೆಗೇ ಬಂದು ಕೂರುತ್ತಿದ್ದ ಹುಡುಗಿ ಅದು. 
ಇಪ್ಪತ್ತರ ಹರೆಯದ ಹುಡುಗಿ, ಹುಟ್ಟಿದಹಬ್ಬಕ್ಕೆ ಕೊಡಿಸಿದ ಹೊಸ ಲಂಗ,ಗೆಜ್ಜೆ ಹಾಕಿಕೊಂಡು ಅತ್ತೆಗೆ ತೋರಿಸಲೆಂದು ಊರೆಲ್ಲ ಸುತ್ತಿ ಬಂದಿದ್ದಳು. 
ಹಂಸ ಪಾದ, ಚಿಗುರು ಬೆರಳುಗಳು, ಉಗುರಿಗೆಲ್ಲ ಗೋರಂಟಿಯ ರಂಗು.. ಈಗ ಅವಳ ಪ್ರತಿ ಹೆಜ್ಜೆಗೂ ಝೇಂಕಾರವೆಂಬಂತೆ ಫಳ-ಫಳನೆ ಹೊಳೆಯುವ ಗೆಜ್ಜೆ.. 
ಅದರ ಮೇಲೆ ಝರಿ ಪಟ್ಟೆಯ ಕೆಂಪು ಲಂಗ , ಹಸಿರು ರವಿಕೆ, ಕೈಗೆ ಕೆಂಪು ಬಳೆಗಳು, ಹಣೆಗೆ ಕೆಂಪು ಬೊಟ್ಟು, ಕಂಡೂ ಕಾಣದಂತೆ, ಆಗಾಗ ಹೊಳೆಯುವ ಬಿಳಿಯ ಹರಳಿನ ಮೂಗುತಿ. 
ಇವೆಲ್ಲಕ್ಕೂ ಕಳಶವಿಟ್ಟಂತೆ ದಟ್ಟ ಕಪ್ಪಿನ ನೀಳ ಕೇಶ ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಒಮ್ಮೊಮ್ಮೆ ತನ್ನ ಕೂದಲ ಮೇಲೂ ಕೋಪಿಸಿಕೊಳ್ಳುತ್ತ, "ಏನು ಕೂದ್ಲೋ ಇದು.. ಸರ್ಯಾಗಿ ಜಡೆ ಹಾಕೋಕು ಬರಲ್ಲ. ಕುತ್ತ್ಗೆ ಎಲ್ಲ ನೋವು ಬಂದ್ಬಿಡ್ತು." ಎಂದು ಗೊಣಗಿಕೊಳ್ಳುತ್ತಾಳೆ. ಅವಳ ಅಮ್ಮ ಕೂದಲು ಬಾಚುವಾಗ ಜಡೆಯ ಜಗಳ ತಾರಕಕ್ಕೇರಿ ಬಿಚ್ಚಿದ ಕೂದಲಲ್ಲಿ ಓಡಿ ಬರುತ್ತಿದ್ದಳು,ಬಾಗಿಲಲ್ಲೇ  "ಅತ್ತೆ, ಜಡೆ ಹಾಕ್ಕೊಡು..." ಎಂದು ಕೂಗುತ್ತಾ. 
ಜಡೆ ಹಾಕುತ್ತ ಕಥೆ ಹೇಳಬೇಕು. ಮಧ್ಯೆ ಮಧ್ಯೆ ಅತ್ತೆ.. ಎಂಬ ರಾಗ ಬೇರೆ. 
ಒಮ್ಮೆ ಸುಲೋಚನ ಹೇಳಿದ್ದಳು - "ನೀನು ಹೀಗೇ ಅತ್ತೆ ಅತ್ತೆ ಎನ್ನುತ್ತಿರು, ನಿನ್ನನ್ನೇ ಸೊಸೆ ಮಾಡಿಕೊಳ್ತೀನಿ."
"ಏನಂದೆ ಅತ್ತೆ? "
"ನನ್ನ ಮಗನಿಗೆ ನಿನ್ನಾ ಕೊಡೋಕೆ ಹೇಳ್ತಿನಿ ನೋಡು ನಿಮ್ಮಪ್ಪನ ಹತ್ರಾ.."
"ಅದ್ನಾದ್ರೂ ಮಾಡು ಅತ್ತೆ..ಆದ್ರೆ ನಿನ್ಮಗ ಪೇಟೆಲಿ ಉಳಿತಾನೆ ಅಂದ್ರೆ ನಾ ಹೋಗಲ್ಲ. ಇಲ್ಲೇ ನಿಂಜೊತೆ ಇದ್ದುಬಿಡ್ತೀನಿ."
"ಯೇ ಹುಡುಗಿ, ಒಂಚೂರು ನಾಚ್ಕೆ ಇಲ್ವಲ್ಲೇ ನಿಂಗೇ.."
ತಲೆಗೆ ತಿವಿದಳು. 
"ಆಹ್.. ಅತ್ತೆ..!! 
ಯಾಕತ್ತೆ ನಾಚ್ಕೆ? ನಂಗೆ ಹೆಂಗೂ ಬೇರೆ ಊರಿಗೆ ಹೋಗೋ ಮನ್ಸಿಲ್ಲ. ನಿನ್ಮಗನ್ನೇ ಮದ್ವೆ ಆದ್ರೆ ಅಪ್ಪನ ಮನೆ - ಗಂಡನ ಮನೆ ಅಕ್ಕ-ಪಕ್ಕ ಇರತ್ತೆ. ಅತ್ತೆ -ಸೊಸೆ ಜಗಳ ಅಂತೂ ಇರೋದೇ ಇಲ್ಲ. ಅಪ್ಪಿ-ತಪ್ಪಿ ಮನು ಜೊತೆಗೆ ಜಗಳ ಮಾಡ್ತಿನೇನೋ.. ನಿಂಜೊತೆ ಅಂತೂ ಮಾಡಲ್ಲ.. ಯೋಚ್ನೆ ಮಾಡು, ಗಂಡನ ಜೊತೆ ಹೋಗಲ್ಲ ಅತ್ತೆ ಜೊತೇನೆ ಇರ್ತೀನಿ ಅನ್ನೋ ಅಂಥಾ ಒಳ್ಳೆ ಸೊಸೆ ಬೇರೆಲ್ಲಿ ಸಿಗ್ತಾಳೆ ನಿಂಗೆ? "
"ಹೌದಮ್ಮ ಹೌದು..ನಾನು ನಿಂಗೆ ಜಡೆ ಹಾಕ್ತಿನಿ, ನೀನು ನಿನ್ನ ಮಗಳಿಗೆ ಹಾಕು.."
ಅವಳ ಜಡೆಯನ್ನು ನೋಡುತ್ತಾ, ಈ ಯೋಚನೆಯಲ್ಲಿ ಮುಳುಗಿದ್ದ ಸುಲೋಚನಾ ಕುಸುಮಾಳನ್ನು ನೋಡಿ, "ಯೇ ಹುಡುಗಿ, ಮಳೇಲಿ ನೆನಿಬೇಡ್ವೆ. ಶೀತ ಆದ್ರೆ ಏನು ಮಾಡ್ಬೇಕು? ಈ ಕಡೆ ಬಾ.."
"ಏನತ್ತೆ ನೀನು?  ನಮ್ಮಮ್ಮನ ಹಾಗೇ ಆಡ್ಬೇಡ. ನಿಂಗೆ ಈ ಕಲ್ಯಾಣಿ ಕಟ್ಟೆ ಎಷ್ಟು ಇಷ್ಟಾನೋ, ನಂಗೂ ಮಳೆ ಅಂದ್ರೆ ಅಷ್ಟೇ ಇಷ್ಟ.." ಮತ್ತೆ ನೀರಲ್ಲಿ ಕಾಲಾಡಿಸಿದಳು. 
"ಕಾಲನ್ನ ನೀರಲ್ಲಿ ಬಿಡಬೇಡವೆ.. ಕಲ್ಯಾಣಿ ನೀರನ್ನೇ ಶಿವನ ಅಭಿಷೇಕಕ್ಕೆ ಬಳ್ಸೋದು ಆಲ್ವಾ.."
"ಅಯ್ಯೋ.. ನಿನ್ನ ಪುರಾಣ ಮುಗ್ಯೋದೆ ಇಲ್ಲಾ.. ನಾನು ಮನೆಗೆ ಹೋಗ್ತೀನಿ, ಬರೋದಿದ್ರೆ ಬಾ.."
ಎದ್ದು ಕಾಲಪ್ಪಳಿಸುತ್ತ ನಡೆದಳು.
 "ಹೊಸ ಗೆಜ್ಜೆ ಅಂತ ಗೊತ್ತಿದೆ.. ನಿಧಾನ ಹೋಗೇ ಕುಸ್ಮಾ.." ಎಂದು ನಕ್ಕಳು ಸುಲೋಚನೆ.
ಕುಸುಮಳನ್ನು ನೋಡಿದಾಗಲೆಲ್ಲ ತನ್ನ ಬಾಲ್ಯವೇ ನೆನಪಾಗುತ್ತಿತ್ತು ಅವಳಿಗೆ. 
ಇಲ್ಲಿಯ ಹಾಗೆಯೇ ನಮ್ಮೂರಲ್ಲೂ ಅದೆಂಥ ಮಳೆ. ಅಬ್ಬಾ..ಗದ್ದೆಗಳೆಲ್ಲ ತುಂಬಿ, ಒಂದು ಹೊಳೆಯಾಗಿಬಿಡುತ್ತಿತ್ತು. ಇಡೀ ದಿನವೂ ಧೋ ಎಂಬ ಮಳೆಯೇ.. ಹಿತ್ತಲಲ್ಲಿ ಕಲ್ಲಿನ ಒಲೆಗೆ ಬೆಂಕಿ ಒಟ್ಟಬೇಕು. ಅಪ್ಪ, ಚಿಕ್ಕಪ್ಪ ಎಲ್ಲ ಗದ್ದೆಯಿಂದ ಬಂದ ತಕ್ಷಣ ಒದ್ದೆಯಾದ ಕಂಬಳಿ ಕೊಪ್ಪೆಯನ್ನು ಒಣಗಿಸುತ್ತಿದ್ದರು. ಅವರ ಸ್ನಾನಕ್ಕೆ ನೀರು ಬಿಸಿ ಮಾಡಬೇಕಿತ್ತು. ಒಮ್ಮೊಮ್ಮೆ ಜೋರು ಗಾಳಿಗೆ ದೊಡ್ಡ ಮರವೊಂದು ಧರೆಗುರುಳಿದರೆ ಊರ ಗಂಡಸರೆಲ್ಲ ಓಡಬೇಕಿತ್ತು. ಕುಸುಮ ಹೇಳಿದಂತೆ ಮಳೆ ಎಂದಿಗೂ ಇಷ್ಟವಾಗಲಿಲ್ಲ ನನಗೆ. 
ಸುಲೋಚನೆ ನಿಧಾನವಾಗಿ ಕಂಬಕ್ಕೆ ಬೆನ್ನೊರಗಿಸಿ ಕುಳಿತು, ಕಲ್ಯಾಣಿಗೆ ಬಿದ್ದ ಹನಿಯನ್ನು ದಿಟ್ಟಿಸತೊಡಗಿದಳು.  ತನ್ನ ಹಳೆಯ ನೆನಪುಗಳಿಗೆ ಜಾರಿದಳು. ಕಣ್ಣಂಚಿಂದ ಕೆನ್ನೆಯ ಮೇಲೆ ಎರಡು ಹನಿಗಳು ಇಳಿದವು. 
ಮಳೆಗಾಲ ಅದೆಷ್ಟು ಸಂಕಷ್ಟಗಳ ಜಾಲ...

Saturday, June 27, 2020

ಪ್ರತಿಜ್ಞೆ


ಮದುಮಗಳಂತೆ ಸುಂದರವಾಗಿ ಅಲಂಕೃತವಾಗಿತ್ತು ಆ ಕಟ್ಟಡ . ಆದರೆ ಒಳಗೆ ಅನಿರ್ವಚನೀಯ ಮೌನ , ಯಾರೆಂದರೆ ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ . ಅದು ತ್ರಿಕಾಲಪುರಿಯ ಪ್ರೌಢಶಾಲೆ , ಅಂದು ಅಲ್ಲಿನ ಹತ್ತನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭ . ( ವೇದಿಕೆ ಸಿದ್ಧವಾಗಿತ್ತು , ಎಲ್ಲರೂ ಆಸೀನರಾಗಿದ್ದರು . ಆದರೆ  ಕಣ್ತುಂಬುವ ಸಂದರ್ಭ . ಮದುವೆಯಾಗಿ  ತವರಿನಿಂದ ಗಂಡನಮನೆಗೆ ಹೊರಡುವ ವಧುವಿನ ಸ್ಥಿತಿಯಲ್ಲಿ ಮಕ್ಕಳು ! 
ಈ ನಂಟು ಕೇವಲ ಮೂರೇ ವರ್ಷದ್ದಿರಬಹುದು , ಆದರೆ ನೂರು ವರ್ಷವಾದರೂ ಮಾಸದ ಸ್ನೇಹದ ಬುತ್ತಿ ; ನೆನಪಿನಂಗಳ. ನೆಚ್ಚಿನ ಮಿತ್ರರ , ಶಿಕ್ಷಕರ ಹಸ್ತಾಕ್ಷರ ಹಾಳೆಯಲ್ಲಿ ಅಷ್ಟೊತ್ತಿದ್ದರೆ , ಅವರ ನಗುಮುಖ . ಎಂದೂ ಅಳಿಸದಂತೆ ಮನದಲ್ಲಿ ಮೂಡಿತ್ತು . ಪ್ರತಿ ವರ್ಷವೂ ಇದೇ ಸ್ಥಿತಿಯಾದರೂ , ಬೇಸರ ಮಾತ್ರ ತಪ್ಪದು . 
ಎಲ್ಲಾ ಮಕ್ಕಳಿಗೂ ಮೋಹನ್ ಸರ್ ಕಂಡರೆ ಗೌರವ , ಪ್ರೀತಿ . ಅವರ ಮಾತಿಗಾಗಿ ಕಾಯುತ್ತಿದ್ದವರೆಲ್ಲರಿಗೂ ಅವರ ಸುಳಿವೇ ಸಿಗಲಿಲ್ಲ . ಕೊನೆಯಲ್ಲಿ ತಮ್ಮೊಡನೆ ನಡೆಯಲೂ ಕಷ್ಟಪಡುತ್ತಿದ್ದ ಒಬ್ಬ ವೃದ್ಧನನ್ನು ಮೋಹನ್ ಸರ್  ಕರೆತಂದಾಗ ಎಲ್ಲರಿಗೂ ಆಶ್ಚರ್ಯ ! 
ಮೋಹನ್ ಸರ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು . ಏಕೆಂದರೆ ಅವರು ಕೇವಲ ಶಿಕ್ಷಕನಾಗಿರಲಿಲ್ಲ , ಎಲ್ಲ ಮಕ್ಕಳಿಗೂ ಗೆಳೆಯನಾಗಿದ್ದರು . ಪ್ರತಿದಿನವೂ ಎಲ್ಲರೊಡನೆ ನಗುತ್ತ ,ನಗಿಸುತ್ತಿದ್ದರು . ಇಂದು ಅವರ ಮುಖದಲ್ಲಿ ಎಂದೂ ಕಾಣದ ಗಾಂಭೀರ್ಯ . ವೇದಿಕೆಗೆ ಬಂಧು ತಮ್ಮ ಮಾತನ್ನು ಪ್ರಾರಂಭಿಸಿದರು .
 “ ಪ್ರೀತಿಯ ಮಕ್ಕಳೆಲ್ಲರಿಗೂ ಶುಭದಿನ . ನೀವು ನಮ್ಮನ್ನು ಬಿಟ್ಟು ಹೋಗುತ್ತಿದ್ದೀರಿ ಎಂಬ ನೋವಿಗಿಂತ , ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಒಂದು ಹೆಜ್ಜೆ ಮುಂದಿಡುತ್ತಿದ್ದೀರಿ ಎಂಬ ಖುಷಿಯಿದೆ . ಎಷ್ಟೋ ಮಂದಿ ದೊಡ್ಡ ಕನಸುಗಳನ್ನು ಹೊತ್ತಿದ್ದೀರಿ . ಎಲ್ಲವೂ ಈಡೇರಲಿ ಎಂದು ನಾನು ಹಾರೈಸುತ್ತೇನೆ . ಮುಂದೊಂದು ದಿನ ಇವರು ನನ್ನ ಶಿಷ್ಯರು ಎಂದು ನಾನು ಎಲ್ಲರೆದುರು ಹೆಮ್ಮೆಯಿಂದ ಹೇಳುವ ಹಾಗೆ ನೀವೆಲ್ಲ ಗೌರವಯುತವಾಗಿ ಬಾಳಿರಿ , ಈ ದಿನ ನಾನು ನಿಮಗೆಲ್ಲ ಒಂದು ಕಥೆ ಹೇಳಬೇಕೆಂದು ಸಿದ್ಧನಾಗಿ ಬಂದಿದ್ದೇನೆ . ಪ್ರತಿ ದಿನವೂ ಪಾಠ , ಈ ದಿನವೂ ಬೇಕಾ ಎಂದು ಭಾವಿಸಬೇಡಿ . 
ಶೇಷಾಚಲವೆಂಬ ಒಂದು ಸಣ್ಣ ಹಳ್ಳಿ . ಅಲ್ಲಿ ಒಂದು ಶಾಲೆ , ಸುಮಾರು ಮೂವತ್ತು ವಿದ್ಯಾರ್ಥಿಗಳು . ಆಗೆಲ್ಲ ಶಾಲೆಗೆ ಬರುವ ಮಕ್ಕಳ ಸಂಖ್ಯೆ ವಿರಳ . ಅದರಲ್ಲೂ ಹಣ್ಣುಮಕ್ಕಳಿಗಂತೂ ಶಾಲೆ ಹೇಗಿರುತ್ತದೆಂದೇ ಗೊತ್ತಿರಲಿಲ್ಲ . ಇಡೀ ಶಾಲೆಗೆ ಒಬ್ಬರೇ ಶಿಕ್ಷಕ , ಶ್ಯಾಮಸುಂದರ ಎಂದು ಅವರ ಹೆಸರು . ಕೇವಲ ಐದನೇ ವರ್ಗದವರೆಗಿನ ಶಿಕ್ಷಣ ಸೌಲಭ್ಯವಿದ್ದ ಶಾಲೆಯಲ್ಲಿ , ಅದೂ ಕೇವಲ ಮೂವತ್ತು ಮಕ್ಕಳಿಗೆ ಪಾಠ ಮಾಡಲು ಒಬ್ಬ ಶಿಕ್ಷಕ ಸಾಕು . 
ಶ್ಯಾಮಸುಂದರರ ಪತ್ನಿ ಅನ್ನಪೂರ್ಣ , ಸಾಕ್ಷಾತ್ ಅನ್ನಪೂರ್ಣೆಯೇ ! ಇನ್ನೊಬ್ಬರಿಗೆ ಕೈಲಾದಷ್ಟು ಸಹಾಯ ಮಾಡುವುದು ಇಬ್ಬರ ಮನೋಭಾವ , ಅವರ ಮದುವೆಯಾಗಿ ಎಂಟು ವರ್ಷಗಳಾಗಿತ್ತು . ಮೂವರು ಗಂಡು ಮಕ್ಕಳು . ಸುಖೀಸಂಸಾರ ! ಶ್ಯಾಮಸುಂದರರಿಗೆ ಶಾಲೆಯೇ ಎಲ್ಲ.  ವಿದ್ಯಾರ್ಥಿಗಳೆಲ್ಲ ಸ್ವಂತಮಕ್ಕಳಿಗಿಂತ ಹೆಚ್ಚು . ತಾವು ಕಷ್ಟದಲ್ಲಿದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಸಂಬಳವನ್ನೆಲ್ಲ ಖರ್ಚು ಮಾಡುತ್ತಿದ್ದರು . ಹೆಣ್ಣುಮಕ್ಕಳಿಗೂ ವಿದ್ಯೆ ಕೊಡಿಸಬೇಕೆಂದು ಹಣವನ್ನೆಲ್ಲ ಖರ್ಚು ಮಾಡುತ್ತಿದ್ದ ಶ್ಯಾಮಸುಂದರರಿಗೆ ಯಾರೊಬ್ಬರ ಬೆಂಬಲವೂ ಸಿಗಲಿಲ್ಲ . ಆದರೂ ಅವರ ಹೋರಾಟ ಮುಂದುವರಿಯುತ್ತಿತ್ತು . ತಮ್ಮ ಹೆಂಡತಿಗೂ ತಾವೇ ಅಕ್ಷರಾಭ್ಯಾಸ ಮಾಡಿಸಿದರು . ಕಲಿಯುವಾಗ ಅನ್ನಪೂರ್ಣಳಿಗೆ ಮನಸ್ಸಿಲ್ಲದಿದ್ದರೂ ತನ್ನ ಮಕ್ಕಳಿಗೆ ಹೇಳಿಕೊಡುವಾಗ , ವಿದ್ಯೆಯ ಮಹತ್ವದ ಅರಿವಾಯಿತು . ಇಷ್ಟೆಲ್ಲ ಆದರೂ ತಿಂಗಳ ಕೊನೆಯಲ್ಲಿ ಮಕ್ಕಳಿಗೆ ಗಂಜಿ , ಹೆತ್ತವರಿಗೆ ಮಡಿಕೆಯಲ್ಲಿನ ತಂಪಾದ ನೀರು ಹೊಟ್ಟೆ ತುಂಬಿಸುತ್ತಿದ್ದವು . ಗಣೇಶ ಹಬ್ಬಕ್ಕೆ ಗೌರೀಶನಿಗೆ ಬಟ್ಟೆ ತಂದರೆ , ದೀಪಾವಳಿಯಲ್ಲಿ ಮಹೇಶನಿಗೆ ಯುಗಾದಿಯಲ್ಲಿ ಸುರೇಶನಿಗೆ . ಆದರೆ ಶ್ಯಾಮಸುಂದರರ ಬಳಿಯಿದ್ದದ್ದು ಎರಡು ಪಂಚೆ , ಎರಡು ಅಂಗಿ , ಒಂದು ಜೊತೆ ಚಪ್ಪಲಿ. ಅನ್ನಪೂರ್ಣಮ್ಮಳ ಬಳಿ ಒಂದು ಮದುವೆ ಸೀರೆ , ಎರಡು ನಿತ್ಯದ ಸೀರೆಗಳಷ್ಟೇ . ಅಂತೂ ಹೇಗೋ ಅಲ್ಲಲ್ಲಿ ತೂರಾಡುತ್ತಾ , ತೂತು ಬಿದ್ದಲ್ಲಿ ತೇಪೆ  ಹಾಕುತ್ತ ಸಂಸಾರನೌಕೆ ಸಾಗುತ್ತಿತ್ತು . 
ಮಕ್ಕಳು ಶಾಲೆಗೆ ಹೋಗುವಷ್ಟು ದೊಡ್ಡವರಾದಾಗ , ಮೊಟ್ಟಮೊದಲ ಬಾರಿ ಅನ್ನಪೂರ್ಣ ಗಂಡನ ಬಳಿ ಗಟ್ಟಿಯಾಗಿ ಮಾತನಾಡಿದಳು. "ನಿಮಗಾಗಿ ಅಲ್ಲದಿದ್ದರೂ ನಿಮ್ಮ ಮಕ್ಕಳಿಗೋಸ್ಕರವಾದರೂ  ಸಂಬಳವನ್ನು ಉಳಿಸಿ , ಮೂರು ಜನರ ವಿದ್ಯಾಭ್ಯಾಸಕ್ಕೆ ಎಷ್ಟು ಖರ್ಚಾಗಬಹುದೆಂದು ನಿಮಗೆ ನಾನು ಹೇಳಬೇಕಿಲ್ಲ . ಬೇರೆ ಮಕ್ಕಳಿಗೆ ನೀವು ಸಹಾಯ ಮಾಡಿದರೆ ನಿಮ್ಮ ಮಕ್ಕಳ ಭವಿಷ್ಯವೇನು ? ಅವರಿಗೆ ಇನ್ಯಾರಿದ್ದಾರೆ ? ” 
 “ ಹೌದಲ್ಲವೇ  , ಮೂವರು ಬೆಳೆಯುವ ಹುಡುಗರು . ಓದು , ಬಟ್ಟೆ ಎಂದು ಖರ್ಚು ಇರುತ್ತದೆ . ನನಗೇಕೆ ಹೊಳೆಯಲಿಲ್ಲ , ಇರಲಿ ಅನ್ನಪೂರ್ಣ ನೀನು ಹೇಳಿದ್ದು ಒಳ್ಳೆಯದೇ ಆಯಿತು . ಇನ್ನು ಮುಂದೆ ಈ ನೂರು ರೂಪಾಯಿ ಸಂಬಳದಲ್ಲಿ ಅರ್ಧ ನನ್ನ ಮಕ್ಕಳಿಗೂ ಇನ್ನರ್ಧ ನಮ್ಮ ಮಕ್ಕಳಿಗೂ ಎತ್ತಿಡುತ್ತೇನೆ ” ಎಂದು ಹೇಳಿ ಹೊರನಡೆದರು . ನನ್ನ ಮಕ್ಕಳಿಗೂ - ನಮ್ಮ ಮಕ್ಕಳಿಗೂ ಇರುವ ವ್ಯತ್ಯಾಸ ಹತ್ತು ವರ್ಷ ಸಂಸಾರ ತೂಗಿಸಿದವಳಿಗೆ ಅರ್ಥವಾಗದೇ ಇರದು !
 ಹುಡುಗು ಬುದ್ಧಿಯ ಮಕ್ಕಳು , ಕಷ್ಟವೆಂದರೆ ಏನೆಂದು ಅರಿಯದ ವಯಸ್ಸು . ಇನ್ನೊಬ್ಬರ ಬಳಿಯಿರುವ ಬಟ್ಟೆ , ಆಟದ ವಸ್ತುಗಳು ತನಗೂ ಬೇಕೆನ್ನುವ ಮನಸ್ಸು , ಆ ಮಕ್ಕಳಿಗೆ ತಂದೆಯೆಂದರೆ ಏನೋ ಭಯ , ಗೌರವ . ಶಾಲೆಯಿಂದ ಬಂದ ನಂತರ ಪ್ರತಿದಿನ ಗೌರೀಶ , ಮಹೇಶನದ್ದು ಒಂದೇ ಮಾತು , ' ಅಮ್ಮಾ ಅವರ ಬಳಿ ಒಳ್ಳೆಯ ಬಟ್ಟೆ , ಚೀಲ , ಪುಸ್ತಕಗಳಿವೆ . ನಮ್ಮ ಬಳಿ ಏಕಿಲ್ಲ ? ಅಪ್ಪನೂ ದುಡಿಯುತ್ತಾರಲ್ಲಮ್ಮ , ನಮಗೂ ಕೊಡಿಸಬಹುದಲ್ಲ .... ' ಆ ತಾಯಿಗೆ ಮಾತೇ ಹೊರಡದು . ಇವರಿಬ್ಬರೋ  ಸರಿ , ಆದರೆ ಸುರೇಶ?     ಹಿರಿಯರಿಬ್ಬರ ಬಟ್ಟೆ  ಅವನಿಗೆ. ಅವನ ಪ್ರಶ್ನೆಗಳೆಷ್ಟಿರಬೇಡ... ಅಬ್ಬಬ್ಬಾ...!   ಆದರೆ ಅಮ್ಮನ ಬಾಡಿದ ಮುಖ ಅವನ ಪ್ರಶ್ನೆಗಳಿಗೆ ಕಡಿವಾಣ ಹಾಕುತ್ತಿತ್ತು . ಅವಳಾದರೂ ಏನು ಮಾಡಿಯಾಳು.ತನ್ನ ಮಾತನ್ನು ಗಂಡ ಕೇಳುವುದಿಲ್ಲ ಎಂದು ಗೊತ್ತು. ಅವರೇನು ಬದಲಾಗಿರಲಿಲ್ಲ.  ಅದೇ ಸಹಾಯ , ಅದೇ ಹೋರಾಟ .. ಮದುವೆಯಾದಾಗಿನಿಂದ ನೋಡುತ್ತಿರುವ ಅದೇ ವ್ಯಕ್ತಿತ್ವ..!
 ಗೌರೀಶ ಐದನೇ ತರಗತಿ ಮುಗಿಸಿ, ಪಕ್ಕದೂರಿನ  ಪ್ರೌಢಶಾಲೆಗೆ ನಾಲ್ಕು ಕಿಲೋಮೀಟರ್ ನಡೆಯುತ್ತಿದ್ದ;  ಎರಡು ವರ್ಷಗಳ ನಂತರ ಮಹೇಶ , ಮತ್ತೆ ಮೂರು ವರ್ಷಗಳ ಸುರೇಶ ಅದೇ ದಾರಿ ಹಿಡಿದರು. ಅಷ್ಟರಲ್ಲಿ ಶ್ಯಾಮಸುಂದರರ ಕೂದಲು ನೆರೆದಿತ್ತು . ಗೌರೀಶನ ಪ್ರೌಢಶಾಲೆ ಮುಗಿದಿತ್ತು . 
ಒಳ್ಳೆಯ ಅಂಕಗಳೂ ಬಂದಿದ್ದವು. ಅವನಿಗೆ ವಿಜ್ಞಾನಿಯಾಗಬೇಕೆಂಬ ಹಂಬಲವಿತ್ತು . ಆದರೆ ಮುಂದಿನ ವಿದ್ಯೆ ಬೆಂಗಳೂರಿನಲ್ಲಿ ಮಾತ್ರ ಸಾಧ್ಯ . ಬೆಂಗಳೂರು ಎಂದರೆ ಖರ್ಚಿಗೆ ಇನ್ನೊಂದು ಹೆಸರು . ಏನೇ ಆದರೂ ವಿದ್ಯೆ ಬೇಕಲ್ಲವೆ ? ಮಗನ ಆಸೆ ಈಡೇರಿಸಲಾಗದಿದ್ದರೆ ತಂದೆಯಾಗಿದ್ದಾದರೂ ಯಾವ ಸಂಭ್ರಮಕ್ಕೆ ? ... " ಸರಿಯಪ್ಪ , ನಿನ್ನ ಓದಿಗೆ ನೀನು ಸಿದ್ಧನಾಗು , ಹಣದ ಬಗ್ಗೆ ಏನೂ ಚಿಂತಿಸಬೇಡ , ನಾನಿದ್ದೇನೆ . ”  ಎಲ್ಲ ತಂದೆಯರೂ ತಮ್ಮ ಮಕ್ಕಳಿಗೆ ನೀಡುವ ಭರವಸೆಯಿದು . ನನ್ನ ಜೊತೆ ಅಪ್ಪನಿದ್ದಾನೆ ಎಂಬುದು ಮಕ್ಕಳ ಧೈರ್ಯ ಕೂಡ.  ಆದರೆ ಅನ್ನಪೂರ್ಣಳ ಮನದಲ್ಲಿರುವ ಪ್ರಶ್ನೆಗೆ ಉತ್ತರಿಸುವವರಾರು ? ಇನ್ನೊಬ್ಬರಿಂದ ಬಿಡಿಗಾಸನ್ನೂ ಪಡೆಯದ ಈ ಸ್ವಾಭಿಮಾನಿಗೆ ಇಂತಹ ಭರವಸೆ ನೀಡುವ ಧೈರ್ಯವಾದರೂ ಎಲ್ಲಿಂದ ಬಂತು ? ಇನ್ನೂ ಇಬ್ಬರು ಮಕ್ಕಳಿದ್ದಾರೆ . ಅವರೂ ಓದಬೇಡವೇ .... ಅವರಿಗೂ ಹಣ ಬೇಕು . ಹಾಗೆಂದು ಗೌರೀಶನ ಕನಸುಗಳಿಗೆ ಕೊಳ್ಳಿಯಿಡುವುದು ಸರಿಯಲ್ಲ . ಇವರೇನು ಮಾಡುತ್ತಾರೆ ? ಅಷ್ಟರಲ್ಲಿ ಶ್ಯಾಮಸುಂದರರ ಕೈಯಲ್ಲಿ ಪತ್ರಗಳಿದ್ದವು . ಎಷ್ಟೋ ವರ್ಷಗಳಿಂದ ಪೆಟ್ಟಿಗೆಯ ಮೂಲೆಯಲ್ಲಿದ್ದ ಮನೆಪತ್ರ ಬೆಳಕು ಕಂಡವು . 
 “ ನಿಮ್ಮ ಬಂದ ಒಂದು ತಂದೆಯವರಿಂದ ಮನೆಯನ್ನೂ ಮಾರಲು ಸಿದ್ಧರಿರುವಿರಾ ? ” 
“ ನನ್ನ ನಂತರ ಮಗನಿಗೇ ತಾನೇ ? ” 
“ ಮತ್ತೆ ಮಹೇಶ , ಸುರೇಶ ? ” 
“ ನಾನು ನೀನು ಇದ್ದೇವಲ್ಲ ... ?"
“ ಆದರೂ ಆಮೇಲೆ ಉಳಿಯುವುದೆಲ್ಲಿ ? " "ಚಿಂತಿಸಬೇಡ , ದೇವರಿದ್ದಾನೆ. ಅವನೆಲ್ಲ ನೋಡಿಕೊಳ್ಳುತ್ತಾನೆ . ”
 ಮಗ ಬೆಂಗಳೂರಿನ ಹಾದಿ ಹಿಡಿದದ್ದಾಯಿತು . ಹೋದವನು ಆರು ತಿಂಗಳಿಗೊಮ್ಮೆ ಬರುತ್ತಿದ್ದ ; ನಂತರ ಅದೂ ಇಲ್ಲ . ಆದರೆ ಅವರ ತಂದೆ ಮಾತ್ರ ಪ್ರತಿತಿಂಗಳೂ ಹಣ ಹೊಂದಿಸಿ ಕಳುಹಿಸುತ್ತಿದ್ದರು . ಆನಂತರ ಮಹೇಶ ಬೆಂಗಳೂರಿಗೆ ಹೊರಟು ನಿಂತಾಗ ಸೈಕಲ್ , ದನ ಕರುಗಳು ಮನೆ ಬಿಟ್ಟವು . 
ಖರ್ಚು ಹೆಚ್ಚಾಯಿತು , ಸಂಪಾದನೆ ಹೆಚ್ಚಾಗಲಿಲ್ಲ . ಹೇಗೋ ಸುರೇಶ ಸಮಯ ಸಿಕ್ಕಿದಾಗಲೆಲ್ಲ ಮನೆಗೆಲಸ ಮಾಡಿ , ಶಾಲೆಗೆ ಹೋಗುತ್ತಿದ್ದ . ಮತ್ತೆರಡು ವರ್ಷಗಳೂ ಚಕ್ರದಂತೆ ಕಳೆದವು , ಅನ್ನಪೂರ್ಣೆಯೂ ಮುಪ್ಪಾದಳು . ಮತ್ತೆ ಅದೇ ಹಾಡು , ಅದೇ ತಾಳ , ಮೂರನೆಯವನೂ ಬೆಂಗಳೂರಿನ ಹಾದಿ ಸವೆಸುವವನೇ ! 
ಈ ಬಾರಿ ಚಿಂತೆಯಾಗಿದ್ದು ಶಾಮ್ಯಸುಂದರರಿಗೆ ಹಣಕ್ಕೇನು ಮಾಡುವುದು ?
 ಅವರ ಕಳವಳ ಮುಖದಲ್ಲಿಯೇ ಗೋಚರವಾಗಿತ್ತು . ಅನ್ನಪೂರ್ಣ ನಗುತ್ತಲೇ ಕತ್ತಿನಿಂದ ಮಾಂಗಲ್ಯಸರ ತೆಗೆದರು . 
“ ನಿನ್ನ ತಂದೆಯವರು ಕೊಟ್ಟಿದ್ದು ಇದು .... ಬೇಡ ಅನ್ನಪೂರ್ಣ . "
“ ಸುಮ್ಮನಿರಿ ನೀವು . ಹಣ ಹೊಂದಿಸಲು ಇನ್ನೇನೂ ಉಳಿದಿಲ್ಲ." 
“ ಆದರೂ .." 
 “ ತೆಗೆದುಕೊಳ್ಳಿ ಇದನ್ನು."
 ಶ್ಯಾಮಸುಂದರರು ಮಾತನಾಡಲಿಲ್ಲ . ಆದರೆ ಕಣ್ಣುಗಳು ಒದ್ದೆಯಾಗಿದ್ದವು . ಮೊದಲ ಗಂಡನ ಅಸಹಾಯಸ್ಥಿತಿಯನ್ನು ನೋಡಿ , ಸೆರಗಂಚಲ್ಲಿ ಕಣ್ಣೊರೆಸಿಕೊಂಡರು ಅನ್ನಪೂರ್ಣಮ್ಮ.  ತುಟಿಯಂಚಲ್ಲಿ ನಗು ಬೀರಿದರು . ನಗುವಲ್ಲಿನ ನೋವು , ಶ್ಯಾಮಸುಂದರರನ್ನು ಹಿಂಡಿತು . ಈ ಇಪ್ಪತ್ತೈದು ವರ್ಷದಲ್ಲಿ ಒಂದು ಜೊತೆ ಬಳೆಯನ್ನೂ ತಂದುಕೊಡಲಾಗದವನ ಜತೆ ಸಂಸಾರ ನಡೆಸಿದವಳ ಮಾಂಗಲ್ಯಸರವನ್ನೂ ಉಳಿಸಿಕೊಳ್ಳಲಾಗದ ದುರ್ಗತಿ. "ನೀವೇಕೆ ಹಿಂಸೆ ಪಡುತ್ತಿದ್ದೀರಿ ? ಸರ ಹೋದರೇನಾಯಿತು ? ಚಿನ್ನದಂತಹ ಪತಿ , ರತ್ನದಂತಹ ಮೂವರು ಮಕ್ಕಳಿದ್ದಾರೆ . ಕಷ್ಟಕ್ಕಾಗದಿದ್ದರೆ ಬಂಗಾರಕ್ಕೂ ಬೆಲೆ ಇಲ್ಲ , ನೋಡುತ್ತಿರಿ , ಮುಂದೆ ನಿಮ್ಮನ್ನು ಮಹಾರಾಜರಂತೆ ನೋಡಿಕೊಳ್ಳುತ್ತಾರೆ . ನಮ್ಮ ಮನೆ , ಮಾಂಗಲ್ಯಸರ ಎಲ್ಲವೂ ಮತ್ತೆ ನಮ್ಮ ಕೈ ಸೇರುವಂತೆ ಮಾಡುತ್ತಾರೆ . ಈಗ ನಮ್ಮ ಕೈಲಾದಷ್ಟು ನಾವು ಸಹಾಯ ಮಾಡೋಣ . ಮುಂದಿನದು ಶಿವನಿಚ್ಛೆ ! " 
ಇಷ್ಟೊಂದು ಆತ್ಮಸ್ಥೈರ್ಯವುಳ್ಳವಳು , ಜೀವನದ ಮೇಲೆ ಭರವಸೆಯುಳ್ಳವಳು , ಪತ್ನಿಯಾಗಿದ್ದಕ್ಕೆ ಖುಷಿ ಪಡಬೇಕೋ , ಅವಳ ಕಣ್ಣೀರಿಗೆ ಸಾಂತ್ವನ ಹೇಳಲಾರದ ಸ್ಥಿತಿಯಲ್ಲಿದ್ದಿದ್ದಕ್ಕೆ ತನ್ನನ್ನು ತಾನು ಜರಿದುಕೊಳ್ಳಬೇಕೋ ಎಂದುಕೊಂಡರು ಶ್ಯಾಮಸುಂದರರು. ಅದೆಂತಹ  ನಂಬಿಕೆ ಅವಳಿಗೆ ! ಗೌರೀಶನ ಮುಖ ನೋಡದೇ ಸರಿ ಸುಮಾರು  ಮೂರುವರ್ಷಗಳೇ ಕಳೆದವು . ಮಹೇಶ ಪತ್ರಕ್ಕೆ ಉತ್ತರ ಬರೆಯುತ್ತಿಲ್ಲ . ಇನ್ನು ಈ ಸುರೇಶನ ಕಥೆ ಏನೋ ... ಹೋದವರು ಹೊರಟೇ ಹೋದರು . ಅವಳೆಂದಂತೆ ನನ್ನನ್ನು ಮಹಾರಾಜನಾಗಿ ನೋಡಿಕೊಳ್ಳದಿದ್ದರೂ ಪರವಾಗಿಲ್ಲ . ಈ ಮಕ್ಕಳಿಂದ, ನನ್ನಂತಹ ಗಂಡನಿಂದ ಭಿಕ್ಷುಕಿಯಾಗದಿದ್ದರೆ ಸಾಕು ದೇವರೇ ! 
ಇದ್ದ ಒಂದು ಮನೆ ಹೋಯಿತು. ಮೂರುಮಕ್ಕಳೂ ಹೊರನಡೆದರು . ನಗು ಎಂಬುದು ಮಾಯವಾಗಿ ಎಷ್ಟೋ ಕಾಲವಾಗಿತ್ತು . ಮಕ್ಕಳಿಗೆ ಮನೆಪಾಠ ಹೇಳಿಕೊಡುವುದರಿಂದ ಬರುವ ಆದಾಯ  ಒಂದೇ ಸಂಸಾರ ನಡೆಸಲು ದಾರಿ . ಇತ್ತೀಚೆಗೆ ಅನ್ನಪೂರ್ಣಮ್ಮಳ ಮುಂಚಿನ ಧೈರ್ಯ ಮಾಯವಾಗಿತ್ತು . ಆರೋಗ್ಯ ಹದಗೆಟ್ಟಿತ್ತು . ಮಕ್ಕಳನ್ನು ಕೊನೆಯ ಬಾರಿ ನೋಡಬೇಕೆಂಬ ಹಂಬಲ ಹೆಚ್ಚಾಗಿತ್ತು . ಶ್ಯಾಮಸುಂದರರೂ ಪತ್ರ ಬರೆದರು . ಟಪಾಲಿಗೆ ಹಣ ಖರ್ಚಾಯಿತೇ ಹೊರತಾಗಿ ಮಕ್ಕಳಾರೂ ಬರಲಿಲ್ಲ . ದಿನೇದಿನೇ ಆರೋಗ್ಯ ಹದಗೆಡುತ್ತಿತ್ತು . 
ಒಂದು ದಿನ ಗೌರೀಶನ ಪತ್ರ ಬಂತು . “ ಅಪ್ಪ ನನಗೆ ಬರಲು ಸಾಧ್ಯವಿಲ್ಲ . ಆಸ್ಟ್ರೇಲಿಯಾಗೆ ಹೋಗುವ ತಯಾರಿಯಲ್ಲಿದ್ದೇನೆ . ಅಮ್ಮನನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸಿ. ಹೊರದೇಶಕ್ಕೆ ಹೋಗಬೇಕಾಗಿರುವುದರಿಂದ ಹಣದ ಅನಿವಾರ್ಯತೆಯಿದೆ . ಇಲ್ಲದಿದ್ದರೆ ಖಂಡಿತ  ಹಣ ಕಳುಹಿಸುತ್ತಿದ್ದೆ . ” 
ಅಯ್ಯೋ ದೇವರೆ , ಇವನ ಬಳಿ ಹಣ ಕೇಳಿದವರಾರು ? ಬಂದುಹೋಗು ಎಂದಷ್ಟೇ ಹೇಳಿದ್ದು .ಮಹೇಶನ ಚಕ್ರದಲ್ಲಿ ರಜದಿಲ್ಲ ಎಂದಿದೆ , ಸುರೇಶ ಪರೀಕ್ಷೆ ಎಂದು ಬರೆದಿದ್ದಾನೆ . ಒಬ್ಬರಿಗೂ ಕಾಯಿ ಬೇಡವೇ ? ತಮ್ಮದೇ ಲೋಕದಲ್ಲಿ ಶ್ಯಾಮಸುಂದರಳು ಮುಳುಗಿದ್ದರು.
ಗಂಡನ ಮುಖ ನೋಡಿಯ ತಿಳಿಯಿತು ಪತ್ನಿಗೆ. ಹೃದಯದಲ್ಲಿ ತೊಂದರೆಯಿದೆ ಎಂದು ತಿಳಿದರೂ ಸಹ , ಚಿಕಿತ್ಸೆಗೆ ಹಣವಿಲ್ಲ. ಬಂದು ಮಾತನಾಡಿಸಲು ಮಕ್ಕಳಿಗೂ ಬಿಡುವಿಲ್ಲ , " ಅನ್ನಪೂರ್ಣ , ಅವರಿಗೆ ಏನೇನೋ ಕೆಲಸವಂತೆ , ಪತ್ರದಲ್ಲಿ ಬರೆದಿದ್ದಾರೆ , ಅಲ್ಲಿಯೇ ಚಿಕಿತ್ಸೆ ಮಾಡಿಸೋಣ . " ಆಯಿತೆಂದು ಇಬ್ಬರೂ ಬೆಂಗಳೂರಿಗೆ ಬಂದರು , ಒಂದು ದೊಡ್ಡಾಸ್ಪತ್ರೆ ಏನೇ ಖಾಯಿಲೆಯಿದ್ದರೂ , ಎಲ್ಲದಕ್ಕೂ ಚಿಕಿತ್ಸೆಯಿದೆ . ಆದರೆ ಹಣ ಬೇಕಲ್ಲ , ಅನ್ನಪೂರ್ಣಮ್ಮನವರಿಗೆ ಶಸ್ತ್ರಚಿಕಿತ್ಸೆ ಆಯಿತು . ಆದರೆ ಶ್ಯಾಮಸುಂದರರಿಗೆ ಚಿಂತೆ . ಎರಡು ಲಕ್ಷ ! ಎಲ್ಲಿಂದ ನೀಡಲಿ ? ಜೇಬಿನಲ್ಲಿರುವುದು ಕೇವಲ ಮುನ್ನೂರು ರೂಪಾಯಿ .... ಕಣ್ಣು ಮುಚ್ಚಿಕೊಂಡು ಕುರ್ಚಿಗೆ ಒರಗಿ ಕುಳಿತರು . ಅಷ್ಟರಲ್ಲಿ ಯಾರೋ ತಟ್ಟಿಸಿ ಎಬ್ಬಿಸಿದಂತಾಯಿತು .
 “ ಸರ್ , ನಿಮ್ಮ ಕಡೆಯ ಪೇಷೆಂಟ್ನ ನೀವು ನೋಡಬಹುದು . " 
“ ಅಯ್ಯೋ ಎಲ್ಲ ಚಿಕಿತ್ಸೆ ಮುಗಿಯಿತಾ .... ? ನಾನಿನ್ನು ದುಡ್ಡು ಕೊಟ್ಟಿಲ್ಲ . "
“ Sir , ಹಣ ಕಟ್ಟದೇ ಇದ್ದಿದ್ದರೆ , ಇವರ ಟ್ರೀಟ್ಮೆಂಟ್ ಆಗ್ತಿರಲಿಲ್ಲ . ”
 “ ಹಾಗಾದರೆ ಯಾರು ಕೊಟ್ಟರು ? ” 
“ ಅದನ್ನು ನೀವು Counter ನಲ್ಲಿ ವಿಚಾರಿಸಿ . ” ಶ್ಯಾಮಸುಂದರರು ಆಶ್ಚರ್ಯದಿಂದ ಓಡಿ ಬಂದರು .
 “ ನನ್ನ ಹೆಂಡತಿ , ಅನ್ನಪೂರ್ಣ ಅಂತ . ಅವಳಿಗೆ ಹೃದಯ ಶಸ್ತ್ರಚಿಕಿತ್ಸೆ ಆಯಿತು . ಹಣ ನೀಡಿದ ದಾನಿ ಯಾರೆಂದು ತಿಳಿದುಕೊಳ್ಳಬಹುದೆ ? ”
 " Sir . ಅವರು ನಮ್ಮ ಆಸ್ಪತ್ರೆಯ ಡಾಕ್ಟರ್ ಮುರಳೀಧರನ್ . " 
ಈ ಹೆಸರು ಎಲ್ಲೋ ಕೇಳಿದ ಹಾಗಿದೆಯಲ್ಲ . ಅವರನ್ನು ಮಾತನಾಡಿಸೋಣ . ಒಳಬರುತ್ತಿದ್ದಂತೆ ಆ ವೈದ್ಯನೇ ಕಾಲಿಗೆರಗಿದ , ಆತ ಅವರ ಹಳೆಯ ಶಿಷ್ಯ . ಅವರ ಮನೆಯಲ್ಲಿ ಊಟ ಮಾಡಿ , ಮೂವರು ಮಕ್ಕಳೊಡನೆ ಆಡಿ ಬೆಳೆದಿದ್ದ . ತನ್ನ ಗುರುಗಳನ್ನು ನೋಡಿ ಖಷಿಯಾದರೂ , ಅವರ ಪರಿಸ್ಥಿತಿಯನ್ನು ನೋಡಿ ದುಃಖವಾಗಿತ್ತು . ಹಣಕ್ಕಾಗಿ ಪರದಾಡುವುದನ್ನು ನೋಡಿದ ಈತ , ತಾನೇ ಹಣ ತುಂಬಿ ಶಸ್ತ್ರ ಚಿಕಿತ್ಸೆ  ಮಾಡಿಸಿದ್ದ . ಶ್ಯಾಮಸುಂದರರ ಕಣ್ಣಾಲಿಗಳು ತುಂಬಿದ್ದವು.  ನಿಜವಾಗಿಯೂ ಮುರಳೀಧರನ್ ಶಿಷ್ಯನಾಗದೇ ದೇವರಾಗಿ ಕಂಡಿದ್ದ .
 “ ಗುರುಗಳೇ , ನೀವು ಈ ರೀತಿ ನಿಂತುಕೊಂಡರೆ ನನಗೆ ಮುಜುಗರವಾಗುತ್ತದೆ . ನಿಮ್ಮಿಂದಲೇ ನಾನು ಇಷ್ಟು ಬೆಳೆದಿದ್ದು , ನಿಮ್ಮ ಋಣ ತೀರಿಸಲು ಇದೊಂದು ಅಲ್ಪ ಮಾರ್ಗ , ಇನ್ನೇನು ತೊಂದರೆ ಆದರೂ ನನ್ನನ್ನು ನೆನಪಿಸಿಕೊಳ್ಳಿ , ತಕ್ಷಣ ಬರುತ್ತೇನೆ . ” 
ಜಗತ್ತಿನಲ್ಲಿ ಇನ್ನೂ ಮಾನವೀಯತೆ ಬದುಕಿದೆ ಎಂದು ಶ್ಯಾಮಸುಂದರರಿಗೆ ಖಚಿತವಾಯಿತು . ಅಂತೂ ಹೆಂಡತಿ ಗುಣವಾದಳು ಎಂದು ಖುಷಿಯಿಂದ ಊರಿಗೆ ಬಂದರು. ಆದರೆ ಆ ಖುಷಿಯನ್ನೂ ದೇವರು ಹೆಚ್ಚು ದಿನ ನೀಡಲಿಲ್ಲ . ಎರಡೇ ತಿಂಗಳಿಗೆ ಆ ಪುಟ್ಟಹೃದಯ ತನ್ನ ಕೆಲಸವನ್ನು ನಿಲ್ಲಿಸಿತ್ತು . ಈಗ , ಶ್ಯಾಮಸುಂದರರು ಒಂಟಿ . ಇಷ್ಟು ದಿನ ನೋವಿಗೆ ಹೆಗಲಾಗಿ ಇದ್ದವಳು ಒಮ್ಮೆಲೇ ಮರೆಯಾಗಿದ್ದಕ್ಕೋ ಏನೋ ಮನವೆಲ್ಲ ಭಾರ ... ಊರವರೆಲ್ಲ ಮಕ್ಕಳನ್ನು ಬರಹೇಳಿ ಎಂದರು . ಆದರೆ ಶ್ಯಾಮಸುಂದರರ ಮನಸ್ಸು ಸತ್ಯ ಹೇಳುತ್ತಿತ್ತು . ಬೇಡ , ಅವರು ಬರುತ್ತಾರೆಂಬ ನಂಬಿಕೆ ಕಿಂಚಿತ್ತಾದರೂ ಇದೆಯೇ ? ಖಂಡಿತ ಇಲ್ಲ . ಬದುಕಿದ್ದಾಗಲೇ ನೂರೆಂಟು ಕಾರಣ ಹೇಳಿ ಬರದವರು , ಈಗ ಬರುತ್ತಾರೆಯೇ ? ಕೊನೆಗೂ ಊರವರೇ ಪತ್ರ ಬರೆದರು . ಶ್ಯಾಮಸುಂದರರು ಅಂತ್ಯಕ್ರಿಯೆ ಮಾಡಿ , ಆಕಾಶ ನೋಡುತ್ತ ಕುಳಿತರು . ಹತ್ತು ದಿನಗಳಾದರೂ , ಮಕ್ಕಳಿರಲಿ , ಪತ್ರದ ಸುಳಿವೂ ಇರಲಿಲ್ಲ .
 ಗಾಯಕ್ಕೆ ಬಿಸಿತುಪ್ಪ ಸವರಿದಂತಿತ್ತು ಪರಿಸ್ಥಿತಿ . ಕಿತ್ತು ತಿನ್ನುವ ಬಡತನ . ಈಗಂತೂ ಅನ್ನ ಬೇಯಿಸಿ ಕೊಡಲೂ ಯಾರೂ ಗತಿಯಿಲ್ಲ , ನೆನಪಾದಾಗ ಊಟ , ನಿದ್ದೆ , ತುಂಬ ಕೃಶರಾಗಿದ್ದರು . ಊರವರ ಸಮಾಧಾನದ ಮಾತುಗಳು ಸಹ ಈಟಿಯಂತೆ ಇರಿಯುತ್ತಿದ್ದವು .
 “ ರಾಯರೇ , ತಾಯಿ ಕ್ರಿಯೆ ಮಾಡೋಕಾದ್ರು ಬರಬೇಡವೇ ಮಕ್ಕಳು ? "
 “ ಹಿರಿಯ ಮಗ ಮದುವೆ ಆದನಂತಲ್ಲ .... ನಿಮಗೆ ಗೊತ್ತಿಲ್ವಾ ? ”
"ಊರ ಮಕ್ಕಳಿಗೆ ಪಾಠ ಮಾಡೋ ನಿಮಗೆ ಹೀಗಾಗಬಾರದಿತ್ತು . " 
ಈ ಮಾತಿಗೆಲ್ಲ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಅಂದೇ ತಿಳಿದರು ಶ್ಯಾಮಸುಂದರರು . ಅಂದಿನಿಂದ ಅವರ ಮಾತೇ ನಿಂತುಹೋಗಿತ್ತು . ಸುಮಾರು ವರ್ಷಗಳಾದವು , ಎಲ್ಲರಿಗೂ ಅವರು ಮಾತನಾಡುತ್ತಾರೆ ಎಂಬುದೇ ಮರೆತುಹೋಗಿತ್ತು . ಸ್ವತಃ ಅವರಿಗೆ ಕೂಡ ! ಎಂಟು ವರ್ಷಗಳಿಂದೀಚೆಗೆ ಮಕ್ಕಳ ಪತ್ರವೂ ಬಂದಿರಲಿಲ್ಲ,  ಅವರೆಲ್ಲಿದ್ದಾರೆಂದು ತಿಳಿದಿರಲಿಲ್ಲ . 
ಈ ಮಧ್ಯೆ ಅವರ ಹಳೆ ಶಿಷ್ಯರು ಊರಿಗೆ ಬಂದಾಗಲೆಲ್ಲ , ಅವರ ಭೇಟಿ ಮಾಡಿ ಮಾತನಾಡಿಸಲು ಪ್ರಯತ್ನಿಸುತ್ತಿದ್ದರು . ಅವರೆಲ್ಲ ಸೇರಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು . ಶ್ಯಾಮಸುಂದರರ ಶಿಕ್ಷಣಪ್ರೀತಿ , ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಕುರಿತು ಪತ್ರ ಬರೆದರು . ಇವರೆಲ್ಲರ ಪರಿಶ್ರಮದಿಂದಾಗಿ ರಾಜ್ಯ ಸರಕಾರ ಪ್ರಶಸ್ತಿ ನೀಡಿತು . ಅದರಿಂದ ಬಂದ ಹಣದಿಂದಲಾದರೂ ಗುರುಗಳ ಬಡತನ ದೂರವಾಗಲಿ ಎಂಬುದು ಶಿಷ್ಯರ ಆಸೆಯಾಗಿತ್ತು . ಆದರೆ ಶ್ಯಾಮಸುಂದರರು ಮತ್ತೆ ಆ ಎಲ್ಲ ಹಣವನ್ನೂ ತಮ್ಮೂರಿನ ಶಾಲೆಗೆ ನೀಡಿದರು . ಪ್ರಶಸ್ತಿ ಬಂಧ ಖುಷಿ,  ಮತ್ತೆ ಅವರು ಶಾಲೆಗೆ ದಾನ ಮಾಡಿದ ವಿಷಯವನ್ನು ಒಂದು ಲೇಖನವಾಗಿ ಸಿದ್ಧಪಡಿಸಿ ಪತ್ರಿಕೆಯಲ್ಲಿ ಪ್ರಕಟಿಸಿದರು . ಒಂದು ಸಮಾರಂಭ ಏರ್ಪಡಿಸುವ ಸಲುವಾಗಿ ಹಳೆಯ ಶಿಷ್ಯರನ್ನು ಒಟ್ಟುಗೂಡಿಸೋಣ ಎಂದು ಅಂತರ್ಜಾಲದಲ್ಲೂ ವಿಷಯವನ್ನು ಬಿತ್ತರಿಸಲಾಯಿತು . ಇದೆಲ್ಲದರ ಪರಿಣಾಮವಾಗಿ ಆಸ್ಟ್ರೇಲಿಯಾದಲ್ಲಿದ್ದ ಗೌರೀಶನಿಗೂ , ಅಮೆರಿಕದಲ್ಲಿದ್ದ ಮಹೇಶನಿಗೂ , ದುಬೈನಲ್ಲಿದ್ದ ಸುರೇಶನಿಗೂ ಸುದ್ದಿ ತಲಪಿತು . ಅವರೆಲ್ಲ ತಮ್ಮ ಹೆಂಡತಿ ಮಕ್ಕಳಿಗೆ ತಂದೆಯ ಚಿತ್ರ ತೋರಿಸಿ ವಿಷಯ ಹೇಳಿದರು .
 " We are happy to hear the news . Congrats Dad " 
-ಎಂಬ ಎರಡು ವಾಕ್ಯಗಳನ್ನು facebook twitter ಗಳಲ್ಲಿ ಹಾಕಿದ್ದರು . ಅಷ್ಟೆ !! ನಮ್ಮ ಜನರು ಖುಷಿಯನ್ನಾಗಲೀ , ದುಃಖವನ್ನಾಗಲೀ , ಹಂಚಿಕೊಳ್ಳುವ ಪದ್ಧತಿ ಕೇವಲ ಮೊಬೈಲ್ ಮುಖಾಂತರವೇ ! 
ನೋಡಿ , ಇಲ್ಲಿ ಕುಳಿತಿರುವ ವೃದ್ಧರೇ ಶ್ಯಾಮಸುಂದರ . ಅವರ ಮನೆಯಲ್ಲಿ ಊಟ ಮಾಡಿ , ಅವರಿಂದ ಪಾಠ ಹೇಳಿಸಿಕೊಂಡ ಶಿಷ್ಯರಲ್ಲಿ ನಾನೂ ಒಬ್ಬ.  ಅಂದು ಅವರ ನಿಲವು , ಗತ್ತು ನೋಡಿದ ನನಗೆ ಇಂದು ಈ ಬಾಗಿದ ಶರೀರವನ್ನು ನೋಡಲು ಅಸಾಧ್ಯ. ಈ ದೇಹ ಜೀವನದುದ್ದಕ್ಕೂ ಅದೆಷ್ಟು ನೋವನ್ನುಂಡಿರಬಹುದು ... ಪ್ರತಿ ಆಘಾತವು ಇವರನ್ನು ಮೂಕರನ್ನಾಗಿ ಮಾಡಿತು , ನಮಗೆಲ್ಲ ದುಃಖವಾದ ವಿಷಯವೆಂದರೆ ಸಮಾರಂಭದ ದಿನ ಅವರ ಮಕ್ಕಳು ಬರುತ್ತಾರೆಂದುಕೊಂಡಿದ್ದೆವು . ಗುರುಗಳು ನಕ್ಕರು . ನಮ್ಮ ಉಚಿಕೆ ಸುಳ್ಳಾಯಿತು , ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ ಎಂದು ಗುರುಗಳಿಗೆ ತಿಳಿಸಿದೆವು . ಆಗಲೂ ನಕ್ಕರು . ಹಣವನ್ನು ದಾನ ಮಾಡಿ ಮತ್ತೆ ನಕ್ಕರು . ಅವರ ಪರಿಸ್ಥಿತಿ ಇವರಿಗೆ ನಗು ತರಿಸುತ್ತಿದೆ . ಆದರೆ ನಮಗೆ ಪಾಠವಾಗಬೇಕಿದೆ. 
ಹಕ್ಕಿ  ರೆಕ್ಕೆ ಬಲಿತ ಕೂಡಲೇ ಹಾರಿ ಹೋಗುವುದೆಂಬ ಪಾಠ  ನಿಮಗಿತ್ತು . ನೆನಪಿದೆಯೇ ? ಪಕ್ಷಿಗಳಿಗೂ ನಮಗೂ ಬಹಳ ವ್ಯತ್ಯಾಸವಿದೆ . ನಾವು ಬುದ್ಧಿಜೀವಿಗಳು . ನಮಗೆ ಭಾವನೆಗಳಿವೆ, ನಿರ್ಧಾರ ಮಾಡುವ ಸಾಮರ್ಥ್ಯವಿದೆ.  ಜೊತೆಯಲ್ಲಿ ಕರ್ತವ್ಯ , ಜವಾಬ್ದಾರಿಗಳೂ ಇರಬೇಕಲ್ಲವೇ ? ಕ್ರೂರಪ್ರಾಣಿಗಳ ಒಮ್ಮೊಮ್ಮೆ ಮಾನವೀಯತೆ ಮೆರೆಯುತ್ತವೆ . ಆದರೆ ನಮಗೆಲ್ಲಿದೆ ? ಅಕ್ಕ - ಪಕ್ಕದವರೊಡನೆ ಜಗಳ , ಚಾಡಿ ಮಾತು , ದೌರ್ಜನ್ಯ , ಲಂಚ , ಅರಾಜಕತೆ ಇವೆಲ್ಲ ಜೀವನದ ಭಾಗವಾಗಿವೆ .
 ನಿಮ್ಮಲ್ಲಿ ಎಷ್ಟೋ ಜನ ಪಟ್ಟಣಕ್ಕೆ ಹೋಗಿ , ದೊಡ್ಡ ಕೆಲಸ ಮಾಡಿ ಲಕ್ಷಾಂತರ ಸಂಪಾದಿಸುವ ಕನಸನ್ನು ಹೊತ್ತಿದ್ದೀರಿ . ಅವುಗಳಿಗೆ ನಿಮ್ಮ ತಂದೆ - ತಾಯಿ ಬೆನ್ನಲುಬಾಗಿರುತ್ತಾರೆ , ನಿಮ್ಮೆಲ್ಲರ ಕನಸುಗಳೂ ನನಸಾಗಲಿ ಎಂದು ನಾವೂ ಹಾರೈಸುತ್ತೇವೆ . ಆದರೆ ಶ್ಯಾಮಸುಂದರರ ಪರಿಸ್ಥಿತಿ ನಿಮ್ಮ ಹೆತ್ತವರಿಗೆ ಬರದಿರಲಿ , ನನ್ನ ಶಿಷ್ಯರು ಅಷ್ಟು ಕ್ರೂರಿಗಳಲ್ಲ ಎಂದು ನಾನು ನಂಬುತ್ತೇನೆ.
 ಸ್ವಾಮಿ ವಿವೇಕಾನಂದರು 'ಯುವಜನತೆ ಒಗ್ಗೂಡಿದರೆ ಇಡೀ ದೇಶವನ್ನೇ ಬದಲಾಯಿಸಬಹುದು ' ಎಂದು ಹೇಳಿದ್ದು ನೆನಪಿದೆಯೇ ? ಈ  ಸಂದರ್ಭ ಹೊಸ  ಸಮಾಜಕ್ಕೆ ನಾಂದಿಹಾಡಲಿ.  ಮೌಢ್ಯ  ಅಳಿಯಲಿ , ಪ್ರೀತಿ-ಮಾನವೀಯತೆಗೆ ಗೆಲುವಾಗಲಿ , ನೀವೆಲ್ಲರೂ ನನಗೊಂದು ಪ್ರತಿಜ್ಞೆ ಮಾಡಿ. "
ಎಲ್ಲ ಮಕ್ಕಳೂ ಎದ್ದು ನಿಂತರು . ಮೋಹನಸರ್ ಹೇಳಿಕೊಟ್ಟಂತೆ ಒಂದೇ ಧ್ವನಿಯಲ್ಲಿ ಪ್ರತಿಜ್ಞೆ ಮಾಡಿದರು “ ಯಾವುದೇ ಕಾರಣಕ್ಕೂ ನನ್ನ ಹೆತ್ತವರನ್ನು ನಾನು ತೊರೆಯುವುದಿಲ್ಲ . ಎಷ್ಟೇ ಓದಿರಲಿ , ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ , ಎಷ್ಟೇ ಸಂಪಾದನೆ ಮಾಡಲಿ , ನನ್ನ ತಂದೆ - ತಾಯಿಯರ ಕೊನೆಯ ಕ್ಷಣದವರೆಗೂ ನಾನು 
ಅವರನ್ನು ನೋಡಿಕೊಳ್ಳುತ್ತೇನೆ. "
ಇಡೀ ಸಭಾಂಗಣ ಈ ವಾಕ್ಯಗಳಿಂದ ಪ್ರತಿಧ್ವನಿಸಿತು. ಎಲ್ಲರ ಕಣ್ಣುಗಳೂ ಹನಿಗೂಡಿದ್ದವು. ಮೋಹನ್ ಸರ್ ಮುಂದುವರೆಸಿದರು - "ಮಗನಾಗಿರಲಿ, ಮಗಳಾಗಿರಲಿ -ಹೆತ್ತವರು, ಹೆತ್ತವರೇ. ಜವಾಬ್ದಾರಿ ಎಂದರೆ ಎಲ್ಲರಿಗೂ ಒಂದೇ. ನಿಮ್ಮ ಪ್ರೀತಿ ಕಾಳಜಿಯನ್ನಷ್ಟೇ ಅವರು ಬಯಸುವುದು. 
ಪ್ರತಿಯೊಂದು ಗೆಲುವಿನಲ್ಲೂ ತಂದೆ, ತಾಯಿ, ಶಿಕ್ಷಕರಿರುತ್ತಾರೆ. ಎಲ್ಲರನ್ನೂ ಗೌರವಿಸಿ. ನಿಮ್ಮ ಪ್ರತಿ ಗೆಲುವಿನಲ್ಲೂ ಅವರ ಪಾಲಿದೆ. ನಿಮ್ಮ ಏಳ್ಗೆಗೆ ನೀವು ಎಷ್ಟು ಕಷ್ಟ ಪಡುತ್ತಿರೋ, ಅದ್ಕಕಿಂತ ಜಾಸ್ತಿ ಅವರು ಅನುಭವಿಸಿರುತ್ತಾರೆ. ನಿಮ್ಮೆದುರು ಹೇಳುವುದಿಲ್ಲ,  ಅಷ್ಟೇ. ನಿಮ್ಮಿಂದ ನಮ್ಮ ಸಮಾಜ ಬದಲಾಗಲಿ ಎಂದು ನಾನು ಬಯಸುತ್ತೇನೆ. ನೀವೂ ಪ್ರಯತ್ನಿಸಿ. 
ಉಜ್ವಲ ಭವಿಷ್ಯ ನಿಮ್ಮದಾಗಲಿ. ನಗುತ್ತ ಬಾಳಿ. ನಿಮ್ಮಿಂದ ಆದಷ್ಟು ಸಹಾಯ ಮಾಡಿ. ಧನ್ಯವಾದಗಳು... "

ವೇದಿಕೆಯಿಂದ ಕೆಳಗಿಳಿದು ಆ ವೃದ್ಧ ಶ್ಯಾಮಸುಂದರರ ಕೈ ಹಿಡಿದು ಹೊರನಡೆದರು. ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲ ನಿಂತು ನೋಡುತ್ತಿದ್ದರು. 
ಮೌನ !
ಸಂಪೂರ್ಣ ಮೌನ !!
ಒಂದು ಅರ್ಥಪೂರ್ಣ ಮೌನ ಎಲ್ಲೆಡೆ ಆವರಿಸಿತ್ತು... 
ಕಥೆಯನ್ನು ಕೇಳಿ ಕಣ್ಣೀರಿಟ್ಟ ಮಕ್ಕಳ ಮುಗ್ಧ ಕಂಗಳಲ್ಲಿ ಒಂದು ನಿರ್ಧಾರದ ಬೆಳಕಿತ್ತು. ಪ್ರತಿಜ್ಞೆ ಜೀವನದ ನೀತಿಪಾಠವಾಗಿತ್ತು. 

(ಉತ್ಥಾನ - ಮಾರ್ಚ್ 2018ರಲ್ಲಿ 'ಯುವಪ್ರತಿಭೆ' ಎಂದು ಗುರುತಿಸಲ್ಪಟ್ಟು  ಪ್ರಕಟವಾಗಿದ್ದು )

Tuesday, June 16, 2020

ಮಳೆಯ ನೆನಪು - 4

ಅಪ್ಪನ ಮುಖ ನೋಡಿಯೇ ಅಮ್ಮ ಎಲ್ಲವನ್ನೂ ಅರಿತಿರಬೇಕು,ನಮ್ಮನ್ನು ನೋಡಿದವಳು ಒಳನಡೆದಿದ್ದಳು. ಅಕ್ಕ ನನ್ನ ಬಗ್ಗೆ ಚಾಡಿ ಹೇಳುವ ಕಾರ್ಯಕ್ರಮವನ್ನೇನೋ ಪ್ರಾರಂಭಿಸಿದ್ದಳು,ಆದರೆ ಪ್ರಾರಂಭಿಸಿದ್ದಳು, ಆದರೆ ಅಪ್ಪನ ಕಿವಿಗಳು ಸ್ಪಂದಿಸುತ್ತಿರಲಿಲ್ಲ. ಊಟದ ತಟ್ಟೆಯೆದುರು ಕುಳಿತಿದ್ದರೂ ಒಬ್ಬರಿಗೂ ಅನ್ನ ಮುಟ್ಟುವ ಮನವಿರಲಿಲ್ಲ. ನೀರವ ಮೌನ ನಮ್ಮನ್ನು ಕಿತ್ತು ತಿನ್ನುತ್ತಿತ್ತು.
ಮನೆಯೊಳಗೆ ಏನು ನಡೆಯುತ್ತಿದೆ ಎಂದು ನನಗೆ ತಿಳಿಯದಿದ್ದರೂ ಹೊಲದಲ್ಲಿ ನಡೆದ ಘಟನೆ ವಿಚಿತ್ರವೆನಿಸಿತ್ತು. "ಅಪ್ಪಾ,ಅವರು ಯಾರು? ನೀನ್ಯಾಕೆ ಅವರ ಕಾಲ ಬಳಿ ಕುಳಿತಿದ್ದೆ? " ಎರಡು ನಿಮಿಷದ
ನಂತರ ತಿಳಿಯಿತು, ನಾನು ಉತ್ತರವಿಲ್ಲದ ಪ್ರಶ್ನೆ ಕೇಳಿದ್ದೆನೆಂದು.
ಅಪ್ಪ ಎದ್ದು ಹೊರನಡೆದರು. ಅಕ್ಕ ಮತ್ತೆ ಗುಡುಗಿದಳು," ನಿನಗ್ಯಾಕೇ ಬೇಕು ಅವೆಲ್ಲ ವಿಚಾರ? ಅಪ್ಪ 
ಯಾರೊಡನೆ ಮಾತನಾಡಿದರೆ ನಿನಗೇನು?ಈಗ ನೋಡು,ಮಾತೂ ಆಡಲಿಲ್ಲ, ಊಟಾನೂ ಮಾಡಲಿಲ್ಲ." 
ಅಲ್ಲಿ ನಡೆದಿದ್ದು ಕೇವಲ ಮಾತುಕತೆಯಲ್ಲ ಎಂದು ನನ್ನ ಮನ ಚೀರುತ್ತಿತ್ತು. ಬಹುಶಃ ಅದನ್ನು ನೋಡಿದ್ದರೆ, ಅಕ್ಕನೂ ಇದೇ ಪ್ರಶ್ನೆ ಮಾಡುತ್ತಿದ್ದಳೇನೋ. ನಾನು ಕೇಳಿದ್ದರೂ, ಕೇಳದಿದ್ದರೂ ಅಪ್ಪ ಊಟ ಮಾಡುತ್ತಿರಲಿಲ್ಲ. ಅಮ್ಮ ಹೊರನಡೆದಳು. ಹೊರಗೆ ಮಣ್ಣಿನ ಕಟ್ಟೆಯ ಮೇಲೆ ಕುಳಿತು ಅಪ್ಪ ಆಕಾಶ ನೋಡುತ್ತಿದ್ದ. ತಲೆಯಲ್ಲಿ ನೂರೆಂಟು ಚಿಂತೆಗಳಿದ್ದಿರಬೇಕು." ಭುವನ ಹೇಳುತ್ತಿರುವುದು ನಿಜವೇನು? ಅವರು ಮತ್ತೆ ಬಂದಿದ್ದರೇ? ಈಗೇನು ಮಾಡುವುದು?" 
" ಮಾಡುವುದೇನು? ತಂಪಾದ ಗಾಳಿ ಬೀಸುತ್ತಿದೆ,ಮಳೆ ತನ್ನಾರ್ಭಟವನ್ನು ನಿಲ್ಲಿಸಿದೆ. ತಿಳಿಯಾದ ಆಗಸವನ್ನು ನೋಡುವುದಷ್ಟೇ ನನ್ನ ಕೆಲಸ" ಮಾತಿನ ನಂತರ ಹೊರಬಂದ ನಿಟ್ಟುಸಿರು ಅಮ್ಮನ ದುಃಖಕ್ಕೆ ಕಾರಣವಾಗಿತ್ತು. ಅಕ್ಕ,ನಾನು ಹೊರಬಂದೆವು. "ನಯನಾ,ತಂಗಿಗೆ ತಿಳುವಳಿಕೆ ಹೇಳು,ಯಾವಾಗಲೂ ಬೈಯುತ್ತಿರಬೇಡ. ಭುವನಾ,ನೀನೂ ಅಷ್ಟೇ,ಸ್ವಲ್ಪ ಅವರ ಮಾತನ್ನೂ ಕೇಳು." 
ನಾವಿಬ್ಬರೂ ತಲೆ ತಗ್ಗಿಸಿ ನಿಂತಿದ್ದೆವು. 
ಬಹಳ ತಡವಾಗಿತ್ತು. ಹೋಗಿ ಅಕ್ಕನ ಮಗ್ಗುಲಲ್ಲಿ ಮಲಗಿದ್ದೆ. ಯೋಚನೆಯ ಮಧ್ಯೆ ಯಾವಾಗ ನಿದ್ದೆ ಆವರಿಸಿತ್ತೋ ತಿಳಿಯದು. ಬೆಳಿಗ್ಗೆ ನಾನೇಳುವಷ್ಟರಲ್ಲಿ ಅಮ್ಮ ಅಕ್ಕ ಜೋರಾಗಿ ಅಳುತ್ತಿದ್ದರು. ಹೊರಬಂದು ನೋಡಿದರೆ,ಮಾವಿನಮರಕ್ಕೆ ಕಟ್ಟಿದ್ದ ನನ್ನ ಜೋಕಾಲಿಯ ಹಗ್ಗ ಅಪ್ಪನ ಕುತ್ತಿಗೆಗೆ ಸುತ್ತಿಕೊಂಡಿತ್ತು. ಒಡಕು ಅಂಗಾಲುಗಳು ಅವನ ಸಾಲು ಸಾಲು ಸೋಲುಗಳ ಪ್ರತೀಕದಂತಿದ್ದವು. ಊರವರೆಲ್ಲ ಸೇರಿದ್ದರು. ಕಷ್ಟದಲ್ಲಿ ಬರದವರು ಈಗ ಸಾಂತ್ವನ ಹೇಳಲು ಬಂದಿದ್ದರು. ಒಂದು ತಾಸಿನೊಳಗೆ ಎಲ್ಲರೂ ಹೋದರು. ಮತ್ತೆ ನಾವು ಮೂವರೇ. ಕಣ್ಣೀರು ಯಾರ ಅನುಮತಿಗೂ ಕಾಯದೇ ಇಳಿಯುತ್ತಿತ್ತು. ನಿನ್ನೆ ಹೊಲದಲ್ಲಿದ್ದ ಮಹಾನುಭಾವ ಬಂದು ಮತ್ತೆ ಗಲಾಟೆ ಮಾಡಿ,ಇದ್ದ ಹೊಲವನ್ನೂ ಕಿತ್ತುಕೊಂಡುಹೋದ. ಈಗ ನಿಜವಾಗಿಯೂ ಬೀದಿಗೆ ಬಿದ್ದಿದ್ದೆವು. ಊರು ಬಿಟ್ಟಾಯಿತು,ಮನೆ ಮನೆಯ ಪಾತ್ರೆ ತೊಳೆದಾಯಿತು. ಅಮ್ಮ ಗಟ್ಟಿಗಿತ್ತಿ. ಕಷ್ಟ ಮೆಟ್ಟಿನಿಂತಳು.
ಓದಿಸಿದಳು,ಕೆಟ್ಟಮಾತಿಗೆಲ್ಲ ಕಿವುಡಿಯಾದಳು. ಅಕ್ಕನ ಮದುವೆ ಮಾಡಿ,ಈಗ ಮೊಮ್ಮಗನ ಆರೈಕೆ ಮಾಡುತ್ತಿದ್ದಾಳೆ. ವಿಕ್ರಮ್ ಬಂದು ಮಾತನಾಡಿದ ಮೇಲೆ,ನಮ್ಮ ಮದುವೆಗೂ ಒಪ್ಪಿದಳು. ಮುಂದಿನ ತಿಂಗಳು ಮದುವೆ! 


ಎಲ್ಲಿಂದ ಎಲ್ಲಿಯವರೆಗೆ ಬಂದೆ  ನಾನು? 
ಅಂದು ಹೊಲದಲ್ಲಿ ಅಪ್ಪನಿಗಾಗಿ ಕಾಯುತ್ತಿದ್ದವಳು ಇಂದು ಇವನಿಗಾಗಿ ರಸ್ತೆಯಂಚಲ್ಲಿ ಕಾಯುತ್ತಿದ್ದೇನೆ. ಒಳ್ಳೆಯ ದಿನಗಳ ಆರಂಭ,ಹೊಸ ಮುನ್ನುಡಿ....
ರಸ್ತೆಯಂಚಲ್ಲಿ ಬೈಕಿನ ಶಬ್ದ ಕೇಳುತ್ತಿದ್ದಂತೆ, ಭುವನಳ ಮುಖದಲ್ಲಿ ಮಂದಹಾಸ ಮೂಡಿತು.ಮಳೆ ನಿಂತು ಹಿತವಾದ ವಾತಾವರಣ ನಿರ್ಮಿತವಾಗಿತ್ತು...

ಮಳೆಯ ನೆನಪು - 3

ನಾನೇನೋ ಹೊಲದತ್ತ ಓಡಿದ್ದೆ.ಆದರೆ ಒಮ್ಮೆ ಅಕ್ಕನನ್ನು ನೋಡಬೇಕಿತ್ತು.
            ನಾನು ಹೊಲಕ್ಕೆ ಬರುವಷ್ಟರಲ್ಲಿ ಬಟ್ಟೆಯೆಲ್ಲ ನೆನೆದಿತ್ತು.ಟಪ್ ಟಪ್ ಎಂದು ನೀರು ಬಿದ್ದ ರಭಸಕ್ಕೆ ಮೈ -ಕೈ  ಎಲ್ಲ ನೋಯುತ್ತಿತ್ತು.ಅಪ್ಪ ಇದ್ದಲ್ಲಿಗೆ ಹೋಗಬೇಕೆಂದರೆ ಹೊಳೆ ದಾಟಬೇಕಿತ್ತು.ಆದರೆ ಗಾಳಿಗೆ ಇದ್ದ ಒಂದು ತೂಗು ಸೇತುವೆಯೂ ಮುರಿದಿದೆ.ಅಯ್ಯೋ ದೇವರೇ..ಈಗ ಮತ್ತೆ ಮನೆಗೆ ಹಿಂದಿರುಗಲೂ ಸಾಧ್ಯವಿಲ್ಲ.ಕತ್ತಲಾಗುತ್ತಿದೆ..ಎಂದು ಮನದೊಳಗೇ ನನ್ನನ್ನು ನಾನು ಶಪಿಸಿಕೊಂಡೆ.ಅಕ್ಕನ ಜೊತೆ ಹೋಗಬೇಕಿತ್ತು.ಈಗ ಇಲ್ಲಿ ಅಪ್ಪ ಕಾಣುತ್ತಿಲ್ಲ.ಕೂಗೋಣ ಎಂದರೂ,ನನಗಿಂತ ಹೊಳೆಯ ಧ್ವನಿಯೇ ಜೋರಾಗಿದೆ.
         ಮೊದಲ ಬಾರಿಗೆ ಝುಳು ಝುಳು ದನಿ ಕರ್ಕಶವಾಗಿ ಕೇಳುತ್ತಿತ್ತು. ಕಣ್ಣುಗಳನ್ನಗಲಿಸಿ,ಕಾಣುವಷ್ಟು ದೂರ ನೋಡಲು ಯತ್ನಸಿದೆ.ಮಂಜು ಮಂಜಾಗಿ ಯಾರನ್ನೋ ಕಂಡಂತಾಯಿತು.
ಹಾ! ಅಪ್ಪ..ಆ ಕ್ರಶವಾದ ದೇಹ ಮಾತ್ರದಿಂದ ಹೇಳಬಹುದು ಅಲ್ಲಿದ್ದವನು ನನ್ನ ಅಪ್ಪನೆಂದು.
             ಆದರೆ ಅಲ್ಲಿ ಇನ್ನಾರೋ ಇದ್ದಂತೆ ಅನಿಸುತಿದೆ.  ಬಿಳಿ ನಿಲುವಂಗಿ, ಕೈಯಲ್ಲಿ ಕೋಲು -ದರ್ಪವೇ ತಲೆಯೆತ್ತಿ ನಿಂತ ಭಂಗಿ.ಯಾರಿರಬಹುದು? ಅವನ ಬಳಿ ಕೊಡೆ ಇದೆ.ಆದರೆ ನನ್ನಪ್ಪ ಮಳೆಯಲ್ಲಿ ನೆನೆಯುತ್ತಿದ್ದಾನೆ. ನನಗೇನೂ ಸರಿಯಾಗಿ ಕಾಣುತ್ತಿಲ್ಲ,ಕೇಳುತ್ತಲೂ ಇಲ್ಲ.
                          ಸ್ವಲ್ಪ ಮುಂದೆ ಸರಿದೆ,ಕಾಲು ಜಾರುತ್ತಿತ್ತು.ಆದರೆ ಕಣ್ಣುಗಳು ಸ್ಪಷ್ಟವಾಗಿದ್ದವು.ಅಪ್ಪ ಬಗ್ಗಿ ಅವನ  ಕಾಲು ಹಿಡಿಯುತ್ತಿದ್ದಾನೆ. ಅವನು ಕೊಡವಿಕೊಳ್ಳುತ್ತಿದ್ದಾನೆ. ಏನು   ನಡೆಯುತ್ತಿದೆ ಅಲ್ಲಿ? ನನ್ನಪ್ಪ ಇನ್ಯಾರದೋ ಕಾಲಿಗೆ ಯಾಕೆ ಬೀಳಬೇಕು?
      ಅಮ್ಮ ಹೇಳುತ್ತಿದ್ದಳು,ನಮ್ಮನ್ನು ಯಜಮಾನರು ಸಾಕುತ್ತಿದ್ದಾರೆ ಎಂದು.ಇವರೇ ಇರಬಹುದೇ? ಆಗಿರಲಿ,ಆದರೂ ಅವರಿಗೆ ನಮಸ್ಕಾರ ಮಾಡಬೇಕೇ? ಅವರೇನು ದೇವರೇ?       
      ಈ ಪ್ರಶ್ನೆಗಳಿಗೆಲ್ಲ ಉತ್ತರ ಯಾರು ಕೊಡಬೇಕು?  ಅಪ್ಪಾ ಎಂದು ಕೂಗಲೇ? ಅಪ್ಪನ ಪರಿಸ್ಥಿತಿ ನೋಡಿ ನನ್ನಲ್ಲಿದ್ದ ಸ್ವಲ್ಪ ಧೈರ್ಯವೂ ಕಾಣೆಯಾಯಿತು.ತನ್ನ ಮುಂದೇ ತನ್ನಪ್ಪ ಅಸಹಾಯಕನಾಗಿ ಇನ್ನೊಬ್ಬರ ಮುಂದೆ ಮಂಡಿಯೂರಿ    ಕೂರುವುದನ್ನು ಯಾವ ಮಕ್ಕಳು ನೋಡಲಿಚ್ಛಿಸುತ್ತಾರೆ?ನಾನಂತೂ ಸಹಿಸಲಾರೆ.ಮಳೆ ಹನಿಯ ತಂಪು,ಕಣ್ಣ ಹನಿಯ ಬಿಸಿಯಲ್ಲಿ ಕರಗಿ ಹೋಯಿತು.    
   ಆತ ಹೋಗುತ್ತಿದ್ದಾನೆ.ಜೋರಾಗಿ ಕೈ ತೋರಿಸುತ್ತಿದ್ದಾನೆ.ಅಪ್ಪನನ್ನು ಬೈಯುತ್ತಿರಬೇಕು..ಅಪ್ಪ ಬೇಸರದ ಮುಖದಲ್ಲಿ ಇತ್ತ ಬರುತ್ತಿದ್ದಾನೆ. ಏನಾಯಿತೆಂದು ಕೇಳಬೇಕು.
    ನನ್ನಂತ ಪುಟ್ಟ ಹುಡುಗಿಗೆ ಇದು ದೊಡ್ಡ ಹೊಳೆ.ಅಪ್ಪ ಸಲೀಸಾಗಿ ಆ ಕಡೆ ಧುಮುಕಿ,ಎರಡು ನಿಮಿಷದಲ್ಲಿ ಈ ಕಡೆ ಬಂದಿದ್ದ.ಅವನ ಕೆಂಪಾದ ಕಣ್ಣುಗಳಿಗೆ ಬೆದರಿದೆ.ಆದರೆ ಅವು ಕೋಪದಿಂದ ಕೆಂಪಾಗಿರಲಿಲ್ಲ. ಪ್ರತಿದಿನದಂತೆ ಈ ದಿನ "ನೀನ್ಯಾಕೆ ಬಂದೆ ?" ಎಂದು ಕೇಳಲಿಲ್ಲ, "ಹೀಗೆಲ್ಲ ಬರಬಾರದು" ಎಂದು ಬೈಯಲೂ ಇಲ್ಲ.ನನ್ನ ಕೈ ಹಿಡಿದು ಕರೆದುಕೊಂಡು ಹೊರಟ.ಒಂದೂ ಮಾತಿಲ್ಲ!! 
            ಗದ್ದೆಗಳಲ್ಲಿ ನೀರು ತುಂಬಿದ್ದವು.ಅಪ್ಪ ನನ್ನನ್ನು ಭುಜದ ಮೇಲೆ ಕೂರಿಸಿಕೊಂಡು ಹೊರಟ - ನನ್ನ ಕಾಲಿಗೆ ಮಣ್ಣು ಮೆತ್ತಬಾರದೆಂದಲ್ಲ,ಅವನ ಕಣ್ಣೀರು ನನಗೆ ಕಾಣದಿರಲೆಂದು.ನನ್ನಪ್ಪ ಒಳ್ಳೆಯ ಹಾಡುಗಾರ. ಹಾಡುತ್ತಾ ಹೋಗುತ್ತಿದ್ದ.ಇಷ್ಟೂ ದಿನ ನಾನೆಂದುಕೊಂಡಿದ್ದೆ, ಅಪ್ಪ ಖುಷಿಯಾಗಿದ್ದಾಗ ಹಾಡುತ್ತಾನೆಂದು.    ಸುಳ್ಳು !! ಇಂದು ತಿಳಿಯಿತು.ತನ್ನ ನೋವು ಇನ್ನೊಬ್ಬರಿಗೆ ತಿಳಿಯಬಾರದೆಂದು ಹಾಡುತ್ತಾನೆ. 
              ಇಂದಿನ ಹಾಡು ಬಹಳ ಸೊಗಸಾಗಿತ್ತು.ತನ್ನ ಕಷ್ಟವನ್ನು ಮನದುಂಬಿ ಹಾಡಾಗಿಸಿದ್ದ. 
              ಮನೆಯ ದಾರಿ ಹತ್ತಿರವಾಗುತ್ತಿದ್ದಂತೆ ಹಾಡಿನ ದನಿ ಕಡಿಮೆಯಾಯಿತು,ಹೆಜ್ಜೆಯ ಲಯ ಮಂದವಾಯಿತು.....

ಮಳೆಯ ನೆನಪು - 2

ಆ ದಿನವೂ ಬಿಡದೆ ಮಳೆ ಸುರಿಯುತ್ತಿತ್ತು..ಯಾಕೋ ಮಳೆರಾಯ ಮುನಿಸಿಕೊಂಡಿದ್ದ. ಇನ್ನೂ ಚೆನ್ನಾಗಿ ನೆನಪಿದೆ. ಅಪ್ಪ ಹೊಲದಿಂದ ಬಂದಿರಲಿಲ್ಲ. ಅಮ್ಮ ದಿಗಿಲುಗೊಂಡಿದ್ದಳು. ಬಾಗಿಲ ಮೂಲೆಯಲ್ಲಿ ನಿಂತು, ಕಾಣುವಷ್ಟೂ ದೂರ ನೋಡುತ್ತಿದ್ದಳು. ನಾನು ಅಕ್ಕನ ಬಳಿ ಏನೋ ಜಗಳ ಮಾಡುತ್ತಿದ್ದೆ. ಅಮ್ಮನ ಸೆರಗೆಳೆದು ಚಾಡಿ ಹೇಳುತ್ತಿದ್ದೆ, ಗದರಿದಳು. 
ಸಾಲದೆಂಬಂತೆ ಗುಡುಗು ಬೇರೆ. ಅಮ್ಮ ಎಷ್ಟೇ ಹೇಳಿದರೂ ನಾನು ಹಠ ನಿಲ್ಲಿಸಲೇ ಇಲ್ಲ. ಮಳೆಯಲ್ಲಿ ಆಡುತ್ತೇನೆಂದು ಹೊರಬಿದ್ದೆ. ಅಕ್ಕ ಕೂಗುತ್ತಿದ್ದಳು. ನನಗೇನೂ ಕೇಳಿಸಲಿಲ್ಲ.ಈ ಮಳೆಯಲ್ಲಿ ಆಡುವುದನ್ನು ಬಿಟ್ಟು,ಅವರೇಕೆ ಹೆದರಿ ಕುಳಿತಿದ್ದಾರೆ? ಓಹೋ..ಗುಡುಗುಮ್ಮ ಎಂದರೆ ಭಯವಿರಬೇಕು. ನಮ್ಮ ಮನೆಯಲ್ಲಿ ನನಗೆ ಮಾತ್ರ ಧೈರ್ಯ. ಅಪ್ಪನಿಗೂ ಸಹ ಎಂದು ಬೀಗುತ್ತಾ, ಮಳೆ ಹನಿಯನ್ನು ಹಿಡಿಯಲು ಹಾರುತ್ತಿದ್ದೆ.
ಅಕ್ಕ ಓಡುತ್ತಾ ಬಂದಳು. ನನ್ನನ್ನು ಹಿಡಿದು ಹೊಡೆಯುತ್ತಾಳೇನೋ ಎಂದು ನಾನೂ ಓಡಿದೆ." ಏ ಭೂನಾ..ನಿಲ್ಲೇ.." ಎಂದು ಒಂದೇ ರಾಗದಲ್ಲಿ ಕೂಗುತ್ತಿದ್ದಳು. 
ಧಭಾರ್ ಎಂದು ಬಿದ್ದೆ. ಕೆಸರಿನಲ್ಲಿ ಬಿದ್ದೆನಲ್ಲ ಎನ್ನುವುದಕ್ಕಿಂತ ಅಕ್ಕ ಬೈಯುತ್ತಾಳಲ್ಲ ಎನ್ನುವ ಭಯವೇ ಕಾಡುತ್ತಿತ್ತು. ನೋವಾಗದಿದ್ದರೂ ಜೋರಾಗಿ ಅಳುವ ನಾಟಕವಾಡುತ್ತಿದ್ದೆ.
" ಕೂಗ್ತಿದ್ರೂ ಓಡ್ತೀಯಾ? ಈಗ ನೋವಾಗಿದ್ದು ಯಾರಿಗೆ?ಅಳಬೇಡ. ಏಳು ಮೇಲೆ" ಎಂದು ಕೈ ಹಿಡಿದು ಎಬ್ಬಿಸಿದಳು. ಎಷ್ಟೆಂದರೂ ಅಕ್ಕ ತಾನೇ,ಪಾಪ ನನಗೋಸ್ಕರ ಓಡಿ ಬಂದಿದ್ದಳು. ಆದರೆ ನನ್ನ ಹಠ ನಾನು ಬಿಡಬೇಕಲ್ಲ..
"ನಾನು ಮನೆಗೆ ಬರಲ್ಲ. ಅಪ್ಪ ಇದ್ದಲ್ಲಿ ಹೋಗ್ತೀನಿ. ನೀನೂ ಬರಬೇಡ. ಒಬ್ಬಳೇ ಹೋಗ್ತೀನಿ" ಎಂದು ಕೂಗಿದೆ.

"ಹಾಗೆಲ್ಲ ಹಠ ಮಾಡಬಾರದು ಭೂನಾ..ನೋಡು,ಮನೇಲಿ ಅಮ್ಮ ಒಬ್ಬಳೇ ಇದ್ದಾಳೆ. ಅವಳಿಗೆ ನಿನ್ನಷ್ಟು ಧೈರ್ಯ ಇಲ್ಲ ಅಲ್ವಾ ಪುಟ್ಟಾ..ಬಾ,ನಾವು ಹೋಗೋಣ"
" ಇಲ್ಲ. ನಾನು ಬರಲ್ಲ. ಅಲ್ಲಿ ಅಪ್ಪನೂ ಒಬ್ಬನೇ ಇದ್ದಾನೆ ಅಲ್ವಾ,ಅಮ್ಮ ಆದ್ರೂ ಮನೇಲಿದ್ದಾಳೆ. ಅಪ್ಪ ಪಾಪ,ಮಳೇಲಿ ನೆನೆದಿರ್ತಾನೆ.ನಾನು ಅಲ್ಲಿಗೇ ಹೋಗ್ತೀನಿ"
'" ನಿನ್ನ ಹಠ ಬಿಡೋದೇ ಇಲ್ಲ ಅಲ್ವಾ.ನೀನು ಹೇಳಿದ್ದೇ ಆಗಬೇಕು.ನೋಡು,ಈಗ ಮಾತಾಡದೇ ಮನೆಗೆ ಬಾ.." ರೇಗಿದಳು.
ನಾನೇನು ಕಡಿಮೆ?! " ನೋಡು ನಯನಾ,ಅಕ್ಕ ಅಂತಾನೂ ನೋಡಲ್ಲ. ನನಗೇ ಹೇಳ್ತೀಯಾ ನೀನು? ನೀನು ಬೇಕಾದರೆ ಹೋಗು ಮನೆಗೆ,ಅಮ್ಮನ ಜೊತೆ ಇರು. ನಾನಂತೂ ಹೊಲಕ್ಕೆ ಹೋಗ್ತೀನಿ" ಎನ್ನುತ್ತಾ ಹೊಲದ ಕಡೆ ಓಡಿದೆ. ಪ್ರಾಯಶಃ ಅಪ್ಪನನ್ನು ನೋಡಬೇಕು ಎನ್ನುವುದಕ್ಕಿಂತ,ಮಳೆಯಲ್ಲಿ ಆಡಬೇಕೆಂಬ ಹಂಬಲ ಜಾಸ್ತಿ ಇತ್ತು. ಅದೇ ಕಾರಣಕ್ಕೆ ಅಕ್ಕನೊಡನೆ ಜಗಳ ಮಾಡಿದ್ದು.
ಏಕೆ ಹಾಗೆ ಮಾಡಿದೆನೋ..ಗೊತ್ತಿಲ್ಲ. ಆದರೆ ಅನಾಹುತಕ್ಕೆ ನಾಂದಿ ಹಾಡಿದ್ದೆ ....

ಹೆಣ್ಣು