Showing posts with label ಹಾಸ್ಯ ಬರಹ. Show all posts
Showing posts with label ಹಾಸ್ಯ ಬರಹ. Show all posts

Monday, June 15, 2020

ಮಾಯದ ದೆವ್ವ

ಅಂದು ಮಂಗಳವಾರ. ಸಂಜೆ ಸುಮಾರು ಏಳು ಗಂಟೆ ಇರಬಹುದು. ಮಹಡಿಯ ಮೇಲೆ ಕುಳಿತು ಓದಬೇಕೆಂದು ಯೋಚಿಸುತ್ತಿದ್ದೆ . ಹೀಗೆ ಹೇಳುವುದಕ್ಕೂ ಕಾರಣವಿದೆ.

ನಾನು ಬಿ .ಕಾಂ.(b.com.) ಓದುತ್ತಿದ್ದೆ . ಸೆಮಿಸ್ಟರ್ ಪರೀಕ್ಷೆಗೆ ಓದಿಕೊಳ್ಳಲು ರಜಾ ಇತ್ತು . ಹಾಸ್ಟೆಲ್ನಲ್ಲಿದ್ದರೆ ಗೆಳತಿಯರೊಡನೆ ಹರಟುತ್ತೇನೆಂದು ಮನೆಗೆ ಬಂದೆ . ಬಂದು ಸುಮಾರು ನಾಲ್ಕು ದಿನಗಳಾದರೂ ಪುಸ್ತಕ ತೆರೆದು ನೋಡಲು ಮುಹೂರ್ತ ಬಂದಿರಲಿಲ್ಲ . ಆ ಹೆಸರೇ ಹೇಳುವಂತೆ ಬಿ .ಕಾಮ್ .(be-calm) ಆಗಿಯೇ ಇದ್ದೆ .

ಸರಿ, ಏನಾದರಾಗಲಿ , ಇವತ್ತು ಪಿ .ಎಮ್. (ಪ್ರಿನ್ಸಿಪಲ್ಸ್ ಆಫ್ ಮ್ಯಾನೇಜ್ಮೆಂಟ್ ) ಓದೋಣ ಎಂದು ಪುಸ್ತಕ ತೆರೆದೆ . ಏನೋ ಶಬ್ದ .. ಹೂಂ ..ಹೂಂ .. ಎಂದು ! ಹಿಂದೆಂದೂ ಕೇಳಿರಲಿಲ್ಲ . ಒಂದು ಕ್ಷಣ ಬೆಚ್ಚಿದೆ .

ಅಷ್ಟರಲ್ಲಾಗಲೇ ಅಜ್ಜಿ ಕೆಳಗೆ ಜಗುಲಿಯಲ್ಲಿ ಕುಳಿತು ಧಾರಾವಾಹಿ ನೋಡುತ್ತಿದ್ದಳು. ಟಿ .ವಿ . " ಇದು ಪುಟ್ಟ ಗೌರಿಯ ಮದುವೆ " ಎಂದು ಹಾಡಿತ್ತು ; ಕಿವಿಗಳೆರಡು ನೆಟ್ಟಗಾಗಿದ್ದವು . ಏನೋ ಸಾಧಿಸಿದಂತೆ ಮುಖವರಳಿತು . ಮತ್ತೇನೂ ಅಲ್ಲ , ಪಿ .ಎಮ್. ಎಂದರೆ 'ಪುಟ್ಟ ಗೌರಿ ಮದುವೆ' ಎಂದೂ ಆಗಬಹುದಲ್ಲಾ ..!!

ಕೆಳಗೆ ಗೌರಿ ಅಳುವುದು ಕೇಳುತ್ತಿತ್ತು . ಅಯ್ಯೋ ಪಾಪ ! ನಾನು ಧಾರಾವಾಹಿ ನೋಡುತ್ತಿಲ್ಲವೆಂದೇ ಅಳುತ್ತಿದ್ದಾಳೆ ಎನ್ನಿಸಿತು . ಪುಸ್ತಕವನ್ನಲ್ಲೇ ಬಿಟ್ಟು , ಹೋಗಿ ಟಿ.ವಿ .ಯ ಮುಂದೆ ಕುಳಿತುಕೊಂಡೆ . ಆಯ್ತು , ಅಂದಿನ ಓದು ಮುಗಿದಂತೆಯೇ ಲೆಕ್ಕ ..!

ದಿನವೂ ಇದೇ ಕತೆ . ಪರೀಕ್ಷೆಗೆ ಇನ್ನು ಒಂದೇ ವಾರವಿದೆ , ಇಂದಿನಿಂದಾದರೂ ಸರಿಯಾಗಿ ಓದಬೇಕು ಎಂದು ನಿರ್ಧರಿಸುವುದು ; ಸಂಜೆ ಏಳು ಗಂಟೆಗೆ ಪುಟ್ಟ ಗೌರಿ ಎಂದು ಕೂಗಿದಾಕ್ಷಣ ಆ ನಿರ್ಧಾರಗಳಿಗೆಲ್ಲ ಗೆದ್ದಲು ಹಿಡಿಯುತ್ತಿದ್ದವು ಸರಿಯಾಗಿ ಪುಟ್ಟಗೌರಿಯಿಂದ ಪ್ರಾರಂಭವಾದರೆ, ಲಕ್ಷ್ಮಿ ನನ್ನನ್ನೇ ಬಾರಮ್ಮ ಎನ್ನುತ್ತಿದ್ದಳು .ಆಮೇಲೆ ಇದೊಂದು ಧಾರಾವಾಹಿ ನೋಡಿ ಅಗ್ನಿಸಾಕ್ಷಿಯಾಗಿಯೂ ಊಟವಾದ ಬಳಿಕ ಓದಿಕೊಳ್ಳುತ್ತೇನೆ ಎಂದು ನನಗೆ ನಾನೇ ಆಶ್ವಾಸನೆ ನೀಡುತ್ತಿದ್ದೆ, ದೊಡ್ಡ ರಾಜಕಾರಣಿಯಂತೆ ..! ಊಟವಾದ ನಂತರ ,ಪಾಪ ..ಉಳಿದ ಧಾರಾವಾಹಿಗಳು ಏನು ಮಾಡಿದ್ದವು ? ಎಂದು ನೋಡಿ ಹಾಸಿಗೆಯ ಮೇಲೆ ಅಡಿಯಿಂದ ಮುಡಿಯವರೆಗೂ ಹೊದ್ದು ಮಲಗಿದರೆ ಮುಗಿಯಿತು .ಪಾಪ, ನನ್ನ ಪುಸ್ತಕ ಮಹಡಿಯ ಮೇಲೆ ನನಗಾಗಿ ಕಾಯುತ್ತಿರುತ್ತಿತ್ತು ..!!!

ಮಾರನೇ ದಿನ ಗೆಳತಿಗೆ ಫೋನ್ ಮಾಡಿ , ಉಭಯ ಕುಶಲೋಪರಿ ವಿಚಾರಿಸುವಾಗ ಅವಳು ಓದುತ್ತಿದ್ದಾಳೆ ಎಂದು ತಿಳಿದು ಹೊಟ್ಟೆಯೊಳಗೆಲ್ಲೋ ಸಣ್ಣ ಉರಿಯಾಗಿದ್ದು ಸುಳ್ಳಲ್ಲ ! ಅಂದು ಗೌರಿಯೂ ಬೇಡ . ಲಕ್ಷ್ಮಿಯೂ ಬೇಡ ಎಂದು ಖಡಾಖಂಡಿತವಾಗಿ ಖಂಡಿಸಿ , ಪುಸ್ತಕದ ಹಾಳೆಗಳನ್ನು ತಿರುವುತ್ತಿದ್ದೆ .

ಮೇಲೆ ಕೋಣೆಗೆ ಬಂದು, ಲೈಟ್ ಹಾಕಿ , ಬರೆಯುತ್ತಾ ಕುಳಿತರೆ ..ಏನೋ ಶಬ್ದ ! ಏನಿರಬಹುದು ? ಸರಿಯಾಗಿ ಆಲಿಸಿದೆ..ಗೆಜ್ಜೆ ಶಬ್ದ ..!! ಬರೆಯುವುದನ್ನು ನಿಲ್ಲಿಸಿ ಮತ್ತೊಮ್ಮೆ ಆಲಿಸಿದೆ..ಹೌದು ಅದು ಗೆಜ್ಜೆ ಶಬ್ದವೇ ..ಅಂದಿನ ಬರವಣಿಗೆಗೆ ಪೂರ್ಣ ವಿರಾಮ ಹಾಕಿ ಕೆಳಗೆ ಓಡಿಯಾಗಿತ್ತು .

ಮಾರನೇ ದಿನ ರಾತ್ರಿಯೂ ಮತ್ತದೇ ಅನುಭವ . ಮನೆಯ ಬಳಿ ಚೌಡಿಕಟ್ಟೆ ಇತ್ತು .ಎಲ್ಲರೂ ಹೇಳುವಂತೆ ಇದು ಚೌಡಿ ಕಾಟವಿರಬಹುದೇ ?ನೆನಪಿಗೆ ಬಂದ ದೇವರೆಲ್ಲರ ನಾಮಸ್ಮರಣೆ ಮಾಡುತ್ತ , ಕೋಣೆಯ ಲೈಟ್ ಆರಿಸಿದಾಗ ಶಬ್ದವೆಲ್ಲಾ ಸ್ತಬ್ದ ! ಅದೇನಿರಬಹುದೆಂದೇ ತಿಳಿಯಲಿಲ್ಲ .

ಹೀಗೆ ಎರಡು ದಿನಗಳು ಕಳೆದವು . ರಾತ್ರಿ ಓದಲು ಕುಳಿತಾಗ ಮತ್ತೆ ಅದೇ ಶಬ್ದ ಕೇಳಿಸಿತು . ಭಯಕ್ಕೆ ಬಿಟ್ಟ ಕಣ್ಣು ಬಿಟ್ಟಂತೆ ಇತ್ತು; ಪುಸ್ತಕ ಬಾಯ್ತೆರೆದಿತ್ತು ; ಮನಸ್ಸು ಮಾತ್ರ ಎಲ್ಲೆಲ್ಲೋ ತಿರುಗುತ್ತಿತ್ತು . ಇದು ದೆವ್ವವಿರಬಹುದೇ ? ಗೆಜ್ಜೆ ಇದೆ ಎಂದರೆ ಹೆಣ್ಣು ದೆವ್ವವೇ ಇರಬೇಕು .ಬಿಳಿ ಸೀರೆ ಉಟ್ಟಿರಬಹುದು; ಉದ್ದ ಕೂದಲಿರಬಹುದು ಎಂದೆಲ್ಲಾ ಯೋಚಿಸಿದೆ .
ಧೈರ್ಯ ಮಾಡಿ ಕೋಣೆಯಿಂದ ಹೊರಬಂದೆ .ಮತ್ತೆ ಗೆಜ್ಜೆ ಶಬ್ದ. ಜೊತೆಯಲ್ಲಿ ಈ ಬಾರಿ ಮತ್ತೊಂದು ಶಬ್ದವಿತ್ತು .ಅದು ಹೂಂ ..ಹೂಂ .. ಎನ್ನುತ್ತಿತ್ತು .ಭಯದಲ್ಲಿ ಬೆವರಿಳಿಯುತ್ತಿತ್ತು .ಒಮ್ಮೆ ಕಣ್ಣು ಮಿಟುಕಿಸುವುದರಲ್ಲಿ ಯಾವುದೋ ಆಕೃತಿ ಬಲದಿಂದ ಎಡಕ್ಕೆ ಬಹಳ ವೇಗವಾಗಿ ಚಲಿಸಿದಂತೆ ಭಾಸವಾಯಿತು. . ನಾನಲ್ಲಿರಲು ಹೇಗೆ ಸಾಧ್ಯ ? !! ಒಂದೇ ನೆಗೆತ ಒಂದೇ ಓಟ ...ಕ್ಷಣಾರ್ಧದಲ್ಲಿ ಜಗುಲಿಯಲ್ಲಿದ್ದೆ .

ಅಯ್ಯೋ ದೇವಾ ! ಇಂಥಾ ಅನುಭವ ಹಿಂದೆಂದೂ ಆಗಿರಲಿಲ್ಲ .ಎಂದೂ ಹೇಳಿರದ ಹನುಮಾನ ಚಾಲೀಸಾವನ್ನು ಪಟಪಟ ಹೇಳಿದ್ದೆ !! ನಾಳೆಯೂ ಹೀಗೆಯೇ ಆದರೆ ಎಲ್ಲರಿಗೂ ಹೇಳಿಬಿಡುತ್ತೇನೆಂದು ನಿರ್ಧರಿಸಿ, ಮಲಗಿದೆ .

ಮಾರನೇ ದಿನ ಮೇಲೆ ಕೋಣೆಗೆ ಬಂದು ನೋಡಿದರೆ, ಪಾಪ...ನನ್ನ ಪುಸ್ತಕ ಬಾಯಿತೆರೆದುಕೊಂಡು ನನ್ನನ್ನೇ ಕಾಯುತ್ತಿತ್ತು . ಈ ಪುಸ್ತಕವನ್ನು ಛಾವಣಿ ರಾತ್ರಿ ಪೂರ್ತಿ ಓದುತ್ತಿತ್ತು . ನನ್ನ ಬದಲು ಈ ಛಾವಣಿಯೇ ಪರೀಕ್ಷೆ ಬರೆದರೆ ಒಳ್ಳೆಯ ಅಂಕವಾದರೂ ಬರಬಹುದೇನೋ ಎಂದು ನಗು ಬಂತು . ಅಂದು ರಾತ್ರಿಯೂ ಮತ್ತದೇ ಅನುಭವ .ಇನ್ನೂ ಜೋರಾಗಿ ಗೆಜ್ಜೆ ಶಬ್ದ.. ಹೂಂ ..ಹೂಂ .. ಎನ್ನುವುದಂತೂ ಇನ್ನೂ ಹತ್ತಿರವೇ ಕೇಳುತ್ತಿತ್ತು .

ಇದು ಖಂಡಿತವಾಗಿಯೂ ಚೌಡಿಕಾಟವೋ ,ಪ್ರೇತಕಾಟವೋ ಇರಬೇಕು . ಎಲ್ಲರಿಗೂ ಹೇಳುತ್ತೇನೆ , ಯಾವುದಾದರೂ ಶಾಂತಿಹೋಮ ಮಾಡಿಸಲಿ ಎಂದು ಮನದಲ್ಲೇ ಹೇಳಿಕೊಳ್ಳುತ್ತಾ ಎಲ್ಲರೊಡನೆ ಊಟಕ್ಕೆ ಕುಳಿತೆ .ತಲೆಯಲ್ಲೊಂದು ಯೋಚನೆ ಬಂತು. ಓಹೋ ..ನಾನು ಕುಳಿತು ಓದುವ ಜಾಗ ಸರಿಯಿಲ್ಲವೇನೋ ..ವಾಸ್ತು ಹೊಂದುತ್ತಿಲ್ಲವೇನೋ ..ಹೇಗೆ ಹೇಳಲಿ ..ಇದನ್ನೆಲ್ಲ ಹೇಗೆ ಅರ್ಥ ಮಾಡಿಸಲಿ ..ಎಂದುಕೊಳ್ಳುತ್ತಿರುವಾಗಲೇ ಎಲ್ಲರೂ ಊಟ ಮುಗಿಸಿ , ಕೈ ತೊಳೆಯಲು ಹೋಗಿದ್ದರು .

ರಾತ್ರಿ ಮಲಗಿ ,ಬೆಳಿಗ್ಗೆ ಏಳುವ ಹೊತ್ತಿಗೆ ಎಲ್ಲವೂ ತಿಳಿಯಾಗಿತ್ತು . ಮನೆಯಲ್ಲಿ ಹೇಗೆ ಹೇಳಬೇಕೆಂಬ ಗೊಂದಲಕ್ಕೆಲ್ಲ ಪರಿಹಾರ ದೊರೆತಿತ್ತು .ಗೆಳತಿಗೆ ಫೋನ್ ಮಾಡಿ ಜೋರಾಗಿ ಕೂಗಾಡಿದೆ .i

" ನಿನ್ನೆ ಎಲ್ಲಾ ಸರಿಯಾಗೇ ಇದ್ಯಲ್ಲೇ ..ಇವತ್ತೇನಾಯ್ತೆ ನಿಂಗೆ ? ದೆವ್ವ- ಗಿವ್ವ ಮೆಟ್ಕೊಂಡಿದ್ಯಾ ?"

" ಹೌದೇ, ನಿಮ್ಮಂಥಾ ಗೆಳತಿಯರು ಇದ್ದುಬಿಟ್ರೆ ದೆವ್ವ ಮೆಟ್ಕೊಳ್ದೆ ಇನ್ನೆನೇ ಆಗತ್ತೆ ?" ಎಂದು ಹೇಳಿ ಫೋನ್ ಕುಕ್ಕಿದೆ . ರಾತ್ರಿ ದೆವ್ವದ ಮೂಲ ಹುಡುಕಲೇಬೇಕೆಂದು ಹೊರಟವಳಿಗೆ ಎಂತಹ ಆಘಾತ ...

ಮನೆಗೆ ಓದಲು ಬರುವ ಮುನ್ನ ಹಾಸ್ಟೆಲ್ನಲ್ಲಿ ರಾತ್ರಿ ಊಟವಾದ ನಂತರ ಗೆಳತಿಯರೆಲ್ಲ ಗುಂಪಾಗಿ ಕುಳಿತು ದೆವ್ವದ ಸಿನೆಮಾ ನೋಡಿದ್ದೆವು .ಅದರಲ್ಲೇನು ವಿಶೇಷ ಎನ್ನಬೇಡಿ ..

ಜಿರಲೆ ಕಂಡರೆ ಕಿಟಾರ್ ಎಂದು ಕಿರುಚಿ, ನೆಲದಿಂದ ನಾಲ್ಕಡಿ ಮೇಲೆ ಹಾರಿ , ಇಡೀ ಕೋಣೆಯ ರೂಪರೇಷೆಯನ್ನೇ ಬದಲಾಯಿಸಿಬಿಡುವ ಹುಡುಗಿಯರ ಗುಂಪೊಂದು ರಾತ್ರಿ ಸರಿಹೊತ್ತಿನಲ್ಲಿ ಕುಳಿತು ದೆವ್ವದ ಸಿನೆಮಾ ನೋಡುವಾಗ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಲೂ ಅಸಾಧ್ಯ !

ಒಬ್ಬಳು ಮುಖ ಮುಚ್ಚಿಕೊಂಡು ಬೆರಳುಗಳ ಮಧ್ಯದಿಂದ ಕಳ್ಳಿಯ ಹಾಗೆ ಇಣುಕಿ ನೋಡುತ್ತಿದ್ದಳು . ಇನ್ನೊಬ್ಬಳು ಪಕ್ಕದಲ್ಲಿದ್ದವಳ ಕೈಯನ್ನು ಗಟ್ಟಿಯಾಗಿ ಹಿಡಿದು ಕುಳಿತಿದ್ದಳು .ಒಬ್ಬಳಂತೂ ಮೈತುಂಬಾ ಚಾದರ ಸುತ್ತಿಕೊಂಡು ಕುಳಿತಿದ್ದಳು .ದೆವ್ವ ಎದುರಿಗಿದೆಯೋ ಅಥವಾ ನನ್ನ ಪಕ್ಕದಲ್ಲೇ ಇದೆಯೋ ಎಂಬ ಅನುಮಾನ ನನಗೆ ..! ಇನ್ನೇನು ದೆವ್ವ ಬಂತು ಎನ್ನುವಾಗ ಒಬ್ಬಳು ಕಿರುಚಿದ್ದು ಹೇಗಿತ್ತೆಂದರೆ ನಿಜವಾದ ದೆವ್ವ ಬಂದಿದ್ದರೂ ಅದೂ ಓಡಿಹೋಗಬೇಕು ..! ಕರ್ಣ ಕಠೋರ !!

ಇಷ್ಟೆಲ್ಲಾ ಆದರೂ ಪೂರ್ತಿ ಸಿನೆಮಾ ನೋಡಲಿಲ್ಲ . ಹೆಸರು ತೋರಿಸುವಾಗ ನಮ್ಮಲ್ಲಿದ್ದ ಧೈರ್ಯ ಇಂಟರ್ವಲ್ನಲ್ಲಿ ಇರಬೇಕಲ್ಲ !!

" ಏಯ್ , ಸಾಕು ಬನ್ನಿ ಮಲ್ಕೋಳೊಣ .ಆಮೇಲೆ ನಿದ್ದೆ ಬರೋದಿಲ್ಲ ."

" ಇಲ್ವೇ ಏನೂ ಆಗಲ್ಲ . ಇನ್ನೊಂದು ತಾಸು ಅಷ್ಟೇ .ಸಿನೆಮಾ ಮುಗಿಯುತ್ತೆ ಕಣೇ ."

" ಲೇ, ಅಷ್ಟರಲ್ಲಿ ನನ್ನ ಕತೇನೂ ಮುಗಿದಿರುತ್ತೆ."

" ಯಾಕೇ ..ಅಷ್ಟೊಂದು ಭಯ ಆಗತ್ತೇನೇ ?"

" ಹೋಗೆಲೇ, ಹೊತ್ತು-ಗೊತ್ತು ಇಲ್ವಾ ನಿಮಗೆ ? ಆಮೇಲೆ ಮಧ್ಯರಾತ್ರಿ ಬಾತ್ರೂಮ್ಗೆ ನೀನು ಬರ್ತೀಯಾ ನಂಜೊತೆ ?"

" ಅಯ್ಯಯ್ಯೋ ಅದು ಸಿನಿಮಾಗಿಂತ ಹಾರಿಬಲ್ ..!"

" ಹಾಗಾದ್ರೆ ನಾಳೆ ಬೆಳಿಗ್ಗೆ ಸಿನೆಮಾ ನೋಡೋಣ. ಈಗ ಎಲ್ಲರೂ ಬಿದ್ಕೊಳಿ ."

ಅಂತೂ ಮಲಗಿದ್ವಿ .ತಾಸಿಗೆ ಒಮ್ಮೆ " ನಿದ್ದೆ ಬಂತಾ ?" ಎಂದು ಕೇಳೋದು ; " ಇಲ್ಲಾ ಕಣೇ .." ಎಂಬ ಉತ್ತರ . ರಾತ್ರಿ ಹೀಗೇ ಕಳೆದಿತ್ತು .ಅಂತೂ ಮಾರನೇ ದಿನ ಆ ಸಿನೆಮಾ ಮುಗಿಯಿತು .

ಹಾಗಂತ ಹುಡುಗಿಯರನ್ನೆಲ್ಲಾ ಹೆದರುಪುಕ್ಕಲರು ಎಂದುಕೊಳ್ಳಬೇಡಿ .ನಾವು ಕತೆ ಹೇಳಲು ಕುಳಿತರೆ ಮುಗಿಯಿತು ; ಯಾವ ದೆವ್ವವೇ ಆದರೂ ಸಹ ಹೂಂ ..ಎನ್ನಲೇಬೇಕು . ಈ ಸಿನೆಮಾ ನೋಡಿದಮೇಲೆ ಅದರ ಬಗ್ಗೆಯೂ ಮಾತನಾಡಬೇಕಲ್ಲ ..ಹಾಂ ! ದೆವ್ವ ನೋಡೋಕೆ ಚೆನ್ನಾಗಿರಲಿಲ್ಲ ಎಂಬ ವಿಮರ್ಶೆ ಬೇರೆ !! ಯಾರು ಕಣ್ಣು ಬಿಟ್ಟು ದೆವ್ವ ನೋಡಿದ್ದರೋ ಏನೋ ..!!

ಆಮೇಲೆ ಅದು-ಇದು ಮಾತನಾಡುತ್ತ ಊರೊಟ್ಟಿನ ಕತೆಗಳೆಲ್ಲ ಬಂದವು .

" ನಿಮ್ಗೆಲ್ಲಾ ಗೊತ್ತಾ ..ನಮ್ಮೂರಲ್ಲಿ ಚೌಡಿಕಾಟ ಇದೆ ."

" ಹಾಗಂದ್ರೆ ಏನೇ ?"

" ಹರಕೆ ತೀರಿಸಿಲ್ಲ ಎಂದರೆ ಚೌಡಮ್ಮ ಎಲ್ಲವನ್ನೂ ಅಡಗಿಸುತ್ತಾಳೆ ಕಣೇ ."

" ಹೌದಾ ..ಹಾಗಾದ್ರೆ ನೀವು ದೇವರ ಜೊತೆನೂ ಕಣ್ಣಾಮುಚ್ಚಾಲೆ ಆಡ್ತೀರಾ ?"

" ಲೇ ನಾನು ತಮಾಷೆ ಮಾಡ್ತಿಲ್ವೇ .."

" ಆಯ್ತು ಬಿಡು, ನಿಮ್ಮ ಕಾಟ ನನಗೂ ಶುರುವಾದರೆ ಕಷ್ಟ ."

ಮತ್ತೊಬ್ಬಳು ಪ್ರಾರಂಭಿಸಿದಳು ..

" ಹೂಂ ಕಣೇ .ನಮ್ಮೂರಲ್ಲೂ ಸಮಸ್ಯೆ ಇತ್ತಂತೆ . ಅಮಾವಾಸ್ಯೆಯ ರಾತ್ರಿಯಂತೂ ಚಿತ್ರ -ವಿಚಿತ್ರ ಶಬ್ದಗಳಂತೆ .ಆಮೇಲೆ ಪ್ರೇತಕಾಟ ಅಂತ ತಿಳಿದು ಪೂಜೆ ಎಲ್ಲ ಮಾಡಿಸಿದ್ರು ."

" ಸುಮ್ನಿರೇ ಸಾಕು ನೀನು ಈ ಪ್ರೇತನೆಲ್ಲ ನೋಡಿದೀಯಾ ?"

" ನಾನು ನೋಡಿಲ್ಲ.ಆದರೆ ಮನೆಯವರೆಲ್ಲ ಸುಳ್ಳು ಹೇಳ್ತಾರಾ ?"

ಅಬ್ಬಬ್ಬಾ ! ದೆವ್ವದ ಸಿನೆಮಾ ನೋಡುವಾಗ ಇಲ್ಲದಿರೋ ಧೈರ್ಯ ಕತೆ ಹೇಳುವಾಗ -ಕೇಳುವಾಗ ಬಂದಿತ್ತು ..! ಒಬ್ಬಳು ಕತೆ ಹೇಳುವಾಗ ಇನ್ನೊಬ್ಬಳೇನಾದರೂ ' ಹೌದಾ..' ಎಂದು ಬಾಯಿತೆರೆದರಂತೂ ಮುಗಿದೇಹೋಯಿತು .ಆ ದೆವ್ವವನ್ನು ಕಣ್ಣಾರೆ ಕಂಡಂತೆ ಕತೆ ರೂಪುಗೊಳ್ಳುತ್ತದೆ . ಆದರೂ ಕತೆಯನ್ನು ರೋಚಕವಾಗಿ ಹೇಳುವ ರೀತಿ ಎಲ್ಲರಿಗೂ ಬರುವುದಿಲ್ಲ ಬಿಡಿ ..!

ಅಂದು ಅವರು ಕತೆ ಹೇಳುವಾಗ ನಾನು ಹೇಗೆ ಕಣ್ಣು ಬಿಟ್ಟು ಕುಳಿತಿದ್ದೆನೆಂದರೆ ಪ್ರಾಧ್ಯಾಪಕರು ಮಾಡಿದ ಪಾಠಗಳೆಲ್ಲ ಒಮ್ಮೆಲೇ ಮಾಯವಾಗಿ , ಈ ಕತೆಗಳಷ್ಟೇ ತಲೆಯಲ್ಲಿ ಉಳಿದಿದ್ದವು .ಅವರ ಕತೆಗಳ ಆ ಚೌಡಿ ಪ್ರೇತಗಳು ನನ್ನ ತಲೆಯೊಳಗೆ ಹೊಕ್ಕಿದ್ದಂತೂ ನಿಜ .

ಆದರೂ ನನ್ನ ದೆವ್ವವನ್ನು ಕಂಡುಹಿಡಿಯಬೇಕಿತ್ತು.! ಎಲ್ಲರೂ ಕುಳಿತು ಊಟ ಮಾಡುವಾಗ ರಾತ್ರಿ ಗೂಬೆ ಕೂಗುವ ಶಬ್ದದ ಬಗ್ಗೆ ಅಜ್ಜ ಹೇಳಿದರು . ಆಗ ಅರಿವಾಗಿದ್ದು..ರಾತ್ರಿ ಹೂಂ.. ಹೂಂ. ಎನ್ನುವುದು 'ಗೂಬೆ' ಎಂದು .


ಅಲ್ಲೇ ಹತ್ತಿರದ ಯಾವುದೋ ಮರದಲ್ಲಿರಬೇಕು, ಗೂಬೆ ಮುಂಡೇದು.., ಕಾಣೊದೂ ಇಲ್ಲ ..!!ಥೂ ..ಯಾರೋ ಹೂಂಗುಡುತ್ತಿದ್ದಾರೆ ಎಂದುಕೊಂಡೆನಲ್ಲಾ ನಾನು ಗೂಬೇನೆ !!

ಹಾಗಾದರೆ ಆ ಗೆಜ್ಜೆ ಶಬ್ದ ಎಲ್ಲಿಂದ ಬರುತ್ತಿದೆ ? ಮಹಡಿಗೆ ಹೋಗಿ, ಕೋಣೆಯ ಲೈಟ್ ಹಾಕಿದಾಗ , ಮತ್ತೆ ಶಬ್ದ ಕೇಳಿಸಿತು . ಪಕ್ಕದ ಕೋಣೆಗೆ ಹೋಗಿ ತಡಕಾಡಿದೆ. ಹಳೆಯ ಟ್ರಂಕುಗಳ ಮಧ್ಯದಲ್ಲಿ ಒಂದು ರೀತಿಯ 'ಹುಳ' ! ಅದು ಕೂಗಿದಾಗ ಗೆಜ್ಜೆಯದೇ ಸಪ್ಪಳ !!

ಬೆಳಕು ಕಂಡಾಗ ಮಾತ್ರ ಆ ರೀತಿ ಕೂಗುತ್ತಿತ್ತು ; ತನ್ನನ್ನು ತಾನು ರಕ್ಷಿಸಿಕೊಳ್ಳಲು ಇರಬಹುದು .

ಹಾಂ ! ಅಂದು ಕಂಡ ಆಕೃತಿಯೂ ಕಂಡಿತು . ಬಲಗಡೆಯಿದ್ದ ವಿದ್ಯುತ್-ತಂತಿಯಿಂದ ಎಡಗಡೆಯ ಮರದತ್ತ ಹಾರಿದ 'ಬಾವಲಿ'..!! ಭಯದ ಕಣ್ಣಲ್ಲಿ ಅಂದು ಅದು ಏನೆಂದೇ ತಿಳಿದಿರಲಿಲ್ಲ .

ಸಾಗರದ ನೀರಿಗೆ ಆಣೆಕಟ್ಟು ಕಟ್ಟುವ ಕಾಯಕದಂತೆ , ನನ್ನ ನಗುವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ .ನನ್ನ ಪುಣ್ಯ ! ಮನೆಯಲ್ಲಿ ಹೇಳಿ ನಗೆಪಾಟಲಾಗಲಿಲ್ಲವಲ್ಲ .. ಆದರೂ ನಡೆದಿದ್ದೆಲ್ಲಾ ನೆನಪಾಗಿ, ನನ್ನೊಳಗಿನ ನಗು ನಿಲ್ಲಲಿಲ್ಲ .

ಮನೆಯಲ್ಲಂತೂ ಓದಲಿಲ್ಲ, ಹಾಸ್ಟೆಲ್ಗೆ ಹೋಗುವುದೇ ಒಳ್ಳೆಯದು. ಇನ್ನು ಈ ಗೆಳತಿಯರೊಡನೆ ದೆವ್ವದ ಸಿನೆಮಾ ನೋಡುವುದಿಲ್ಲ ; ಪ್ರೇತದ ಕತೆಯನ್ನೂ ಕೇಳುವುದಿಲ್ಲ .

ಮನದೊಳಗೆ ದೆವ್ವವನ್ನು ಸೃಷ್ಟಿಸಿಕೊಂಡು ವಾರವಿಡೀ ಸಂಕಟಪಟ್ಟೆನಲ್ಲಾ ...

ಅಮ್ಮ ಯಾವಾಗಲೂ ಹೇಳುತ್ತಿದ್ದಳು - " ದೇವರು ಮನುಷ್ಯನನ್ನು ಸೃಷ್ಟಿಸಿದರೆ, ಮನುಷ್ಯ ದೆವ್ವವನ್ನು ಸೃಷ್ಟಿಸುತ್ತಾನೆ ."

" ದೆವ್ವಕ್ಕೂ , ದೈವಕ್ಕೂ ನಮ್ಮೊಳಗಿನ ನಾವೇ ಜವಾಬ್ದಾರರು ."

ಅದು ನಿಜ ಎಂದೂ ಅರ್ಥವಾಯಿತು .

ಬಸ್ಸಿನಲ್ಲಿ ಸಿಕ್ಕನೊಬ್ಬ ಬುದ್ಧಿವಂತ

ನಿಮ್ಮ ಪ್ರಕಾರ ಬುದ್ದಿವಂತ ಎಂದರೆ ಯಾರು ಎಂದು ಪ್ರಶ್ನೆ ಮಾಡಿದರೆ, ವಿಧ ವಿಧ ಉತ್ತರಗಳು ದೊರೆತವು. 

ತರಗತಿಯಲ್ಲಿ ಮೊದಲ ಅಂಕ ಗಳಿಸಿದವ ಎಂದು ಒಬ್ಬ ಹೇಳಿದರೆ, ಪರೀಕ್ಷೆಯ ಹಿಂದಿನ ರಾತ್ರಿ ಓದಿ, ಅರವತ್ತು ಪರ್ಸೆಂಟ್ ನಲ್ಲಿ ಪಾಸ್ ಆಗುವವ ಬುದ್ಧಿವಂತ ಎಂದು ಮತ್ತೊಬ್ಬ ಹೇಳಿದ. ಅಂಗಡಿಯವ ಹೇಳಿದ ಬೆಲೆಗೆ ಒಪ್ಪದೇ ಚೌಕಾಶಿ ಮಾಡಿ ಕಡಿಮೆಗೆ ತರುವುದು ಬುದ್ಧಿವಂತಿಕೆ ಎಂದೊಬ್ಬಳು ಹೇಳಿದರೆ, ಅಷ್ಟು ವಾದಮಾಡಿದರು ನಮ್ಮ ಲಾಭಕ್ಕೆ ಕೊರತೆಯಾಗದಂತೆ ಮಾರುವುದು ಬುದ್ಧಿವಂತಿಕೆ ಎಂದ ಅಂಗಡಿಯವ. ರಾತ್ರೋ -ರಾತ್ರಿ ಸರಕಾರ ಕಟ್ಟಿ ನಿಲ್ಲಿಸುವವವ ಬುದ್ಧಿವಂತ ಎಂದನೊಬ್ಬ ವಿಚಾರವಂತ, ಒಂದು ದಿನದೊಳಗೆ ಸರ್ಕಾರವನ್ನು ಕೆಡವುವವ ಬುದ್ಧಿವಂತ ಎಂದನೊಬ್ಬ (ಸೊ ಕಾಲ್ಡ್ )ಪ್ರಜ್ಞಾವಂತ....!!

ಇಲ್ಲಿ ಎಲ್ಲರೂ ಬುದ್ಧಿವಂತರೇ....

ಒಂದು ಹಾಡು ನೆನಪಾಗುತ್ತಿದೆ ಆದರೆ ಒಂದು ಸಾಲನ್ನು ಮಾತ್ರ ಸ್ವಲ್ಪ ಬದಲಾಯಿಸಿದ್ದೇನೆ.  
ದೊಡ್ಡವರೆಲ್ಲ ಜಾಣರಲ್ಲ..  
ಚಿಕ್ಕವರೆಲ್ಲ ಕೋಣರಲ್ಲ...  
ಕುಡುಕರಿಗಿಂತ ಬುದ್ಧಿವಂತರು ಎಲ್ಲೂ ಸಿಗೋದಿಲ್ಲ..
ಗೆಳೆಯ ಎಲ್ಲೂ ಸಿಗೋದಿಲ್ಲ.. !!!

ಯಾಕೆ ಎಂದಿರಾ??- ಕಣ್ಣಾರೆ ಕಂಡಿದ್ದೇನೆ. 

   ಒಮ್ಮೆ ನಾನು, ನನ್ನ ಗೆಳತಿ ಹುಬ್ಬಳ್ಳಿಯಿಂದ ಶಿರಸಿಗೆ ಪ್ರಯಾಣಿಸುತ್ತಿದ್ದೆವು -ಕೆಂಪು ಬಸ್ಸಿನಲ್ಲಿ(ನಮ್ಮ ಕೆ. ಎಸ್ ಆರ್. ಟಿ. ಸಿ. ಯನ್ನು ಪ್ರೀತಿಯಿಂದ ಕರೆಯುವ ರೀತಿ...). ಕತ್ತಲಾಗಿತ್ತು ; ಸಣ್ಣದಾಗಿ ಮಳೆ ಬರುತ್ತಿತ್ತು. ಬಸ್ಸಿನಲ್ಲಿ ಬಹಳ ಜನರು ಇರದೇ ಇದ್ದರೂ, ಇನ್ನೊಬ್ಬ ಹತ್ತಿದರೂ ಅವನಿಗೆ ಕುಳಿತುಕೊಳ್ಳಲು ಜಾಗವಿರಲಿಲ್ಲ. 

 ಸರಿಯಾಗಿ ನೆನಪಿಲ್ಲ. ಹುಬ್ಬಳ್ಳಿ ಪೇಟೆಯನ್ನು ದಾಟಿ ಮುಂದೆ ಬಂದಿದ್ದೇವೆ. ಆಗ ಒಬ್ಬ ಬಸ್ ಹತ್ತಿದ. ಪಾಪ.. ಸರಿಯಾಗಿ ನಿಲ್ಲಲೂ ಆಗುತ್ತಿಲ್ಲ ಅವನಿಂದ. ದೇಹ ಕೃಶವಾಗಿದೆ. ಕಣ್ಣುಗಳು ಕೆಂಪಾಗಿವೆ;ನಿಲ್ಲಲು ಏನಾದರೊಂದು ಆಧಾರ ಬೇಕಿತ್ತು. ಸರಿಯಾಗಿಯೇ ತೀರ್ಥಸೇವನೆ ಆಗಿತ್ತು. ಕೈಯ್ಯಲ್ಲಿದ್ದ ಸಣ್ಣ ಬಾಟಲಿಯನ್ನು ಮಾತ್ರ ಬಂಗಾರವೇನೋ ಎಂಬಂತೆ ಭದ್ರವಾಗಿ ಹಿಡಿದುಕೊಂಡಿದ್ದ. 

" ಯೋ ಕಂಡಕ್ಟರಪ್ಪ.. ಟಿಕೆಟ್ ಕೊಡಂಗಿಲ್ಲೇನ ನನಗ? " ಏರುದನಿಯಲ್ಲಿ ಕೂಗಿದ. 
"ನೀ ರೊಕ್ಕ ಕೊಟ್ರ ನಾ ನಿನಗ್ ಟಿಕೆಟ್ ಕೊಡ್ತನಿ "
"ತಗೋಳೋ ಯಪ್ಪಾ.. ನಾ ಏನ್ ಕೊಡಂಗಿಲ್ಲಾ ಅಂದೆಏನ್ ಈಗ ".. ದುಡ್ಡು ಕೊಟ್ಟ. ಕಂಡೆಕ್ಟರ್ ಟಿಕೆಟ್ ಹರಿದ. 

 ಆಯ್ತಲ್ಲ ಕೆಲಸ.. ಕಂಡೆಕ್ಟರ್ ತನ್ನ ಜಾಗದಲ್ಲಿ ಕುಳಿತು ಅಂದಿನ ಲೆಕ್ಕ ಬರೆಯುತ್ತಿದ್ದ. 

ಅಸಲಿ ಮಾತು ಪ್ರಾರಂಭವಾಗಿದ್ದೇ ಆಮೇಲೆ... 

"ಏನಯ್ಯ ಕಂಡಕ್ಟ್ರಪ್ಪ.. ನೀ ಏನಂತ ತಿಳ್ಕೊಂಡಿ ನನ್ನ.. ನಂಗು ಲೆಕ್ಕ ಬರತೈತಿ "
"ಏನಾತ್ಲೆ ನಿಂಗ.. "
"ಏನ್ ರೊಕ್ಕ ನೀನೇ ಹೊಡ್ಕೋಬೇಕ್ ಮಾಡಿಯೇನಲೇ.. "
"ಏನ.. ಏನ್ ಮಾತಾಡ್ತಿ ನೀನ? ಕುಡ್ದಿದ್ದು ಜಾಸ್ತಿ ಆಗೈತೇನ್? "
"ನೋಡ ನಾ ಎಷ್ಟರ ಕುಡೀತೇನಿ.. ನಿಂಗ್ಯಾಕ್ ಅದ.. ಮೊದ್ಲ ನನ್ ರೊಕ್ಕ ನಂಗ್ ಕೊಡ "
"ಏನ್ ರೊಕ್ಕ ಲೇ... "

ಇಲ್ಲಿಯವರೆಗೆ ನಾನು ನನ್ನ ಫ್ರೆಂಡ್ ಇಬ್ಬರೂ ಅರ್ಥ ಮಾಡಿಕೊಂಡ ರೀತಿಯೇ ಬೇರೆಯಿತ್ತು. ಬಹುಶಃ ಇವನು ಜಾಸ್ತಿ ಹಣ ಕೊಟ್ಟಿದ್ದಾನೆ. ಕಂಡೆಕ್ಟರ್ ಇನ್ನೂ ಚಿಲ್ಲರೆ ಕೊಟ್ಟಿರದ ಕಾರಣ ಇವನು ಗಲಾಟೆ ಮಾಡುತ್ತಿದ್ದಾನೆ. 

ಅಥವಾ ಕುಡಿದ ಮತ್ತಿನಲ್ಲಿ ಏನೇನೋ ಹೇಳುತ್ತಿದ್ದಾನೆ ಎಂದು ನಮ್ಮಲ್ಲೇ ಮಾತನಾಡಿಕೊಂಡೆವು. 

  ಆದರೆ ಕಂಡೆಕ್ಟರ್ ಕೋಪಿಸಿಕೊಂಡಿದ್ದ. ಎಷ್ಟು ಹಣವನ್ನು ವಾಪಾಸ್ ಕೊಡಬೇಕೋ, ಅದನ್ನು ಕೊಟ್ಟಿದ್ದೇನೆ ಎಂದು ಪದೇಪದೇ ಹೇಳುತ್ತಿದ್ದರೂ ಕುಡುಕ ಮಹಾಶಯ ಕೇಳಲು ತಯಾರಿರಲಿಲ್ಲ. 

  ಆಮೇಲೆ ನಿಜ ವಿಷಯ ಏನೆಂದು ಅರ್ಥವಾಗಿದ್ದು. 

"ನಾ ಐವತ್ತ ಕೊಟ್ಟೇನಿ. ನೀ ನಂಗ ಇಪ್ಪತ್ತ್ ಕೊಟ್ಟಿ.. ಹೌದೋ ಇಲ್ಲೋ... "ಎಂದ ಕುಡುಕಪ್ಪ. 
"ನೀ ಎಲ್ಲಿ ಹತ್ತಿದಿ ಬಸ್ ಹೇಳು.. ಅಲ್ಲಿಂದ ನೀ ಎಲ್ಲಿಗ್ ಕೇಳ್ದಿ... ಅದ್ಕ ಟಿಕೆಟ್ ಮೂವತ್ತ ಆಕೇತಿ ಅಷ್ಟ ತಗೋಂಡೀನಿ "
"ನಾ ಯಾಕ್ ಪೂರಾ ರೊಕ್ಕ ಕೊಡ್ಬೇಕ? "
"ಯಾಕ ಸೀನಿಯರ್ ಸಿಟಿಜನ್ ಇದ್ದಿ ನೀನ ? ಇದ್ರ ಕಾರ್ಡ್ ಕೊಡ.. "
"ಅಲ್ಲಲೇಪಾ... ನಾ ಮುದ್ಕ ಅಲ್ಲ "
ಎಂದು ಇನ್ನೂ ಏನೇನೋ ಬಡಬಡಾಯಿಸುತ್ತಿದ್ದ. 

ಕಂಡೆಕ್ಟರ್ ತಲೆ ಕೆಟ್ಟು, ಇನ್ನೊಬ್ಬರ ಬಳಿ ತನ್ನ ಅಳಲು ತೋಡಿಕೊಂಡ. ಈ ರಾತ್ರಿ ಬಸ್ ಗೆ ಮಾತ್ರ ಡ್ಯೂಟಿ ಮಾಡ್ಬಾರ್ದು. ಎಲ್ಲ ಕುಡುಕ ನನ್ನ ಮಕ್ಕಳೇ ಇರ್ತಾರೆ. ಜೀವ ತಿಂತಾರೆ. ಎಂದೆಲ್ಲ ಹೇಳುತ್ತಿದ್ದ.
 ನಾವೆಲ್ಲ ಮೂಕ ಪ್ರೇಕ್ಷಕರು.  
ಈಗ ವಾದ ಮಂಡಿಸುವುದು ಕುಡುಕನ ಸರದಿ.. 
"ಅಲ್ಲ ಸಾರ್, ನಾನ್ ಯಾಕ್ ಪೂರಾ ರೊಕ್ಕ ಕೊಡ್ಬೇಕ್ ನೀವೇ ಹೇಳಿ. ನಾ ಅರ್ಧ ಟಿಕೆಟ್ ರೊಕ್ಕ ಕೊಡ್ತೇನಿ "
ಒಬ್ಬ ಹಿರಿಯರು ಹೇಳಿದರು.. "ನೋಡಪಾ.. ನಿಂಗ ಒಂದ ಟಿಕೆಟ್- ಮೂವತ್ತೇ ರೂಪಾಯಿ..
ಕಡಿಮೆ ಆಗ್ಬೇಕಂದ್ರ ಒಂದ ನೀ ಸೀನಿಯರ್ ಸಿಟಿಜನ್ ಆಗಿರ್ಬೇಕ ಇಲ್ಲ ಅರ್ಧಕ್ಕೆ ಬೇಕಂದ್ರ ಹತ್ತ ವರ್ಷಕ್ಕಿಂತ ಸಣ್ಣಇರ್ಬೇಕಾ... "

ಈಗ ಕಂಡೆಕ್ಟರ್ ಮಧ್ಯೆ ಬಾಯಿ ಹಾಕಿದ.. "ಕೇಳ್ದ್ಯೋ ಇಲ್ಲೋ ಅವ್ರ ಹೇಳಿದ್ನ... ನಿಂಗ ಹ್ಯಾಂಗ್ ಅರ್ಧ ಕೊಡಕ್ ಬತ್ತದ?? "
"ಇಲ್ಲ ನಾ ಪೂರಾ ರೊಕ್ಕ ಕೊಡಂಗಿಲ್ಲಾ "
"ನೋಡಪಾ.. ನಾನೂ ಪೂರಾ ರೊಕ್ಕ ಕೊಟ್ಟ ಟಿಕೆಟ್ ತಗೊಂಡೀನಿ. ಒಬ್ಬ ಮನಿಷಾ ಒಂದ ಕಡಿಂದ ಮತ್ತೊಂದ ಕಡಿಕೆ ಬಸ್ನಾಗೆ ಹೋಗ್ಬೇಕಂದ್ರ ಒಂದ್ ಟಿಕೆಟ್ ತಗೋಬೇಕ.. ನೀ ಯಾಕ್ ಅರ್ಧ ಕೊಡ್ತಿ? "ಎಂದರು ಆ ಹಿರಿಯರು.
"ನೀವ್ ಕೊಡ್ತೀರಿ ಸಾರ್. ನಾ ಕೊಡಂಗಿಲ್ಲಾ.. "
"ಅದೇ ಯಾಕ್ ಕೊಡಂಗಿಲ್ಲಾ.. "
"ನೋಡ್ರಿ ಸರ... ನಿಮ್ಗ ಸೀಟ್ ಐತಿ.. ಇಲ್ಲಿ ಎಲ್ರಿಗೂ ಸೀಟ್ ಐತಿ.. ಅರಾಮ್ ಕುಂತಾರ.. ಅದ್ಕೆ ಫುಲ್ಲು ಟಿಕೆಟ್ ತಗೊಂಡಾರ.. ಆದ್ರ ನಾ ನಿಂತೀನಿ.. ಕಾಲ್ ನೋವಾಕೈತಿ. ಡ್ರೈವರ ಬ್ರೇಕ್ ಹಾಕ್ತಾನಾ.. ನಾ ಜೋತಾಡ್ತೇನಿ.. ನಾ ಯಾಕ್ರೀ ಪೂರಾ ರೊಕ್ಕ ಕೊಡ್ಬೇಕ ? ನೋಡ್ರಿ ನೀವ್ ಹೇಳಿದ್ದ ಖರೆ.. ಇಲ್ಲಿಂದ ಮತ್ತೊಂದ್ಕಡಿಕೆ ಹೋಗ್ಬೇಕಂದ್ರ ರೊಕ್ಕ ಕೊಟ್ಟ ಒಂದ್ ಟಿಕೆಟ್ ತಗೋಬೇಕ.. ಆದ್ರೆ ನೀವ್ ಅರಾಮ್ ಕುಂತಿರಿ, ನಾನ್ ತ್ರಾಸ್ ಪಟ್ಟ ನಿಂತೇನಿ..ನಂಗ ನಿಮ್ಗ ವ್ಯತ್ಯಾಸ ಇಲ್ಲೇನ್ರಿ?"

ಈಗ ಇವನಿಗೆ ಯಾರು ಉತ್ತರ ಕೊಡ್ತಾರೆ? ಎಲ್ಲರ ಬಾಯನ್ನು ಮುಚ್ಚಿಸಿದ. ಅವನು ಹೇಳಿದ್ದು ತಪ್ಪೇನಿರಲಿಲ್ಲ. ಕುಡುಕಪ್ಪ ಬುದ್ಧಿವಂತ ಅಂತ ಅನಿಸಿದ್ದು ಸುಳ್ಳಲ್ಲ. ಆದರೆ ಕುಡಿದಾಗ ಮಾತ್ರ ಬುದ್ಧಿವಂತನೇನೋ ಎಂಬ ಸಣ್ಣ ಅನುಮಾನವೂ ಇದೆ... !!

ಕಂಡೆಕ್ಟರ್ -ಇಂತಹ ಭಂಡರಿಗೆ ಯಾರು ಉತ್ತರ ಕೊಡ್ತಾರೆ. ಏನಾದ್ರೂ ಮಾಡ್ಕೊಳ್ಳಿ ಎಂದು ಗೊಣಗುತ್ತ ಕುಳಿತ.. 

"ಅಲ್ಲಪಾ.. ಕಾನೂನ್ ಹಾಂಗ್ ಹೇಳತೈತಿ.. ನೀ ಏನಾರ ಅನಕಂಡ್ರೆ ಯಾರ್ ಏನ್ ಮಾಡ್ಯಾರ? "
"ಯಾವದಪಾ ಕಾನೂನ? ಒಬ್ಬರಿಗೊಂದ ಇನ್ನೊಬ್ಬರಿಗೊಂದ ಹೇಳತೈತೇನ ನಿಮ್ಮ ಕಾನೂನ? ನಮ್ಗ ಬರಂಗಿಲ್ಲ ಅಂತ..ನಿಮ್ಗ ಬೇಕಾದಂಗ ನೀವ್ ಹೇಳ್ತಿರಿ.. ನನ್ ರೊಕ್ಕ ನಂಗ್ ಕೊಡಿಸ್ರಿ... "
"ಸಾರ್.. ಅವಂಗೆ ಎಷ್ಟ್ ಹೇಳಿದ್ರು ಅಷ್ಟೇ.. ಬುಟ್ಬುಡಿ "ಎಂದ ಕಂಡೆಕ್ಟರ್.. 

ಈಗ ಕುಡುಕ ಪೂರ್ತಿ ಕಂಡೆಕ್ಟರ್ ಮೇಲೆ ಹರಿಹಾಯ್ದ. "ನೀ ಮಾತಾಡ್ಬ್ಯಾಡ... ಹಿಂಗ ಕಾನೂನ, ಮೊತ್ತೊಂದ ಅಂತ ಎಲ್ಲ ರೊಕ್ಕ ನೀನ ಇಟ್ಕೋತಿ..
ನಿಮ್ಮ ಕಾನೂನ್ ಸರಿಗಿಲ್ಲ.. ಅದ್ನ ಮಾಡಿದೋನ ತಂದ ಒಂದ್ಸಲ ಬಸ್ಸಿನ್ಯಾಗ ನಿಲ್ಸಿ.. ಆಗ ಅವ್ನ ನೋಡಿ, ಚೇಂಜ್ ಮಾಡ್ತಾನ " ಎಂದೆಲ್ಲ ಕೂಗಿ ಮುಗಿಸುವ ಹೊತ್ತಿಗೆ ಅವನು ಇಳಿಯುವ ಜಾಗ ಬಂದಿತ್ತು.. ಹೇಗೋ ಕಷ್ಟ ಪಟ್ಟು ಅವನನ್ನು ಇಳಿಸಿ ಹೊರಟರೂ, ಬಸ್ಸು ಕಣ್ಣಿಗೆ ಕಾಣುವವರೆಗೂ ಕೂಗುತ್ತಿದ್ದ. 

ನಾವು ಊರಿಗೆ ಹಿಂತಿರುವವರೆಗೂ ಮನಸಿನಲ್ಲಿ ಉಳಿದುಹೋದ. 

ನಾವು ಮಾತನಾಡಿಕೊಂಡೆವು. ಸರಿ ಅಲ್ವಾ ಅವ್ನು ಹೇಳಿದ್ದು.. ಕುಡುಕ ಅಂತ ಅವ್ನು ಹೇಳಿದ್ದೆಲ್ಲ ತಪ್ಪು ಅನ್ನೋಕೆ ಆಗಲ್ಲ.. ಎಷ್ಟು ನಿಜ ಇತ್ತು.. ಎಲ್ಲೋ ಯಾರೋ ಕುತ್ಕೊಂಡು ಕಾನೂನು ಮಾಡ್ತಾರೆ.. ಅನುಭವಿಸೋರಿಗೆ ಗೊತ್ತು ಕಷ್ಟ... ಏನೇ ಇರಲಿ.. ಅವತ್ತು ಬಸ್ಸಿನಲ್ಲಿ ಒಬ್ಬ ಬುದ್ಧಿವಂತನನ್ನು ಕಂಡೆ.

ಆದರೆ ಬೆಂಗಳೂರಿಗೆ ಬಂದು, ಬಿ. ಎಂ. ಟಿ. ಸಿ. ಹತ್ತಿದಮೇಲೆ ಗೊತ್ತಾಗಿದ್ದು.. ಇಲ್ಲಿ ಸೀಟ್ ಮೇಲೆ ಕುಳಿತೋರಿಗಿಂತ ಜಾಸ್ತಿ, ನಿಂತು, ಜೋತಾಡಿಕೊಂಡು ಹೋಗುವವರೇ ಇರುತ್ತಾರೆ. ಹಾಗೇನಾದರೂ ನಿಂತುಕೊಂಡು ಹೋಗುವವರಿಗೆ ಅರ್ಧ ರೇಟ್ ನಲ್ಲಿ ಟಿಕೆಟ್ ಕೊಡಲು ಪ್ರಾರಂಭಿಸಿದರೆ, ಸರಕಾರ ಎಲ್ಲಿಗೆ ಹೋಗ್ಬೇಕು? 

ಮತ್ತೆ ನೀವ್ಯಾರು ಬಿ. ಎಂ. ಟಿ. ಸಿ. ಕಂಡೆಕ್ಟರ್ ಬಳಿ ಈ ವಿಷಯಕ್ಕೆ ಜಗಳ ತೆಗೆಯಬೇಡಿ.. ಈಗಲೇ ಒಂದು ಪ್ರಯಾಣದಲ್ಲಿ ಕಡಿಮೆ ಎಂದರೂ ನಾಲ್ಕು ಜಗಳಗಳು ಪ್ರತಿದಿನ ಕಾಣಸಿಗುತ್ತವೆ. ಮಧ್ಯೆ ಇದೊಂದು ಬೇಡ. 

ಇದು ಕೇವಲ ಕುಡುಕ ಬುದ್ಧಿವಂತರ ತರ್ಕ.. ಅದೂ ಕುಡಿದಾಗ ಮಾತ್ರ..........

Saturday, June 13, 2020

ನಮ್ಮೂರಿನಲ್ಲೊಬ್ಬ ಮುಖ್ಯಮಂತ್ರಿ

ನಾನು ಚಿಕ್ಕ ವಯಸ್ಸಿನಿಂದಲೂ ಆತನನ್ನು ನೋಡಿದ್ದೇನೆ. ಸಾಯಂಕಾಲ ಅಚ್ಚುಕಟ್ಟಾಗಿ ಬಿಳಿ ಅಂಗಿ, ಬಿಳಿ ಪಂಚೆ ಧರಿಸಿ ಆತ ಹೊರಟೆನೆಂದರೆ ಎಲ್ಲಾ ಒಮ್ಮೆ ತಿರುಗಿ ನೋಡಬೇಕು, "ಓಹ್ ಇನ್ನು ರಾತ್ರಿಯಿಡೀ ಮಧ್ಯರಸ್ತೆಯಲ್ಲಿ ಇವನದೇ ದರ್ಬಾರ್" ಎಂದು ಯೋಚಿಸುತ್ತಾ !!

     ಸಂತೆಯ ದಿನವಂತೂ ಸಮಯದ ಪರಿವೆಯೇ ಇರುತ್ತಿರಲಿಲ್ಲ. ರಸ್ತೆಯನ್ನು ಅಳತೆ ಮಾಡುತ್ತಾ ಬರುತ್ತಿರುವನೇನೋ ಎಂಬ ಅನುಮಾನ ಕಾಡುತ್ತಿತ್ತು! ಒಮ್ಮೊಮ್ಮೆ ವಾಹನಗಳು ಬಂದಾಗ ಅವನು ದಾರಿ ಬಿಡುವುದಿರಲಿ, ವಾಹನಗಳೇ ಅವನಿಗೆ ದಾರಿ ಬಿಟ್ಟುಕೊಟ್ಟು ರಸ್ತೆಯಂಚಲ್ಲಿ ಸಾಗುತ್ತಿದ್ದವು. ಹಾಗೆ ಗಾಡಿಗಳು ತಮ್ಮ ಪಾಡಿಗೆ ತಾವು ಹೋದರೂ ಸುಮ್ಮನಿರುವ ಜಾಯಮಾನ ಇವನದಲ್ಲ ಅಥವಾ ಇವನ ಹೊಟ್ಟೆಯಲ್ಲಿದ್ದ ದೇವರು ಹಾಗೆ ಸುಮ್ಮನೆ ನಿಲ್ಲಲು ಬಿಡುತ್ತಿರಲಿಲ್ಲವೋ ಏನೋ! ಜೋರಾಗಿ "ನಮಸ್ಕಾರ ಸಾರ್" ಎಂದು ಕೂಗುತ್ತಾ ಎರಡೂ ಕೈಗಳನ್ನೂ ಮೇಲಕ್ಕೆತ್ತಿ ತೂರಾಡುತ್ತ ನಮಸ್ಕಾರಾಸನ ಮಾಡುತ್ತಿದ್ದ.  .

      ಇನ್ನೇನು ರಾತ್ರಿ ಊರವರೆಲ್ಲ ದೀಪ ಆರಿಸಿ ಮಲಗಬೇಕು, ಅಷ್ಟರಲ್ಲಿ ಹಾಜರಾಗುತ್ತಿದ್ದ.ಮಜವೇನೆಂದರೆ ಹಗಲು "ನಾ ಬರಕಲ್ಲ, ನಾಳೆ ಸ್ಯಾನೆ ಕೆಲ್ಸ ಐತೆ. ಬ್ರೇಸ್ತಾರ (ಗುರುವಾರ ) ಟೆಮ್ (ಟೈಮ್ ) ಆದ್ರೆ ಬತ್ತುನಿ" ಎಂದು ಹೇಳುವವನು, ರಾತ್ರಿ ಸರಿಯಾಗಿ ಹೊಟ್ಟೆಗೆ ತೀರ್ಥ ಬಿದ್ದರೆ, ಶುದ್ಧ ಕನ್ನಡದಲ್ಲಿ ಸ್ಫುಟವಾಗಿ ಯಕ್ಷಗಾನದ ಪದ್ಯಗಳನ್ನು ಹೇಳುತ್ತಿದ್ದ. 

   ಒಂದು ಕಲೆಯ ಮೇಲೆ ಅವನಿಗೆ ಎಷ್ಟು ಪ್ರೀತಿಯಿತ್ತೆಂದು ರಾಗವಾಗಿ ಹಾಡುವಾಗಲೇ ಅರ್ಥವಾಗುತ್ತಿತ್ತು. ಒಂದು ದಿನ ' ನವಿಲು ಕುಣಿಯುತಿದೆ ನೋಡ' ಎಂದು ಹಾಡಿದರೆ, ಮತ್ತೊಂದು ದಿನ 'ರಂಗನಾಯಕ ರಾಜೀವ ಲೋಚನ ' ಎಂದು ಹಾಡುತ್ತಿದ್ದ. 

  ಒಂದು ಮನೆಯ ಮುಂದೆ ಎಷ್ಟು ಹೊತ್ತು ನಿಂತು, ಒಂದೇ ಸಾಲನ್ನು ಎಷ್ಟು ಬಾರಿ ಹಾಡುತ್ತಾನೆ ಎನ್ನುವುದರ ಮೇಲೆ ಅಂದು ಅವನು ಎಷ್ಟು ಕುಡಿದಿದ್ದ ಎಂದು ಅಂದಾಜಿಸಬಹುದಿತ್ತು. ಹಾಗಾಗಿಯೇ ಸಂಜೆ ಏಳಕ್ಕೆ ಆತ ಸಂತೆಯಿಂದ ಹೊರಟರೂ ರಾತ್ರಿ ಮನೆ ಸೇರುವುದು ಮಾತ್ರ ಹನ್ನೆರಡರ ಆಸುಪಾಸಿನಲ್ಲಿ!!
ಮೊದಲೆಲ್ಲ ನನಗೆ ಆತನನ್ನು ಕಂಡರೆ ಭಯವಿತ್ತು, ಆದರೆ ಒಮ್ಮೆ ಹುಚ್ಚು ಆಸೆ ಮೊಳೆತಿತ್ತು. ಅವನು ಹೀಗೆ ಕುಡಿದು ಹಾಡುತ್ತ ರಸ್ತೆಯಲ್ಲಿ ಬರುವಾಗ, ಅವನೆದುರು ಹೋಗಿ ನಿಂತು ಮಾತನಾಡಿಸಬೇಕು, ಏನು ಹೇಳುತ್ತಾನೆಂದು ನೋಡಬೇಕು..

ಆ ಸಂದರ್ಭ ಕೂಡ ಬಂತು. ಅಂದು ಅಪ್ಪ ಅವನೆದುರು ನಿಂತು ಮಾತನಾಡಿಸಿದರೆ, ಆ ವ್ಯಕ್ತಿ ಪ್ರತಿಕ್ರಿಯಿಸುವುದಿರಲಿ, ತಲೆ ಎತ್ತಿ ನೋಡಲೂ ಇಲ್ಲ. ನಡು ರಸ್ತೆಯಲ್ಲಿ ಧಡ್ ಎಂದು ಅವರ ಕಾಲಿಗೆ ಬಿದ್ದ. ಬಿಡೋ ಎಂದರೆ ಬಿಡುತ್ತಲೂ ಇಲ್ಲ. ಎಲ್ಲಿ ಕಾಲು ಎಳೆದು ಅಪ್ಪನನ್ನು ಕೆಳಗೆ ಬೀಳಿಸುತ್ತಾನೋ ಎಂಬ ಭಯ ನನಗೆ!

  "ಹೆಗಡೇರು ನಿಮ್ಮ ಆಸೀರಾದ(ಆಶೀರ್ವಾದ) ಬೇಕು ನಂಗೆ. ಬುಡಕಿಲ್ಲಾ ಅಂದ್ರೆ ಬುಡಕಿಲ್ಲ " ಎನ್ನುತ್ತಿದ್ದ. ನಂತರ ಎದ್ದು ನಿಂತು ನನಗೊಮ್ಮೆ, ಅವರಿಗೊಮ್ಮೆ ನಮಸ್ಕರಿಸಿ ಕಷ್ಟಪಟ್ಟು ನಡೆದು ಹೊರಟ. 

    ಒಂದು ಸಂಜೆ ತಮ್ಮನೊಡನೆ ರಸ್ತೆಯಂಚಲ್ಲಿ ವಾಯುವಿಹಾರಕ್ಕೆಂದು ಹೋದಾಗ ಈತ ಪೇಟೆ ಕಡೆಯಿಂದ ಬರುತ್ತಿದ್ದ. ಇನ್ನು ಕೇವಲ ಏಳು ಗಂಟೆ, ಇಷ್ಟು ಬೇಗ ಕುಡಿದಿರಲಾರ ಎಂದುಕೊಳ್ಳುವಷ್ಟರಲ್ಲಿಯೇ, ನನ್ನ ಊಹೆ ತಪ್ಪೆಂದು ತಿಳಿಯಿತು. ಒಮ್ಮೆ ರಸ್ತೆಯ ಬಲಕ್ಕೂ, ಮತ್ತೊಮ್ಮೆ ಎಡಕ್ಕೂ ಸುಳಿದಾಡುತ್ತ, ಆಕಾಶ ನೋಡುತ್ತಾ ಬರುವವನನ್ನು ನೋಡಿದರೆ ಯಾರು ಬೇಕಾದರೂ ಹೇಳುತ್ತಿದ್ದರು, ಚೆನ್ನಾಗಿಯೇ ಸುರಾಪಾನವಾಗಿದೆ ಎಂದು.. !

   ಅದು ಕರ್ನಾಟಕ ಲೋಕಸಭಾ ಚುನಾವಣೆಯ ಸಂದರ್ಭ ಬೇರೆ. ದೂರದರ್ಶನ, ದಿನಪತ್ರಿಕೆ ಅಷ್ಟೇ ಏಕೆ, ಪ್ರತಿ ಮನೆಯ ಜಗುಲಿಯಲ್ಲೂ, ಪ್ರತಿ ಅಂಗಡಿಯ ಎದುರಲ್ಲೂ ಚುನಾವಣೆಯ ಮಾತುಕತೆಯೇ ನಡೆಯುತ್ತಿತ್ತು.  

      ಇವನೂ ಕುಡಿದ ಅಮಲಿನಲ್ಲಿದ್ದ. ನೇರವಾಗಿ ನಮ್ಮ ಬಳಿ ಬಂದ. " ತಂಗಿ, ಅರಾಮೈದಿಯೇ? ಓಹೋಹೋ.. ಸಣ್ಣ ಹೆಗಡೇರು ಇಲ್ಲೇ ಐದಾರೆ..ಇಲ್ಲೆಂತ ಮಾಡ್ತಾ ಐದಿರಿ? " ನಾವು ಮಾತನಾಡದೆ ಸುಮ್ಮನೆ ನಿಂತಿದ್ದೆವು. 

" ತಂಗಿ ಮತ್ತೆ ಈ ಸಲ ಎಲೆಕ್ಸನ್ನಿಗೆ ನಿಂತಿವ್ನಿ. ನಂಗೆ ವೋಟ್ ಹಾಕ್ಬೊಕು. ಬ್ಯಾರೆ ಯಾರ್ಗೂ ಹಾಕಂಗಿಲ್ಲ"

" ಯಾವದಕ್ಕೆ ನಿಂತಿದಿಯೊ ನೀನು? ಎಮ್.ಎಲ್.ಎ. ಆಗ್ಬೇಕು ಅಂತ ಅಂದ್ಕೊಂಡಿದ್ದೀಯಾ?" ಎಂದು ಕೇಳಿದೆವು. 

"ಅದ್ನೆಲ್ಲ ನಂಗ್ ಯಾರ್ ಕೊಡ್ತಾರ್ರಾ? ನಾ ಮುಕ್ಮಂತ್ರಿ ಶೀಟಿಗೆ (seat) ನಿಂತೀನಿ "

"ಅಲ್ಲೋ ಅದನ್ನಾದ್ರೂ ಸರಿ ಹೇಳು.. ಮುಕ್ಮಂತ್ರಿ ಅಲ್ಲ, ಮುಖ್ಯಮಂತ್ರಿ. "

- ಎನ್ನುವಷ್ಟರಲ್ಲಿ ಊರವರು ಯಾರೋ ಬಂದರು, "ಅವನು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಬಿಡು, ಮುಖ್ಯಮಂತ್ರಿ, ಮುಕ್ಕೋಮಂತ್ರಿ ಎಲ್ಲಾ ಒಂದೇ " 

-ಎಂದು ಹೇಳಿ ನಗುತ್ತಾ ಹೋದರು. 

  ಅವನಿಗೆ ಏನು ಅರ್ಥವಾಯಿತೋ ಏನೋ, "ಎಲ್ಲಾ ಅಂಗೇ ಬುಡಿ, ನಾ ಹಮಾ (ಸಮ) ಮಾಡ್ತುನಿ. " ಎನ್ನುತ್ತಾ ಹೋದ.  

  ಮುಂದೆಯೂ ಮಾತು ಕೇಳುತ್ತಿತ್ತು, "ನಾ ಏನಾರ ಮುಕ್ಮಂತ್ರಿ ಆರೆ (ಆದ್ರೆ ) ಊರ್ ಹಿಂಗಿರಾಕಿಲ್ಲ, ಬ್ಯಾರೇನೇ ಐತಿ"...... 

  ಅದೇನು ಮಾಡುತ್ತಾನೋ ಏನೋ ನಾಕಾಣೆ, ಆದರೆ ನಮ್ಮೂರಲ್ಲೊಬ್ಬ ಮುಕ್ಮಂತ್ರಿ ಅಲ್ಲಲ್ಲ, ಮುಖ್ಯಮಂತ್ರಿ ಇದಾನೆ ಅನ್ನೋದಂತೂ ಸತ್ಯ..!!!

ಹೆಣ್ಣು