Saturday, February 19, 2022

ಸದ್ದಿಲ್ಲದೇ ಕಥೆ ಹೇಳುವ ಸೀತಾಳೆ ದಂಡೆಗಳು...!

ಸೀತಾಳೆ ಎಂದರೆ ಕಾಡು ಹೂವು. ಈ ಹೂವು, ದಂಡೆ ಎಂದರೆ ಮಾಲೆಯ ರೀತಿ ಪೋಣಿಸಿರುವಂತೆ ಕಾಣುತ್ತದೆ. ಮಳೆಗಾಲದಲ್ಲಿ ಯಾವುದೊ ಮರದ ಕಾಂಡದ ಮೇಲೆ ಅರಳಿ ನಿಂತು, ಗಾಳಿಗೆ ತಲೆದೂಗಿ, ಮಳೆಯಲ್ಲಿ ನೆಂದು, ಅಲ್ಲೇ ಬಾಡಿ ಒಣಗುವ ಈ ಹೂವು ನೋಡಲು ಸುಂದರ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ, ಘಮಿಸದೇ, ಸದ್ದಿಲ್ಲದೇ, ತನಗೂ ಲೋಕಕ್ಕೂ ಸಂಬಂಧವೇ ಇಲ್ಲವೆಂಬಂತೆ ಅರಳಿ, ಬಾಡುವ ಈ ಹೂವಿಗೆ ಲೋಕವೂ ಅಷ್ಟೊಂದು ಪ್ರಾಮುಖ್ಯತೆ ನೀಡಿದಂತೆ ತೋರುತ್ತಿಲ್ಲ!

ಹಾಗೆಯೇ ಭಾರತಿ ಹೆಗಡೆಯವರು ಬರೆದ "ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು" ಕಥಾ ಸಂಕಲನದಲ್ಲಿ ಬರುವ ಎಲ್ಲ ಕಥೆಗಳ ಪಾತ್ರಗಳೂ ಕೂಡ ಮಲೆನಾಡಿನ ಯಾವುದೊ ಮೂಲೆಯಲ್ಲಿ ಅರಳಿ ನಿಂತು, ಬದುಕಿ, ಬಳಲಿ, ಬಾಡಿದಂಥವು.. ಪ್ರತಿ ಕಥೆಯಲ್ಲಿಯೂ ಒಂದು ವಿಭಿನ್ನ ಪಾತ್ರವಿದೆ. ಸಮಾಜದ ಪ್ರಭಾವದಿಂದಲೋ, ಮಾನಸಿಕ ಒತ್ತಡದಿಂದಲೋ ವಿಚಿತ್ರವಾಗಿರುವ ಈ ಪಾತ್ರಗಳು ನಮ್ಮ ಸುತ್ತಲೂ ಇದ್ದಂಥವೇ.. ಗೋಡೆಯೊಂದಿಗೆ ಮಾತನಾಡುವ ಅಮ್ಮಮ್ಮ, ಸೀರೆ ಕದ್ದು ಉಟ್ಟುಕೊಳ್ಳುವ ಶಾಮಣ್ಣ, ಬದುಕಿದ್ದಾಗಲೇ ತನ್ನ ಶ್ರಾದ್ಧವನ್ನೇ ಕಂಡ ಪದ್ಮಾವತಿ, ಜಾತಿಯನ್ನು ಮೀರಿ ನಿಂತ ಪಾರ್ವತಿ- ಗಣಪಿಯರ ಸ್ನೇಹ ಎಲ್ಲವೂ ನನಗೆ ಬಹಳ ಪ್ರಿಯವಾದ ಕಥೆಗಳು.
ಪಾರ್ಲರ್ ಲಲಿತಕ್ಕ ಕೊನೆಗೂ ತನ್ನ ಗಂಡನಿಗೆ ಪ್ಯಾಂಟು ಹಾಕಿಸಿದ ಕಥೆಯನ್ನು ಓದಿಯೇ ತೀರಬೇಕು. ಹಲವು ಕಥೆಗಳಿಗೆ ತನ್ನದೇ ಆದ ಅಂತ್ಯವಿರದೆ, ಹೀಗಾಗಿರಬಹುದೇ ಎಂದು ಓದುಗರನ್ನು ಯೋಚನೆಗೊಳಪಡಿಸುವುದು ಇಲ್ಲಿನ ಕಥೆಗಳ ವಿಶೇಷ.
 ಮಲೆನಾಡಿನ ಹಲವು ಹಳ್ಳಿಗಳ, ಭಿನ್ನವಾದ ಒಟ್ಟು ಹದಿನೇಳು ಕಥೆಗಳನ್ನು ಒಂದೇ ಪುಸ್ತಕದಲ್ಲಿ ನಮಗೆ ನೀಡಿದ್ದಾರೆ ಭಾರತಿ ಹೆಗಡೆಯವರು.
ಓದಬೇಕಾದ, ಓದಿ ಯೋಚಿಸಬೇಕಾದ ಕಥೆಗಳಿವು.

ಪುಸ್ತಕ: ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು
ಲೇಖಕರು: ಭಾರತಿ ಹೆಗಡೆ
ಪುಟಗಳು: 246
ಬೆಲೆ: 220

-ಪಲ್ಲವಿ 

No comments:

Post a Comment

ಕರಗುವೆ...