Tuesday, June 16, 2020

ಮಳೆಯ ನೆನಪು - 4

ಅಪ್ಪನ ಮುಖ ನೋಡಿಯೇ ಅಮ್ಮ ಎಲ್ಲವನ್ನೂ ಅರಿತಿರಬೇಕು,ನಮ್ಮನ್ನು ನೋಡಿದವಳು ಒಳನಡೆದಿದ್ದಳು. ಅಕ್ಕ ನನ್ನ ಬಗ್ಗೆ ಚಾಡಿ ಹೇಳುವ ಕಾರ್ಯಕ್ರಮವನ್ನೇನೋ ಪ್ರಾರಂಭಿಸಿದ್ದಳು,ಆದರೆ ಪ್ರಾರಂಭಿಸಿದ್ದಳು, ಆದರೆ ಅಪ್ಪನ ಕಿವಿಗಳು ಸ್ಪಂದಿಸುತ್ತಿರಲಿಲ್ಲ. ಊಟದ ತಟ್ಟೆಯೆದುರು ಕುಳಿತಿದ್ದರೂ ಒಬ್ಬರಿಗೂ ಅನ್ನ ಮುಟ್ಟುವ ಮನವಿರಲಿಲ್ಲ. ನೀರವ ಮೌನ ನಮ್ಮನ್ನು ಕಿತ್ತು ತಿನ್ನುತ್ತಿತ್ತು.
ಮನೆಯೊಳಗೆ ಏನು ನಡೆಯುತ್ತಿದೆ ಎಂದು ನನಗೆ ತಿಳಿಯದಿದ್ದರೂ ಹೊಲದಲ್ಲಿ ನಡೆದ ಘಟನೆ ವಿಚಿತ್ರವೆನಿಸಿತ್ತು. "ಅಪ್ಪಾ,ಅವರು ಯಾರು? ನೀನ್ಯಾಕೆ ಅವರ ಕಾಲ ಬಳಿ ಕುಳಿತಿದ್ದೆ? " ಎರಡು ನಿಮಿಷದ
ನಂತರ ತಿಳಿಯಿತು, ನಾನು ಉತ್ತರವಿಲ್ಲದ ಪ್ರಶ್ನೆ ಕೇಳಿದ್ದೆನೆಂದು.
ಅಪ್ಪ ಎದ್ದು ಹೊರನಡೆದರು. ಅಕ್ಕ ಮತ್ತೆ ಗುಡುಗಿದಳು," ನಿನಗ್ಯಾಕೇ ಬೇಕು ಅವೆಲ್ಲ ವಿಚಾರ? ಅಪ್ಪ 
ಯಾರೊಡನೆ ಮಾತನಾಡಿದರೆ ನಿನಗೇನು?ಈಗ ನೋಡು,ಮಾತೂ ಆಡಲಿಲ್ಲ, ಊಟಾನೂ ಮಾಡಲಿಲ್ಲ." 
ಅಲ್ಲಿ ನಡೆದಿದ್ದು ಕೇವಲ ಮಾತುಕತೆಯಲ್ಲ ಎಂದು ನನ್ನ ಮನ ಚೀರುತ್ತಿತ್ತು. ಬಹುಶಃ ಅದನ್ನು ನೋಡಿದ್ದರೆ, ಅಕ್ಕನೂ ಇದೇ ಪ್ರಶ್ನೆ ಮಾಡುತ್ತಿದ್ದಳೇನೋ. ನಾನು ಕೇಳಿದ್ದರೂ, ಕೇಳದಿದ್ದರೂ ಅಪ್ಪ ಊಟ ಮಾಡುತ್ತಿರಲಿಲ್ಲ. ಅಮ್ಮ ಹೊರನಡೆದಳು. ಹೊರಗೆ ಮಣ್ಣಿನ ಕಟ್ಟೆಯ ಮೇಲೆ ಕುಳಿತು ಅಪ್ಪ ಆಕಾಶ ನೋಡುತ್ತಿದ್ದ. ತಲೆಯಲ್ಲಿ ನೂರೆಂಟು ಚಿಂತೆಗಳಿದ್ದಿರಬೇಕು." ಭುವನ ಹೇಳುತ್ತಿರುವುದು ನಿಜವೇನು? ಅವರು ಮತ್ತೆ ಬಂದಿದ್ದರೇ? ಈಗೇನು ಮಾಡುವುದು?" 
" ಮಾಡುವುದೇನು? ತಂಪಾದ ಗಾಳಿ ಬೀಸುತ್ತಿದೆ,ಮಳೆ ತನ್ನಾರ್ಭಟವನ್ನು ನಿಲ್ಲಿಸಿದೆ. ತಿಳಿಯಾದ ಆಗಸವನ್ನು ನೋಡುವುದಷ್ಟೇ ನನ್ನ ಕೆಲಸ" ಮಾತಿನ ನಂತರ ಹೊರಬಂದ ನಿಟ್ಟುಸಿರು ಅಮ್ಮನ ದುಃಖಕ್ಕೆ ಕಾರಣವಾಗಿತ್ತು. ಅಕ್ಕ,ನಾನು ಹೊರಬಂದೆವು. "ನಯನಾ,ತಂಗಿಗೆ ತಿಳುವಳಿಕೆ ಹೇಳು,ಯಾವಾಗಲೂ ಬೈಯುತ್ತಿರಬೇಡ. ಭುವನಾ,ನೀನೂ ಅಷ್ಟೇ,ಸ್ವಲ್ಪ ಅವರ ಮಾತನ್ನೂ ಕೇಳು." 
ನಾವಿಬ್ಬರೂ ತಲೆ ತಗ್ಗಿಸಿ ನಿಂತಿದ್ದೆವು. 
ಬಹಳ ತಡವಾಗಿತ್ತು. ಹೋಗಿ ಅಕ್ಕನ ಮಗ್ಗುಲಲ್ಲಿ ಮಲಗಿದ್ದೆ. ಯೋಚನೆಯ ಮಧ್ಯೆ ಯಾವಾಗ ನಿದ್ದೆ ಆವರಿಸಿತ್ತೋ ತಿಳಿಯದು. ಬೆಳಿಗ್ಗೆ ನಾನೇಳುವಷ್ಟರಲ್ಲಿ ಅಮ್ಮ ಅಕ್ಕ ಜೋರಾಗಿ ಅಳುತ್ತಿದ್ದರು. ಹೊರಬಂದು ನೋಡಿದರೆ,ಮಾವಿನಮರಕ್ಕೆ ಕಟ್ಟಿದ್ದ ನನ್ನ ಜೋಕಾಲಿಯ ಹಗ್ಗ ಅಪ್ಪನ ಕುತ್ತಿಗೆಗೆ ಸುತ್ತಿಕೊಂಡಿತ್ತು. ಒಡಕು ಅಂಗಾಲುಗಳು ಅವನ ಸಾಲು ಸಾಲು ಸೋಲುಗಳ ಪ್ರತೀಕದಂತಿದ್ದವು. ಊರವರೆಲ್ಲ ಸೇರಿದ್ದರು. ಕಷ್ಟದಲ್ಲಿ ಬರದವರು ಈಗ ಸಾಂತ್ವನ ಹೇಳಲು ಬಂದಿದ್ದರು. ಒಂದು ತಾಸಿನೊಳಗೆ ಎಲ್ಲರೂ ಹೋದರು. ಮತ್ತೆ ನಾವು ಮೂವರೇ. ಕಣ್ಣೀರು ಯಾರ ಅನುಮತಿಗೂ ಕಾಯದೇ ಇಳಿಯುತ್ತಿತ್ತು. ನಿನ್ನೆ ಹೊಲದಲ್ಲಿದ್ದ ಮಹಾನುಭಾವ ಬಂದು ಮತ್ತೆ ಗಲಾಟೆ ಮಾಡಿ,ಇದ್ದ ಹೊಲವನ್ನೂ ಕಿತ್ತುಕೊಂಡುಹೋದ. ಈಗ ನಿಜವಾಗಿಯೂ ಬೀದಿಗೆ ಬಿದ್ದಿದ್ದೆವು. ಊರು ಬಿಟ್ಟಾಯಿತು,ಮನೆ ಮನೆಯ ಪಾತ್ರೆ ತೊಳೆದಾಯಿತು. ಅಮ್ಮ ಗಟ್ಟಿಗಿತ್ತಿ. ಕಷ್ಟ ಮೆಟ್ಟಿನಿಂತಳು.
ಓದಿಸಿದಳು,ಕೆಟ್ಟಮಾತಿಗೆಲ್ಲ ಕಿವುಡಿಯಾದಳು. ಅಕ್ಕನ ಮದುವೆ ಮಾಡಿ,ಈಗ ಮೊಮ್ಮಗನ ಆರೈಕೆ ಮಾಡುತ್ತಿದ್ದಾಳೆ. ವಿಕ್ರಮ್ ಬಂದು ಮಾತನಾಡಿದ ಮೇಲೆ,ನಮ್ಮ ಮದುವೆಗೂ ಒಪ್ಪಿದಳು. ಮುಂದಿನ ತಿಂಗಳು ಮದುವೆ! 


ಎಲ್ಲಿಂದ ಎಲ್ಲಿಯವರೆಗೆ ಬಂದೆ  ನಾನು? 
ಅಂದು ಹೊಲದಲ್ಲಿ ಅಪ್ಪನಿಗಾಗಿ ಕಾಯುತ್ತಿದ್ದವಳು ಇಂದು ಇವನಿಗಾಗಿ ರಸ್ತೆಯಂಚಲ್ಲಿ ಕಾಯುತ್ತಿದ್ದೇನೆ. ಒಳ್ಳೆಯ ದಿನಗಳ ಆರಂಭ,ಹೊಸ ಮುನ್ನುಡಿ....
ರಸ್ತೆಯಂಚಲ್ಲಿ ಬೈಕಿನ ಶಬ್ದ ಕೇಳುತ್ತಿದ್ದಂತೆ, ಭುವನಳ ಮುಖದಲ್ಲಿ ಮಂದಹಾಸ ಮೂಡಿತು.ಮಳೆ ನಿಂತು ಹಿತವಾದ ವಾತಾವರಣ ನಿರ್ಮಿತವಾಗಿತ್ತು...

No comments:

Post a Comment

ಕರಗುವೆ...