Tuesday, June 16, 2020

ಮಳೆಯ ನೆನಪು - 3

ನಾನೇನೋ ಹೊಲದತ್ತ ಓಡಿದ್ದೆ.ಆದರೆ ಒಮ್ಮೆ ಅಕ್ಕನನ್ನು ನೋಡಬೇಕಿತ್ತು.
            ನಾನು ಹೊಲಕ್ಕೆ ಬರುವಷ್ಟರಲ್ಲಿ ಬಟ್ಟೆಯೆಲ್ಲ ನೆನೆದಿತ್ತು.ಟಪ್ ಟಪ್ ಎಂದು ನೀರು ಬಿದ್ದ ರಭಸಕ್ಕೆ ಮೈ -ಕೈ  ಎಲ್ಲ ನೋಯುತ್ತಿತ್ತು.ಅಪ್ಪ ಇದ್ದಲ್ಲಿಗೆ ಹೋಗಬೇಕೆಂದರೆ ಹೊಳೆ ದಾಟಬೇಕಿತ್ತು.ಆದರೆ ಗಾಳಿಗೆ ಇದ್ದ ಒಂದು ತೂಗು ಸೇತುವೆಯೂ ಮುರಿದಿದೆ.ಅಯ್ಯೋ ದೇವರೇ..ಈಗ ಮತ್ತೆ ಮನೆಗೆ ಹಿಂದಿರುಗಲೂ ಸಾಧ್ಯವಿಲ್ಲ.ಕತ್ತಲಾಗುತ್ತಿದೆ..ಎಂದು ಮನದೊಳಗೇ ನನ್ನನ್ನು ನಾನು ಶಪಿಸಿಕೊಂಡೆ.ಅಕ್ಕನ ಜೊತೆ ಹೋಗಬೇಕಿತ್ತು.ಈಗ ಇಲ್ಲಿ ಅಪ್ಪ ಕಾಣುತ್ತಿಲ್ಲ.ಕೂಗೋಣ ಎಂದರೂ,ನನಗಿಂತ ಹೊಳೆಯ ಧ್ವನಿಯೇ ಜೋರಾಗಿದೆ.
         ಮೊದಲ ಬಾರಿಗೆ ಝುಳು ಝುಳು ದನಿ ಕರ್ಕಶವಾಗಿ ಕೇಳುತ್ತಿತ್ತು. ಕಣ್ಣುಗಳನ್ನಗಲಿಸಿ,ಕಾಣುವಷ್ಟು ದೂರ ನೋಡಲು ಯತ್ನಸಿದೆ.ಮಂಜು ಮಂಜಾಗಿ ಯಾರನ್ನೋ ಕಂಡಂತಾಯಿತು.
ಹಾ! ಅಪ್ಪ..ಆ ಕ್ರಶವಾದ ದೇಹ ಮಾತ್ರದಿಂದ ಹೇಳಬಹುದು ಅಲ್ಲಿದ್ದವನು ನನ್ನ ಅಪ್ಪನೆಂದು.
             ಆದರೆ ಅಲ್ಲಿ ಇನ್ನಾರೋ ಇದ್ದಂತೆ ಅನಿಸುತಿದೆ.  ಬಿಳಿ ನಿಲುವಂಗಿ, ಕೈಯಲ್ಲಿ ಕೋಲು -ದರ್ಪವೇ ತಲೆಯೆತ್ತಿ ನಿಂತ ಭಂಗಿ.ಯಾರಿರಬಹುದು? ಅವನ ಬಳಿ ಕೊಡೆ ಇದೆ.ಆದರೆ ನನ್ನಪ್ಪ ಮಳೆಯಲ್ಲಿ ನೆನೆಯುತ್ತಿದ್ದಾನೆ. ನನಗೇನೂ ಸರಿಯಾಗಿ ಕಾಣುತ್ತಿಲ್ಲ,ಕೇಳುತ್ತಲೂ ಇಲ್ಲ.
                          ಸ್ವಲ್ಪ ಮುಂದೆ ಸರಿದೆ,ಕಾಲು ಜಾರುತ್ತಿತ್ತು.ಆದರೆ ಕಣ್ಣುಗಳು ಸ್ಪಷ್ಟವಾಗಿದ್ದವು.ಅಪ್ಪ ಬಗ್ಗಿ ಅವನ  ಕಾಲು ಹಿಡಿಯುತ್ತಿದ್ದಾನೆ. ಅವನು ಕೊಡವಿಕೊಳ್ಳುತ್ತಿದ್ದಾನೆ. ಏನು   ನಡೆಯುತ್ತಿದೆ ಅಲ್ಲಿ? ನನ್ನಪ್ಪ ಇನ್ಯಾರದೋ ಕಾಲಿಗೆ ಯಾಕೆ ಬೀಳಬೇಕು?
      ಅಮ್ಮ ಹೇಳುತ್ತಿದ್ದಳು,ನಮ್ಮನ್ನು ಯಜಮಾನರು ಸಾಕುತ್ತಿದ್ದಾರೆ ಎಂದು.ಇವರೇ ಇರಬಹುದೇ? ಆಗಿರಲಿ,ಆದರೂ ಅವರಿಗೆ ನಮಸ್ಕಾರ ಮಾಡಬೇಕೇ? ಅವರೇನು ದೇವರೇ?       
      ಈ ಪ್ರಶ್ನೆಗಳಿಗೆಲ್ಲ ಉತ್ತರ ಯಾರು ಕೊಡಬೇಕು?  ಅಪ್ಪಾ ಎಂದು ಕೂಗಲೇ? ಅಪ್ಪನ ಪರಿಸ್ಥಿತಿ ನೋಡಿ ನನ್ನಲ್ಲಿದ್ದ ಸ್ವಲ್ಪ ಧೈರ್ಯವೂ ಕಾಣೆಯಾಯಿತು.ತನ್ನ ಮುಂದೇ ತನ್ನಪ್ಪ ಅಸಹಾಯಕನಾಗಿ ಇನ್ನೊಬ್ಬರ ಮುಂದೆ ಮಂಡಿಯೂರಿ    ಕೂರುವುದನ್ನು ಯಾವ ಮಕ್ಕಳು ನೋಡಲಿಚ್ಛಿಸುತ್ತಾರೆ?ನಾನಂತೂ ಸಹಿಸಲಾರೆ.ಮಳೆ ಹನಿಯ ತಂಪು,ಕಣ್ಣ ಹನಿಯ ಬಿಸಿಯಲ್ಲಿ ಕರಗಿ ಹೋಯಿತು.    
   ಆತ ಹೋಗುತ್ತಿದ್ದಾನೆ.ಜೋರಾಗಿ ಕೈ ತೋರಿಸುತ್ತಿದ್ದಾನೆ.ಅಪ್ಪನನ್ನು ಬೈಯುತ್ತಿರಬೇಕು..ಅಪ್ಪ ಬೇಸರದ ಮುಖದಲ್ಲಿ ಇತ್ತ ಬರುತ್ತಿದ್ದಾನೆ. ಏನಾಯಿತೆಂದು ಕೇಳಬೇಕು.
    ನನ್ನಂತ ಪುಟ್ಟ ಹುಡುಗಿಗೆ ಇದು ದೊಡ್ಡ ಹೊಳೆ.ಅಪ್ಪ ಸಲೀಸಾಗಿ ಆ ಕಡೆ ಧುಮುಕಿ,ಎರಡು ನಿಮಿಷದಲ್ಲಿ ಈ ಕಡೆ ಬಂದಿದ್ದ.ಅವನ ಕೆಂಪಾದ ಕಣ್ಣುಗಳಿಗೆ ಬೆದರಿದೆ.ಆದರೆ ಅವು ಕೋಪದಿಂದ ಕೆಂಪಾಗಿರಲಿಲ್ಲ. ಪ್ರತಿದಿನದಂತೆ ಈ ದಿನ "ನೀನ್ಯಾಕೆ ಬಂದೆ ?" ಎಂದು ಕೇಳಲಿಲ್ಲ, "ಹೀಗೆಲ್ಲ ಬರಬಾರದು" ಎಂದು ಬೈಯಲೂ ಇಲ್ಲ.ನನ್ನ ಕೈ ಹಿಡಿದು ಕರೆದುಕೊಂಡು ಹೊರಟ.ಒಂದೂ ಮಾತಿಲ್ಲ!! 
            ಗದ್ದೆಗಳಲ್ಲಿ ನೀರು ತುಂಬಿದ್ದವು.ಅಪ್ಪ ನನ್ನನ್ನು ಭುಜದ ಮೇಲೆ ಕೂರಿಸಿಕೊಂಡು ಹೊರಟ - ನನ್ನ ಕಾಲಿಗೆ ಮಣ್ಣು ಮೆತ್ತಬಾರದೆಂದಲ್ಲ,ಅವನ ಕಣ್ಣೀರು ನನಗೆ ಕಾಣದಿರಲೆಂದು.ನನ್ನಪ್ಪ ಒಳ್ಳೆಯ ಹಾಡುಗಾರ. ಹಾಡುತ್ತಾ ಹೋಗುತ್ತಿದ್ದ.ಇಷ್ಟೂ ದಿನ ನಾನೆಂದುಕೊಂಡಿದ್ದೆ, ಅಪ್ಪ ಖುಷಿಯಾಗಿದ್ದಾಗ ಹಾಡುತ್ತಾನೆಂದು.    ಸುಳ್ಳು !! ಇಂದು ತಿಳಿಯಿತು.ತನ್ನ ನೋವು ಇನ್ನೊಬ್ಬರಿಗೆ ತಿಳಿಯಬಾರದೆಂದು ಹಾಡುತ್ತಾನೆ. 
              ಇಂದಿನ ಹಾಡು ಬಹಳ ಸೊಗಸಾಗಿತ್ತು.ತನ್ನ ಕಷ್ಟವನ್ನು ಮನದುಂಬಿ ಹಾಡಾಗಿಸಿದ್ದ. 
              ಮನೆಯ ದಾರಿ ಹತ್ತಿರವಾಗುತ್ತಿದ್ದಂತೆ ಹಾಡಿನ ದನಿ ಕಡಿಮೆಯಾಯಿತು,ಹೆಜ್ಜೆಯ ಲಯ ಮಂದವಾಯಿತು.....

No comments:

Post a Comment

ಕರಗುವೆ...