Saturday, October 3, 2020

ದೀಪ...

ಕತ್ತಲ ಲೋಕದಿ ಪ್ರಜ್ವಲಿಸುತಿಹ ಹಣತೆ 
ಕಟುಕರ ಸ್ವಾರ್ಥಕೆ ಬಲಿಯಾಯ್ತೆ !

ಮಂದ ಬೆಳಕಿರಬಹುದು 
ನಂದಾದೀಪವೇ ಅದು.. 
ಕಿಡಿಯೊಂದು ಜ್ವಾಲೆಯಾಗಿ 
ಸುಡದೆಂಬ ಭ್ರಮೆಗೆ ಏನೆನ್ನಲಿ.. 

ಒಡೆದಿತ್ತು ಹಣತೆ,ಎಣ್ಣೆ ಸೋರಿತ್ತು 
ಮುರಿದಿತ್ತು ಎಲುಬು, ನೆತ್ತರು ಹರಿದಿತ್ತು 
ಬತ್ತಿಯ ಎಳೆದ ರಭಸಕೆ, ಜಿಹ್ವೆ ಇಬ್ಭಾಗವಾಗಿತ್ತು 
ನೋವ ನಿಟ್ಟುಸಿರಿಗೆ ಪ್ರಾಣಜ್ಯೋತಿ ಆರಿತ್ತು!

ದೀಪ ಇಂದಿಗೂ ಪವಿತ್ರವೇ !
ದುಷ್ಟ ಕಂಗಳು, ರಕ್ಕಸ ಕೈಗಳು 
ಮೃಗ ಮನಗಳು ಪೂಜನೀಯವೇ? 
ಅಂಧಕಾರವಿರಬಹುದು, ದೇದೀಪ್ಯಮಾನ 
ಬೆಳಕೊಂದು ಸುಡದಿರದು ಕೆನ್ನಾಲಿಗೆಯ ಚಾಚಿ... 

-ಪಲ್ಲವಿ 

No comments:

Post a Comment

ಕರಗುವೆ...