ಹಗಲು ನಕ್ಕು ಹಗುರಗಾದ ಆಗಸ ಹೊಂಬಣ್ಣಕೇರಿ ನಿಟ್ಟುಸಿರಿಟ್ಟಂತೆ ಈ ಸಂಜೆ..
ಕರಿ ಪರದೆ ಕಣ್ಣ ಮುಂದೆ ಬರುವ ಮುನ್ನವೇ ಬಣ್ಣಗಳ ಬೆಳಕಿನಲಿ ಅವ ರಂಗಮಂಚದ ಮೇಲೇರಿದ್ದ..
ಅವನ ಮುಖದ ಕಲೆಯೂ, ಲೋಕಕೊಂದು ಕಳೆಯಾಗಿ ಕಣ್ಣ ನದಿಯಲಿ ಪ್ರತಿಫಲಿಸಿತ್ತು..
ತಂಗಾಳಿಗೆ ತಲೆದೂಗಿ, ಮೋಡ ಚದುರಿ, ಚುಕ್ಕಿ ಫಳಿಸುವಾಗ, ಅವನ ಮೋಡಿಗೆ ಅಂತರಾಳದಿ ಅಲೆ ಮೂಡಿ ಸ್ವಾಗತಿಸುವಾಗ... ಭುವಿಯ ಚಿತ್ತಾರಕೆ ಇನ್ನಷ್ಟು ಮೆರಗು!!
ಈ ಸಂಜೆಯ ಬಣ್ಣ ಕರಗಿ, ಕನಲಿ, ಕದಡಿ ಇರುಳು ಆವರಿಸಲು ಇನ್ನಷ್ಟು ಸಮಯವಿದೆ..
ಮಾತು ಮೌನವಾಗಲು, ಮೌನ ಹೆಪ್ಪುಗಟ್ಟಲು, ಮೌನ ಮುರಿದು ಪಿಸು ನುಡಿಯಲು, ಪಿಸು ನುಡಿಗೆ ತುಸುವೇ ನಾಚಲು...ಇನ್ನಷ್ಟು ಸಮಯವಿದೆ!!
ಇರುಳು ಬೆಳಕಲಿ ಕರಗುವ, ಬೆಳಕು ಇರುಳಲಿ ಬೆರೆಯುವ ಈ ಗಳಿಗೆಯಲಿ...
ರಂಗದ ಮೇಲಿರುವ ನೀ ಮಾತ್ರವೇ ಸಾಕ್ಷಿ...
ಹೊನ್ನ ಚಂದಿರನೇ.. ಕತ್ತಲ ರಾತ್ರಿಗೂ ನೀ ಮಾತ್ರವೇ ಅಕ್ಷಿ!!!
-ಪಲ್ಲವಿ
No comments:
Post a Comment