Thursday, December 16, 2021

ಕಂಬಳಿಹುಳು v/s ಬಸವನಹುಳು

ಕೊಪ್ಪೆ ಮತ್ತು ಕಂಬಯ್ಯ ಇಬ್ಬರೂ ಕೆಲಸಕ್ಕಾಗಿ ಊರೂರು ಅಲೆಯುತ್ತ ನಮ್ಮೂರಿಗೆ ಬಂದವರು. ಇಬ್ಬರದೂ ನಿಜವಾದ ಹೆಸರು ತಿಳಿದಿಲ್ಲ.
ಕೊಪ್ಪೆ ಎತ್ತರದ ಆಸಾಮಿ, ಕರಿಯ ಹೊಳೆವ ಮೈ ಬಣ್ಣ. ಯಾವುದಕ್ಕೂ ಭಯ ಪಡದೆ ಮುನ್ನುಗ್ಗುವವನು. ಹಾವೆಂದರೆ ಹಾವು, ಉಡ ಎಂದರೆ ಉಡ... ರಪ್ಪನೇ ಕೈ ಬೀಸಿ ಹಿಡಿಯುವವನು. ಊರಲ್ಲಿ ಯಾವುದೇ ಮನೆಯ ಆಕಳು ಕರು ಹಾಕಬೇಕೆಂದರೂ ಅಲ್ಲಿ ಒಂದು ಹಾಜರಿ ಹಾಕಿ ಆಕಳಿಗೆ ಏನಾದರೂ ಸಮಸ್ಯೆಯಾದಲ್ಲಿ ಕೈ ಹಾಕಿ ಜಗ್ಗಿ ಎಳೆದು ಕರುವನ್ನು ತೆಗೆಯುತ್ತಿದ್ದ.
ಇಂತಹ ಕೊಪ್ಪೆಯ ಭಾವನೇ ಕಂಬಯ್ಯ. ಈತನೂ ಕೊಪ್ಪೆಯಷ್ಟೇ ಬಲಶಾಲಿ ಮನುಷ್ಯನಾದರೂ ಸ್ವಲ್ಪ ಆಲಸಿ. ಎಲ್ಲ ಕೆಲಸಕ್ಕೂ ಕೊಪ್ಪೆ ಮುನ್ನುಗ್ಗುವಾಗ, ಕಂಬಯ್ಯ ಸುಮ್ಮನೆ ನಿಂತಿರುತ್ತಿದ್ದ.
ಒಮ್ಮೆ ಹೀಗೆಯೇ ವಿದ್ಯುತ್ ತಂತಿ ಬೇಲಿಗೆ ಸಿಕ್ಕಿ  ಮಂಗನ ಬಾಲವನ್ನು ಎತ್ತಿ ಹಿಡಿಯುತ್ತಿದ್ದ ಕೊಪ್ಪೆ. ಸತ್ತಿದೆ ಎಂದುಕೊಂಡ ಮಂಗ ರಪ್ಪನೆ ತಿರುಗಿ ಕೊಪ್ಪೆಯ ಮುಖವನ್ನು ಪರಚಿಬಿಟ್ಟಿತು. ಅಂದಿನಿಂದ ಅಳಿಲಿನ ಬೆನ್ನ ಮೇಲೆ ಮೂರು ಗೆರೆ ಇದ್ದಂತೆ ಕೊಪ್ಪೆಯ ಕೆನ್ನೆಯ ಮೇಲೂ ಮೂರು ಗೆರೆ. ಅಳಿಲಿಗೆ ರಾಮನ ಕೃಪಾಕಟಾಕ್ಷವಾದರೆ ಕೊಪ್ಪೆಗೆ ಹನುಮನದು!
"ನಿಂಗೆ ಯೋಳ್ದೆ ತಾನೇ.. ಮುಂದ್ ಮುಂದೆ ಹೋಗಿ ಕೈ ಆಕ್ಬೇಡ ಅಂತಾ.."
"ಲೇಯ್ ಕಂಬಯ್ಯಾ ನೀ ಏಳ್ದೆ ಅಂತಾನೆಯ ಹಿಂದಿಂದ ಬಾಲಕ್ಕೆ ಕೈ ಇಕ್ಕಿದ್ದು.. ಈಗ ನೋಡು.. ನನ್ ಮುಂದಿಂದ ತೆಗ್ದ್ ಬುಡ್ತು... ಮಂಗ್ಯಾ ನನ್ ಮಗಂದು..."
"ಥೋ... ನಾ ಯೋಳಿದ್ದು ರಪ ರಪನೆ ಎಲ್ಲಾದ್ಕೂ ಮುಂದೆ ಓಡ್ತಿಯಲ್ಲ.. ಹಂಗ್ ಹೋಗಬ್ಯಾಡ ಅಂತಾ "
"ಇದ್ನ ಮೊದ್ಲೇ ಯೋಳಕೆ ನಿಂಗೇನ್ಲಾ ಧಾಡಿ "
ಇಷ್ಟು ಮಾತಿದ್ದರೂ ಒಬ್ಬರ ಮೇಲೊಬ್ಬರಿಗೆ ಕಾಳಜಿಯೂ ಹಾಗೆಯೇ ಇತ್ತು. ಇಂತಹ ಭಾವ ನೆಂಟರ ನಡುವೆ ಒಂದು ಭೂತ ಹೊಕ್ಕಿತ್ತು. ಮೂರು ವರ್ಷದ ಹಿಂದೆ ತೀರಿ ಹೋಗಿದ್ದ ಕೊಪ್ಪೆಯ ಹೆಂಡತಿ ಎಂದರೆ ಕಂಬಯ್ಯನ ತಂಗಿಯ ವಿಷಯಕ್ಕೆ ಒಮ್ಮೆ ಇಬ್ಬರಲ್ಲಿಯೂ ಜಗಳ ಶುರುವಾಗಿತ್ತು. ಜಗಳ ತಾರಕಕ್ಕೇರಿ, ಇಬ್ಬರೂ ಕೈ-ಕೈ ಮಿಲಾಯಿಸಿ, ಕತ್ತಿ ಕುಡುಗೋಲು ಹಿಡಿಯುವ ಮಟ್ಟಿಗೆ ಏರಿತ್ತು. ಊರವರೆಲ್ಲ ನಡುವೆ ಹೋಗದಿದ್ದರೆ ಅಂದು ಯಾರದ್ದಾದರೂ ರಕ್ತ ಚೆಲ್ಲುವುದು ಖಚಿತವಾಗಿತ್ತು. ಅಂದಿನಿಂದ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ. ಕೊಪ್ಪೆ ಕೆಲಸಕ್ಕೆ ಒಂದು ಮನೆಗೆ ಹೋದರೆ ಕಂಬಯ್ಯ ಅಲ್ಲಿ ಹೋಗುತ್ತಿರಲಿಲ್ಲ. ಇಬ್ಬರೂ ಬೇಕಾದ ಕೆಲಸಗಳಿದ್ದರೆ ಮನೆಯ ಯಜಮಾನ ಇಬ್ಬರನ್ನೂ ಓಲೈಸಿಯೇ ಸುಸ್ತಾಗುತ್ತಿದ್ದ.
 ಕೊಪ್ಪೆ ತನ್ನ ಬಳಿ ಯಾವಾಗಲೂ ತನ್ನಷ್ಟೇ ಕರಿಯ ಕಂಬಳಿಯನ್ನು ಇಟ್ಟುಕೊಂಡಿರುತ್ತಿದ್ದ. ಬಹುಷಃ ಕಂಬಳಿ ಕೊಪ್ಪೆ (ಮಳೆಗಾಲದಲ್ಲಿ ಚಳಿ ಹಾಗೂ ಮಳೆಯಿಂದ ರಕ್ಷಿಸಿಕೊಳ್ಳಲು ತಲೆಯ ಮೇಲೆ ಕಂಬಳಿಯನ್ನು ಮಡಚಿ ಹಾಕಿಕೊಳ್ಳುವುದನ್ನು ಕೊಪ್ಪೆ ಎನ್ನುತ್ತಾರೆ) ಇಟ್ಟುಕೊಳ್ಳುವ ಕಾರಣದಿಂದಲೇ ಅವನಿಗೆ 'ಕೊಪ್ಪೆ' ಎಂಬ ಹೆಸರು ಬಂದಿರಬೇಕು.ಉರಿ ಬಿಸಿಲಲ್ಲೂ ಆ ಕಂಬಳಿಯನ್ನು ಹಾಸಿ ಅದರ ಮೇಲೆಯೇ ಮಲುಗುವುದನ್ನು ನೋಡಿದರೆ, ನೋಡಿದವನೇ ಬೆವರಬೇಕು! ಮೊದಲೆಲ್ಲ ಕಂಬಯ್ಯ ಕೊಪ್ಪೆಗೆ ಕಂಬಳಿಹುಳು ಎಂದು ರೇಗಿಸಿದಾಗ ಸುಮ್ಮನೆ ನಗುತ್ತಿದ್ದ. "ಮುಟ್ನೋಡು ಕಂಬ್ಳಿ ಹುಳಾನ ಉರಿ ಹೆಂಗಾಗತೈತೆ.." ಎಂದು ಕೊಪ್ಪೆಯೂ ನಗುತ್ತಿದ್ದ. ಈಗ ಕೊಪ್ಪೆಗೆ ಬೈಯಬೇಕೆಂದರೆ ಕಂಬ್ಳಿಹುಳ ಎನ್ನುತ್ತಿದ್ದ ಕಂಬಯ್ಯ. ಹಾಗಾಗಿ ಕೊಪ್ಪೆಯೂ ಕಂಬಯ್ಯನಿಗೆ ಹಿಸ್ಕು ಎಂದು ನಾಮಕರಣ ಮಾಡಿದ್ದ. ಹಿಸಕು ಎಂದರೆ ಕತ್ತು ಹಿಸುಕುವುದಲ್ಲ, ನಮ್ಮೂರ ಕಡೆ ಹಿಸುಕು ಎಂದರೆ ಬಸವನ ಹುಳು!
"ಆ ನನ್ ಮಗಾ ಏನ್ ಕಮ್ಮಿ ಇಲ್ಲ.. ನನ್ ಎದ್ರಿಗೆ ಬರ್ಲಿ.. ಅವತ್ತೇನೋ ನೀವ್ ಕಾಪಾಡುದ್ರಿ.. ಇಲ್ಲ ಅಂದಿದ್ರೆ ಹುಟ್ಟಲಿಲ್ಲ ಅನ್ನಿಸಬುಡ್ತಿದ್ದೆ.. ನಂಗೆ ಕಂಬ್ಳಿ ಹುಳಾ ಅಂತಾನಲ್ಲ ಅವ... ಅವನೊಬ್ಬ ಹಿಸಕ್ಪೇರಿ..."
ಊರವರಿಗೆಲ್ಲ ಆ ಹೆಸರೇ ಹೊಸದು..'ಹಿಸಕುಪೇರಿ'ಯ ಬಗ್ಗೆಯೇ ಚರ್ಚೆ. ಕೆಲವೇ ಗಂಟೆಗಳಲ್ಲಿ ಅದು ಕಂಬಯ್ಯನ ಕಿವಿಗೂ ಬಿದ್ದಿತ್ತು. ಅವನೂ ತಲೆ ಕೆಡಿಸಿಕೊಂಡ. 
ನಂತರ ಕೊಪ್ಪಯೇ ಹೇಳಿದ, ಹಿಸಕಿನ ಹಾಗೇ ನಿಧಾನವಾಗಿ ನಡೆದರೆ ಅದು ಹಿಸಕುಪೇರಿ ಎಂದು!
"ಕನ್ನಡ ಸಾಲ್ಯಾಗೆಲ್ಲ ಪೇರಿ ಹೋಗದಿಲ್ಲನ.. ಅವೇ ಹಿಸ್ಕು ಹೋದ್ರೆ ಹೆಂಗಿರತೈತಿ ಹೇಳು.. ಹಂಗೆಯ.. ಹೆಸರಿಗೆ ಮಾತ್ರ ಕಂಬಯ್ಯ ಅವ.. ಇರದು ಮಾತ್ರ ಕಂಬದ ಮೇಲೆ ಹರಿಯೋ ಹಿಸಕಿನ ಹಂಗೆ.." ಎಂದೆಲ್ಲ ಹೀಯಾಳಿಸಿದ್ದ. ಇಬ್ಬರ ಹಗೆ ಜಾಸ್ತಿಯಾಗಲು ಇದೂ ಒಂದು ಕಾರಣವಾಯ್ತು. ಊರವರೆಲ್ಲ ಕೊಪ್ಪೆ,  ಕಂಬಯ್ಯ ಎನ್ನುವುದನ್ನು ಬಿಟ್ಟು ಕಂಬ್ಳಿಹುಳ, ಹಿಸ್ಕು ಎಂದು ಬೆನ್ನ ಹಿಂದೆ ಕರೆಯಲು ಪ್ರಾರಂಭಿಸಿದರು.

ಇತ್ತೀಚೆಗೆ ಎಮ್ಮೆ ಮಾರಾಟಗಾರ ಹುಲಿಗೆಪ್ಪನ ಹೊಲದಲ್ಲಿ ಹಂದಿಗಳ ಕಾಟ ಜಾಸ್ತಿಯಾಗಿ ಕಾಯಲು ಕಂಬಯ್ಯನನ್ನು ನೇಮಿಸಿದ್ದ. ಹೊತ್ತೇರುವ ಮುಂಚೆ ಹೋಗಿ ಬಿಳೆಹುಲ್ಲಿನ ಗೊಣಬೆಯ ಪಕ್ಕ ಮಲಗಿಬಿಟ್ಟರೆ ಕಂಬಯ್ಯನಿಗೆ ಹಂದಿ ಇರಲಿ, ಹುಲಿಗೆಪ್ಪನೇ ಬಂದರೂ ಎಚ್ಚರವಾಗುತ್ತಿರಲಿಲ್ಲ. ಅಂತೂ ಸಂಬಳ ತೆಗೆದುಕೊಳ್ಳಲು ಎರಡು ದಿನ ಇರುವಾಗ ಮಾತ್ರ ಕರಾರುವಾಕ್ಕಾಗಿ ಹಾಜರಾಗುತ್ತಾ ನಿಯತ್ತನ್ನು ಪ್ರದರ್ಶಿಸುತ್ತಿದ್ದ.

ಇಂತಹ ಸಂದರ್ಭದಲ್ಲಿಯೇ ಹುಲಿಗೆಪ್ಪನ ಮನೆಯ ದೊಡ್ಡೆಮ್ಮೆಗೆ ಕರು ಹಾಕುವ ದಿನ ಬಂದಿತ್ತು. ಅವನ ಹೆಂಡತಿಗೆ ಹುಲ್ಲು - ಹಿಂಡಿಯ ಚಿಂತೆಯಾದರೆ ಮಕ್ಕಳಿಗೆ ಗಿಣ್ಣ ಯಾವಾಗ ಸಿಗುವುದೋ ಎಂಬ ಚಿಂತೆ. ಹುಲಿಗೆಪ್ಪನ ಸಮಸ್ಯೆಯೇ ಬೇರೆ..
ಎಮ್ಮೆಗೆ ನೆನೆ ಬರುವ ಖಾಯಿಲೆಯಿದೆ. ಎಂದರೆ ಪ್ರತಿ ಬಾರಿಯೂ ಕರು ಹಾಕುವಾಗ, ಮಾಂಸದ ಜೊತೆಗೆ ಕರುಳೂ ಆಚೆ ಬರುತ್ತದೆ. ಹಸು ಅಥವಾ ಎಮ್ಮೆಯನ್ನು ಬಿಗಿಯಾಗಿ ಹಿಡಿದು ಕಾಲುಗಳನ್ನು ಅಗಲಿಸಿ ಬಾಲವನ್ನೆತ್ತಿ ಬಲವಾಗಿ ಒಳದಬ್ಬುತ್ತಾರೆ. ಒಂದೆರಡು ಆಳಿಂದ ಸಾಧ್ಯವಾಗದ ಕೆಲಸವದು. ಕಡಿಮೆ ಎಂದರೂ ನಾಲ್ಕು ಜನರಂತೂ ಇರಲೇ ಬೇಕು. ಅಲ್ಲಿ ಹರಿವ ರಕ್ತವನ್ನು ನೋಡಿಯೇ ಅದೆಷ್ಟೋ ಜನರಿಗೆ ತಲೆ ಸುತ್ತುವುದೂ ಇದೆ.
ಅಂತಹುದರಲ್ಲಿ ಇದು ದೈತ್ಯಾಕಾರದ ಎಮ್ಮೆ. ತನ್ನಂಥ ಕೃಶ ದೇಹದ ಆಸಾಮಿ ಹಾಲು ಕರೆಯಲೂ ಸಾಧ್ಯವಿಲ್ಲದಷ್ಟು ದೊಡ್ಡ ಕೆಚ್ಚಲಿನ ಎಮ್ಮೆ! ಹಿಂದಿನ ಬಾರಿ ಕೊಪ್ಪೆ ಇರದಿದ್ದರೆ ಕರುವಿಗೆ ಕರುಳು ಸುತ್ತುವುದರ ಜೊತೆ ಎಮ್ಮೆಯೂ ನೋವಿನಿಂದ ಸಾಯುತ್ತಿತ್ತು. ಒಂದು ಕಾಲನ್ನು ದೊಣಪೆಗೆ (ಕೊಟ್ಟಿಗೆಯಲ್ಲಿ ಎಮ್ಮೆ ಕುತ್ತಿಗೆಯವರೆಗೆ ಮಾತ್ರ ಒಳಹಾಕಿ ಹುಲ್ಲು ಮೇಯಲು ಮಾಡಿರುವ ಜಾಗ) ಒತ್ತಿ ಹಿಡಿದು, ಶಕ್ತಿ ಹಾಕಿ ಕರುಳನ್ನು ಒಳಗೆ ತಳ್ಳಿದ್ದಕ್ಕೇ ಅಲ್ಲವೇ ಎಮ್ಮೆ ಬದುಕುಳಿದುದು. ಈ ಬಾರಿಯೂ ಹಾಗೇ ಆಗುವುದು. ಆದರೆ ಕೊಪ್ಪೆ ಬರುವುದೇ ಅನುಮಾನ.
ಕಂಬಯ್ಯನಿರುವ ಮನೆಗೆ ಕೊಪ್ಪೆ ಕಾಲಿಡಲೂ ಒಪ್ಪಲಾರ. ಕಂಬಯ್ಯನಿಗೆ ಬರಬೇಡ ಎಂದರೆ ಆ ಕೆಲಸಕ್ಕೆ ಮತ್ಯಾರೂ ಸಿಗಲಾರರು. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಹುಲಿಗೆಪ್ಪನಿದ್ದ.
ಅಂತೂ ಅವನ ಭಯ ನಿಜವಾಗುವ ದಿನ ಬಂದೇ ಬಿಟ್ಟಿತು. ಎಮ್ಮೆ ನೋವಿನಿಂದ ಕಾಲನ್ನು ಅಗಲಿಸಿ ಹೊಟ್ಟೆ ಮೇಲೆ ಮಾಡಿಕೊಂಡು ಬುಸುಗುಡುತ್ತ ಮಲಗಿತ್ತು. ಎಷ್ಟೇ ಹೊತ್ತಾದರೂ ಕರು ಹೊರಬರುವ ಸೂಚನೆಯೇ ಇರಲಿಲ್ಲ.
"ಕ್ವಾಣಗರನಾ ಹೆಣ್ಣ್ ಗರನಾ.. ಯಾವ್ದೋ ಒಂದು.. ಹುಸಾರಿಂದ ಆಗ್ಲವ್ವ ತಾಯೆ" ಎಂದು ಮೂರು ಬಾರಿ ಚೌಡಿಗೆ ಹೇಳಿಕೊಂಡಿದ್ದ. ಆದರೂ ಅವನ ಮನಸ್ಸು ಹೇಳುತ್ತಿತ್ತು - ಚೌಡಿಯ ಸಹಾಯಕ್ಕೂ ಮಿಗಿಲಾಗಿ ಕೊಪ್ಪೆಯ ಸಹಾಯ ಅತ್ಯಾವಶ್ಯಕ ಎಂದು.
ಯಾವುದಕ್ಕೂ ಒಮ್ಮೆ ಕೇಳಿಯೇ ಬರೋಣ ಎಂದು ಕೊಪ್ಪೆಯನ್ನು ಹುಡುಕಿ ಹೊರಟ ಹುಲಿಗೆಪ್ಪ. ಊರ ಹೊರಗಿನ ಕಟ್ಟೆಯ ಮೇಲೆ ಕುಕ್ಕರಗಾಲಿನಲ್ಲಿ ಕುಳಿತು ಹಲ್ಲಿನ ತೂತಿಗೆ ಕಡ್ಡಿ ಹಾಕಿ ಕೆರೆಯುತ್ತಿದ್ದ ಕೊಪ್ಪೆ. ಬೆವರಿ ಹೊಳೆವ ಕಪ್ಪು ದೇಹ, ಗುಂಗುರು ಕೂದಲು, ಬಲ ಬದಿಯ ಹೆಗಲ ಮೇಲೊಂದು ಟವೆಲ್,  ತೊಡೆಯ ವರೆಗೆ ಬಿಗಿಯಾಗಿ ಕಚ್ಚೆ ಹಾಕಿದ ಮಣ್ಣಾದ ಪಂಚೆ, ಪಕ್ಕದಲ್ಲೊಂದು ಕಂಬಳಿ. ನಾಲ್ಕು ಮಾರು ದೂರದಿಂದಲೇ ವೇಷವನ್ನು, ಕಂಬಳಿಯನ್ನು, ಕುಳಿತ ಭಂಗಿಯನ್ನು ಕಂಡು ಕೊಪ್ಪೆ... ಎಂದು ಕೂಗಿದ ಹುಲಿಗೆಪ್ಪ.
"ಹೇಳ್ರಿ ಹುಲಿಯಪ್ಪಾ..ಏನು ನನ್ನಾ ಹುಡಿಕಂಡು ಬಂದಿರಿ.."
"ನಿನ್ನ ಹತ್ರ ಕೆಲ್ಸ ಐತೆ.."
"ಆ ಹಿಸಕಪೇರಿ ಏನಾರು ಮಾಡೈತಾ..ನಂಗೂ ಅದ್ಕೂ ಸಂಬಂದ ಇಲ್ರಾ ಒಡಿಯ"
"ಲೋ ಈಗಾ ಕತಿ ಹೊಡಿಯಕ್ ಟೇಮ್ ಇಲ್ಲ.. ಎಮ್ಮಿಗೆ ಬ್ಯಾನಿ ಶುರುವಾಗೈತಿ..ಕರ ಹಾಕಕೆ ಒದ್ದಾಡ್ತಾ ಐತಿ.. ಬಾ ಹೋಗನ"
ಎಮ್ಮೆಯ ಪರಿಸ್ಥಿತಿ ಅರ್ಥವಾಗಿದ್ದೆ ಕಡ್ಡಿಯನ್ನೆಸೆದು ಟವೆಲನ್ನು ಸೊಂಟಕ್ಕೆ ಕಟ್ಟಿ ಹೊರಟ.
ಇಷ್ಟು ಸುಲಭವಾಗಿ ಇವನನ್ನು ಒಪ್ಪಿಸಬಹುದೆಂದು ಊಹಿಸಿರದ ಹುಲಿಗೆಪ್ಪ ಆಶ್ಚರ್ಯಚಕಿತನಾದ.
ಧಡ ಧಡನೇ ಬಂದವನೇ ಹುಲಿಗೆಪ್ಪನ ಹೆಂಡತಿಯ ಬಳಿ ನೀರು ಕಾಯಿಸಲು ಹೇಳಿ ಕೊಟ್ಟಿಗೆಗೆ ಓಡಿದ.
ಹುಲಿಗೆಪ್ಪ ಹೇಳಿದ್ದಕ್ಕಿಂತ ಎಮ್ಮೆಯ ಪರಿಸ್ಥಿತಿ ಹದಗೆಟ್ಟಿತ್ತು. "ಒಡಿಯ ಇದು ನನ್ನೊಬ್ಬನಿಂದ್ಲೇ ಆಗಕಿಲ್ಲ. ಇನ್ನೊಂದು ಆಳು ಬೇಕಲ್ರ.."
"ಈ ಮೂರ್ಸಂಜೆ ಹೊತ್ತಾಗೆ ಯಾರ್ ಬತ್ತಾರೆ?"
"ಎಮ್ಮಿ ಬೇಕು ಅಂದ್ರೆ ನೀವು ಯಾರ್ನರ ಕರ್ಕಂಡ್ ಬರ್ಲೆ ಬೇಕು.."
ಕೊನೆಗೆ ಹೊಲದಲ್ಲಿದ್ದ ಕಂಬಯ್ಯನ ನೆನಪಾಗಿ ಓಡಿದ ಹುಲಿಗೆಪ್ಪ. ಆ ಎಮ್ಮೆಯ ಕಥೆ ಅವನಿಗೂ ಗೊತ್ತಿದ್ದರಿಂದ ಮರುಮಾತಾಡದೆ ಓಡಿ ಬಂದ.
ಕಂಬಯ್ಯನನ್ನು ಕಂಡರೂ ಒಂದೂ ಮಾತನಾಡಲಿಲ್ಲ ಕೊಪ್ಪೆ. ಇವರಿಬ್ಬರ ಹಗೆಯಲ್ಲಿ ತನ್ನ ಎಮ್ಮೆ ಸಾಯುತ್ತದೆ ಎಂದುಕೊಂಡ ಹುಲಿಗೆಪ್ಪ.
" ಬಾವ ನೀ ಎಮ್ಮಿ ಕಾಲ ಹಿಡ್ಕ, ನಾ ಕರ ಉಗಿತಿನಿ(ಎಳಿತೀನಿ) " ಎಂದ ಕೊಪ್ಪೆ.
"ನಾ ಯಾಕ್ಲಾ ಕಾಲ್ ಹಿಡಿಲಿ.. ಒದ್ರೆ ನನ್ ಸೊಂಟ ಮುರೀಲಿ ಅಂತಾನಾ.."
"ಬ್ಯಾಡ ಬುಡು.. ನಾನೇ ಹಿಡ್ಕತೀನಿ.. ನೀ ಕರ ಉಗಿತಿಯಾ"
"ಬ್ಯಾಡ ಬ್ಯಾಡ.. ನೀನೇ ಉಗಿ ಮಾರಾಯ" ಎಂದು ಕಂಬಯ್ಯ ಎಮ್ಮೆಯ ಕಾಲುಗಳನ್ನು ಹಿಡಿದ.
ಒದ್ದಾಡಿ ಗುದ್ದಾಡಿ ಕೊಪ್ಪೆ ಕರುವನ್ನು ಹೊರಗೆಳೆದ. ಹತ್ತೇ ನಿಮಿಷದಲ್ಲಿ ಕರುಳು ಆಚೆ ಬರತೊಡಗಿತ್ತು. ಮತ್ತದೇ ಹೋರಾಟ ನಡೆಸಿ ಕರುಳನ್ನು ಒಳದಬ್ಬುವಷ್ಟರಲ್ಲಿ ಇಬ್ಬರೂ ಒದ್ದೆಯಾಗಿದ್ದರು, ಕೊಪ್ಪೆಯ ಮೈ ಕೈ ಎಲ್ಲಾ ಕೆಂಪಾಗಿತ್ತು.
"ಉಸ್ಸಬ್ಬ.. ಮುದ್ಕಿ ಮೈ ನೆರ್ದ ಹಂಗಾತು..." ಎನ್ನುತ್ತಾ ಅಲ್ಲೇ ಕುಸಿದ ಕಂಬಯ್ಯ.
"ಹುಲಿಯಪ್ಪ ಇನ್ನಮ್ಯಾಗೆ ಈ ಎಮ್ಮೆ ಕಟ್ಟಿಸ್ಬ್ಯಾಡ್ರಿ" ಎನ್ನುತ್ತಾ ಕೈ ಕಾಲು ತೊಳೆದುಕೊಂಡ ಕೊಪ್ಪೆ.
" ಬಾವ ಎಮ್ಮಿ ಕಾಲ್ ಮೆಟ್ಟಿತ್ತಲ.. ಪೆಟ್ಟಾತೇನ.. "
" ಇಲ್ಲ ಕೊಪ್ಪೆ ನಂಗೇನ್ ಆಗಿಲ್ಲ.. ನಿಂಗೆಂತರು ಆಗೈತ." "ಇಲ್ಲ ಇಲ್ಲ.. ನಾ ಅರಾಮ್ ಅದೀನಿ "
ಹುಲಿಗೆಪ್ಪನ ಹೆಂಡತಿ ತಂದುಕೊಟ್ಟ ಬಿಸಿ ಬಿಸಿ ಚಹಾ ಕುಡಿಯುತ್ತ ಇವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಹುಲಿಗೆಪ್ಪ, " ಎಲಾ ಇವ್ರ.. ವರ್ಸಾನ್ ಗಟ್ಲೆ ಮಾತು ಬಿಟ್ಟಕಂಡು ಈಗೇನು ಆಗ್ದೇ ಇರ ಹಂಗೆ ಕಥೆ ಕೊಚ್ಚತಾ ಅವ್ರಲ್ಲ.. " ಎಂದುಕೊಂಡ.
ಈಗ ಕೊಪ್ಪೆ ಕಂಬಯ್ಯ ಇಬ್ಬರೂ ಒಟ್ಟಾಗಿ ಕೆಲಸಕ್ಕೆ ಹೋಗುತ್ತಾರೆ.
ಹುಲಿಗೆಪ್ಪ " ಈ ಕಂಬ್ಳಿ ಹುಳಾ - ಹಿಸ್ಕು ಎರ್ಡನ್ನುವೆ ನಮ್ಮನೆ ಎಮ್ಮಿ ಒಂದು ಮಾಡ್ತು... " ಎನ್ನುತ್ತಾ ಸುತ್ತುತ್ತಾನೆ.

-ಪಲ್ಲವಿ 

No comments:

Post a Comment

ಕರಗುವೆ...