Sunday, January 9, 2022

ಮಧ್ಯ ಘಟ್ಟ

ಶಿವಾನಂದ ಕಳವೆ ಅವರ 'ಮಧ್ಯಘಟ್ಟ' ಕಾದಂಬರಿ, ಇತ್ತೀಚೆಗೆ ನಾ ಓದಿದ, ಮನಸ್ಸಿಗೆ ಹತ್ತಿರವಾದ ಪುಸ್ತಕ.
ನಮ್ಮೂರಿನ ಸೊಗಡನ್ನು ಹೊತ್ತು, ಮಣ್ಣಿನ ಘಮವನ್ನು ತನ್ನಲ್ಲಿ ಬೆರೆಸಿಕೊಂಡು ಹೊಳೆವ ಹಸಿರಾಗಿರುವ ಪುಸ್ತಕವಿದು.

ಅರವತ್ತರ ಗೋಪಯ್ಯ ಹೆಗಡೆಗೆ ಹದಿನನೆಂಟರ ಶ್ರೀದೇವಿಯೊಡನೆ ಲಗ್ನವಾಗಿ ಆಕೆ ಕೇರಳದಿಂದ ಮಧ್ಯಘಟ್ಟಕ್ಕೆ ಬಂದಳು. ಪರವೂರಿಗೆ ಬಂದವಳಿಗೆ ತಾಯಿಯದವಳು ಅದೇ ಕೇರಳ ಮೂಲದ ಸಾವಿತ್ರಮ್ಮ. ತನ್ನ ಮಗಳಂತೆಯೇ ನೋಡಿಕೊಂಡು ಸಮಯಕ್ಕೆ ಸರಿಯಾಗಿ ತಿಳುವಳಿಕೆ ನೀಡುತ್ತಾ, ಕನ್ನಡ ಕಲಿಸಿ, ಕೆಲಸ ಕಲಿಸಿ ದೊಡ್ಡ ಮನೆಗೆ ತಕ್ಕ ಸೊಸೆಯಾಗಿಸಿದಳು.

ವರ್ಷಗಳ ನಂತರ ಮಗಳನ್ನು ಕಾಣುವ ಹಂಬಲದಲ್ಲಿ ಕೇರಳದಿಂದ ಬಂದ ಭೂದೇವಿಯ ಮಹಾಯಾನವೇ ಅದೆಷ್ಟು ಕಷ್ಟಗಳನ್ನು ಒಳಗೊಂಡಿತ್ತು..!ಕೊನೆಗೆ ಆಕೆಯೂ ಅನಿವಾರ್ಯವಾಗಿ ಇದೇ ಊರಿನಲ್ಲಿ ನೆಲೆ ನಿಲ್ಲಬೇಕಾಯ್ತು. ಮಗಳಿಗೆ ಮಕ್ಕಳಿಲ್ಲ ಎಂಬ ಚಿಂತೆ ಕಾಡುತ್ತಿರಬೇಕಾದರೆ ಕೇಮು ಎಂಬ ಕೆಲಸದಾಳು ಕೊಟ್ಟ ಔಷಧಿಯ ಪರಿಣಾಮವಾಗಿ ಶ್ರೀದೇವಿಗೆ ಮಕ್ಕಳಾಗುತ್ತವೆ!

ನಾಲ್ಕು ಘಟ್ಟದಲ್ಲಿ ನನಗೆ ಈ 'ಮಧ್ಯಘಟ್ಟ' ಪುಸ್ತಕ ಬಹಳ ಇಷ್ಟವಾಗಿದೆ.
*ಮಳೆಗಾಲದ ಪ್ರಾರಂಭದಲ್ಲಿ ಮನೆಗೆ ಮೇಲು ಹೊದಿಕೆ ಹೊದಿಸುತ್ತಾರೆ. ಈಗಿಂನಂತೆ ಹೆಂಚು, ಸಿಮೆಂಟ್ ನ ಬಳಸುವ ಕಾಲವಲ್ಲವದು. ಸೋಗೆಯ ಹೊದಿಕೆಯಾದರೆ ಶ್ರೀಮಂತರು, ಹುಲ್ಲಿನ ಹೊದಿಕೆಯಾದರೆ ಬಡವರು ಎಂಬ ಕಾಲ! ಅದೆಷ್ಟು ಬಡತನವೆಂದರೆ ಕಾಡಿನ ಕಣಗಿಲೆ ಎಲೆಯಲ್ಲಿ ಗಂಜಿ ಬಡಿಸಿ ನಾಲಿಗೆಯಲ್ಲಿ ನಾಯಿ ನೆಕ್ಕುವಂತೆ ತಿನ್ನುತ್ತಿದ್ದರಂತೆ.. ಉಗುರು ತಾಗಿದರೆ ಎಲ್ಲಿ ಎಲೆ ಹರಿಯುವುದೋ ಎಂಬ ಭಯದಲ್ಲಿ ಕೈಯನ್ನೇ ತಾಗಿಸುತ್ತಿರಲಿಲ್ಲವಂತೆ! ಓದಿ ಸುಮ್ಮನೆ ಕಣ್ಣುಮುಚ್ಚಿ ಕುಳಿತಿದ್ದೆ. ಅದೆಂತಹ ಬಡತನವನ್ನೂ ಅದೆಷ್ಟು ನಿರ್ಲಿಪ್ತವಾಗಿ ತಿಳಿಸಿದ್ದಾರೆ ಎನಿಸಿದ್ದು ಸುಳ್ಳಲ್ಲ. ಓದಿಯೇ ಒಮ್ಮೆ ಕೈ ನಡುಗಿತ್ತೆನಗೆ!

*ಮಾಡಿಗೆ ಸೋಗೆ ಹೊದಿಸುವ ಕೆಲಸ ಮುಗಿದ ರಾತ್ರಿ ಕಂಬಳದ ಮದ್ದನ್ನು (ಹೆಂಡ) ಎಲ್ಲಾ ಕುಡಿದು, ಇಸ್ಪೀಟ್ ಆಡುವಾಗ ಶುರುವಾಗುವುದೇ ಭಂಗಿ ಸೊಪ್ಪಿನ ಭಯಂಕರ ಪ್ರಭಾವ!! ಇದನ್ನು ಓದಿ ಬಹಳ ನಕ್ಕಿದ್ದೇನೆ. "ಅರೆ.. ಅತ್ತೆರೆ ಮತ್ತೇನು ಸುದ್ದಿ!!" ಎಂದು ಸುಮಾರು ಜನರ ಬಳಿ ಕೇಳಿದ್ದೇನೆ!! ಊರಲ್ಲಿ ಹಲವರು ಹೇಳಿದ ಭಂಗಿ ಸೊಪ್ಪಿನ ಅವಾಂತರಗಳನ್ನು ನೆನಪಿಸಿಕೊಂಡಿದ್ದೇನೆ!

*ಹುಲಿ ಬೇಟೆಯ ಅಧ್ಯಾಯದಿಂದ ಹೊಸದೇ ಆಯಾಮ ಪ್ರಾರಂಭವಾಗುತ್ತದೆ. ಕೌತುಕ ಘಟ್ಟಗಳು, ಅನಿರೀಕ್ಷಿತ ತಿರುವುಗಳು ಇಲ್ಲಿ ಘಟ್ಟದ ರಸ್ತೆಯತೆಯೇ ಇವೆ!! ಹುಲಿಯ ಉಪಟಳ, ಅದರ ಬೇಟೆಯ ಸಿದ್ಧತೆ, ಹುಲಿಯ ಜೊತೆಗೆ ಬೇತೆಯಲ್ಲಿ ಓರ್ವನ ಆಕಸ್ಮಿಕ ಸಾವು, ಅದಕ್ಕೆ ಗಂಟು ಹಾಕಿಕೊಂಡ ಕಾರಣಗಳು-ಮೌಢ್ಯಗಳು, ಮತ್ತೊಂದು ಪ್ರಾಯಶ್ಚಿತ್ತದ ಸಾವು... ಎಲ್ಲವೂ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುತ್ತವೆ.

*ಗೋಪಯ್ಯ ಹೆಗಡೆಗೆ ಅರೋಗ್ಯ ಹದೆಗೆಟ್ಟಾಗ, ಅವರ ಭಾವ ಮೈದುನ ವಾಸುದೇವ, ವರದಪ್ಪ ಹೆಗಡೆ ಎಂಬುವವರೊಂದಿಗೆ ಔಷಧಿ ಬೇರು ತರಲು ಕಾಡಿಗೆ ಹೋಗುತ್ತಾನೆ. ಆಗ ವರದಪ್ಪ ಹೆಗಡೆ ವರ್ಣಿಸುವ ಇತಿಹಾಸ ನಿಜಕ್ಕೂ ರೋಮಾಂಚನವೆನಿಸುತ್ತದೆ. ಪ್ರತಿ ಮರ ಗಿಡದಲ್ಲಿಯೂ ಒಂದೊಂದು ಕಥೆ ಅಡಗಿದೆಯೇನೋ ಎನಿಸುತ್ತದೆ.

"ದಕ್ಕರ ಧರ್ಮಂಗೆ ಇಕ್ರ ಈ ವರ್ಷ ಸಕ್ರ ಸರಿಯಾಗಿ ಪಕ್ರ ಪಾಠ ಮಧ್ಯ ಗಕ್ರ ಘಟ್ಟದವು ಕಕ್ಕರೆ ಕಲಿಸಿದಂಗೆ ಅಕ್ರ ಆತು" ಇದನ್ನ ಮಾತ್ರ ಬಾಯಿಪಾಠ ಮಾಡಲು ನಾ ಸೋತಿದ್ದೇನೆ!!

ಈಗಾಗಲೇ ಮತ್ತಿಘಟ್ಟವನ್ನೊಮ್ಮೆ ನೋಡಿದ್ದರೂ, ಈ ಪುಸ್ತಕ ಓದಿದ ಮೇಲೆ ಮತ್ತೆ ಹೋಗಬೇಕೆಂಬ ಹಂಬಲ ಹೆಚ್ಚಾಗುತ್ತಿದೆ!!  ಊರ ಪರಿಸರ, ಕಲ್ಲು,ಮಣ್ಣು, ತಲೆ ಕೆಳಗಾದ ಮಾವಿನ ಮರ, ಜಲಪಾತ, ಕೆಂಪು ತೆಂಗಿನ ಕಾಯಿ ಎಲ್ಲವೂ ಮತ್ತೊಮ್ಮೆ ನನ್ನನ್ನು ಕೈ ಬೀಸಿ ಕರೆಯುತ್ತಿವೆ!
ಎಲ್ಲಕ್ಕಿಂತಲೂ ಮಿಗಿಲಾಗಿ ಇದೊಂದು ನೈಜ ಕಥೆ! ಇದನ್ನು ಇಷ್ಟು ಸುಂದರವಾಗಿ ನಮ್ಮೆದುರಿಗೆ ಇಟ್ಟ ಶಿವಾನಂದ ಕಳವೆ ಅವರಿಗೆ ಧನ್ಯವಾದಗಳು.

-ಪಲ್ಲವಿ ಹೆಗಡೆ 




No comments:

Post a Comment

ಕರಗುವೆ...