ಆಗಸದ ತುಂಬೆಲ್ಲ ಮೋಡಗಳ ಚಿತ್ತಾರ. ಭೂರಮೆಯ ಮೈ ತಣಿಸಲು ವರುಣ ದೇವ ಸನ್ನದ್ಧನಾಗಿದ್ದ ಎಂದು ತೋರುತ್ತದೆ. ಮಳೆ ತನ್ನ ಆಗಮನವನ್ನು ತಾನೇ ತಿಳಿಸಲು ಬಯಸಿದಂತಿತ್ತು. ಅದಕ್ಕೆ ಹವಾಮಾನ ವರದಿಯ ಅವಶ್ಯಕತೆ ಏನಿರಲಿಲ್ಲ.
ಮೋಡ ಕವಿದ ವಾತಾವರಣ. ಆದರೆ ಭುವನಳ ಮನದಲ್ಲಿ ಆಗಲೇ ನವಿಲುಗಳು ನರ್ತಿಸುತ್ತಿದ್ದವು. ಜಿಂಕೆಯ ಕಂಗಳು ಯಾರನ್ನೋ ಅರಸುತ್ತಿದ್ದವು. ಬಳ್ಳಿಯಂತೆ ಬಾಗಿದ ಹುಬ್ಬುಗಳು ನಿಮಿಷಕ್ಕೊಮ್ಮೆ ಮೇಲೇರಿ ಯಾರ ದಿಕ್ಕನ್ನೋ ನೋಡುತ್ತಿತ್ತು.
ಹಣೆಯ ಮೇಲೆ ಹಾರಾಡುತ್ತಿದ್ದ ಮುಂಗುರುಳಿಗೂ ಹುಸಿಗೋಪದ ಝಳ ತಾಗುತ್ತಿತ್ತು.ಆ ಮುನಿಸು ಇನ್ನಾರ ಮೇಲೋ..ಒಮ್ಮೆ ಕೈಗಡಿಯಾರ ನೋಡುತ್ತಾ,ಇನ್ನೊಮ್ಮೆ ರಸ್ತೆ ನೋಡುತ್ತಿದ್ದ ಕಣ್ಣುಗಳೂ ಆಯಾಸಗೊಂಡಿದ್ದವು. ಪ್ರೀತಿ ಇದ್ದಲ್ಲಿ ತಾನೇ ಕೋಪಕ್ಕೆ ಜಾಗ ಎಂದವಳ ಮನಸ್ಸು ನುಡಿಯಿತು. ತುಟಿಯಂಚಲ್ಲಿ ನಗು ಮೂಡಿತು.
"ಈಗ ಮಳೆ ಬಂದ್ರೆ ಛತ್ರಿನೂ ಇಲ್ಲ. ಇವ್ನಿಗಂತೂ ಟೈಮ್ ಸೆನ್ಸ್ ಅನ್ನೋದೇ ಇಲ್ಲ..ಕತ್ತಲಾಗ್ತಿದೆ. ನಾನೊಬ್ಳೇ ಇದೀನಿ ಅನ್ನೋ ಒಂದು ಸಣ್ಣ ಯೋಚನೆನೂ ಬರಬೇಡ್ವಾ?ದೇವ್ರೇ ನಾನೇನ್ಮಾಡ್ಲಿ ಈಗ?
ಬರಲಿ ಅವನು..ಎರಡು ಸಲ ಸಾರಿ ಕಣೇ ಅಂದ್ರೆ ಎಲ್ಲ ಸರಿ ಆಗ್ಬಿಡತ್ತಾ? ಮಧ್ಯದಲ್ಲಿ ಈ ಮಳೆ ಬೇರೆ...."
ಮಳೆ ಎನ್ನುವುದೇ ಹಾಗೆ..ಕೆಲವರ ಜೀವನದಲ್ಲಿ ಸುಂದರ ನೆನಪುಗಳ ಬುತ್ತಿಯಾದರೆ,ಹಲವರಿಗೆ ಸುಡುವ ಜ್ವಾಲೆ.
ತಂಪಾದ ಗಾಳಿಯೊಡನೆ ಭುವನಳ ಯೋಚನೆಯೂ ಹಾರಾಡತೊಡಗಿದವು..ವರುಣದೇವ ಅವಳ ಕೆನ್ನೆಯ ಮೇಲೆ ಮೊದಲ ಧಾರೆ ಹರಿಸಿದ; ಆಕೆಯ ಕಣ್ಣೀರೊರೆಸಲು.....
No comments:
Post a Comment