Tuesday, June 16, 2020

ವ್ಯಾಪ್ತಿ ಪ್ರದೇಶದಿಂದ ಹೊರಗೆ...

ಮೂರ್ನಾಲ್ಕು ವರ್ಷಗಳ ಹಿಂದಿನ ಮಾತು. ಈಗಿನಷ್ಟು ಸುಲಲಿತವಾಗಿ ಆಗ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಮನೆಯಲ್ಲಿ ಅಷ್ಟೊಂದು ನೆಟ್ವರ್ಕ್ ಸಿಗುತ್ತಿರಲಿಲ್ಲ.  ಯಾವುದೊ ಮೆಟ್ಟಿಲು ಹತ್ತಿ, ಕಾಲು ಎತ್ತರಿಸಿ ನಿಂತರೆ ಬಿಎಸ್ಸೆನ್ನೆಲ್ ಎರಡು ಕಡ್ಡಿ ಸಿಗ್ನಲ್ ತೋರಿಸುತ್ತಿತ್ತು. ಬಲಬದಿಯ ಮೂರನೇ ಗದ್ದೆಯ ಎರಡನೇ ಹಾಳಿಯ ಮೇಲೆ ನಿಂತರೆ ಏರ್ಟೆಲ್ ಸಿಗ್ನಲ್ ಬರುತ್ತಿತ್ತು.'ನೆಟವರ್ಕ್' ಬೆಟ್ಟ ಹತ್ತಿ 'ಟವರ್' ಮರದ ಕೆಳಗೆ ಬಂದರೆ, ಯಾವುದಾದರೊಂದು ಸಿಗ್ನಲ್ ಹಿಡಿಯಬಹುದಿತ್ತು! ಇಂಟರ್ನೆಟ್ ಬೇಕೆಂದರೆ ರಸ್ತೆಯ ಮೋರಿ ಕಟ್ಟೆಯ ಬಳಿಯೇ ಹೋಗಬೇಕಿತ್ತು. ಜಿಯೋ ಜಾಯಮಾನ ಇನ್ನೂ ಪ್ರಾರಂಭವಾಗಿರಲಿಲ್ಲವಲ್ಲ... !   

          ಮನೆಯಲ್ಲಿ ಆರಾಮವಾಗಿ ಕುಳಿತು ಹರಟುತ್ತಿದ್ದೆ. ಹಾಗೇ ಸಂಜೆ ಮೊಬೈಲ್ ಹಿಡಿದು ಗದ್ದೆಯ ಬಳಿ ನಡೆಯುತ್ತಿದ್ದಂತೆ ಒಂದರ ಹಿಂದೊಂದು ಮೆಸೇಜ್ ಬರುತ್ತಿದ್ದವು.

ಎಂದೂ ಮಾತನಾಡದವರೂ ಸಹ ಕಾಲ್ ಮಾಡಿದ್ದು ಆಶ್ಚರ್ಯವೆನಿಸಿತ್ತು ನನಗೆ !   
  "ಗೀತಾಳಿಗೆ ಏನಾಯ್ತು?", 
"ಅಯ್ಯೋ  ಪಾಪ ! ಇಷ್ಟು ಬೇಗ ಅವಳಿಗೆ ಹೀಗಾಗಬಾರದಿತ್ತು", 
"ಅವಳ ತಂದೆ - ತಾಯಿಯ ಪರಿಸ್ಥಿತಿಯನ್ನ ನೆನೆಸಿಕೊಳ್ಳೋಕೂ ಸಾಧ್ಯವಿಲ್ಲ ".......   
 ಇಂತಹ ಮೆಸೇಜ್ ಗಳನ್ನು ಓದಿ ತಲೆ ಕೆಟ್ಟು ಹೋಗಿತ್ತು ನನಗೆ.  'ಗೀತಾ' ನನ್ನ ಗೆಳತಿ. ಅವಳಿಗೇನಾಗಿದೆ?  ಮನೆಯಲ್ಲಿ ಆರಾಮವಾಗಿ ತಿಂದು -ಉಂಡು, ಓಡಾಡಿಕೊಂಡಿದ್ದಾಳೆ. ಯಾಕೆ ನನಗೆ ಇಂತಹ ಸಂದೇಶಗಳನ್ನು ಕಳಿಸುತ್ತಿದ್ದಾರೆ?  ಫೂಲ್ ಮಾಡಲು ಇದು ಏಪ್ರಿಲ್ ತಿಂಗಳೂ ಅಲ್ಲ..!

ಅದೂ ಇಷ್ಟೊಂದು ಜನ..ಸಾಧ್ಯವೇ ಇಲ್ಲ ?!!  ಅದೇನೇ ಇರಲಿ. ಅವಳ ಬಳಿ ಒಮ್ಮೆ ಮಾತನಾಡೋಣ ಎಂದು ಕರೆ ಮಾಡಿದರೆ, "ನೀವು ಕರೆ ಮಾಡುತ್ತಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ" ಎಂದಿತು ಹೆಣ್ಣು ದನಿ ! ಅಂತೂ ಅವರ ಮನೆಯ ದೂರವಾಣಿಗೆ ಕರೆ ಮಾಡಿ, ಎಲ್ಲಾ ಹೀಗೆ ಹೇಳುತ್ತಿದ್ದಾರೆ. ನನಗೆ ಏನಾಗುತ್ತಿದ್ದೆ ಎಂದೇ ತಿಳಿಯುತ್ತಿಲ್ಲ.

ಸ್ವಲ್ಪ ವಿಚಾರಿಸು ಎಂದು ಹೇಳಿದ್ದಾಯ್ತು.     ಹತ್ತು ನಿಮಿಷಗಳ ನಂತರ ಅವಳೇ ಮೊಬೈಲ್ನಿಂದ ವಾಪಸ್ ಕರೆ ಮಾಡಿದಳು.  " ಅಲ್ವೇ, ಕಾಲ್ ಮಾಡಿದಾಗ ನೆಟವರ್ಕ್ ಸಿಕ್ಕಲಿಲ್ಲ ಅಂದ್ರೆ, ಸತ್ತೇ ಹೋಗಿದೀನಿ ಅಂತ ಅಂದ್ಕೊಳೋದಾ? " ಎಂದು  ಜೋರಾಗಿ ನಗುತ್ತಿದ್ದಾಳೆ.ವಿಷಯ ಏನೆಂದರೆ, ನಮ್ಮ ತರಗತಿಯಲ್ಲಿ ಮೂರು ಸೆಕ್ಷನ್ ಗಳಿದ್ದವು. 'ಗೀತಾ' ಎಂಬ ಹೆಸರಿನವರು ನಾಲ್ಕು ಜನರಿದ್ದರು. ಅಂದು ಒಬ್ಬಳು ತೀರಿಹೋದಳು.ದುಃಖದ ಸಂಗತಿಯೇ ಅದು.

"ಗೀತಾ  ಹೊಗಿಬಿಟ್ಟಳಂತೆ,  ಪಾಪ !" ಎಂದು ಗಾಳಿಯಂತೆ ಸುದ್ದಿ ಹರಡಿತ್ತೇ ವಿನಃ ಯಾವ ಗೀತಾ ಎಂದು ಯಾರೂ ಹೇಳಲಿಲ್ಲ. ಮೇಲಾಗಿ ಎಷ್ಟೇ ಕರೆ ಮಾಡಿದರೂ, "ವ್ಯಾಪ್ತಿ ಪ್ರದೇಶದಿಂದ  ಹೊರಗೆ" ಎನ್ನುವುದನ್ನು ಬಿಟ್ಟು ಇನ್ನಾವುದೇ ಮಾಹಿತಿ ಲಭ್ಯವಾಗಲಿಲ್ಲ. ಹಾಗಾಗಿ ಎಲ್ಲರೂ ಹೋಗಿದ್ದು ಇದೇ ಗೀತಾ ಎಂಬ ತೀರ್ಮಾನಕ್ಕೆ ಬಂದಿದ್ದರು.. !  ಇಲ್ಲಿ ಗೊಂದಲಕ್ಕೆ ಕಾರಣವಾಗಿದ್ದು ನಾಲ್ಕು 'ಗೀತಾ'ಗಳಲ್ಲ,  ಒಂದು 'ವ್ಯಾಪ್ತಿ ಪ್ರದೇಶದಿಂದ ಹೊರಗೆ' ಎಂಬ ವಾಕ್ಯ !    ಈ ಘಟನೆ ಒಂದು ಸಣ್ಣ ಉದಾಹರಣೆಯಷ್ಟೇ.   ಯಾರಿಗಾದರೂ ಅಷ್ಟೇ!

ನಮ್ಮ ಪ್ರೀತಿಪಾತ್ರರಿಗೆ ಕರೆ ಮಾಡಿದಾಗ, ಎರಡು ಸಲ ಸಹಿಸಬಹುದು. ಮೂರನೇ ಬಾರಿಯೂ 'ವ್ಯಾಪ್ತಿ ಪ್ರದೇಶದಿಂದ ಹೊರಗೆ' ಎಂದರೆ ಮನದಲ್ಲಿ ಸಣ್ಣ ಕಸಿವಿಸಿ...    ಎಲ್ಲಾ ಕಡೆಯೂ ನೆಟವರ್ಕ್ ಸಿಗುವುದರಿಂದ ಸಮಸ್ಯೆ ಇರದ್ದಿದ್ದರೂ,'ವ್ಯಾಪ್ತಿ ಪ್ರದೇಶದಿಂದ ಹೊರಗೆ' ಎಂಬ ಕಿರಿಕಿರಿ ಮುಗಿದಿಲ್ಲ.       ಅನ್ನ, ಮುದ್ದೆಯನ್ನು ಪಿಜ್ಜಾ -ಬರ್ಗರ್ ಆವರಿಸಿತು. ಗಡಿಯಾರ, ದೂರವಾಣಿ, ದಿನಪತ್ರಿಕೆಗಳನ್ನೆಲ್ಲ ಮೊಬೈಲ್ ಎಂಬ ಐದಿಂಚಿನ ಪರದೆ ಆವರಿಸಿತು.  ಎಲ್ಲರೂ ಒಟ್ಟಿಗೆ ಇದ್ದರೂ ಮೊಬೈಲ್ ನಲ್ಲಿ ಬೇರೆಯೇ ಪ್ರಪಂಚ ಸೃಷ್ಟಿಯಾಗಿರುತ್ತದೆ. ವಾಟ್ಸಪ್ಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್, ನೆಟ್ ಫ್ಲಿಕ್ಸ್..
ಎಷ್ಟು ಲೋಕಗಳು ! ಇವೆಲ್ಲ ಒಂದೆಡೆಯಾದರೆ, ಇನ್ನೊಂದು ಕಡೆ ಜನ ಠಾಕು-ಠೀಕಾಗಿ ತಯಾರಾಗಿ, ಇನ್ನೊಬ್ಬರ ಮಾತಿಗೆ ತುಟಿ ಕುಣಿಸುತ್ತಾ, ಟಿಕ್ ಟಾಕ್ ಲೋಕದಲ್ಲಿ ಮುಳುಗಿರುತ್ತಾರೆ. ಮನೆಯಲ್ಲಿ ಅಮ್ಮ ಊಟಕ್ಕೆ ಕರೆದರೂ, ಅಪ್ಪ ಕೂಗಿದರೂ...ಈ ವ್ಯಕ್ತಿ 'ವ್ಯಾಪ್ತಿ ಪ್ರದೇಶದಿಂದ  ಹೊರಗೆ'!ಯಾರ ಬಳಿಯೋ, ಏನೋ ಹೇಳುತ್ತಿರಬೇಕಾದರೆ, ಅವರು ಮೊಬೈಲ್ ಲೋಕದಲ್ಲಿ ಮುಳುಗಿದ್ದು, ನಂತರ, "ಸಾರಿ, ಏನೋ ಹೇಳ್ತಿದ್ಯಲ್ಲ.. ಇನ್ನೊಂದ್ಸಲ ಹೇಳು..ಕೇಳಿಸ್ಲಿಲ" ಎಂದಾಗ ಬರುವ ಕೋಪಕ್ಕೆ ಮಿತಿಯಿಲ್ಲ. ಕೇಳಿಸಿಲ್ಲ ಎಂದರೆ ತಪ್ಪು; ನೀನು ಲಕ್ಷ್ಯ ಕೊಟ್ಟಿಲ್ಲ, ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದೀಯ ಎಂಬುದು ಸತ್ಯ ..! ನೆಟವರ್ಕ್ ನ ಸಮಸ್ಯೆ ಆಗಿದ್ದರೆ ಸರಿ ಪಡಿಸಬಹುದಿತ್ತು. ಅದಲ್ಲವಲ್ಲ..!   
 "ನೀವು ಕರೆ ಮಾಡುತ್ತಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ" ಎಂದು ಮೊಬೈಲ್ ನಲ್ಲಿ  ಬರುವ ದನಿ ಹೇಳಿದ್ದರೆ ಮತ್ತೊಮ್ಮೆ ಪ್ರಯತ್ನಿಸಬಹುದು.. ಆದರೆ ಹೇಳುತ್ತಿರುವುದು ಮನಸ್ಸು...ಏನು ಮಾಡೋಣ???

No comments:

Post a Comment

ಕರಗುವೆ...